ಟೋಲ್‌ ದರ ಹೆಚ್ಚಳ ವಿರೋಧಿಸಿ ಟೋಲ್‌ ಪ್ಲಾಜಾ ಮುಂದೆ ಪ್ರತಿಭಟಿಸಲು ನಿರ್ಧಾರ

ಬೆಂಗಳೂರು : ಬರುವ ಏಪ್ರಿಲ್‌ 1ರಿಂದ ದೇಶಾದ್ಯಂತ ಟೋಲ್‌ ದರಗಳನ್ನು 5 ರಿಂದ 10% ವರಗೆ ಏರಿಸಲು ರಾಷ್ಟೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸುವ ಹಿನ್ನೆಲೆ ರಾಜ್ಯದಾದ್ಯಂತ ಟೋಲ್‌ ಪ್ಲಾಜಾಗಳ ಮುಂದೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ತಿಳಿಸಿದೆ. 

ಹೆಚ್ಚಿನ ಟೋಲ್‌ ದರವು ಏಕಪಕ್ಷೀಯ, ಅನೈತಿಕ ನಿಲುವಾಗಿದ್ದು ವಾಹನ ಸವಾರರ ಮೇಲೆ ವಿಪರೀತ ಹೊರೆಬೀಳಲಿದೆ. ಪ್ರತಿ ವರ್ಷ ಟೋಲ್ ದರ ಹೆಚ್ಚಳ ಮಾಡುವ ಸರಕಾರದ ನೀತಿ ಬಲವಂತದ ಸುಲಿಗೆ ಅಲ್ಲದೆ ಮತ್ತೇನಲ್ಲ. ಕೇಂದ್ರ ಸರಕಾರದ ಈ ನಿರ್ದಯ ಸುಲಿಗೆ ನೀತಿಯನ್ನು ವಿರೋಧಿಸಿ  ಎಪ್ರಿಲ್ ಒಂದರಂದು ರಾಜ್ಯಾದ್ಯಂತ ಟೋಲ್ ಗೇಟ್ ಗಳ ಮುಂಭಾಗ ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಇದನ್ನೂ ಓದಿ : ಸುರತ್ಕಲ್‌ ಟೋಲ್‌ ರದ್ದು ಬೆನ್ನಲ್ಲೇ ಹೆಜಮಾಡಿ ಟೋಲ್‌ಗೇಟ್‌ನಿಂದ ದುಪ್ಪಟ್ಟು ದರ ವಸೂಲಿ

ಈಗಾಗಲೆ ಬೆಲೆಯೇರಿಕೆ, ನಿರುದ್ಯೋಗ, ಆದಾಯ ಕುಸಿತದಿಂದ ಜನತೆ ಕಂಗೆಟ್ಟಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಸಾರ್ವಕಾಲಿಕ ಕುಸಿತ ಕಂಡಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ವಿಪರೀತ ಹೆಚ್ಚಿದೆ. ಇದರಿಂದ ಸರಕು ಸಾಗಾಣಿಕೆ ದುಬಾರಿಯಾಗಿ ಜನತೆಯ ಜೇಬಿಗೆ ಕತ್ತರಿ ಬಿದ್ದಿದೆ. ರಸ್ತೆಗಳಲ್ಲಿ ವಾಹನಗಳ ಓಡಾಟದ ಹೆಚ್ಚಳದಿಂದ ಟೋಲ್ ಕಂಪೆನಿಗಳು ದೊಡ್ಡ ಮಟ್ಟದ ಲಾಭಗಳಿಸುತ್ತಿದೆ. ಅವರ ಹೂಡಿಕೆಯ ಬಂಡವಾಳ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ವಾಪಾಸು ಬರುತ್ತಿದೆ. ಫಾಸ್ಟ್ ಟ್ಯಾಗ್ ನಿಯಮದಿಂದ ಟೋಲ್ ಕಂಪೆನಿಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ. ಹಾಗಿರುತ್ತಾ ವರ್ಷದಿಂದ ವರ್ಷಕ್ಕೆ ಟೋಲ್ ಸುಂಕದಲ್ಲಿ ಕಡಿತ ಆಗಬೇಕಿತ್ತು. ಅದರ ಬದಲಿಗೆ ಪ್ರತಿವರ್ಷ ಎಪ್ರಿಲ್ ನಲ್ಲಿ ಕಡ್ಡಾಯ ಎಂಬಂತೆ ಟೋಲ್ ದರವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಇದು ಅಕ್ರಮ ಮಾತ್ರ ಅಲ್ಲ, ಸಂಕಷ್ಟದಲ್ಲಿ ಇರುವ ಜನರಿಂದ ಅಧಿಕಾರದ ಬಲದ ಮೂಲಕ ಬಲವಂತವಾಗಿ ನಡೆಸುವ ಸುಲಿಗೆಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಟೋಲ್ ಸುಂಕ ವಿಧಿಸುವ ರಸ್ತೆಗಳ ಸಂಖ್ಯೆ ಏರುತ್ತಿದೆ. ರಾಜ್ಯ ಹೆದ್ದಾರಿಗಳಿಗೂ ಟೋಲ್ ಗೇಟ್ ಗಳನ್ನು ಅಳವಡಿಸಲಾಗುತ್ತಿದೆ. ವಾಹನ ಸವಾರರು ರಸ್ತೆಗೆ ಇಳಿಯಲು ಭಯ ಪಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಟೋಲ್ ದರದ ಹೆಚ್ಚಳವನ್ನು ಮೌನವಾಗಿ ಸಹಿಸಿದರೆ ಮುಂದಿನ ದಿ‌ನಗಳಲ್ಲಿ ರಸ್ತೆಗಳ ಬಳಕೆಯೇ ಜನಸಾಮಾನ್ಯರಿಗೆ ಅಸಾಧ್ಯ ಆಗಲಿದೆ. ಈ ಎಲ್ಲಾ ಕಾರಣಗಳಿಗೆ ಟೋಲ್ ದರ ಹೆಚ್ಚಳವನ್ನು ನಾಗರಿಕ ಸಮಾಜ ಬಲವಾಗಿ ವಿರೋಧಿಸಬೇಕಿದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಇದನ್ನೂ ಓದಿ : ಸುರತ್ಕಲ್‌ ಟೋಲ್‌ಗೇಟ್‌ ತೆರವಿಗೆ ಮೂರು ದಿನದಲ್ಲಿ ಆದೇಶ: ಜಿಲ್ಲಾಧಿಕಾರಿ ಭರವಸೆ

ಎಪ್ರಿಲ್ ಒಂದರಂದು ಟೋಲ್ ದರ ಹೆಚ್ಚಳದ ಸಂದರ್ಭದಲ್ಲಿಯೆ ಆಯಾಯ ಭಾಗದ ‌‌ನಾಗರಿಕ ಸಂಘಟನೆಗಳು ರಾಜ್ಯದ ಟೋಲ್ ಗೇಟ್ ಗಳ ಮುಂಭಾಗ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ನಡೆಸುವ ಮೂಲಕ ಸರಕಾರಗಳಿಗೆ ಪ್ರಬಲ ಎಚ್ಚರಿಕೆಯನ್ನು ರವಾನಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ. 

Donate Janashakthi Media

Leave a Reply

Your email address will not be published. Required fields are marked *