ಕೋವಿಡ್‌ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಹರಡುವಿಕೆ ವ್ಯಾಪಕಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರ ಮುಂಜಾಗ್ರತೆಯಿಂದ ಸರಿಯಾದ ಕ್ರಮಗಳನ್ನು ಕೈಗೊಳ್ಳದ ಪರಿಣಾಮವಾಗಿ ರಾಜ್ಯದಲ್ಲಿ ಮತ್ತು ಹೆಚ್ಚಿನ ಸೋಂಕು ಹರಡಲು ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಜೀವ ರಕ್ಷಕ ಔಷಧಿ, ಆಕ್ಸಿಜನ್‌, ಹಾಸಿಗೆ ಹಾಗೂ ಉಚಿತ ಲಸಿಕೆ ನೀಡಲು ಒತ್ತಾಯಿಸಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಸಂಘಟನೆಯ ಕಾರ್ಯಕರ್ತೆಯರು ರಾಜ್ಯದಂತ ಪತ್ರ ಚಳವಳಿ ಮೂಲಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಂಘಟನೆಯು ಕೋವಿಡ್‌ ಇರಲಿ, ಕೋವಿಡೇತರ ಸಮಸ್ಯೆ ಇರಲಿ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ಸುರಕ್ಷತೆ ಖಾತ್ರಿಪಡಿಸಬೇಕು. ಸಾರ್ವಜನಿಕ ಪಡಿತರ ಮೂಲಕ ಕಡಿತ ಮಾಡಿರುವ ರೇಷನ್‌ ಪ್ರಮಾಣವನ್ನು ಹಿಂತೆಗೆದುಕೊಳ್ಳಬೇಕು, ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಿಸಿ, ಎಲ್ಲರಿಗೂ ಪ್ರತಿತಿಂಗಳು 10 ಕೆ.ಜಿ. ರೇಷನ್‌ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ವೈದ್ಯಕೀಯ ಮತ್ತು ಕೋವಿಡ್‌ ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಜನವಾದಿ ಮಹಿಳಾ ಸಂಘಟನೆಯು ಲಾಕ್‌ಡೌನ್‌ ಪರಿಸ್ಥಿತಿಯಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ಮಾಸಿಕ ರೂ.10 ಸಾವಿರ ನಗದು ವರ್ಗಾವಣೆಗೆ ಸಂಘಟನೆ ಆಗ್ರಹಿಸಿದೆ.

ಆರೋಗ್ಯ ನಮ್ಮ ಹಕ್ಕು – ಆಹಾರ ನಮ್ಮ ಅಗತ್ಯ ಮತ್ತು ಪೂರೈಕೆ ಸರಕಾರದ ಕರ್ತವ್ಯ ಎಂಬ ಘೋಷಣೆಯಿಂದಿಗೆ ಮುಖ್ಯಮಂತ್ರಿಗಳಿಗೆ ಅಂಚೆ ಡಬ್ಬಿಗಳಲ್ಲಿ ಪತ್ರಗಳನ್ನು ಹಾಕುವ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಾರ್ಯಕರ್ತೆಯರು ತಮ್ಮ ತಮ್ಮ ವ್ಯಾಪ್ತಿಯ ಅಂಚೆ ಕಛೇರಿಗಳ ಡಬ್ಬಕ್ಕೆ ಪತ್ರಗಳನ್ನು ಹಾಕುವ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದಾರೆ.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ಗೌರಮ್ಮ, ದೇವಿ, ಕೆ.ಎಸ್‌.ವಿಮಲಾ, ಕೆ.ಎಸ್‌.ಶಾರದಾ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮುಖಂಡರು ಈ ಚಳವಳಿಯಲ್ಲಿ ಭಾಗವಹಿಸಿದ್ದಾರೆ. ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ಚಳುವಳಿ ನಡೆದಿದೆ.

Donate Janashakthi Media

One thought on “ಕೋವಿಡ್‌ ಬಿಕ್ಕಟ್ಟು: ಜನವಾದಿಯಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ

  1. ದೇಶದ ಪ್ರತಿಯೊಬ್ಬ ಪ್ರಜೆಗೂ ಅವರ ಆರೋಗ್ಯ,ಆಹಾರದಂತಹ ಮೂಲಭೂತ ಹಕ್ಕು ಗಳು ಸಿಗುವಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ , ಹೊಣೆಗಾರಿಕೆ ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಜನತೆ ಯ ಹಕ್ಕು ಸಿಗಲೇ ಬೇಕು ಎಂದು ನಮ್ಮ ಹಕ್ಕೊತ್ತಾಯ

Leave a Reply

Your email address will not be published. Required fields are marked *