ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಆದೇಶಕ್ಕೆ ಉಪನ್ಯಾಸಕರು, ವಿದ್ಯಾರ್ಥಿಗಳು ಆಕ್ಷೇಪ

ಬೆಂಗಳೂರು: ಸ್ವಾತಂತ್ರೋತ್ಸದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ 2022ರ ಜನವರಿ 1ರಿಂದ ಫೆಬ್ರವರಿ 7ರವರೆಗೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಆದೇಶಕ್ಕೆ ಉಪನ್ಯಾಸಕರು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಲಾಖೆಯ ಆದೇಶದ ಬಗ್ಗೆ ಹಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಕಾಲೇಜುಗಳಲ್ಲಿ ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅಲ್ಲದೆ, ಹಲವೆಡೆ ಉಪನ್ಯಾಸಕರ ಕೊರೆತು ಇದೆ. ಈ ನಡುವೆ ಅತಿಥಿ ಉಪನ್ಯಾಸಕರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಹಲವು ಸಮಸ್ಯಗಳನ್ನು ಪರಿಹರಿಸಬೇಕಾದ ಸರ್ಕಾರ ಮಾತ್ರ ಮೌನವಹಿಸಿದೆ. ಇವುಗಳ ಕಡೆ ಗಮನ ನೀಡದೆ. ಸೂರ್ಯ ನಮಸ್ಕಾರ ನಡೆಸಬೇಕೆಂದು ಆದೇಶ ಹೊರಡಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಆದೇಶದ ಹಿಂದೆ ನಿರಂಕುಶ ಅಧಿಕಾರ: ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರ

ಪದವಿಪೂರ್ವ ಕಾಲೇಜುಗಳಲ್ಲಿ ಸೂರ್ಯ ನಮಸ್ಕಾರ ಕಡ್ಡಾಯಗೊಳಿಸುವ ಸರಕಾರದ ಆದೇಶದ ಹಿಂದಿನ ಮನಸ್ಥಿತಿಯೂ ಸೂರ್ಯ ನಮಸ್ಕಾರವೆಂದರೆ ಹಿಂದುತ್ವ ಶಿಕ್ಷಣವೆಂದರೆ ಹಿಂದುತ್ವ, ಇಲ್ಲಿ ವೈಜ್ಞಾನಿಕ, ವೈಚಾರಿಕ ಪಠ್ಯಕ್ರಮವಿಲ್ಲ. ಸೂಕ್ತವಾದ ವ್ಯಾಸಂಗ ಕ್ರಮವಿಲ್ಲ, ಕಾಲೇಜುಗಳಲ್ಲಿ ಶಿಕ್ಷಕರಿಲ್ಲ, ದೈಹಿಕ ಶಿಕ್ಷಕರ ಕೊರತೆಯಿದೆ. ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ.

ಆದರೆ ಶಿಕ್ಷಣದ ಈ ಮೂಲಭೂತ ಅಗತ್ಯಗಳ ಕುರಿತು ಸರಕಾರಕ್ಕೆ ಆಸಕ್ತಿಯಿಲ್ಲ. ಸೂರ್ಯ ನಮಸ್ಕಾರ ಮೂಲಕ ಮತೀಯ ಅಜೆಂಡಾಗಳನ್ನು ಜಾರಿಗೊಳಿಸಲು ಮುಂದಾಗಿದೆ. ಸರಕಾರಿ ಶಾಲೆ, ಕಾಲೇಜುಗಳನ್ನು ಬಲವರ್ಧನೆಗೊಳಿಸುವ ಯಾವುದೇ ಕಾರ್ಯಯೋಜನೆಗಳಿಲ್ಲದ ಬಿಜೆಪಿ ಅಗ್ಗದ ಜನಪ್ರಿಯತೆಗಾಗಿ ಈ ರೀತಿಯ ಅಡ್ಡ ಮಾರ್ಗ ಹಿಡಿದಿದೆ. ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸುವ ಆದೇಶದ ಹಿಂದೆ ನಿರಂಕುಶ ಅಧಿಕಾರದ ಅಹಮಿಕೆಯಿದೆ. ಇದನ್ನು ತಿರಸ್ಕರಿಸುವುದು ಪ್ರಜಾಪ್ರಭುತ್ವದ ಆಶಯವನ್ನು ಗೌರವಿಸಿದಂತೆ.

ಅರ್ಥಪೂರ್ಣ ಆಚರಣೆಗೆ ಮುಂದಾಗಲಿ: ಮುನಿವೆಂಕಟಪ್ಪ ರೆಡ್ಡಿ, ಉಪನ್ಯಾಸಕರು

ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ದೈಹಿಕ ಶಿಕ್ಷಕರ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಮಕ್ಕಳಿಗೆ ಬೋಧನೆ ಹೊರತು ದೈಹಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಏರ್ಪಡಿಸಲು ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ನಿಜಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಸ್ವಾತಂತ್ರೋತ್ಸದ ಅಮೃತ ಮಹೋತ್ಸವದ ನೆನಪಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಚರ್ಚೆ, ಸಂವಾದ, ಉಪನ್ಯಾಸಗಳನ್ನು ಏರ್ಪಡಿಸುವ ಮೂಲಕ ಅರ್ಥಪೂರ್ಣ ಆಚರಣೆಗೆ ಮುಂದಾಗಬೇಕು.

ಆದೇಶಕ್ಕೆ ಸಂಬಂಧಿಸಿದ ಮಾಹಿತಿ

ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ (ಶೈಕ್ಷಣಿಕ)-3 ಕುಸುಮಾ 2021ರ ಡಿಸೆಂಬರ್‌ 24ರಂದು ಸುತ್ತೋಲೆ ಹೊರಡಿಸಿ ‘ಸೂಯ ನಮಸ್ಕಾರ ದೊಂದಿಗೆ 2022ರ ಜನವರಿ 26ರಂದು ಸಂಗೀತದೊಂದಿಗೆ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆʼ ಎಂದು ತಿಳಿಸಿದ್ದಾರೆ.

ತಮ್ಮ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ಈ ಸೂರ್ಯ ನಮಸ್ಕಾರ ಕಾರ್ಯಕ್ರಮದ ಕ್ರೋಡೀಕೃತ ಮಾಹಿತಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಶೈಕ್ಷಣಿಕ ಇಲಾಖೆಗೆ ಸಲ್ಲಿಸಲು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

‘ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್’ ಡಿಸೆಂಬರ್‌ 9ರಂದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಪತ್ರ ಬರೆದು 75ನೇ ಸ್ವಾತಂತ್ರೋತ್ಸದ ಅಮೃತ ಮಹೋತ್ಸವ ಅಂಗವಾಗಿ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮ ಏರ್ಪಡಿಸಲು ಕೋರಿತ್ತು. ಅಲ್ಲದೆ, ದೇಶದ 30 ರಾಜ್ಯಗಳಲ್ಲಿ 30 ಸಾವಿರ ಸಂಸ್ಥೆಗಳ ಒಟ್ಟು 3 ಲಕ್ಷ ವಿದ್ಯಾರ್ಥಿಗಳನ್ನು ಸೇರಿಸಿ ಒಟ್ಟು 75 ಕೋಟಿ ‘ಸೂರ್ಯ ನಮಸ್ಕಾರ ಮಾಡಿಸಲು ಫೆಡರೇಷನ್ ತೀರ್ಮಾನಿಸಿದೆ ಎಂದು ಕೇಂದ್ರಕ್ಕೆ ಬರೆದಿರುವ ಪತ್ರದಲ್ಲಿ ಫೆಡರೇಷನ್ ಉಲ್ಲೇಖಿಸಿತ್ತು.

ಆ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಡಿಸೆಂಬರ್‌ 20ಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಅಧೀನ ಕಾರ್ಯದರ್ಶಿ ರಾಜೇಶ್ ಕುಮಾರ್ ಮೌರ್ಯ ಅವರು ಪತ್ರ ಬರೆದು ‘ಸೂರ್ಯ ನಮಸ್ಕಾರ ಕಾರ್ಯಕ್ರಮ ಏರ್ಪಡಿಸುವಂತೆ ನಿರ್ದೇಶನ ನೀಡಿದ್ದರು.

Donate Janashakthi Media

Leave a Reply

Your email address will not be published. Required fields are marked *