ಜನಪ್ರತಿನಿಧಿಗಳ ವೇತನದಲ್ಲಿ ಭಾರೀ ಹೆಚ್ಚಳ..! ಎಷ್ಟು ಹೆಚ್ಚಳವಾಯ್ತು ಗೊತ್ತಾ?

ಮುಖ್ಯಮಂತ್ರಿ ಸಚಿವರ ವೇತನ-ಭತ್ಯೆ ಹೆಚ್ಚಳ ಮಸೂದೆ ಅಂಗೀಕಾರ

ಬೆಂಗಳೂರು: ಇಂದು ವಿಧಾನಸಭೆಯಲ್ಲಿ ಶಾಸಕರ ವೇತನ,ಭತ್ಯೆ ಮಸೂದೆಗೆ ಅನುಮೋದನೆ ದೊರೆತಿದ್ದು, ಜನಪ್ರತಿನಿಧಿಗಳ ವೇತನ ಮತ್ತು ಭತ್ಯೆಯಲ್ಲಿ ಭಾರೀ ಏರಿಕೆಯಾಗಿದೆ.

ಕಾನೂನು ಸಚಿವ ಮಾಧುಸ್ವಾಮಿ ಇಂದು ವಿಧಾನಸಭೆಯಲ್ಲಿ ಶಾಸಕರ ವೇತನ,ಭತ್ಯೆ ಎರಡನೇ ತಿದ್ದುಪಡಿ ಮಸೂದೆ ಮಂಡಿಸಿದರು. ಮಸೂದೆಗೆ ಅಂಗೀಕಾರ ದೊರೆತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರ ವೇತನ 50% ಹೆಚ್ಚಳವಾಗಿದೆ. ಇದೇ ವೇಳೆ ಶಾಸಕರು, ಸಭಾಧ್ಯಕ್ಷರು, ಸಭಾಪತಿಗಳು, ವಿಪಕ್ಷ ನಾಯಕರು, ಸಚೇತಕರ ವೇತನವೂ ಹೆಚ್ಚಳವಾಗಿದೆ.

ವೇತನ ಹೆಚ್ಚಳದ ಮಸೂದೆ ಮಂಡಿಸಿದ ಸಚಿವ ಮಾಧುಸ್ವಾಮಿ ಮಸೂದೆ ಅಂಗೀಕಾರದ ಬಗ್ಗೆ ಸಮರ್ಥನೆ ಮಾಡಿಕೊಂಡರು. ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟ ಆಗಿದೆ. ಡಿಸೇಲ್, ಪೆಟ್ರೋಲ್ ಕೂಡ ಜಾಸ್ತಿ ಆಗಿದೆ. ಮನೆ ಬಾಡಿಗೆ ಕೂಡ ಜಾಸ್ತಿ ಆಗಿದೆ. ಹಾಗಾಗಿ ಮುಖ್ಯಮಂತ್ರಿ, ಸಚಿವರು, ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಶಾಸಕರ ಸಂಬಳ ಹೆಚ್ಚಳ ಮಾಡವ ಬಗ್ಗೆ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತಿದೆ ಎಂದರು.

ಮಸೂದೆ ಅಂಗೀಕಾರದ ಪ್ರಕಾರ, ಮುಖ್ಯಮಂತ್ರಿಗಳು ಸೇರಿದಂತೆ ಇತರ ಸಚಿವರುಗಳ ವೇತನವು ಶೇಕಡಾ 50ರಷ್ಟು ಹೆಚ್ಚಾಗಲಿದೆ. ವಿಧಾನಸಭೆಯಲ್ಲಿ ಸಹ ಅಂಗೀಕಾರ ಸಿಕ್ಕಿದ್ದು, ಇದರಿಂದಾಗಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸದನಗಳ ಶಾಸಕರ, ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು, ಸಭಾಪತಿ, ಉಪ ಸಭಾಪತಿಗಳ ಸಂಬಳ ಶೇಕಡಾ 50ರಷ್ಟು ಹೆಚ್ಚಾಗಲಿದೆ. ಜತೆಗೆ ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಅಂಗೀಕಾರ ಮಾಡಲಾಗಿದೆ. ಸದನ ಸದಸ್ಯರ ಮನೆ ಬಾಡಿಗೆ, ಪ್ರಯಾಣ ಖರ್ಚುವೆಚ್ಚ ಮತ್ತು ಇತರ ಭತ್ಯೆಗಳ ಸೌಲಭ್ಯವೂ ಹೆಚ್ಚು ಸಿಗಲಿದೆ.

ಮುಖ್ಯಮಂತ್ರಿ, ಸಚಿವರಿಗೆ ಸಂಬಳ ಹೆಚ್ಚಳ

  • ಮುಖ್ಯಮಂತ್ರಿಗೆ ಪ್ರತಿ ತಿಂಗಳು ಇದ್ದ 50ಸಾವಿರ ಸಂಬಳ 75 ಸಾವಿರಕ್ಕೆ ಹೆಚ್ಚಳ
  • ಸಂಪುಟ ದರ್ಜೆ ಸಚಿವರಿಗೆ ಪ್ರತಿ ತಿಂಗಳಿಗೆ 40ಸಾವಿರ ಇದ್ದ ಸಂಬಳ 60 ಸಾವಿರ ರೂ.ಗಳಿಗೆ ಹೆಚ್ಚಳ
  • ಸಂಪುಟ ದರ್ಜೆ ಪ್ರತಿ ವರ್ಷಕ್ಕೆ ಅತಿಥ್ಯ ಭತ್ಯೆ 3ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಹೆಚ್ಚಳ
  • ಸಂಪುಟ ದರ್ಜೆ ಸಚಿವರುಗಳ ಮನೆ ಬಾಡಿಗೆ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ ಹೆಚ್ಚಳ
  • ಸಂಪುಟ ದರ್ಜೆ ಸಚಿವರುಗಳ ಮನೆ ನಿರ್ವಹಣೆ ವೆಚ್ಚ 20 ಸಾವಿರದಿಂದ 30ಸಾವಿರಕ್ಕೆ ಹೆಚ್ಚಳ
  • ಸಂಪುಟ ದರ್ಜೆ ಸಚಿವರುಗಳ ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ ಒಂದು ಸಾವಿರ ಪೆಟ್ರೋಲ್ ಲೀಟರ್ ನಿಂದ 2ಸಾವಿರ ಲೀಟರ್ ಪೆಟ್ರೋಲ್ ಗೆ ಹೆಚ್ಚಳ

ಸಭಾಧ್ಯಕ್ಷರು/ ಸಭಾಪತಿ ವೇತನ, ಭತ್ಯೆ

  • ಸಂಬಳ: 50,000ರೂ. ದಿಂದ 75,000ರೂ.
  • ಆತಿಥ್ಯ ವೇತನ ವಾರ್ಷಿಕ: 3,00,000ರೂ. ದಿಂದ 4,00,000 ರೂ.
  • ಮನೆ ಬಾಡಿಗೆ: 80,000 ರೂ. ದಿಂದ 1,60,000ರೂ.
  • ಇಂಧನ: 1000 ಲೀಟರ್‌ ನಿಂದ 2000 ಲೀಟರ್
  • ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ. ದಿಂದ 40ರೂ.
  • ದಿನ ಭತ್ಯೆ(ಪ್ರಯಾಣ): ದಿನಕ್ಕೆ2000ರೂ. ದಿಂದ 3000ರೂ.
  • ಹೊರ ರಾಜ್ಯ ಪ್ರವಾಸ: ದಿನಕ್ಕೆ 2500ರೂ. +5000ರೂ. ದಿಂದ 3000ರೂ.+7000ರೂ.

ವಿಪಕ್ಷ ನಾಯಕರ ವೇತನ, ಭತ್ಯೆ

  • ಸಂಬಳ:40,000ರೂ. ದಿಂದ ? 60,000ರೂ.
  • ವಿಪಕ್ಷ ನಾಯಕರ ಆತಿಥ್ಯ ವೇತನ ವಾರ್ಷಿಕ: 2,00,000ರೂ. ದಿಂದ 2,50,000ರೂ.
  • ಇಂಧನ: 1000 ಲೀಟರ್ ರಿಂದ 2000 ಲೀಟರ್
  • ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 30ರೂ.
  • ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 3000ರೂ.
  • ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.

ಶಾಸಕರ ವೇತನ, ಭತ್ಯೆ

  • ಸಂಬಳ: 20,000ರೂ. ದಿಂದ 40,000ರೂ.
  • ಕ್ಷೇತ್ರ ಭತ್ಯೆ: 40,000ರೂ. ರಿಂದ 60000ರೂ.
  • ಆತಿಥ್ಯ ವೇತನ (ವಾರ್ಷಿಕ): 2,00,000ರೂ. ದಿಂದ 2,50,000ರೂ.
  • ಇಂಧನ: 1000 ಲೀಟರ್ ರಿಂದ 2000 ಲೀಟರ್
  • ಪ್ರಯಾಣ ಭತ್ಯೆ: ಪ್ರತಿ ಕಿಲೋಮೀಟರ್ 25ರೂ. ದಿಂದ 30ರೂ.
  • ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000ರೂ. ದಿಂದ 2500ರೂ.
  • ಹೊರ ರಾಜ್ಯ ಪ್ರವಾಸ: 5000ರೂ. ದಿಂದ 7000ರೂ.
  • ದೂರವಾಣಿ ವೆಚ್ಚ: ಯಥಾಸ್ಥಿತಿ ತಿಂಗಳಿಗೆ 20,000ರೂ. ಕಾಯ್ದಿರಿಸಲಾಗಿದೆ
  • ಶಾಸಕರ ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10,000ರೂ. ರಿಂದ 20,000ರೂ. ಹೆಚ್ಚಳ

ಕೋವಿಡ್ ಕಾರಣಕ್ಕಾಗಿ ಹಲವು ಇಲಾಖೆಗಳಲ್ಲಿ ಹಣ ಕಡಿತ ಮಾಡಿದ್ದ ಸರ್ಕಾರ, ಕೆಲ ಯೋಜನೆಗಳ ಅನುದಾನವನ್ನೂ ಕೂಡ ಕಡಿತಗೊಳಿಸಿತ್ತು. ದುಂದು ವೆಚ್ಚ ಮಾಡಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಘೋಷಣೆ ಮಾಡಿದ್ದರು. ಆದರೆ ಈಗ ಸಚಿವರು, ಮುಖ್ಯಮಂತ್ರಿಗಳ ಸಂಬಳ ಹೆಚ್ಚಳದ ತಿದ್ದುಪಡಿ ಮಸೂದೆ ತಂದು ಅಂಗೀಕಾರ ಪಡೆದುಕೊಂಡ ಸರ್ಕಾರದ ನಡೆ ಬಗ್ಗೆ ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *