ಜನವರಿ 23 ರಿಂದ 25 ರವರೆಗೆ ಸಂಸದರ ಕಚೇರಿ ಮುಂದೆ ಕಾರ್ಮಿಕರ ಪ್ರತಿಭಟನೆ

ಹಾಸನ: ಸಿಐಟಿಯು ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ, ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ, ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ, ರೈತ ವಿರೋಧಿ ಕೃಷಿ ಕಾನೂನುಗಳ ವಾಪಸ್‌‌ಗಾಗಿ, ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಜಾರಿಗಾಗಿ, ಕಾರ್ಮಿಕರಿಗೆ ಕನಿಷ್ಠ ವೇತನ ರೂ. 31,000 ನಿಗಧಿಗಾಗಿ, ಕನಿಷ್ಠ ರೂ.6.000 ಪಿಂಚಣಿಗಾಗಿ ಒತ್ತಾಯಿಸಿ ಸಂಸದರ ಕಚೇರಿ ಮುಂದೆ ಮೂರು ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌ ತಿಳಿಸಿದರು. ಜನವರಿ 

ಹಾಸನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಧರ್ಮೇಶ್‌,  ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರ 10 ವರ್ಷಗಳ ಆಡಳಿತವನ್ನು ಪೂರೈಸಿ ಮತ್ತೊಂದು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ. ಆದರೆ ಕಳೆದ 10 ವರ್ಷಗಳಲ್ಲಿ ಜನರಿಗೆ ‘ಒಳ್ಳೆಯ ದಿನಗಳು ಬರಲಿವೆ’ ಎನ್ನುವ ಭರವಸೆಯು ಮರೀಚಿಕೆಯಾಗಿಯೇ ಉಳಿಯಿತು. ಶ್ರೀಮಂತರು ಅತಿದೊಡ್ಡ ಶ್ರೀಮಂರತಾದರು ಬಡವರು ಮತ್ತಷ್ಟು ಕಡುಬಡತನಕ್ಕೆ ತಳ್ಳಲ್ಪಟ್ಟರು. ದೇಶದ ಸಾಲ 205 ಲಕ್ಷ ಕೋಟಿಗಳಿಗೆ ಏರಿತು. ಶ್ರೀಮಂತರ 15 ಲಕ್ಷ ಕೋಟಿ ಸಾಲ ಮನ್ನಾ ಮಾಡಲಾಯಿತು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡದೆ ಅವರ ಮೇಲಿನ ಸಾಲದ ಹೊರೆ ಇಳಿಸದೆ ಲಕ್ಷಗಟ್ಟಲೆ ರೈತರನ್ನು ಆತ್ಮಹತ್ಯೆಗೆ ದೂಡಲಾಯಿತು. ಕಾರ್ಮಿಕರ ಕಾನೂನುಗಳನ್ನು ಸಂಹಿತೆಗಳನ್ನಾಗಿಸಿ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಗೆ ನೂಕಿ ಅತಿಕಡಿಮೆ ಕೂಲಿ ಮತ್ತು ಸೌಲಭ್ಯಗಳನ್ನು ನೀಡಿ ಅತಿಹೆಚ್ಚು ದುಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಕಾರ್ಪೊರೇಟ್ ಲೂಟಿಗೆ ಅವಕಾಶ ನೀಡಲಾಯಿತು. ನಿರುದ್ಯೋಗ ಮಟ್ಟ ಮಿತಿಮೀರಿ ಆಸ್ಪೋಟಕಾರಿ ಸ್ಥಿತಿಗೆ ತಲುಪಿತು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಗಳ ಖಾಸಗೀಕರಣದಿಂದ ಸಾಮಾನ್ಯ ಜನರು ಉತ್ತಮ ಗುಣಮಟ್ಟದ ಹಾಗೂ ಏಕರೂಪದ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಭಾರತ ರಾಜ್ಯಗಳ ಒಕ್ಕೂಟ ಎನ್ನುವ ತತ್ವಕ್ಕೆ ವಿರುದ್ಧವಾಗಿ ರಾಜ್ಯಗಳ ನ್ಯಾಯಯುತ ತೆರಿಗೆ ಪಾಲನ್ನು ರಾಜ್ಯಗಳಿಗೆ ಕೇಂದ್ರ ಸರ್ಕಾರ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಜೊತೆಗೆ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸಿ, ಸಂವಿಧಾನದ ಮೂಲ ಆಶಯಗಳನ್ನು ಬುಡಮೇಲು ಮಾಡಿ ‘ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯ ಭಾರತ’ವನ್ನು  ಒಂದು ಪಾಳೆಗಾರಿ ಮೌಲ್ಯಗಳ ಮನುವಾದಿ ದೇಶವನ್ನಾಗಿಸುವ ಪ್ರಯತ್ನ ಭರದಿಂದ ಸಾಗುತ್ತಿದೆ ಎಂದರು. ಜನವರಿ

ಇದನ್ನು ಓದಿ : ಕೇಂದ್ರ ಸರಕಾರದ ಸುತ್ತೋಲೆ- ಅಧಿಕಾರದ ಸಂಪೂರ್ಣ ದುರುಪಯೋಗ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮರೆಮಾಚಿ ಮತ್ತೊಮ್ಮೆ ದೇಶದ ಅಧಿಕಾರವನ್ನು ಹಿಡಿಯಲು ದೇಶದ ಬಹುಸಂಖ್ಯಾತ ಜನರಲ್ಲಿ ಕೋಮುದ್ವೇಷ ತುಂಬಿ ಭಾವನಾತ್ಮಕ ವಿಷಯಗಳನ್ನು ಮುಂದುಮಾಡಿ ಸುಳ್ಳು ಕಥನಗಳ ಮೂಲಕ ಜನರಲ್ಲಿ ಭಕ್ತಿಯ ಉನ್ಮಾದ ಮತ್ತು ಭಯದ ಆತಂಕದಲ್ಲಿರಿಸುವ ಅಪಾಯಕಾರಿ ರಾಜಕೀಯದಲ್ಲಿ ಕೋಮುವಾದಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳು ನಿರತವಾಗಿದೆ. ಇದು ದೇಶ ಹಾಗೂ ಜನತೆಯ ಪಾಲಿಗೆ ಬಹಳ ಆತಂಕಕಾರಿ ಸ್ಥಿತಿಯಾಗಿದೆ. ಜನರ ಬದುಕಿನ ದೈನಂದಿನ ಸಮಸ್ಯೆಗಳನ್ನು ಮರೆಮಾಚುವಂತೆ ಮಾಡಲಾಗುತ್ತಿದೆ. ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲಿನ ದಾಳಿ ದೌರ್ಜನ್ಯಗಳು ಮಿತಿಮೀರಿ ಅಪಾಯಕಾರಿ ಹಂತ ತಲುಪಿದೆ. ರಾಜ್ಯ ಸರ್ಕಾರವೂ ಕೂಡ ರೈತರ, ಕಾರ್ಮಿಕರ ಮತ್ತು ಕೂಲಿಕಾರರ ವಿರುದ್ಧದ ನೀತಿಗಳ ಜಾರಿಯಲ್ಲಿ ನಿರತವಾಗಿದೆ. ಕಾರ್ಪೊರೇಟ್ ಬಂಡವಾಳಿಗರ ಲಾಭಕೋರ ನೀತಿಗಳಿಗೆ ಅನುಗುಣವಾಗಿ ರಾಜ್ಯ ಸರ್ಕಾರವೂ ದುಡಿಯುವ ಜನರ ಮೇಲೆ ಮತ್ತಷ್ಟು ಸಂಕಷ್ಟಗಳನ್ನು ಹೇರುತ್ತಿದೆ. ಕಾರ್ಮಿಕರ ಕನಿಷ್ಟ ವೇತನ ಹೆಚ್ಚಿಸಲು ಮತ್ತು ರೈತರ.ಬೆಳೆಗಳಿಗೆ ವೈಜ್ಞಾನಿಕ  ಕನಿಷ್ಟ ಬೆಂಬೆಲ ಬೆಲೆ ನಿಗದಿಪಡಿಸಲು ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಜನವರಿ

ಈ ಹಿನ್ನೆಲೆಯಲ್ಲಿ ಸಿಐಟಿಯು ದೇಶದಾದ್ಯಂತ ದುಡಿಯುವ ಜನರ ನಡುವೆ ಐಕ್ಯತೆಯನ್ನು ಸಾಧಿಸಿ ನಿರಂತರವಾದ  ಹೋರಾಟಗಳ ಮುಖಾಂತರ ಜನರ ನೈಜ ಪ್ರಶ್ನೆಗಳನ್ನು ಸಾಮಾಜಿಕವಾಗಿ ಸರ್ಕಾರದ ಮುಂದಿಡುವ ಪ್ರಯತ್ನಗಳನ್ನು ಯಾವಾಗಲೂ ಮಾಡುತ್ತಲೇ ಬಂದಿದೆ. ಅದರ ಭಾಗವಾಗಿ ಜನವರಿ 23 ರಿಂದ 25 ರವರೆಗೆ ಪ್ರತೀ ಲೋಕಸಭಾ ಸದಸ್ಯರ ಕಚೇರಿಯ ಮುಂದೆ ಕಾರ್ಮಿಕರ ಪ್ರತಿಭಟನಾ ಧರಣಿ ನಡೆಸಲಾಗುತ್ತಿದೆ. ಆ ದಿನಗಳಂದು ಹಾಸನದಲ್ಲಿ ಸಂಸತ್ ಸದಸ್ಯರ ಕಚೇರಿಯೂ ಇರುವ ಜಿಲ್ಲಾಧಿಕಾರಿಯವರ ಕಚೇರಿಯ ಆವರಣದಲ್ಲಿ 3 ದಿನಗಳ ಕಾಲ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿ ಮಾನ್ಯ ಪ್ರದಾನ ಮಂತ್ರಿ ಮತ್ತು ಮಾನ್ಯ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಈಗಾಗಲೇ ಈ ಸಂಬಂಧ ಜನರ ಬೇಡಿಕಗಳನ್ನೊಳಗೊಂಡ ಅರ್ಜಿಗಳಿಗೆ ಕಾರ್ಮಿಕರು ಸಾರ್ವಜನಿಕರಿಂದ ಸಹಿ ಸಂಗ್ರಹ ಮಾಡಿದ್ದಾರೆ. ಜನವರಿ 23 ರಂದು ಅಂಗನವಾಡಿ, ಬಿಸಿಯೂಟ, ಅಶಾ ಮತ್ತಿತರೆ ಸ್ಕೀಂ ನೌಕರರು ಪ್ರತಿಭಟನಾ ಧರಣಿ ನಡೆಸಲಿದ್ದಾರೆ. ಜನವರಿ 24 ರಂದು ಪ್ಲಾಂಟೇಷನ್ ಕಾರ್ಮಿಕರು ಪ್ರತಿಭಟನಾ ಧರಣಿ ನಡೆಸಿ ಮನವಿ ಸಲ್ಲಿಸಲಿದ್ದಾರೆ. ಹಾಗೂ ಜನವರಿ 25 ರಂದು ಗ್ರಾಮ ಪಂಚಾಯತಿ ನೌಕರರು ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಜನವರಿ

ಈ ವೇಳೆ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಮುಖಂಡರಾದ ಅರವಿಂದ್‌, ಜಯಂತಿ, ಸೌಮ್ಯ ಬಿಎಂ, ಹೊನ್ನೇಗೌಡ, ಕಲಾವತಿ ಇದ್ದರು. ಸಿಐಟಿಯು

ಇದನ್ನು ನೋಡಿ : ಕೆಮಿಕಲ್​ ಮಿಶ್ರಿತ ನೀರು ಹೊರಹಾಕುತ್ತಿರುವ ಯತ್ನಾಳ ಸಕ್ಕರೆ ಕಾರ್ಖಾನೆ : ಜನರ ಹೊಟ್ಟೆ ಸೇರುತ್ತಿದೆ ವಿಷಕಾರಿ ನೀರು

 

Donate Janashakthi Media

Leave a Reply

Your email address will not be published. Required fields are marked *