ಚರಂಡಿ ವಿಚಾರಕ್ಕೆ ಜಗಳ : ಗುಂಪು ಹಲ್ಲೆ , ಯುವಕ ಸಾವು

ಕಲಬುರಗಿ: ಚರಂಡಿ ವಿಷಯದಲ್ಲಿ ಆರಂಭಗೊಂಡ ಕ್ಷುಲಕ ಜಗಳದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಈ ಗಲಭೆಯಲ್ಲಿ ಆರು ಜನರು ಗಾಯಗೊಂಡಿರುವ ದಾರುಣ ಘಟನೆ ಚಿತ್ತಾಪುರ ತಾಲೂಕಿನ‌ ಮುಡಬೂಳ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ ಸಂಗಾವಿ (32) ಕೊಲೆಯಾದ ಯುವಕ. ಮುಡಬೂಳ ಗ್ರಾಮದಲ್ಲಿ ಮನೆಯ ಎದುರಿನ ಚರಂಡಿ ವಿಷಯವಾಗಿ ನಿನ್ನೆ ಮಧ್ಯಾಹ್ನ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದಿತ್ತು‌. ಮತ್ತೆ ಅದೇ ವಿಷಯವಾಗಿ ರಾತ್ರಿಯೂ ಕೂಡಾ ವಾಗ್ವಾದ ನಡೆದು ವಿಕೋಪಕ್ಕೆ ತಿರುಗಿದೆ. ಪರಿಣಾಮ ಕೆಲವರು ಸಂಗಾವಿ ಕುಟುಂಬದವರ ಮೇಲೆ ಮಾರಕಾಸ್ತ್ರ, ಕಲ್ಲು ಕಟ್ಟಿಗೆಯಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಉದ್ರಿಕ್ತ ಗುಂಪು ಸಂಗಾವಿ ಮನೆಯ ಬಾಗಿಲು ಕಲ್ಲುಗಳಿಂದ ಹೊಡೆದು ಮುರಿದು ಹಾಕಿದ್ದಾರೆ.

ಘಟನೆಯಲ್ಲಿ ವಿಶ್ವನಾಥ ಸಂಗಾವಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಂಗಾವಿ ಮನೆತನದ ಆರು ಜನರು ಗಂಭೀರ ಗಾಯಗೊಂಡಿದ್ದು, ಕಲಬುರ್ಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮನೆಯ ತುಂಬೆಲ್ಲ ರಕ್ತದ ಹೊಳೆಯಂತೆ ಹರಿದಾಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲಿಸಿದ್ದಾರೆ. ಘಟನೆ ನಂತರ ದುಷ್ಕರ್ಮಿಗಳು ತೆಲೆ ಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಚಿತ್ತಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರ ನಿರ್ಮಾಪಕನ ಬಂಧನ : ವಿಶ್ವನಾಥ್ ಸಂಗಾವಿ ಎಂಬುವವರ ಕೊಲೆ ಪ್ರಕರಣದಲ್ಲಿ ‘ಮಾಮು ಟೀ ಅಂಗಡಿ’ ಸಿನಿಮಾ ನಿರ್ಮಾಪಕ ಶಿವಮಂದ್ರಪ್ಪ ಸಣ್ಣೂರಕರನನ್ನು ಚಿತ್ತಾಪುರ ಪೊಲೀಸರು ಬಂಧಿಸಿದ್ದಾರೆ. ಕಲ್ಲು, ಬಡಿಗೆಯಿಂದ ಹೊಡೆದು ವಿಶ್ವನಾಥ್ ಸಂಗಾವಿಯನ್ನು ಕೊಂದಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಶಿವಮಂದ್ರಪ್ಪ ಕುಟುಂಬದ 17 ಜನರ ವಿರುದ್ಧ ದೂರು ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *