ಬೆಂಗಳೂರು; ಫೇ.02 : ಪ್ರಸಕ್ತ ಸಾಲಿನ ಬಹು ನಿರೀಕ್ಷಿತ 2021-22 ನೇ ಸಾಲಿನ ಕೇಂದ್ರ ಬಜೆಟ್ ದೇಶವನ್ನು ಸಬಲೀಕರಣದತ್ತ ಕೊಂಡೊಯ್ಯತ್ತದೆ ಎಂದು ನೀರಿಕ್ಷೆಯಿಂದ ಕಾಯುತ್ತಿದ್ದ ನಾಗರಿಕರಿಗೆ ಈ ಬಜೆಟ್ ಮತ್ತೇ ನೀರಾಸೆಯನ್ನು ಮೂಡಿಸಿದೆ. ಕೆಂದ್ರ ಬಜೇಟ್ ರೈತರು, ಯುವಕರು, ಮಹಿಳೆಯರಿಗೆ ಆರ್ಥಿಕ ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತದೆ ಎಂದು ಬಹಳ ನೀರಿಕ್ಷೆಯಿಂದ ಕಾಯುತ್ತಿದ್ದವರಿಗೆ ಹುಸಿ ಬರವಸೆ ನೀಡಿದೆ ಎಂದು ಪ್ರಮುಖ ರಾಜಕೀಯ ಮುಖಂಡರು, ಆರ್ಥಿಕ ತಜ್ಞರು ವಿರೋಧವನ್ನು ವ್ಯಕ್ತಡಿಸಿದ್ದಾರೆ.

ಕೆಂದ್ರ ಬಜೆಟ್ ಬಗ್ಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಸಮಾಧಾನವನ್ನು ಹೊರಹಾಕಿದ್ದಾರೆ. ನಾನು ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಈ ಹಿಂದೆ ಮೂರು ಬಾರಿ “ಆತ್ಮನಿರ್ಭರ” ಬಜೆಟ್ ಘೋಷಿಸಿದ್ದರು. ಈಗ ನಿರ್ಮಲಾ ಸೀತರಾಮನ್ ಅವರು “ಆತ್ಮ ಬರ್ಬಾದ್” ದೀವಾಳಿ ಎಂದೇ ಹೇಳಬಹುದಾದ ಬಜೆಟ್ ಕೊಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಜನರಿಗೆ ಮಾರಕವಾಗಿದ್ದು, ಇನ್ನಷ್ಟು ಹೊರೆ ಹೆಚ್ಚಲಿದೆ. ಈಗಾಗಲೇ ತೀವ್ರಗತಿಯಲ್ಲಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಒಂದು ಲೀಟರ್ ಗೆ ಕ್ರಮವಾಗಿ 2.30 ಮತ್ತು 4ರೂ. ಹೆಚ್ಚಳವಾಗಲಿದೆ. ಇದಲ್ಲದೆ ಅಗತ್ಯ ವಸ್ತುಗಳಾದ ವಾಹನ ಬಿಡಿ ಭಾಗಗಳು, ಬೇಳೆ ಕಾಳು ಇತ್ಯಾದಿಗಳ ಬೆಲೆಯೂ ಹೆಚ್ಚಲಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಈ ಬಜೆಟ್, ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗುವಂತೆ, ಬ್ಯಾಂಕು, ವಿಮಾ ಕ್ಷೇತ್ರ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳ ಖಾಸಗಿಯವರಿಗೆ ನೀಡುವ ಘೋಷಣೆ ಮಾಡಲಾಗಿದೆ. ಆದ್ಯತಾ ಕ್ಷೇತ್ರದಲ್ಲಿ ಇಲ್ಲದ ಸಾರ್ವಜನಿಕ ಉದ್ದಿಮೆಗಳನ್ನು ಪೂರ್ತಿಯಾಗಿ ಖಾಸಗಿಯವರಿಗೆ ಮಾರಾಟ ಮಾಡುವುದು ಅಥವಾ ಮುಚ್ಚುವುದಾಗಿ ಬಜೆಟ್ ನಲ್ಲಿ ಉಲ್ಲೇಖಿಸಲಾಗಿದೆ 2ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಉಳಿದ ರಾಜ್ಯಗಳಲ್ಲಿ ಗೆಲ್ಲುವ ಚಿಹ್ನೆ ಇಲ್ಲದ ಬಿಜೆಪಿ. ಕೇಂದ್ರ ಸರಕಾರ ಪಶ್ಚಿಮ ಬಂಗಾಳ ಕೆ 25,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸುವ ಮೂಲಕ ಇತರ ರಾಜ್ಯಗಳಿಗೆ ಅನ್ಯಾಯ ಮಾಡಿದೆ. ಒಟ್ಟಾರೆಯಾಗಿ ಇದು ಜನ ವಿರೋಧಿ ಬಜೆಟ್ ಮಾತ್ರ ಅಲ್ಲ, ಅಂಬಾನಿ – ಅದಾನಿಗಳ ಕೈ ಗೊಂಬೆ ಸರಕಾರದ ಬಡ್ಜೆಟ್ ಎಂದು ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

2018ರ ಹಣಕಾಸು ವರ್ಷದಲ್ಲಿ ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್ ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿಯನ್ನು ಸಂಗ್ರಹ ಮಾಡಿತ್ತು. ಆದರೆ ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಭಿವೃದ್ದಿಗೆ ವೆಚ್ಚ ಮಾಡದೆ ಕೇಂದ್ರ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎಂದು ಎಸ್ ಎಫ್ ಐ ನ ರಾಜ್ಯಾಧ್ಯಕ್ಷ ಅಮರೇಶ ಕಡಗದ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.