ಉಪ ಚುನಾವಣೆ ಫಲಿತಾಂಶ: ಐದೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲು

ನವದೆಹಲಿ: ಇತ್ತೀಚೆಗೆ ನಡೆದ ಒಂದು ಲೋಕಸಭೆ ಮತ್ತು ನಾಲ್ಕು ರಾಜ್ಯಗಳಲ್ಲಿನ ನಾಲ್ಕು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಗೆ ತೀವ್ರ ಹಿನ್ನಡೆಯಾಗಿದೆ. ಪಶ್ಚಿಮ ಬಂಗಾಳದ ಅಸಾನ್ಸೋಲ್ ಲೋಕಸಭಾ ಕ್ಷೇತ್ರ ಹಾಗೂ ಬಲ್ಲಿಗುಂಜೆ ವಿಧಾನಸಭಾ ಕ್ಷೇತ್ರ ಮತ್ತು ಛತ್ತೀಸಗಡದ ಖೈರಾಗಡ, ಬಿಹಾರದ ಬೊಚಾಹನ್ ಹಾಗೂ ಮಹಾರಾಷ್ಟ್ರದ ಕೊಲ್ಹಾಪುರ ವಿಧಾನಸಭೆ ಕ್ಷೇತ್ರಗಳಿಗೆ ಏಪ್ರಿಲ್ 12ರಂದು ಮತದಾನ ನಡೆದಿತ್ತು. ಚುನಾವಣಾ ಫಲಿತಾಂಶ ಹೊರಬಿದ್ದಿದೆ.

ಅಸಾನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಇತ್ತೀಚಿಗೆ ಅಷ್ಟೇ ಟಿಎಂಸಿ ಪಕ್ಷವನ್ನು ಸೇರಿದ್ದ ನಟ ಶತ್ರುಘ್ನ ಸಿನ್ಹಾ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಲೋಕಸಭೆ ಸದಸ್ಯರಾಗಿ ಅಸಾನ್ಸೋಲ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

ಇದನ್ನು ಓದಿ: ಪಶ್ಚಿಮ ಬಂಗಾಳ: ಬಿಜೆಪಿಗೆ ಭಾರೀ ಸೋಲು

ಬಿಜೆಪಿಯಲ್ಲಿ ಇದ್ದ ಶತ್ರುಘ್ನ ಸಿನ್ಹಾ ಅವರನ್ನು ಕಡೆಗಣಿಸಲಾಗಿದ್ದರಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಇತ್ತೀಚೆಗೆ ಟಿಎಂಸಿಗೆ ವಲಸೆ ಬಂದವರು.

ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಾಬುಲ್ ಸುಪ್ರಿಯೋ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಸಾನ್ಸೋಲ್‌ನಲ್ಲಿ ಉಪ ಚುನಾವಣೆ ನಡೆದಿತ್ತು. ಶತ್ರುಘ್ನ ಸಿನ್ಹಾ ಅವರು 1.5 ಲಕ್ಷಕ್ಕೂ ಅಧಿಕ ಮತಗಳಿಂದ ಮುನ್ನಡೆಯೊಂದಿಗೆ ಬಿಜೆಪಿಯ ಅಗ್ನಿಮಿತ್ರಾ ಪಾಲ್ ಅವರನ್ನು ಸೋಲಿಸಿದ್ದಾರೆ.

ಅಸಾನ್ಸೋಲ್ ಲೋಕಸಭೆ ಕ್ಷೇತ್ರ ಬಿಜೆಪಿ ಪಾಲಿಗೆ ಬಹಳ ಪ್ರಮುಖ ಕ್ಷೇತ್ರವಾಗಿತ್ತು. 2014 ಮತ್ತು 2019ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಬಾರಿ ಭಾರೀ ಮುಖಭಂಗವಾಗಿದೆ.

ಇದನ್ನು ಓದಿ: ಪಶ್ಚಿಮ ಬಂಗಾಳ : ಬಿರುಸಿನಿಂದ ಸಾಗಿದೆ ಚುನಾವಣಾ ಪ್ರಚಾರ

ಬಲ್ಲಿಗುಂಜೆ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಬುಲ್ ಸುಪ್ರಿಯೋ ಗೆಲುವು ಸಾಧಿಸಿದ್ದು, ಅವರ ಸಮೀಪದ ಪ್ರತಿಸ್ಪರ್ಧಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಸಾಯಿರಾ ಶಾ ಹಲೀಂ ಅವರನ್ನು 20,228 ಮತಗಳಿಂದ ಸೋಲಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಗೆ ಬಳಿಕ ಸುಪ್ರಿಯೋ ಅವರು 50,996 ಮತಗಳನ್ನು ಪಡೆದಿದ್ದಾರೆ. ಹಲೀಂ ಅವರಿಗೆ 30,940 ಮತ್ತು ಬಿಜೆಪಿಗೆ 13,174 ಮತಗಳು ಬಂದಿವೆ.

ಬಿಹಾರದ ಬೊಚಾಹಾನ್ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)ಗೆ 36 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಿಕ್ಕಿದೆ. ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಆರ್‌ಜೆಡಿಯ ಅಮರ್ ಕುಮಾರ್ ಪಾಸ್ವಾನ್ ಬಿಜೆಪಿಯ ಬೇಬಿ ಕುಮಾರಿ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಇಲ್ಲಿ ಶೇ 1ಕ್ಕಿಂತಲೂ ಕಡಿಮೆ ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ನ ತರುಣ್ ಚೌಧರಿ ಕೇವಲ 1,336 ಮತಗಳನ್ನು ಪಡೆದಿದ್ದರೆ, ನೋಟಾಕ್ಕೆ 2,967 ಮತಗಳು ಬಿದ್ದಿವೆ.

ಛತ್ತೀಸಗಡದ ಖೈರಾಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶೋದಾ ನೀಲಾಂಬರ್ ವರ್ಮಾ ಅವರು ಬಿಜೆಪಿ ಅಭ್ಯರ್ಥಿಗಿಂತ ಸುಮಾರು 20 ಸಾವಿರ ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಜನತಾ ಕಾಂಗ್ರೆಸ್ ಛತ್ತೀಸಗಡ (ಜೋಗಿ) ಶಾಸಕ ದೇವವ್ರತ ಸಿಂಗ್ ಅವರು ನವೆಂಬರ್‌ನಿಂದ ಮೃತಪಟ್ಟಿದ್ದರಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಿತ್ತು.

ಮಹಾರಾಷ್ಟ್ರದ ಕೊಲ್ಹಾಪುರ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಯಶ್ರೀ ಜಾಧವ್ ಬಿಜೆಪಿಯ ಸತ್ಯಜಿತ್ ಕದಂ ಎದುರು 18 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದ ಚಂದ್ರಕಾಂತ್ ಜಾಧವ್ ಅವರು ಡಿಸೆಂಬರ್‌ನಲ್ಲಿ ಮೃತರಾಗಿದ್ದರಿಂದ ಉಪ ಚುನಾವಣೆ ನಡೆದಿತ್ತು. ಚಂದ್ರಕಾಂತ್ ಅವರ ಪತ್ನಿ ಜಯಶ್ರೀ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಈ ಬಾರಿ ಕಾಂಗ್ರೆಸ್‌ಗೆ ಸರ್ಕಾರದ ಮಿತ್ರ ಪಕ್ಷಗಳಾದ ಶಿವಸೇನಾ ಮತ್ತು ಎನ್‌ಸಿಪಿ ಬೆಂಬಲ ನೀಡಿದ್ದವು.

Donate Janashakthi Media

Leave a Reply

Your email address will not be published. Required fields are marked *