ಬಜೆಟ್ ಅಧಿವೇಶನ: ಸದನದಲ್ಲಿ ಅಧಿಕಾರಿಗಳು ಮಂತ್ರಿಗಳು ಗೈರಾಗಿದ್ದರಿಂದ ಜೆಡಿಎಸ್ ಶಾಸಕರ ಆಕ್ರೋಶ

ಬೆಂಗಳೂರು: 2022-23ನೇ ಸಾಲಿನ ರಾಜ್ಯ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಇಂದಿನ ವಿ‍ಧಾನಸಭಾ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್ ಡಿ ಕುಮಾರಸ್ವಾಮಿ ಮಾತನಾಡುವಾಗ ಅಧಿಕಾರಿಗಳ ಗೈರು ಹಾಜರಾಗಿದ್ದ ಬಗ್ಗೆ ಜೆಡಿಎಸ್ ಶಾಸಕರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಚ್‌ ಡಿ ಕುಮಾರಸ್ವಾಮಿ ಅವರು, ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ  ಸಚಿವರುಗಳು ಹಾಗೂ ಅಧಿಕಾರಿಗಳು ಇಲ್ಲ ಎಂದು ಶಾಸಕರಾದ ನಾಡಗೌಡ ಹಾಗೂ ಡಾ. ಕೆ ಅನ್ನದಾನಿ ಅಸಮಾಧಾನ ವ್ಯಕ್ತಪಡಿಸಿದರು.

ಸದನ ನಡೆಯುತ್ತಿರುವ ಸಂದರ್ಭದಲ್ಲಿಯೇ ಅಧಿಕಾರಿಗಳು ಮತ್ತು ಮಂತ್ರಿಗಳು ಗೈರು ಬಗ್ಗೆ ಹಾಗೂ ಚರ್ಚೆಯ ಕಡೆ ಗಮನಹರಿಸದ ಸದನದ ವಿರುದ್ದ ಜೆಡಿಎಸ್ ಸದಸ್ಯರು ಯಾಕೆ ಇಷ್ಟು ಬೇಸರದಿಂದ ಸದನ ನಡೆಸುತ್ತೀರಾ? ಬಿಟ್ಟುಬಿಡಿ ಎಂದ ಶಾಸಕರಾದ ವೆಂಕಟರಮಣ, ನಾಡಗೌಡ ಎಂದರು. ಚರ್ಚೆ ಬೇಡ ಎಂದರೆ ಬಿಟ್ಟು ಹೋಗುತ್ತೀವಿ, ಜೆಡಿಎಸ್ ನವರು ಇರೋದಾ ಬೇಡವೋ ಹೇಳಿ. ಹೀಗೇ ಆದರೆ ಅಧಿವೇಶನಕ್ಕೆ ಬರೋದೇ ಇಲ್ಲ ಎಂದರು. ಮಾಜಿ ಸಿಎಂ ಮಾತನಾಡುವಾಗ ಏಕೆ ಇಷ್ಟು ನಿರ್ಲಕ್ಷ್ಯ ನಿಮಗೆಲ್ಲಾ ಎಂದ ಜೆಡಿಎಸ್ ಶಾಸಕರು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿ ಎಂದು ಆಗ್ರಹಿಸಿದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೋತ್ತರ ಅವಧಿ ಮುಗಿದಿದೆ ಅಧಿಕಾರಿಗಳು ಬರುತ್ತಾರೆ, ಹೆಚ್ ಡಿ ಕುಮಾರಸ್ವಾಮಿ ಮಾತನಾಡುವಾಗ ಆಸಕ್ತಿ ಇರುತ್ತೆ, ಬಂದೇ ಬರುತ್ತಾರೆ ಎಂದು ಸಭಾಧ್ಯಕ್ಷರು ಜೆಡಿಎಸ್ ಶಾಸಕರನ್ನು ಸಮಾಧಾನ ಪಡಿಸಿದರು.

ಬಜೆಟ್ ಕುರಿತು ಚರ್ಚೆ ಆರಂಭಿಸಿದ ಕುಮಾರಸ್ವಾಮಿ, ಬಜೆಟ್ ಕುರಿತ ಚರ್ಚೆಗಿಂತಲೂ ಹೆಚ್ಚು ಸಿದ್ದರಾಮಯ್ಯ ಬಗ್ಗೆನೇ ಪ್ರಸ್ತಾಪ ಮಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯು ಟಿ ಖಾದರ್, ನೀವು ಬಜೆಟ್ ಮೇಲೆ ಚರ್ಚೆ ಮಾಡ್ತಿತ್ತಿದ್ದೀರೋ ಅಥವಾ ಸಿದ್ದರಾಮಯ್ಯ ಬಗ್ಗೆ ಮಾತಾಡ್ತಿದ್ಸೀರೋ ಎಂದು ಕೇಳಿದರು.

ಇದರಿಂದ ಸದನದಲ್ಲಿ ಕೆಲಹೊತ್ತು ಗದ್ದಲ ಉಂಟಾಯಿತು. ಬಳಿಕ ಸಿದ್ದರಾಮಯ್ಯ ಭಾಷಣವನ್ನು ನಾನು ನೋಡಿದ್ದೇನೆ ಅವರು ಮಾತಾಡಿರೋದೆಲ್ಲ ಬಜೆಟ್ ಮೇಲೆ ಅಲ್ಲ, ರಾಜಕೀಯ ಭಾಷಣ ಎಂದು ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ  ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು.

Donate Janashakthi Media

Leave a Reply

Your email address will not be published. Required fields are marked *