ಡಿಪೋ ಮ್ಯಾನೆಜರ್‌ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ ಬಿಎಂಟಿಸಿ ನೌಕರ

ಬೆಂಗಳೂರು: ಸಾರಿಗೆ ಮುಷ್ಕರದ ವೇಳೆ ವಜಾಗೊಂಡಿದ್ದ ಬಿಎಂಟಿಸಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಂದಿರಾನಗರದ ಡಿಪೋ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಡಿಪೋ ಮ್ಯಾನೇಜರ್ ಮುಂದೆ ಕೇಶವ್ ಎಂಬುವವರು ವಿಷ ಸೇವಿಸಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೇಶವ್ ಡಿಪೋ-6 ರಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.

ಆತ್ಮಹತ್ಯೆಗೆ ಯತ್ನಿಸಿದ ಕೇಶವ್ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದ್ದರು. ಹಳೆ ಬಯ್ಯಪ್ಪನಹಳ್ಳಿಯಲ್ಲಿ ವಾಸವಾಗಿದ್ದರು. ಇಂದು (ಅ.7) ಬೆಳಿಗ್ಗೆ 10 ಗಂಟೆ ಸುಮಾರಿಗೆ ವಜಾಗೊಂಡಿದ್ದ ನೌಕರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆಸ್ಪತ್ರೆಯಿಂದ ಮಾತನಾಡಿರುವ ಕೇಶವ, ಸಾರಿಗೆ ಸಂಸ್ಥೆಯಲ್ಲಿ ಡಿಪೋ 6ರಲ್ಲಿ ನಾನು ಚಾಲಕನಾಗಿದ್ದೆ. ನನ್ನ ಜೊತೆಗೆ 26 ಮಂದಿ ಚಾಲಕರು ನನ್ನ ಜೊತೆಗೆ ವಜಾ ಆಗಿದ್ದಾರೆ. ನಾವು ಯಾರೂ ತಪ್ಪು ಮಾಡಿಲ್ಲ. ನಾವೆಲ್ಲ ಚಾಲಕರೂ ನೋವಲ್ಲಿದ್ದೇವೆ. ಅವರ ನೋವನ್ನೂ ನೆನೆಸಿಕೊಂಡು ಅದನ್ನು ತಡೆಯಲಾಗದೆ ಡಿಪೋ ಮುಂದೆಯೇ ವಿಷ ಕುಡಿದಿದ್ದೇನೆ. ನನ್ನ ಜೀವ ಹೋದರೂ ಪರವಾಗಿಲ್ಲ, ಇರುವವರನ್ನಾದರೂ ಉಳಿಸಿಕೊಳ್ಳಿ. ನಾವು ನ್ಯಾಯವಾದ ಬೇಡಿಕೆ ಕೇಳಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ಉಳಿದ ಎರಡು ಸಾವಿರ ನೌಕರರ ಜೀವ ಉಳಿಸಿ, ಇನ್ಮುಂದೆ ಹೀಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಪೂರ್ಣ ವೇತನ ಸಿಕ್ಕಿಲ್ಲ :  ಅಕ್ಟೋಬರ್ 7 ಆದ್ರೂ ಆಗಸ್ಟ್ ತಿಂಗಳ ಪೂರ್ಣ ವೇತನ ಸಿಗದೆ ರಾಜ್ಯದಲ್ಲಿ ಸಾರಿಗೆ ನೌಕರರು ಪರದಾಡುತ್ತಿದ್ದಾರೆ. ಬಿಎಂಟಿಸಿ, ಕೆಎಸ್‌ಆರ್​ಟಿಸಿ ಸೇರಿ ಸಾರಿಗೆ ನೌಕರರು ವೇತನಕ್ಕೆ ಪರದಾಟ ನಡೆಸುತ್ತಿದ್ದು, ಸರ್ಕಾರದ ಅನುದಾನಕ್ಕೆ ಸಾರಿಗೆ ನಿಗಮಗಳು ಕಾಯುತ್ತಿವೆ. ಸರ್ಕಾರ ಆಗಸ್ಟ್ ತಿಂಗಳಲ್ಲಿ ಅರ್ಧ ವೇತನ ಮಾತ್ರ ನೀಡಿದೆ. ಇದರಿಂದ ಅರ್ಧ ವೇತನ ಪಡೆದುಕೊಂಡೇ ಜೀವನ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕೊರೊನಾ ಕಾರಣದಿಂದ ಸಾರಿಗೆ ನಿಗಮದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ನೌಕರರಿಗೆ ಸಂಬಳ ನೀಡುವುದಕ್ಕೆ ಸಾರಿಗೆ ನಿಗಮಗಳ ಬಳಿ ಹಣವಿಲ್ಲ. ಹೀಗಾಗಿ ಸರ್ಕಾರದ ಅನುದಾನಕ್ಕೆ ಕಾಯುತ್ತಿವೆ. ಆಗಸ್ಟ್ ತಿಂಗಳ ವೇತನ ನೀಡಿ ಅಂತ ನೌಕರರು ಮನವಿ ಮಾಡಿದ್ದಾರೆ. ದಸರಾ ಆರಂಭವಾಗುತ್ತಿದೆ ಈಗಲಾದರೂ ಸಂಬಳ ನೀಡಿ. ಅರ್ಧ ಸಂಬಳ ನೀಡಿ ಗಣೇಶನ ಹಬ್ಬವನ್ನು ಆಚರಿಸುವಂತೆ ಮಾಡಿದ್ದೀರಿ. ಈಗಾಲಾದರೂ ದಸರಾ ಮುನ್ನ ಬಾಕಿ ಹಣ ನೀಡಿ ಅಂತ ನೌಕರರು ಆಗ್ರಹಿಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *