ಬಿಜೆಪಿಯವರಿಂದ ಸಮಾಜದ ಸಾಮರಸ್ಯ ಹಾಳಾಗುತ್ತಿವೆ: ಸಿದ್ದರಾಮಯ್ಯ

ಹುಬ್ಬಳ್ಳಿ: ಬಿಜೆಪಿಯವರಿಂದ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತಿವೆ. ಯಾವ ಜನಪರ ಸಾಧನೆಗಳನ್ನು ಮಾಡದವರು, ಜನತೆಯ ನೆಮ್ಮದಿಯನ್ನು ಹಾಳುಗೆಡವುತ್ತಿದ್ದಾರೆ. ಜನರ ಮೂಲ  ಪ್ರಶ್ನೆಗಳನ್ನು ಮರೆಮಾಚಲು ಧಾರ್ಮಿಕ ವಿಚಾರಗಳನ್ನಿಟ್ಟುಕೊಂಡಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸದ್ಯ ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ಮುನ್ನಲೆಗೆ ಬಂದಿದೆ. ಇನ್ನೂ ಮಾವಿನ ಹಣ್ಣು ಖರೀದಿ ವಿಚಾರವೂ ಇದರಿಂದ ಹೊರತಲ್ಲ ಎಂದರು.

ಇದನ್ನು ಓದಿ: ಬಸವರಾಜ ಹೊರಟ್ಟಿ ಸೇರ್ಪಡೆಗೆ ಬಿಜೆಪಿಯಲ್ಲಿ ತೀವ್ರ ವಿರೋಧ, ವರಿಷ್ಠರಿಗೆ ದೂರು

ಹಿಂದು-ಮುಸ್ಲಿಮರು ಬಹಳ ವರ್ಷಗಳಿಂದ ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡುತ್ತಿದ್ದೆವು. ಆದರೀಗ ಬಿಜೆಪಿಯವರು ಮತಗಳನ್ನು ಕ್ರೋಢೀಕರಣ ಮಾಡಬೇಕೆಂದು ವಿವಾರಗಳನ್ನು ಮುನ್ನಲೆಗೆ ತರುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಹುನ್ನಾರಗಳೆಲ್ಲ ಜನರಿಗೆ ಗೊತ್ತಾಗುತ್ತಿವೆ ಎಂದು ಹೇಳಿದರು.

ನಾವು ಮುಸ್ಲಿಮರು ಕಟ್‌ ಮಾಡಿದ ಮಾಂಸವೇ ತಿನ್ನೋದು

ಮುಸ್ಲಿಮರು ಕಟ್ ಮಾಡಿದ ಮಾಂಸವನ್ನೇ ನಾವು ತಿನ್ನೋದು. ತಿನ್ನದೇ ಇರುವವರು ಹೀಗೆ ಮಾಡುತ್ತಿದ್ದಾರೆ. ಹಲಾಲ್​ ಮುಸಲ್ಮಾನರ ನಂಬಿಕೆ. ಕುರಿಗಳಲ್ಲಿ ರಕ್ತ ಇರಬಾರದು ಅನ್ನೋದು ಅವರ ನಂಬಿಕೆ. ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲೀನ್ ಮಾಡಿಸುತ್ತಿದ್ದೆವು. ಆದರೀಗ ಹಲಾಲ್​ ವಿಷಯವನ್ನಿಟ್ಟುಕೊಂಡಿದ್ದಾರೆ. ಬೆಲೆ ಏರಿಕೆ ಬಗ್ಗೆ ಏಕೆ ಮಾತನಾಡಲ್ಲ? ಗೊಬ್ಬರ ಬೆಲೆ ಸಹ ಏರಿಕೆ ಆಗಿದೆ. ಇನ್ನೂ ಗ್ಯಾಸ್, ಅಡುಗೆ ಎಣ್ಣೆ ಸೇರಿ ಅಗತ್ಯವಿರುವ ಎಲ್ಲದರ ಬೆಲೆ ಹೆಚ್ಚಾಗಿದೆ. ಇದರ ಬಗ್ಗೆ ಅವರು ಮಾತನಾಡಲ್ಲ. ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ವಿಚಾರಗಳನ್ನು ನಾವು ಖಂಡಿಸುತ್ತೇವೆ ಎಂದರು.

ಇದನ್ನು ಓದಿ: ಬೇಜವಾಬ್ದಾರಿ ಮಾತುಗಳನ್ನಾಡಿ-ಇದೀಗ ಮತ್ತೆ ತಮ್ಮ ಹೇಳಿಕೆ ಹಿಂಪಡೆದ ಗೃಹ ಸಚಿವ ಅರಗ ಜ್ಞಾನೇಂದ್ರ

ಚಂದ್ರು ಕೊಲೆ: ಚಂದ್ರು ಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಯಾರೇ ಇರಲಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಗೃಹ ಸಚಿವರಿಗೆ ಅನುಭವವೇ ಇಲ್ಲ. ಇಲಾಖೆಯನ್ನು ನಿಭಾಯಿಸಲು ಬರಲ್ಲ. ಯಾರದ್ದೇ ಕೊಲೆಯಾದರೂ ನಾನು ಖಂಡಿಸುತ್ತೇನೆ. ಹಿಂದೂ ಸಮುದಾಯದವರು ಸತ್ತರೂ ಅದು ಜೀವ, ಮುಸ್ಲಿಮರು ಸತ್ತರೂ ಜೀವವೇ. ನರಗುಂದದಲ್ಲಿ ಮುಸ್ಲಿಂ ಹತ್ಯೆ ಆದಾಗ ಏಕೆ 25 ಲಕ್ಷ ರೂಪಾಯಿ ಕೊಟ್ಟಿಲ್ಲ. ಹರ್ಷನನ್ನು ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ. ಹಾಗೆ ಮುಸ್ಲಿಂ ಯುವಕರ ಹತ್ಯೆಯಾದವರಿಗೂ ಶಿಕ್ಷೆಯಾಗಲಿ ಎಂದು ಹೇಳಿದರು.

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರವಾದಾಗ ಗೃಹ ಸಚಿವರು ಅಷ್ಟೊತ್ತಿಗೆ ಆ ಹುಡುಗಿ ಯಾಕೆ ಅಲ್ಲಿಗೆ ಹೋಗಿದ್ದು ಎಂದು ಹೇಳಿಕೆ ಕೊಟ್ಟಿದ್ದರು. ಗೃಹ ಸಚಿವರಾಗಲು ಲಾಯಕ್ ಏನ್ರಿ ಇವರು? ಎಂದು ಪ್ರಶ್ನಿಸಿ, ಮುಖ್ಯಮಂತ್ರಿ ಸಹ ಅವರಿಗೆ ಕುಮ್ಮಕ್ಕು ಕೊಡ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಚಿವ ಈಶ್ವರಪ್ಪ ಈಗಲೇ ರಾಜೀನಾಮೆ ಕೊಡಬೇಕೆಂದು ಇದೇ ವೇಳೆ ಆಗ್ರಹಿಸಿದರು. ಬಂಡವಾಳ ಹೂಡಿಕೆ ಕರ್ನಾಟಕಕ್ಕೆ ಬರದೇ ತಮಿಳುನಾಡಿಗೆ ಹೋಗುತ್ತಿದೆ. ಎಲ್ಲ ಉದ್ಯಮಗಳು ರಾಜ್ಯದಲ್ಲಿ ಮುಚ್ಚಿ ಹೋಗುತ್ತಿವೆ. ನಾವು ಸುಳ್ಳು ಹೇಳಲ್ಲ, ನಾವು ಸತ್ಯ ಹೇಳಿಕೊಂಡು ಜನರ ಮುಂದೆ ಹೋಗುತ್ತೇವೆ. ಬೋಗಸ್ ಧರ್ಮ ಪ್ರಚಾರವನ್ನು ನಾವು ಮಾಡುವುದಿಲ್ಲ ಎಂದರು.

Donate Janashakthi Media

Leave a Reply

Your email address will not be published. Required fields are marked *