‘ಬಿಗ್ ಬಾಸ್’ ಮನೆ ವೇಶ್ಯಾಗೃಹದಂತಿದೆ: ಆಕ್ರೋಶ ಹೊರಹಾಕಿದ ಸಿಪಿಐ ಮುಖಂಡ ನಾರಾಯಣ್‌

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಹಲವು ಮಂದಿ ಹಲವು ರೀತಿಯಲ್ಲಿ ವ್ಯಾಖ್ಯನಿಸುತ್ತಾ ತಮ್ಮ ವಿರೋಧ ಅಥವಾ ಸಮರ್ಥನೆಯನ್ನು ಮಾಡುತ್ತಿರುತ್ತಾರೆ. ಇಡೀ ಕಾರ್ಯಕ್ರಮದ ಆಯೋಜನೆಯಿಂದ ಹಿಡಿದು ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳ ವರೆಗೂ ಟೀಕೆ ಟಿಪ್ಪಣಿಗಳು ಮಾಡಲಾಗುತ್ತದೆ.

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಪರ್ಧಿಗಳ ಆಯ್ಕೆಯ ಕುರಿತಾಗಿಯೂ ಟ್ರೋಲ್ ಮಾಡಲಾಗಿದೆ. ಆದರೆ, ಬಿಗ್ ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿರುವುದು ಇದೀಗ ನಡೆದಿದೆ. ಇದು ಭಾರೀ ಟ್ರೋಲ್‌ ಆಗಿದ್ದು, ಇಂಥದ್ದೊಂದು ಘಟನೆಗೆ ತೆಲುಗು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಡೆದಿದೆ.

ಕಳೆದ ವಾರದಿಂದ ಆರಂಭವಾಗಿರುವ ನಟ ನಾಗಾರ್ಜುನ ನಿರೂಪಕರಾಗಿ ನಡೆಸಿಕೊಡುತ್ತಿರುವ ತೆಲುಗು ಬಿಗ್ ಬಾಸ್ ಅನ್ನು ಆಂಧ್ರದ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ) ಮುಖಂಡ ನಾರಾಯಣ್ ಅವರು ವೇಶ್ಯಾಗೃಹಕ್ಕೆ ಹೋಲಿಸಿದ್ದಾರೆ.

ನಟ ನಾಗಾರ್ಜುನ ಅವರಿಗೂ ಹಲವು ಪ್ರಶ್ನೆಗಳನ್ನು ಮಾಡಿರುವ ನಾರಾಯಣ್ ಅವರು, ‘ಕುಟುಂಬವಲ್ಲದ, ಅಣ್ಣ ತಮ್ಮ, ಅಕ್ಕ ತಂಗಿ, ಅಣ್ಣ ತಂಗಿ ಹೀಗೆ ಯಾವುದೂ ಅಲ್ಲದ, ಪಡ್ಡೆಗಳನ್ನು ತಂದು ಒಂದೇ ಮನೆಯಲ್ಲಿ ಕೂಡಿ ಹಾಕುತ್ತೀರಿ. ಅವರೇನೂ ಮಹಾ ಸಾಧಕರಲ್ಲ. ಅಂತವರು ಸಂಬಂಧವೇ ಇಲ್ಲದ ಮನೆಯಲ್ಲಿ ಒಂದಾದರೆ ಏನಾಗುತ್ತೆ ಹೇಳಿ? ನನಗೆ ಬಿಗ್ ಬಾಸ್ ಮನೆ ವೇಶ್ಯಾಗೃಹದಂತೆ ಕಾಣುತ್ತಿದೆʼ ಎಂದು ಹೇಳಿದ್ದಾರೆ.

ನಾಗಾರ್ಜುನ್ ಅವರಿಗೆ ಪ್ರಶ್ನೆ ಕೇಳುತ್ತಾ, ‘ನಾಗಣ್ಣ ಬಿಗ್ ಬಾಸ್ ಮನೆಯಲ್ಲಿ ಮದುವೆಯಾದವರಿಗೆ ಲೈಸೆನ್ಸ್ ಕೊಟ್ಟಿದ್ದೀರಿ. ಏನೆಲ್ಲ ಮಾಡಬೇಕೋ ಅದಕ್ಕೆಲ್ಲ ವ್ಯವಸ್ಥೆ ಮಾಡಿದ್ದೀರಿ. ಶೋಭನಾ ರೂಮ್ ಕೂಡ ರೆಡಿಯಿದೆ. ಆದರೆ, ಮದುವೆ ಆಗದೇ ಇರೋರ ಕಥೆ ಏನು? ನೂರು ದಿನಗಳ ಕಾಲ ಅವರು ಏನು ಮಾಡಬೇಕು? ಎಂದು ಕೇಳಿದ್ದಾರೆ. ನಾರಾಯಣ್ ಅವರು ಮಾತನಾಡಿದ ವಿಡಿಯೋ ತೆಲುಗು ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇಂತಹ ಅಸಹ್ಯಗಳನ್ನು ಒಟ್ಟು ಮಾಡಿ ಸಮಾಜದ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದೀರಿ. ಕೂಡಲೇ ಇಂತಹ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ. ನಾರಾಯಣ್ ಅವರ ಈ ಮಾತಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿದೆ. ಬಿಗ್ ಬಾಸ್ ಮನೆಯನ್ನು ಸ್ವಚ್ಚ ಮಾಡುವಂತಹ ಕೆಲಸಕ್ಕೆ ನಾರಾಯಣ್ ಕೈ ಹಾಕಿದ್ದಾರೆ ಎಂದು ಕೆಲವರು ಹೇಳಿದ್ದಾರೆ ಎಂದು ವರದಿಯಾಗಿದೆ.

Donate Janashakthi Media

Leave a Reply

Your email address will not be published. Required fields are marked *