ಗುರು ಮಡಿವಾಳೇಶ್ವರ ಮಠಧೀಶ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ

ಬೆಳಗಾವಿ: ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ತಮ್ಮ ಮಠದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಇತ್ತೀಚೆಗೆ ಆಡಿಯೊ ಸುದ್ದಿಯೊಂದು ಹರಡಿ ಅವರ ಹೆಸರು ಉಲ್ಲೇಖವಾಗಿತ್ತು ಎನ್ನಲಾಗಿದ್ದು, ಇದರಿಂದ ಶ್ರೀಗಳು ನೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಆತ್ಮಹತ್ಯೆಗೆ ಮೊದಲು ಅವರು ಪತ್ರವೊಂದನ್ನು ಬರೆದಿಟ್ಟಿರಬಹುದು ಎಂದು ಹೇಳಲಾಗಿದ್ದು, ಅದರಲ್ಲಿ ಯಾವ ಕಾರಣ ನೀಡಿದ್ದಾರೆ ಎಂಬ ಬಗ್ಗೆ ಪೊಲೀಸರು ಬಹಿರಂಗಪಡಿಸಿಲ್ಲ. ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ಮಾಡಿದರು.

ಮುರುಘಾ ಮಠದ ಶ್ರೀಗಳ ಲೈಂಗಿಕ ಕಿರುಕುಳ ಆರೋಪದ ಬಳಿಕ ಮಹಿಳೆಯರಿಬ್ಬ ಫೋನ್‌ ಸಂಭಾಷಣೆಯು ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಆಡಿಯೋನಲ್ಲಿ ಆತ್ಮಹತ್ಯೆಗೆ ಶರಣಾದ ಬಸವಸಿದ್ಧಲಿಂಗ ಸ್ವಾಮೀಜಿ ಹೆಸರನ್ನೂ ಉಲ್ಲೇಖಿಸಲಾಗಿತ್ತು. ಇದರಿಂದಲೇ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಬಹಿರಂಗಕ್ಕೆ ಒಳಪಟ್ಟಿರುವ ಆಡಿಯೊದಲ್ಲಿರುವ ಮಹಿಳೆಯರು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾದ ಬಗ್ಗೆಯೂ ಎಲ್ಲಿಯೂ ಮಾಹಿತಿ ಬಹಿರಂಗಗೊಂಡಿಲ್ಲ.

ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ ಸುದ್ದಿ ತಿಳಿದ ಭಕ್ತರು ಆಘಾತಕ್ಕೆ ಒಳಗಾಗಿ ಮಠದತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿದ್ದಾರೆ.

ಬಸವಸಿದ್ಧಲಿಂಗ ಸ್ವಾಮೀಜಿ 2007ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿ, 15 ವರ್ಷಗಳಿಂದ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು. ನಿನ್ನೆ ತಡರಾತ್ರಿವರೆಗೂ ಭಕ್ತರ ಜೊತೆಗೆ ಸ್ವಾಮೀಜಿ ಮಾತುಕತೆ ನಡೆಸಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೊ ಸಂಭಾಷಣೆಯ ಕುರಿತು ಕೆಲ ಭಕ್ತರು ಪ್ರಸ್ತಾಪಿಸಿದ್ದರು. ಆಡಿಯೋದಿಂದ ನನಗೆ ತುಂಬಾ ನೋವಾಗಿದೆ. ಬದುಕಿದ್ದೂ ಏನು ಪ್ರಯೋಜನ ಎನ್ನುವಂತಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು. ಎಂದಿನಂತೆ ಸಹಜವಾಗಿದ್ದ ಸ್ವಾಮೀಜಿ ನಂತರ ದಿಢೀರನೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಮಠದ ಸೇವಕರು ಮುಂಜಾನೆ ಸ್ವಾಮೀಜಿ ಕೋಣೆಗೆ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

Donate Janashakthi Media

Leave a Reply

Your email address will not be published. Required fields are marked *