ಆರ್ಯನ್‍ ಮಿಶ್ರಾ ಹತ್ಯೆಗೆ ಬಿಜೆಪಿ-ಆರ್‌ಎಸ್‌ಎಸ್ ವಿಷಕಾರಿ ರಾಜಕೀಯವೇ ಕಾರಣ- ಸಿಪಿಐ(ಎಂ) ಸತ್ಯಶೋಧಕ ತಂಡ

ಹರ್ಯಾಣದ ಫರಿದಾಬಾದಿನಲ್ಲಿ ಆಗಸ್ಟ್ 23ರಂದು ಒಂದು ಗ್ಯಾಂಗ್ ಗುಂಡಿಕ್ಕಿ ಕೊಂದಿತು, ನಂತರ ಅದನ್ನು ಗೋರಕ್ಷಕ ಗ್ಯಾಂಗ್ ಎಂದು ಗುರುತಿಸಲಾಗಿದೆ. ಈ ಹತ್ಯೆ ಪೂರ್ವ ಯೋಜಿತವೇ ಎಂಬಿತ್ಯಾದಿ ಪ್ರಶ್ನೆಗಳು ಆತನ ತಂದೆ-ತಾಯಿಯನ್ನು ಕಾಡುತ್ತಿರುವಾಗ ಆ ರಾತ್ರಿ ಅಜಯ್ ಕೊಲೆ ನಡೆದ ಕಾರಿನಲ್ಲಿದ್ದವರನ್ನು ಪೊಲೀಸರು ಕಸ್ಟಡಿ ವಿಚಾರಣೆಗೆ ಏಕೆ ಕರೆದುಕೊಂಡು ಹೋಗುತ್ತಿಲ್ಲ? ಇದು ರಾಜಧಾನಿಯಿಂದ ಕೂಗಳತೆಯಲ್ಲಿರುವ ಸ್ಥಳದಲ್ಲಿ ಘಟಿಸಿದೆ ಎಂಬುದು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಅಭಾವ ಮತ್ತು ಜಂಗುಳಿ ಕಾನೂನು ರಾರಾಜಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಇದಕ್ಕೆ ಯಾರು ಹೊಣೆಗಾರರು? ಗೋರಕ್ಷಕರನ್ನು ಉಳಿಸಲು ಪ್ರಕರಣವನ್ನು ದುರ್ಬಲಗೊಳಿಸುವ ಕಸರತ್ತು ಮಾಡಲಾಗುತ್ತಿದೆಯೇ? ಹೀಗಿರುವಾಗ ಯಾವುದೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬಲ್ಲುದೇ?

ಇವು ಸಪ್ಟಂಬರ್ 5ರಂದು ದುಃಖತಪ್ತ ಆರ್ಯನ್ ಮಿಶ್ರಾ ಕುಟುಂಬವನ್ನು ಫರಿದಾಬಾದ್‌ನ ಅವರ ಮನೆಯಲ್ಲಿ ಭೇಟಿ ಮಾಡಿದ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರಾದ ಬೃಂದಾ ಕಾರಟ್‍ ನೇತೃತ್ವದ ತಂಡ ಕುಟುಂಬದೊಂದಿಗೆ ವಿವರವಾಗಿ ಮಾತನಾಡಿದ ನಂತರ ಹರಿಯಾಣ ಸರ್ಕಾರ, ಆಡಳಿತ ಮತ್ತು ಹರಿಯಾಣ ಪೊಲೀಸರ ಬಗ್ಗೆ ಎತ್ತಿರುವ ಗಂಭೀರ ಪ್ರಶ್ನೆಗಳು. ಈ ಹತ್ಯೆಗೆ ಸರಕಾರ ಮತ್ತು ಪೊಲೀಸರು ಉತ್ತರದಾಯಿಯಾಗಬೇಕಾಗಿದೆ. ಇಂದು ಆರ್ಯನ್‌ನ ತಂದೆ ಮತ್ತು ತಾಯಿ ಏಕಾಂಗಿಯಾಗಿ ಕಂಡಿದ್ದರೆ ಅದಕ್ಕೆ ಬಿಜೆಪಿ-ಆರ್‌ಎಸ್‌ಎಸ್ ವ್ಯವಸ್ಥೆಯ ವಿಷಕಾರಿ ರಾಜಕೀಯವೇ ಕಾರಣ. ಹಿಂದೂ ಧರ್ಮದ ಯುವಕನೊಬ್ಬ ಹಿಂದುತ್ವದ ಗೋರಕ್ಷಕರ ಗುಂಡಿಗೆ ಬಲಿಯಾದಾಗ, ಈ ವ್ಯವಸ್ಥೆಯು ಹಿಂದುತ್ವ ಗೋರಕ್ಷಕರ ಪರ ನಿಂತಿದೆ. ಇದು ಹಿಂದೂಗಳ ಹೆಸರಿನಲ್ಲಿ ಮಾತನಾಡುವವರ ವಾಸ್ತವ ಎಂದು ಸಿಪಿಐ(ಎಂ) ತಂಡ ಅಭಿಪ್ರಾಯ ಪಟ್ಟಿದೆ. ಮಿಶ್ರಾ ಕುಟುಂಬವು ಒಂದು ಬಡ ಕುಟುಂಬವಾಗಿದ್ದು, ಈ ಕುಟುಂಬಕ್ಕೆ ಆರ್ಥಿಕ ಪರಿಹಾರ ಮತ್ತು ಸಹೋದರ ಅಜಯ್ ಮಿಶ್ರಾಗೆ ಸರ್ಕಾರಿ ನೌಕರಿ ನೀಡಬೇಕು, ಆರೋಪಿಗಳನ್ನು ರಕ್ಷಿಸಲು ಸಹಕರಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು, ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು , ಈ ಕ್ರಿಮಿನಲ್ ಗೋರಕ್ಷಕ ಗ್ಯಾಂಗ್‌ಗಳನ್ನು ವಿಸರ್ಜಿಸಬೇಕು ಮತ್ತು ಗೋರಕ್ಷಕರೆಂಬವರಿಗೆ ಸರ್ಕಾರದ ಮಾನ್ಯತೆ, ಮಂಜೂರಾತಿ ಮತ್ತು ರಕ್ಷಣೆಯನ್ನು ಕೊನೆಗೊಳಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಬೃಂದಾ ಕಾರಟ್ ರಲ್ಲದೆ, ಈ ತಂಡದ ಇತರ ಸದಸ್ಯರು ರಾಜೀವ್ ಕುಂವರ್ ( ದಿಲ್ಲಿ ರಾಜ್ಯ ಕಾರ್ಯದರ್ಶಿ), ಶಿವಪ್ರಸಾದ್ (ಫರಿದಾಬಾದ್ ಜಿಲ್ಲಾ ಕಾರ್ಯದರ್ಶಿ), ವಿರಿಂದರ್ ದಂಗಿಯಾಲ್, ವಿಜಯ್ ಝಾ (ಜಿಲ್ಲಾ ಸಮಿತಿ ಸದಸ್ಯರು) ಮತ್ತು ಇತರರು. ಭೇಟಿಯ ನಂತರ ಸಿಪಿಐ(ಎಂ) ಪ್ರಕಟಿಸಿರುವ ವಿವರವಾದ ಹೇಳಿಕೆಯ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಮಿಶ್ರಾ ಕುಟುಂಬವು ಒಂದು ಬಡ ಕುಟುಂಬವಾಗಿದ್ದು, ಒಬ್ಬನೇ ಸದಸ್ಯನ ಆದಾಯವನ್ನು ಅವಲಂಬಿಸಿದೆ. ಸಿಪಿಐ(ಎಂ) ತಂಡವು ಆರ್ಯನ್ ತಂದೆ ಸಿಯಾನಂದ್, ತಾಯಿ ಉಮಾ ಮತ್ತು ಸಹೋದರ ಅಜಯ್ ಅವರನ್ನು ಭೇಟಿ ಮಾಡಿತು. ಆರ್ಯನ್ 12 ನೇ ತರಗತಿಯಲ್ಲಿ ಓದುತ್ತಿದ್ದ ಮತ್ತು ಅದೇ ಸಮಯದಲ್ಲಿ ಗಾಜಿಯಾಬಾದ್ ನ ಸಾಮಾಜಿಕ ಮಾಧ್ಯಮ ಬ್ರ್ಯಾಂಡಿಂಗ್‍ ನ ಒಂದು ಸಣ್ಣ ಕಂಪನಿಯಲ್ಲಿ ತರಬೇತಿ ಪಡೆಯುತ್ತಿದ್ದ. ಆತ ಬಹಳ ಧಾರ್ಮಿಕನಾಗಿದ್ದು ಇತ್ತೀಚೆಗೆ ಅಯೋಧ್ಯೆ ದೇವಸ್ಥಾನ ಮತ್ತು ಇತರ ದೇವಾಲಯಗಳಿಗೆ ಭೇಟಿ ನೀಡಿದ್ದ, ಉತ್ಸಾಹೀ ಬಾಡಿ ಬಿಲ್ಡರ್ ಆಗಿದ್ದ ಮತ್ತು ಇತ್ತೀಚೆಗಷ್ಟೇ ವೇಟ್‌ಲಿಫ್ಟಿಂಗ್‌ನಲ್ಲಿ ಬಹುಮಾನ ಗೆದ್ದಿದ್ದ. ತನ್ನ ಮಗನಿಗೆ ಬೇಕಾದ ಪೌಷ್ಟಿಕಾಂಶವನ್ನು ಖಚಿತಪಡಿಸಲು ಕೆಲವೊಮ್ಮೆ ಉಪವಾಸ ಇರುತ್ತಿದ್ದ ಅವನ ತಾಯಿ ಆತನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ, ಆಗಾಗ್ಗೆ ಮೂರ್ಛೆ ಬೀಳುತ್ತಿದ್ದ ಕಾರಣ ಆಕೆಯನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಈ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ತಂಡವು ಆರ್ಯನ್ ಅವರ ಬೋಧಕರನ್ನು ಕೂಡ ಭೇಟಿ ಮಾಡಿತು, ಅವರು ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಆರ್ಯನ್ ಸಂಕಲ್ಪ ಮಾಡಿದ್ದರ ಕುರಿತು ಮಾತನಾಡಿದರು.

1. ಮಿಶ್ರಾ ಕುಟುಂಬವು ಫರಿದಾಬಾದಿನಲ್ಲಿ ವಾಸಿಸುವ ಎರಡು ಕೋಣೆಗಳ ಸಣ್ಣ ಫ್ಲಾಟನ್ನು ದೀರ್ಘಾವಧಿ ಲೀಸ್‍ ಗೆ ಪಡೆಯಲು ಸಾಲವನ್ನು ತೆಗೆದುಕೊಂಡಿದೆ. ಕೆಲವು ತಿಂಗಳುಗಳ ನಂತರ ಫ್ಲಾಟ್ ಒಡೆಯನ ಕುಟುಂಬವು ಕ್ರಿಮಿನಲ್‍ಗಳನ್ನು ಒಳಗೊಂಡಿದೆ ಎಂದು ತಿಳಿದಾಗ, ಅವರು ಅದನ್ನು ಬಿಡಲು ಬಯಸಿದರು, ಆದರೆ ಫ್ಲಾಟ್‍ ಮಾಲಿಕ ಹಣವನ್ನು ಹಿಂದಿರುಗಿಸಲು ತನಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರಿಂದ ಅದು ಸಾಧ್ಯವಾಗಲಿಲ್ಲ.  ಒಂದು ರೀತಿಯಲ್ಲಿ ಅಲ್ಲೇ ಉಳಿಯುವ ಬಲೆಗೆ ಬಿದ್ದಂತಾಯಿತು. ಮಿಶ್ರಾಗಳ ಪ್ರಕಾರ, ಫ್ಲಾಟ್‍ ಮಾಲಿಕ ನ ಕುಟುಂಬದ ಪಾತ್ರದ ಬಗ್ಗೆ ಬಹಳ ಶಂಕೆಗಳಿವೆ, ಆದರೆ ಪೊಲೀಸರು ಅವರನ್ನು ರಕ್ಷಿಸುತ್ತಿದ್ದಾರೆ. ಅಂದು ರಾತ್ರಿ ಮಲಗಲು ತಯಾರಿ ನಡೆಸುತ್ತಿದ್ದ 19ರ ಹರೆಯದ ಆರ್ಯನ್ ಗೆ ರಾತ್ರಿ 11 ಗಂಟೆ ಸುಮಾರಿಗೆ ಆ ಮಾಲೀಕರು ಇದ್ದಕ್ಕಿದ್ದಂತೆ ಕರೆ ಮಾಡಿದ್ದಾರೆ. ಅದರಂತೆ ಅವನು ಕೆಳಗೆ ಹೋದವನು ಮತ್ತೆ ಹಿಂತಿರುಗಲಿಲ್ಲ. ನಂತರ ಫ್ಲಾಟ್‍ ಮಾಲಿಕ ಮತ್ತು ಆತನ ಪತ್ನಿ ಒಂದು "ಅಪಘಾತ" ವಾಗಿದೆ ಎಂದು ಕುಟುಂಬಕ್ಕೆ ತಿಳಿಸಿದರು, ನಂತರ ಆರ್ಯನ್ ಗುಂಡಿಗೆ ಗುರಿಯಾಗಿದ್ದಾನೆ ಎಂದು ತಿಳಿಸಿದರು. ಆಶ್ಚರ್ಯವೆಂದರೆ ಆ ರಾತ್ರಿ ಆರ್ಯನ್‌ನನ್ನು ತಮ್ಮೊಂದಿಗೆ ಏಕೆ ಕರೆದೊಯ್ದರು ಎಂದು ಫ್ಲಾಟ್‍ ಮಾಲಿಕ ಮತ್ತು ಅವನ ಹೆಂಡತಿ ಮತ್ತು ಪುತ್ರರನ್ನು ಪ್ರಶ್ನಿಸಲು ಪೊಲೀಸರು ಯಾವುದೇ ಪ್ರಯತ್ನ ಮಾಡಲಿಲ್ಲ. ಆ ಪುತ್ರರಲ್ಲಿ ಒಬ್ಬ ಕ್ರಿಮಿನಲ್‍ ಎಂದು ಕುಪ್ರಸಿದ್ಧಿ ಪಡೆದವನು. ಇದಲ್ಲದೆ, ಅಪರಾಧದ ನೇರ ಪ್ರತ್ಯಕ್ಷ ಸಾಕ್ಷಿಗಳಲ್ಲಿ ಒಬ್ಬಾಕೆ, ಕ್ರಿಮಿನಲ್ ಗ್ಯಾಂಗ್‌ಗಳೊಂದಿಗೆ ಸಂಪರ್ಕವನ್ನು ಹೊಂದಿರುವ ಶಂಕೆಯಿರುವ ಫ್ಲಾಟ್‍ ಮಾಲಿಕನ ಆಪ್ತ ಸ್ನೇಹಿತೆ ಮಹಿಳೆ ಕೂಡ ಕಾರಿನಲ್ಲಿದ್ದಳು. ಆಕೆ ಉದ್ದೇಶಪೂರ್ವಕವಾಗಿಯೇ ಕೆಲವು ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರನ್ನು ಹೆಸರಿಸಿ ನಿಜವಾಗಿಯೂ ಕೊಲೆಯಲ್ಲಿ ಭಾಗಿಯಾಗಿರುವ ಜನರ ಬಗ್ಗೆ
ಪೊಲೀಸರಿಗೆ ತಪ್ಪು ಮಾಹಿತಿಯನ್ನು ನೀಡಿದಳು. ಆಕೆ ಉದ್ದೇಶಪೂರ್ವಕವಾಗಿ ಪೊಲೀಸರನ್ನು ಏಕೆ ದಾರಿ ತಪ್ಪಿಸಿದ್ದಾಳೆ ಎಂಬುದು ಆರ್ಯನ್ ಕುಟುಂಬದವರ ಪ್ರಶ್ನೆ. ಇದು ಗೋರಕ್ಷಕರನ್ನು ರಕ್ಷಿಸಲಿಕ್ಕಾಗಿಯೋ ಅಥವಾ ಪ್ರತಿಸ್ಪರ್ಧಿ ಗ್ಯಾಂಗಿನ ಮೇಲೆ ಆರೋಪ ಹೊರಿಸಲು ಈ ಕೊಲೆಯನ್ನು ಬಳಸಿದಳೇ? ಆರ್ಯನ್‌ ಮೇಲೆ ಎರಡನೇ ಬಾರಿ ಗುಂಡು ಹಾರಿಸಲಾಯಿತು. ಈ ಕೊಲೆ ಪೂರ್ವ ಯೋಜಿತವೇ? ಈ ಪ್ರಶ್ನೆಗಳು ಕುಟುಂಬವನ್ನು ಕಾಡುತ್ತಿವೆ. ಏನೇ ಇರಲಿ, ಆ ರಾತ್ರಿ ಕಾರಿನಲ್ಲಿದ್ದವರನ್ನು ಪೊಲೀಸರು ಕಸ್ಟಡಿ ವಿಚಾರಣೆಗೆ ಏಕೆ ಕರೆದುಕೊಂಡು ಹೋಗುತ್ತಿಲ್ಲ
ಎಂಬುದು ಪ್ರಶ್ನೆ.

2. ಪೋಲೀಸರ ಪಾತ್ರ ಅತ್ಯಂತ ಸಂಶಯಾಸ್ಪದವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 30 ಕಿ.ಮೀ.ವರೆಗೆ ಕಾರ್‍ಚೇಸ್‍ ನಡೆದಿದೆ, ಹೆದ್ದಾರಿ ಪೊಲೀಸರು ಅದನ್ನು ತಡೆಯಲಿಲ್ಲ ಎಂದು ಯೋಚಿಸಲು ಸಾಧ್ಯವಿಲ್ಲ. ಇದುಪೋಲೀಸರು ತಡೆಯದ ಗೋರಕ್ಷಕರ ಒಂದು ಸುಪರಿಚಿತ ಘಟನೆಯೇ? ಅಷ್ಟೊಂದು ಸಿಸಿಟಿವಿಗಳನ್ನುಅಳವಡಿಸಿದ್ದರೂ, ತಕ್ಷಣವೇ ತಡೆಯಲು ಪೊಲೀಸ್ ಕೇಂದ್ರಗಳಲ್ಲಿ ಅದರ ನೇರ ಪ್ರದರ್ಶನವಿಲ್ಲದಿದ್ದರೆಅವುಗಳನ್ನುಅಳವಡಿಸಿದ್ದಾದರೂ ಏಕೆ? ಇದು ರಾಜಧಾನಿಯಿಂದ ಒಂದು ಕೂಗಳತೆಯಲ್ಲಿರುವ ಘಟಿಸಿದೆ ಎಂಬುದು ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಅಭಾವ ಮತ್ತು ಜನಜಂಗುಳಿ ಕಾನೂನಿನ ಇರವನ್ನು ತೋರಿಸುತ್ತದೆ. ಇದಕ್ಕೆ ಯಾರು ಹೊಣೆಗಾರರು?

3. ಅವರ ಮಗನಿಗೆ ಗುಂಡು ಹಾರಿಸಿದ ವ್ಯಕ್ತಿ "ನೇಕ್ ಆದ್ಮಿ" ಅಂದರೆ ಒಳ್ಳೆಯ ವ್ಯಕ್ತಿ – ಮತ್ತು "ತಪ್ಪಾಗಿ" ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಕುಟುಂಬಕ್ಕೆ ತಿಳಿಸಿದರು. ಈ ಮೂಲಕ ಏನು ಸಂದೇಶ ನೀಡಲಾಗುತ್ತಿದೆ? ಅವರು ಆ "ಒಳ್ಳೆಯ ಮನುಷ್ಯ" ನೊಂದಿಗೆ ರಾಜಿ ಮಾಡಿಕೊಳ್ಳಬೇಕೆ? ಇದಲ್ಲದೆ ಪೊಲೀಸರು , "ನೇಕ್ ಆದ್ಮಿ" ಎಂದು ಪ್ರಮಾಣೀಕರಿಸಿದ ಪ್ರಮುಖ ಆರೋಪಿ ಅನಿಲ್ ಕೌಶಿಕ್ ಸರ್ಕಾರದ ಮಾನ್ಯತೆ ಪಡೆದ ಗೋರಕ್ಷಕ ಜಿಲ್ಲಾ ಸಮಿತಿಯ ಸದಸ್ಯ ಮತ್ತು ಪೊಲೀಸರೊಂದಿಗೆ ನಿಕಟ ಸಂಪರ್ಕದಲ್ಲಿರುವಾತ. ಪೊಲೀಸರು ಈ ವ್ಯಕ್ತಿಗಳನ್ನು ಇರಿಸಿದ್ದ ಪೋಲೀಸ್‍ ಠಾಣೆಗೆ ತಂದೆಯನ್ನು ಕರೆದೊಯ್ದರು. ತಂದೆಯ ಪ್ರಕಾರ ಮಗನ ಹಂತಕ ಅವನ ಕಾಲಿಗೆ ಬಿದ್ದು ತಪ್ಪಾಗಿದೆ ಕ್ಷಮಿಸಿ ಎಂದು ಬೇಡಿಕೊಂಡ. ಇದು ಕೂಡ ಕುಟುಂಬದ ಮೇಲಿನ ಒತ್ತಡದ ರೂಪವಲ್ಲವೇ? ಹಂತಕನನ್ನು ಭೇಟಿಯಾಗಲು ತಂದೆಯನ್ನು ಪೊಲೀಸರು ಠಾಣಾಗೆ ಏಕೆ ಕರೆದೊಯ್ದರು? ಗೋರಕ್ಷಕರನ್ನು ಉಳಿಸಲು ಪ್ರಕರಣವನ್ನು ದುರ್ಬಲಗೊಳಿಸುವ ಕಸರತ್ತು ಮಾಡಲಾಗುತ್ತಿದೆ ಎಂಬ ನ್ಯಾಯಬದ್ಧ ಆತಂಕವಿದೆ. ಪ್ರಕರಣವನ್ನು ದುರ್ಬಲಗೊಳಿಸುವ ಈ ನಗ್ನ ಯತ್ನ ಮಾಡಿರುವ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಬಂದಿದೆ.

4. ಈ ಹತ್ಯೆಯು ಗೋರಕ್ಷಕರ ಅಪರಾಧೀ ಚಟುವಟಿಕೆಗಳಿಗೆ ಕಾನೂನು ಅನುಮತಿ ನೀಡುವ ಹರಿಯಾಣ ಸರ್ಕಾರದ ನೀತಿಯ ನೇರ ಪರಿಣಾಮವಾಗಿದೆ. ಅಲ್ಲದೆ ಪೊಲೀಸರು ಈ ಗ್ಯಾಂಗ್‌ಗಳೊಂದಿಗೆ ಸಂಪೂರ್ಣ ಶಾಮೀಲಾಗಿದ್ದಾರೆ ಎಂಬುದು ಬಹಿರಂಗ ರಹಸ್ಯ. ಬಂಧನಕ್ಕೊಳಗಾದ ವ್ಯಕ್ತಿಗಳು ಗೋರಕ್ಷಕ ಗ್ಯಾಂಗ್‌ಗಳ ಭಾಗವಾಗಿದ್ದಾರೆ ಎಂಬ ಬಗ್ಗೆ
ಏನೂ ತಿಳಿದಿಲ್ಲ ಎಂದು ನಿರಾಕರಿಸುವ ಪೊಲೀಸರ ಹೇಳಿಕೆಗಳು ಪಕ್ಷಪಾತಕ್ಕೆ ಸಾಕ್ಷಿಯಾಗಿದೆ. ಯಾವುದೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬಲ್ಲುದೇ? ಈ ಹತ್ಯೆಗೆ ಸರಕಾರ ಮತ್ತು ಪೊಲೀಸರು ಉತ್ತರದಾಯಿಯಾಗಬೇಕಾಗಿದೆ.

5. ಬಿಜೆಪಿ-ಆರ್‌ಎಸ್‌ಎಸ್ ವ್ಯವಸ್ಥೆಯ ಗೋರಕ್ಷಕರ ರಕ್ಷಣೆಯ ರಾಜಕೀಯ ಈ ಪ್ರಕರಣದಲ್ಲಿ ಸಂಪೂರ್ಣವಾಗಿ ಬಯಲಾಗಿದೆ. ಕುಟುಂಬವನ್ನು ಸಂಪೂರ್ಣವಾಗಿ ಏಕಾಂಗಿಯಾಗಿ ಮಾಡಲಾಗಿದೆ. ಅವರು ಬಡವರು ಮತ್ತು ಯಾವುದೇ ಪ್ರಭಾವ ಇಲ್ಲದವರು. ಬಿಜೆಪಿಯ ಯಾವೊಬ್ಬ ನಾಯಕ ಬಿಡಿ, ಪದಾಧಿಕಾರಿಯೂ ಈ ಕುಟುಂಬವನ್ನು  ಭೇಟಿ ಮಾಡಿಲ್ಲ. ಕುಟುಂಬದವರನ್ನು ಭೇಟಿ ಮಾಡುವ ಬಗ್ಗೆ ಯಾವೊಬ್ಬ ಸರ್ಕಾರಿ ಅಧಿಕಾರಿಯೂ ತಲೆಕೆಡಿಸಿಕೊಂಡಿಲ್ಲ. ಆರ್ಯನ್ ತಂದೆ ಹೇಳಿದರು- “ಒಬ್ಬ ಬಜರಂಗಿಯ ಸಂಬಂಧಿ ಸತ್ತಾಗ ದೊಡ್ಡ ನಾಯಕರು ಹೋಗಿ ಲಕ್ಷಗಟ್ಟಲೆ ರೂಪಾಯಿ ಕೊಟ್ಟರು ಅಂತ ಕೇಳಿದ್ದೆ. ಅವರಲ್ಲಿ ಒಬ್ಬರೂ ನನ್ನನ್ನು ನೋಡಲು ಬಂದಿಲ್ಲ, ಸಾಂತ್ವನ ಹೇಳಲೂ ಬಂದಿಲ್ಲ. ಏಕೆ? ಏಕೆಂದರೆ ಅವರಿಗೆ ಕೊಲ್ಲಲು ಪರವಾನಗಿ ನೀಡಿದವರು ಯಾರು ಎಂದು ನಾನು ಪ್ರಶ್ನಿಸಿದ್ದೇನೆ?” ಅವರು ಇಲ್ಲಿ ಉಲ್ಲೇಖಿಸಿದ್ದು ಈ ವರ್ಷದ ಜನವರಿಯಲ್ಲಿ ಹಿಂದುತ್ವ ಕಾರ್ಯಕರ್ತ ಮತ್ತು ಗೋರಕ್ಷಕ ನಾಯಕ ಬಿಟ್ಟು ಬಜರಂಗಿಯ ಸಹೋದರ ಮಹೇಶ್ ಸುಟ್ಟಗಾಯಗಳಿಂದ ಸಾವನ್ನಪ್ಪಿದ ಘಟನೆಯನ್ನು. ಆ ಸಮಯದಲ್ಲಿ ಹರಿಯಾಣ ಮುಖ್ಯಮಂತ್ರಿ ಖಟ್ಟರ್ , ಸಾರಿಗೆ ಸಚಿವರು ಮತ್ತು ಸ್ಥಳೀಯ ಶಾಸಕರೊಂದಿಗೆ ಕುಟುಂಬವನ್ನು ಭೇಟಿ ಮಾಡಿದ್ದರು. ಇಂದು ಆರ್ಯನ್‌ನ ತಂದೆ -ತಾಯಿ ಏಕಾಂಗಿಯಾಗಿ ಕಂಡಿದ್ದರೆ ಅದಕ್ಕೆ ಬಿಜೆಪಿ- ಆರ್‌ಎಸ್‌ಎಸ್ ವ್ಯವಸ್ಥೆಯ ವಿಷಕಾರಿ ರಾಜಕೀಯವೇ ಕಾರಣ. ಹಿಂದೂ ಧರ್ಮದ ಯುವಕನೊಬ್ಬ ಹಿಂದುತ್ವದ ಗೋರಕ್ಷಕರ ಗುಂಡಿಗೆ ಬಲಿಯಾದಾಗ, ಈ ವ್ಯವಸ್ಥೆಯು ಹಿಂದುತ್ವ ಗೋರಕ್ಷಕರ ಪರ ನಿಂತಿದೆ. ಇದು ಹಿಂದೂಗಳ
ಹೆಸರಿನಲ್ಲಿ ಮಾತನಾಡುವವರ ವಾಸ್ತವ.

6. ಸಿಪಿಐ(ಎಂ) ಕುಟುಂಬಕ್ಕೆ ಆರ್ಥಿಕ ಪರಿಹಾರ, ಸಹೋದರ ಅಜಯ್ ಮಿಶ್ರಾಗೆ ಸರ್ಕಾರಿ ನೌಕರಿ; ಆರೋಪಿಗಳನ್ನು ರಕ್ಷಿಸಲು ಸಹಕರಿಸಿದ ಪೊಲೀಸರ ವಿರುದ್ಧ ಕ್ರಮ; ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಆಗ್ರಹಿಸುತ್ತದೆ. ಈ ಕ್ರಿಮಿನಲ್ ಗೋರಕ್ಷಕ ಗ್ಯಾಂಗ್‌ಗಳನ್ನು ವಿಸರ್ಜಿಸಬೇಕು ಮತ್ತು ಸರ್ಕಾರದ ಮಾನ್ಯತೆ, ಮಂಜೂರಾತಿ ಮತ್ತು ರಕ್ಷಣೆಯನ್ನು ಕೊನೆಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

 

 

 

ಟಿಕೆಟ್ ಕೊಟ್ಟದ್ದು ಅಚ್ಛೇ ದಿನ್‍ ಗೆ ಇಳಿಸಿದ್ದು ‘ದ್ವೇಷಪುರ’ದಲ್ಲಿ!

“ನೀನು ತಪ್ಪು ಭಾವಿಸಿದ್ದೀಯಾ!”

ವ್ಯಂಗ್ಯಚಿತ್ರ: ಸತೀಶ ಆಚಾರ್ಯ, ಫೇಸ್‍ ಬುಕ್

 

 

 

Donate Janashakthi Media

Leave a Reply

Your email address will not be published. Required fields are marked *