ಆರೋಪಿಗೆ ರಾಜ ಮರ್ಯಾದೆ – ಸಂತ್ರಸ್ತೆಯೇ ಆರೋಪಿ ಎನ್ನುವಂತೆ ವಿಚಾರಣೆ: ಕಾಂಗ್ರೆಸ್‌ ಆರೋಪ

ಬೆಂಗಳೂರು : ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ಆಡಳಿತ ವೈಖರಿಯನ್ನು ಗಮನಿಸಿದರೆ, ಇಲ್ಲಿ ಆರೋಪಿಗೆ ರಾಜ ಮರ್ಯಾದೆಯಲ್ಲಿ ಗೌರವಿಸಲಾಗುತ್ತದೆ. ಆದರೆ ಸಂತ್ರಸ್ತೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ರಮೇಶ್‌ ಜಾರಕಿಹೊಳಿ ಅತ್ಯಾಚಾರ ಪ್ರಕರಣದಿಂದಲೇ ಬಿಜೆಪಿ ಆಡಳಿತದ ಬಣ್ಣ ಬಲಾಗುತ್ತಿದ್ದು. ದೂರು ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯನ್ನು ನೆಪಮಾತ್ರದ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಎಂಬುದು ಪ್ರಶ್ನೆಯಾಗಿದೆ.

ಪೊಲೀಸರೂ ಸಹ ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆರೋಪಿಯ ಮೊಬೈಲ್‌ ಸಹ ಹಲವು ದಿನಗಳವರೆಗೆ ವಶಪಡಿಸಿಕೊಳ್ಳದೇ ಸಾಕ್ಷ್ಯ ನಾಶಕ್ಕೆ ಸಾಕಷ್ಟು ಸಮಯ ನೀಡಿದಂತಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಆರೋಪಿಯನ್ನು ಗುಟ್ಟಾಗಿ ವಿಚಾರಣೆಗೆ ಕರೆಸುವ ಪೊಲೀಸರು. ಸಂತ್ರಸ್ತೆಗೆ ವಿಶ್ರಾಂತಿಯೂ ನೀಡದಂತೆ ಸತತ ವಿಚಾರಣೆ ನಡೆಸುತ್ತಾರೆ.

ಪ್ರಕರಣ ಬೆಳಕಿಗೆ ಬಂದೊಡನೆಯೇ ಆರೋಪ ಎದುರಿಸುವವರ ಕುಟುಂಬ, ಆರೋಪಿ ವಾಸಿಸುತ್ತಿದ್ದ ಸ್ಥಳ, ಬಳಸುತ್ತಿದ್ದ ಮೊಬೈಲ್ ಮುಂತಾದವುಗಳನ್ನು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಇಲ್ಲಿ ಎಲ್ಲವೂ ಉಲ್ಟಾವಾಗುತ್ತಿದೆ.

ಆರೋಪಿಯ ಕುಟುಂಬದ ವಿಚಾರಣೆ ಮಾಡುವ ಬದಲಿಗೆ ಸಂತ್ರಸ್ತೆಯ ಕುಟುಂಬವನ್ನು ವಿಚಾರಣೆ ಮಾಡಲಾಗುತ್ತಿದೆ.. ಆರೋಪಿಯ ದೂರಿನಲ್ಲಿ ಸಂತ್ರಸ್ತೆಯ ಹೆಸರಿಲ್ಲದಿದ್ದರೂ ಯುವತಿಯೇ ಆರೋಪಿ ಎಂಬಂತೆ ವಿಚಾರಣೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ಹೇಳಿದೆ.

ಚುನಾವಣಾ ಪ್ರಚಾರಕ್ಕೆ ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಎಂದು ಆರೋಪಿಯನ್ನೇ ಕರೆಸಿರುವುದು ರಾಜಕಾರಣ ಯಾವ ದಿಕ್ಕು ಪಡೆಯುತ್ತಿದೆ ಎಂಬುದು ತೋರಿಸಿದೆ. ಸ್ವತಃ ಮುಖ್ಯಮಂತ್ರಿಗಳೇ ತನಿಖೆಯೇ ಪೂರ್ಣಗೊಂಡಿಲ್ಲ ಆದರೂ ಆರೋಪಿಗೆ ಕ್ಲೀನ್ ಚಿಟ್ ನೀಡುತ್ತಾರೆ. ಸಚಿವ ಸ್ಥಾನದಲ್ಲಿರುವವರೇ ನಾವೆಲ್ಲ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಹೇಳುತ್ತಾರೆ. ಇದೆಲ್ಲವೂ ಆರೋಪಿಯನ್ನು ಬಿಜೆಪಿ ರಕ್ಷಿಸುತ್ತಿದೆ ಎನ್ನಲು ನಿದರ್ಶನವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಈ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳಿತ್ತಿದ್ದಾರೆ. ಆ ಬಗ್ಗೆ ನಿಮ್ಮ ಬಳಿ ಸಾಕ್ಷ್ಯಗಳು ಇದ್ದರೆ ಈ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್‌.ಐ.ಟಿ. ಮುಂದು ಹಾಜರುಪಡಿಸಲಿ ಎಂದು ಪ್ರಶ್ನೆ ಮಾಡಿದರು.

ಸಂತ್ರಸ್ತ ಯುವತಿ ಹಾಜರಾದ ದಿನದಿಂದಲೂ ಆರೋಪಿ ತಲೆಮರೆಸಿಕೊಂಡಿದ್ದಾರೆ, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ. ಆರೋಪಿಯೊಬ್ಬನನ್ನು ತಲೆಮರೆಸಿಕೊಳ್ಳಲು ಸಹಕರಿಸಿದ ಕುಖ್ಯಾತಿ ಈ ಸರ್ಕಾರಕ್ಕೆ ಸಲ್ಲಬೇಕು. ಅತ್ಯಾಚಾರ ಆರೋಪಿಯನ್ನು ರಕ್ಷಿಸುವ ಕೀರ್ತಿ ಬಿಜೆಪಿಗೆ ಸಲ್ಲಬೇಕಾಗಿದೆ ಎಂದು ಕಾಂಗ್ರೆಸ್‌ ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *