ನಾಸಿಕ್ | ಅಂಬೇಡ್ಕರ್ ಹೆಸರು ಉಲ್ಲೇಖಿಸದ ಆರೋಪ: ಸಚಿವರ ವಿರುದ್ಧ ಮಹಿಳಾ ಅಧಿಕಾರಿಯ ಆಕ್ಷೇಪ

ನಾಸಿಕ್ : ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಅವರ ಹೆಸರನ್ನು ಇಲ್ಲಿ ನಡೆಯುತ್ತಿರುವ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಲ್ಲೇಖಿಸದ ಸಚಿವ ಗಿರೀಶ್ ಮಹಾಜನ್ ಮತ್ತು ನಿರೂಪಕಿ ವಿರುದ್ಧ ಮಹಿಳಾ ಅರಣ್ಯಾಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಾಸಿಕ್‌ನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ.

ಇದರಿಂದ ಕೋಪಗೊಂಡ ಅರಣ್ಯಾಧಿಕಾರಿ ಮಾಧವಿ ಜಾಧವ್, ಏಕೆ ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ ಎಂದು ಸಚಿವರನ್ನು ಪ್ರಶ್ನಿಸಿದರು. ಜೊತೆ ನಿರೂಪಕಿಯನ್ನು ತರಾಟೆಗೆ ತೆಗೆದುಕೊಂಡರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.  ಸಚಿವ ಗಿರೀಶ್ ಮಹಾಜನ್ ಅವರು ಧ್ವಜಾರೋಹಣ ನೆರವೇರಿಸಿ ಮಾಡಿದ ಭಾಷಣದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಲಿಲ್ಲ.  ಕಾರ್ಯಕ್ರಮದಲ್ಲಿ ನಿಯೋಜಿಸಲಾದ ಸಹ ಅಧಿಕಾರಿಗಳು ಮಾಧವಿ ಅವರನ್ನು ಶಾಂತಗೊಳಿಸಿದರು ಮತ್ತು ನಂತರ ಪೊಲೀಸರು ಮಾಧವಿ ಅವರನ್ನು ಬಂಧಿಸಿ ಬಿಡುಗಡೆ ಮಾಡಿದರು.

ಇದನ್ನೂ ಓದಿ : ಬೆಂಗಳೂರು | ಫಕೀರ್‌ ಕಾಲೋನಿ, ಕೋಗಿಲು ಲೇಔಟ್‌ ನಲ್ಲಿ ಬಡವರ ಗಣರಾಜ್ಯೋತ್ಸವ ಆಚರಣೆ

ಕಾರ್ಯಕ್ರಮದಲ್ಲಿ ಮಾಧವಿ ಮತ್ತು ಇತರ ಅಧಿಕಾರಿಗಳ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​​ ಆಗಿದೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಸಚಿವರು ಗಣರಾಜ್ಯೋತ್ಸವದಂದು ಡಾ. ಬಿ.ಆರ್​. ಅಂಬೇಡ್ಕರ್​ ಅವರ ಹೆಸರನ್ನು ಏಕೆ ಉಲ್ಲೇಖಿಸಲಿಲ್ಲ ಎಂದು ಮಾಧವಿ ಪ್ರಶ್ನಿಸುತ್ತಿರುವುದನ್ನು ಕಾಣಬಹುದು.

ಅಂಬೇಡ್ಕರ್​ ಅವರ ಹೆಸರನ್ನು ಉಲ್ಲೇಖಿಸದಿರುವುದು ಸಚಿವರ ದೊಡ್ಡ ತಪ್ಪು. ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು. ನನ್ನನ್ನು ಅಮಾನತುಗೊಳಿಸಿದರೂ ಪರವಾಗಿಲ್ಲ. ನಾನು ದೈಹಿಕವಾಗಿ ದುಡಿಯುತ್ತೇನೆ. ಆದರೆ, ಅಂಬೇಡ್ಕರ್​ ಅವರ ಗುರುತನ್ನು ಅಳಿಸಿಹಾಕಲು ನಾನು ಬಿಡುವುದಿಲ್ಲ. ಅವರ ಹೆಸರನ್ನು ಹಾಳು ಮಾಡುವ ಯಾವುದನ್ನೂ ನಾನು ಮಾಡುವುದಿಲ್ಲ ಎಂದು ಮಾಧವಿ ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ.

ಮಾಧ್ಯಮದ  ಜೊತೆ ಮಾತನಾಡಿದ ಮಾಧವಿ, ಅಂಬೇಡ್ಕರ್​ ಅವರ ಹೆಸರನ್ನು ಭಾಷಣದಲ್ಲಿ ತಪ್ಪಿಸಿದ ನಂತರ ಸಚಿವರು ಬಹುಮಾನಗಳನ್ನು ಪ್ರದಾನ ಮಾಡುತ್ತಿದ್ದಾಗ ಶಿಷ್ಟಾಚಾರದ ಪ್ರಕಾರ ವೇದಿಕೆಗೆ ಹೋದೆ. ಅವರು ಅಂಬೇಡ್ಕರ್​ ಅವರ ಹೆಸರನ್ನು ಉಲ್ಲೇಖಿಸಲಿಲ್ಲ ಮತ್ತು ಗೌರವ ಸಲ್ಲಿಸಲಿಲ್ಲ. ನಾನು ಇದನ್ನು ನಿರೂಪಕಿಗೆ ಹೇಳಿದೆ. ನಾನು ಸಚಿವರೊಂದಿಗೆ ಮಾತನಾಡಲು ಬಯಸುತ್ತೇನೆ ಎಂದು ಅವರಿಗೆ ಹೇಳಿದೆ. ಅವರು ಹೋದ ನಂತರ ನನಗೆ ಮಾತನಾಡಲು ಹೇಳಲಾಯಿತು. ಸಚಿವರು ಝಡ್ ಭದ್ರತೆಯಲ್ಲಿದ್ದ ಕಾರಣ, ಅವರಿಗೆ ಒಂದು ಕ್ಷಣವೂ ಬಿಡುವಿರಲಿಲ್ಲ ಎಂದು ಹೇಳಿದರು.

ತಪೋವನದಲ್ಲಿರುವ ಮರಗಳನ್ನು ಕಡಿಯಬೇಡಿ ಎಂದು ನಾನು ಸಚಿವರಿಗೆ ಹೇಳಲು ಬಯಸಿದ್ದೆ. ನಾನು ನಿರೂಪಕಿಯನ್ನು ತಳ್ಳಲಿಲ್ಲ. ಆ ನಿರೂಪಕಿ ಇಡೀ ಕಾರ್ಯಕ್ರಮದಲ್ಲಿ ಒಮ್ಮೆಯೂ ಅಂಬೇಡ್ಕರ್​ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಇದೆಲ್ಲವೂ ಸ್ಕ್ರಿಪ್ಟ್ ಆಗಿತ್ತು. ಯಾವುದೇ ಗೌರವ, ಘೋಷಣೆಗಳು ಅಥವಾ ಬಾಬಾಸಾಹೇಬರ ಸ್ಮರಣೆಯ ಉಲ್ಲೇಖವೂ ಇರಲಿಲ್ಲ. ಇದು ಸ್ಪಷ್ಟವಾಗಿ ಜಾತಿವಾದವನ್ನು ತೋರಿಸುತ್ತದೆ ಎಂದು ಆರೋಪಿಸಿದರು.

ಇದು ಮಹಾನ್ ವ್ಯಕ್ತಿತ್ವದ ಶ್ರೇಷ್ಠತೆಯನ್ನು ನಿರಾಕರಿಸುವ ಯತ್ನ. ನಾನು ಮಾನಸಿಕವಾಗಿ ಡಾ. ಬಾಬಾಸಾಹೇಬರ ಗೌರವಾರ್ಥ ಘೋಷಣೆಗಳನ್ನು ಕೂಗಿದೆ. ಅದರ ನಂತರ, ಪೊಲೀಸರು ನನ್ನನ್ನು ವಶಕ್ಕೆ ಪಡೆದು ವಾಹನದಲ್ಲಿ ಕೂರಿಸಿದರು. ನಂತರ ಪೊಲೀಸರು ನನ್ನನ್ನು ಬಿಡುಗಡೆ ಮಾಡಿದ್ದಾರೆ. ಸಂವಿಧಾನ ಶಿಲ್ಪಿಗೆ ನಾನು ಗೌರವ ಸಲ್ಲಿಸಿದೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಇದನ್ನೂ ನೋಡಿ : ಎರಡು ವರ್ಷ ಏಳು ತಿಂಗಳುಗಳ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಮುಂದಿನ ಜವಾಬ್ದಾರಿಗಳು… Janashakthi Media

Donate Janashakthi Media

Leave a Reply

Your email address will not be published. Required fields are marked *