ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕೆಡವಿ ಮಾಲ್ ಕಟ್ಟುವ ಬಿಡಿಎ ನಿರ್ಧಾರಕ್ಕೆ ಎಎಪಿ ವಿರೋಧ

ಬೆಂಗಳೂರು: ವಿವಾದಾದತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮರುಜೀವ ನೀಡಲು ಮುಂದಾಗಿದ್ದು, ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲು ಮುಂದಾಗಿದೆ. ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಹೊಡೆದು ಮಾಲ್ ಕಟ್ಟುವ ಬಿಡಿಎ ನೀತಿಯ ವಿರುದ್ಧ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೋರಮಂಗಲ

ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಸೆರಾವು ನೇತೃತ್ವದಲ್ಲಿ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಡಿಎ ನಿರ್ಧಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ – 40 ಜನರ ರಕ್ಷಣೆ

ಬಳಿಕ ಮಾತನಾಡಿದ ವೀಣಾ ಸೆರಾವು, ಒಂದು ಪ್ರದೇಶಕ್ಕೆ ಒಂದು ಮಾಲ್ ಸಾಕು. ಯಶಸ್ವಿಯಾಗಿ ನಡೆಯುತ್ತಿರುವ ಬಿಡಿಎ ಕಾಂಪ್ಲೆಕ್ಸ್ ಅನ್ನು ಒಡೆಯುವುದು ಸರಿಯಲ್ಲ. ಈಗಾಗಲೇ ಸಾಕಷ್ಟು ಸಂಚಾರ ದಟ್ಟಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ. ಈ ಪ್ರದೇಶಕ್ಕೆ ಸರಿಯಾದ ಫ್ಲೈಓವರ್ ಮತ್ತು ಮೆಟ್ರೋ ಸಂಪರ್ಕವಿಲ್ಲ. ಹೀಗಿರುವಾಗ ಸರ್ಕಾರಿ ಆಸ್ತಿಯನ್ನು ಖಾಸಗೀಕರಣ ಮಾಡುತ್ತಿರುವ ನಿರ್ಧಾರ ಸರಿಯಲ್ಲ. ಮರಗಳನ್ನೆಲ್ಲ ಕಡಿಯಲಾಗಿದೆ. ಇವತ್ತು ಕಾಂಕ್ರೀಟ್ ಕಾಡಾಗಿ ಬೆಂಗಳೂರು ಮಾರ್ಪಟ್ಟಿದೆ ಎಂದರು.

ಬ್ರಾಂಡ್ ಬೆಂಗಳೂರು ಎನ್ನುವ ಡಿಕೆ ಶಿವಕುಮಾರ್, ಇದೇನಾ ನಿಮ್ಮ ಯೋಜನೆ. ಸಾರ್ವಜನಿಕರಿಗೆ ಉಪಯೋಗವಾಗುವಂತ ಯಾವ ಕೆಲಸವನ್ನು ಮಾಡಿದ್ದೀರಿ. ಖಾಸಗೀಕರಣ ಮಾಡಿ ಅವರಿಂದ ಲಾಭ ಪಡೆಯುವ ಉದ್ದೇಶ ಸರಿಯಲ್ಲ. ಸಾರ್ವಜನಿಕರಿಗೆ ಇದರಿಂದ ಯಾವುದೇ ಉಪಯೋಗವಾಗುವುದಿಲ್ಲ. ಯಾವುದೇ ಕಾರಣಕ್ಕೂ ನಾವು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಕೆಡವಲು ಬಿಡುವುದಿಲ್ಲ. ಒಂದು ವೇಳೆ ನೀವು ಕೆಡವಲು ಮುಂದಾದರೆ ನಾವಿಲ್ಲಿಗೇ ಬಂದು ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಮಾತನಾಡಿ, ಬಿಡಿಎ ಕಾಂಪ್ಲೆಕ್ಸ್ ಕಟ್ಟಡದ ಕೆಳಭಾಗದಲ್ಲಿ ಹಲವು ಅಂಗಡಿಗಳಿನ್ನು ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ, ಮೇಲ್ಭಾಗದಲ್ಲಿ ಕಟ್ಟಡವನ್ನು ಕೆಡವಲು ಮುಂದಾಗಿದ್ದಾರೆ. ನಮ್ಮ ಹೋರಾಟದ ಬಳಿಕ ಕಟ್ಟಡ ಕೆಡವುವ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಳಿಸಿದ್ದು, ನಾವು ನಮ್ಮ ಹೋರಾಟವನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಇದು ಮುಂದುವರಿದರೆ ನಮ್ಮ ಹೋರಾಟವೂ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಬಿಡಿಎ ಕಾಂಪ್ಲೆಕ್ಸ್ ಇರುವುದು ಕೋರಮಂಗಲದ ಸ್ಥಳೀಯರಿಗೆ. ಇಲ್ಲಿ ಏನು ಬೇಕು ಎಂಬುದರ ತೀರ್ಮಾನವನ್ನು ಸಾರ್ವಜನಿಕರೇ ಮಾಡಬೇಕಿದೆ. ಆದರೆ, ರಾತ್ರೋರಾತ್ರಿ ನಿರ್ಧಾರ ಕೈಗೊಂಡು ಕಟ್ಟಡವನ್ನು ಕೆಡವಿ ಮಾಲ್ ನಿರ್ಮಿಸುತ್ತೇವೆ ಎನ್ನುವುದು ಸರಿಯಲ್ಲ. ಈಗಾಗಲೇ ಇಡೀ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಾಗಿದೆ. ಇಷ್ಟು ಶಾಂತಿಯುತವಾಗಿರುವ ಕೋರಮಂಗಲದಲ್ಲಿ ಮತ್ತೊಂದು ಮಾಲ್ ನಿರ್ಮಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಂಗಳೂರು ನಗರ ಮಾಧ್ಯಮ ಉಸ್ತುವಾರಿ ಅನಿಲ್ ನಾಚಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ  “ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲು 60 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿವರ್ಷ ಬಿಡಿಎಗೆ 40 ಕೋಟಿ ರೂ.ಗೂ ಅಧಿಕ ಆದಾಯ ಬರಲಿದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಆರ್‌ಟಿ ನಗರ ಮತ್ತು ಸದಾಶಿವನಗರದಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಎಂ-ಎಫ್‌ಎಆರ್ ಡೆವಲಪರ್ಸ್‌ಗೆ ಬಿಡಿಎ ಗುತ್ತಿಗೆ ನೀಡಿದ್ದು, ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್ ಅನ್ನು ಎಂಬೆಸ್ಸಿ ಗ್ರೂಪ್ ಮರುಅಭಿವೃದ್ಧಿಗೊಳಿಸಲಿದೆ. ಇದು ಭೂಮಾಪಯಗಳೊಂದಿಗೆ ಮಾಡಿಕೊಂಡಿರುವ ಅನೈತಿಕ ವ್ಯವಹಾರ ” ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ  ಪಕ್ಷದ ಅನೇಕ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಇದನ್ನೂ ನೋಡಿ: ಮೃಣಾಲ್ ಸೆನ್ 100 ವೆಬಿನಾರ್ ಸರಣಿ -08 | ಮೃಣಾಲ್ ಸೆನ್ ಅವರ ಸಿನೆಮಾಗಳಲ್ಲಿ ಕೋರ್ಟು ದೃಶ್ಯಗಳು

Donate Janashakthi Media

Leave a Reply

Your email address will not be published. Required fields are marked *