ಪುಣ್ಯಕೋಟಿ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ಒಂದು ದಿನದ ವೇತನ; ನೌಕರರ ಒಕ್ಕೂಟ ಆಕ್ಷೇಪ

ಬೆಂಗಳೂರು: ರಾಜ್ಯ ಸರಕಾರವು ಜಾರಿಗೊಳಿಸಿರುವ ಪುಣ್ಯಕೋಟಿ ಯೋಜನೆಗೆ ಸರಕಾರಿ ನೌಕರರೂ ಜೈ ಜೋಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರವು ಕೇಳಿದ್ದ ಹಿನ್ನೆಲೆಯಲ್ಲಿ ನೌಕರರ ಸಂಘವು ಒಂದು ದಿನದ ವೇತನ ಅಂದಾಜು 100 ಕೋಟಿ ರೂಪಾಯಿ ಕಟಾವಣೆ ಮಾಡಲು ಅನುಮತಿ ಪತ್ರ ನೀಡಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಿರುವ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.

ಈ ಬಗ್ಗೆ ಪ್ರಸ್ತಾಪಿಸಿರುವ ಒಕ್ಕೂಟದ ರಾಜ್ಯ ಅಧ್ಯಕ್ಷ ಹೆಚ್.ಎಸ್. ಜೈಕುಮಾರ್ ಅವರು, ಪುಣ್ಯಕೋಟಿ ಯೋಜನೆಗೆ ಸಾರ್ವಜನಿಕರು, ನೌಕರರು ಯಾರೇ ಬೇಕಾದರೂ ತಲಾ ಹಸುವೊಂದಕ್ಕೆ ದಿನವೊಂದಕ್ಕೆ 70 ರೂಪಾಯಿಗಳನ್ನು ಕೊಡುವ ಮೂಲಕ  ಎಷ್ಟು  ಹಸುಗಳನ್ನು ಬೇಕಾದರೂ ದತ್ತು ತೆಗೆದುಕೊಳ್ಳಲು ಅವಕಾಶ ಇದೆ ಎನ್ನಲಾಗಿದೆ. ಸರ್ಕಾರಿ ನೌಕರರಲ್ಲಿ ಬಹುತೇಕ ರೈತ  ಕುಟುಂಬದಿಂದ ಬಂದವರೇ ಆಗಿದ್ದು ಹಸು, ಎಮ್ಮೆ, ದನಗಳನ್ನು ಸಾಕುತ್ತಾ ಬಂದು ಅವುಗಳ ಪೋಷಣೆಯಲ್ಲಿ ಕಾಳಜಿ ಹೊಂದಿದವರಾಗಿರುತ್ತಾರೆ. ಕೃಷಿ ಬಿಕ್ಕಟ್ಟು ಇಂದು ಉಲ್ಬಣ ಹೊಂದಿದ ಹಿನ್ನೆಲೆಯಲ್ಲಿ ಗ್ರಾಮೀಣ ಯುವಕರು ಇಂದು ನಗರದೆಡೆಗೆ ವಲಸೆ ಹೊರಡುತ್ತಿರುವುದು ವಾಸ್ತವ ಸಂಗತಿಯಾಗಿದೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಬೆಂಬಲ ವ್ಯವಸ್ಥೆ ಒದಗಿಸುವುದು ಸೇರಿದಂತೆ ಕೃಷಿಕರ ಬಾಳು ಹಸನುಮಾಡುವ ಯೋಜನೆಗಳನ್ನು ಸರ್ಕಾರ ಹಮ್ಮಿಕೊಂಡರೆ ಮಾತ್ರ ಕೃಷಿಯೂ ಉಳಿದು ಕೃಷಿಕರೂ ಉಳಿಯುತ್ತಾರೆ ಹಾಗೂ ಜಾನುವಾರುಗಳಿಗೂ ರಕ್ಷಣೆ ದೊರೆಯುತ್ತದೆ. ಹಸುಗಳನ್ನು ಕಸಾಯಿಖಾನೆಗೆ ಅಟ್ಟುವುದೂ ತಪ್ಪುತ್ತದೆ. ಕೃಷಿಯಲ್ಲಿ ಬಳಸುವ ಯಾವುದೇ ಜಾನುವಾರುಗಳನ್ನು ಕೃಷಿಕರಿಂದ ಹೊರತುಪಡಿಸಿ ರಕ್ಷಿಸುತ್ತೇನೆಂಬುದು ಅಪ್ರಾಯೋಗಿಕವಾಗುತ್ತದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿ ಪ್ರಕಾರ ಶೇ. 66ರಷ್ಟು ಐದು ವರ್ಷದೊಳಗಿನ ಮಕ್ಕಳು ಕುಂಠಿತ ಬೆಳವಣಿಗೆಯಿಂದ ಮತ್ತು ಶೇ. 50ರಷ್ಟು ಗರ್ಭಿಣಿಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗದಿಂದ ವಿದ್ಯಾವಂತ ಯುವಜನ ಕಂಗಾಲಾಗಿದ್ದಾರೆ. ಸರ್ಕಾರಿ ಶಾಲೆಗಳು ಮೂಲಸೌಲಭ್ಯಗಳಿಲ್ಲದೇ ಮುಚ್ಚಿಹೋಗುವ ದುಸ್ಥಿತಿಯಲ್ಲಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಸಂಖ್ಯೆಗನುಗುಣವಾದ ವೈದ್ಯಕೀಯ ಸೌಲಭ್ಯಗಳಿಲ್ಲದೇ ನೂಕುನುಗ್ಗಲು ಮತ್ತು ಅವ್ಯವಸ್ಥೆ ಉಂಟಾಗಿದ್ದು ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಮರಣ ಹೊಂದುತ್ತಿದ್ದಾರೆ. ಇಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಿ ಜನತೆಯ ಬಾಳು ಹಸನು ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಹೊಂದಿರುವ ಸರ್ಕಾರವೊಂದರ ಪ್ರಮುಖ ಗುರಿಯಾಗಿರಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಸಮೃದ್ಧ ಮಳೆಯಾಗಿದ್ದು ಹಸುಗಳೂ ಸೇರಿದಂತೆ ಯಾವುದೇ ಪಶುಗಳಿಗೂ ಮೇವಿನ ನೀರಿನ ಕೊರತೆ ಆಗುವುದಿಲ್ಲ. ಅಲ್ಲದೇ ರಾಜ್ಯದ ಬಹುತೇಕ ನೌಕರರು ತಮ್ಮ ಮನೆಗಳಲ್ಲಿಯೇ ಹಸುಗಳು, ಎತ್ತುಗಳು, ಎಮ್ಮೆಗಳು, ಮೇಕೆಗಳು, ಕುರಿಗಳನ್ನು ಸಾಕುತ್ತಿದ್ದು ಆ ಮೂಲಕ ಪಶು ಸಂಗೋಪನೆ ಮಾಡುತ್ತಿದ್ದಾರೆ.

ಇತ್ತೀಚಿಗೆ ರಾಜ್ಯದ ಉಚ್ಛ ನ್ಯಾಯಾಲಯವು ಗೋ ಶಾಲೆಗಳಿಗೆ ಸಂಬಂಧಿಸಿದಂತೆ ಅರ್ಜಿಯೊಂದರ ವಿಚಾರಣೆ ನಡೆಸಿ ಸರಕಾರವು ಘೋಷಣೆ ಮಾಡಿದ ಸ್ಥಳಗಳಲ್ಲಿ ಗೋ ಶಾಲೆಗಳೇ ಇಲ್ಲ ಎನ್ನುವುದನ್ನು ಖಾತರಿ ಮಾಡಿಕೊಂಡು ರಾಜ್ಯ ಸರಕಾರಕ್ಕೆ ತಿಳಿಸಿರುವುದು  ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದೆ.

ಈ ಹಿಂದೆ ಅತಿವೃಷ್ಟಿ ಅನಾವೃಷ್ಟಿಗಳಂತಹ ಸಂದರ್ಭಗಳಲ್ಲಿ ಕೋವಿಡ್- 19ರ ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡುವ ಮೂಲಕ ರಾಜ್ಯ ಸರಕಾರಕ್ಕೆ ಜೊತೆಯಾಗಿದ್ದೇವೆ. ಕರೋನ ಸಂದರ್ಭದಲ್ಲಿ ರಾಜ್ಯದ ಸರಕಾರಿ ನೌಕರರಿಗೆ ಕೊಡಬೇಕಾದ 18 ತಿಂಗಳ ತುಟ್ಟಿಭತ್ಯೆ ಮೊತ್ತ ಒಟ್ಟು ರೂ. 4,500 ಕೋಟಿಯನ್ನು ತಡೆಹಿಡಿದಿರುವ ಸರಕಾರ ಈವರೆಗೂ ಅದನ್ನು ನೌಕರರಿಗೆ ಕೊಟ್ಟಿಲ್ಲ.  ಆರನೇ ವೇತನ ಆಯೋಗದ ಅವಧಿ ಮುಗಿದು ನಾಲ್ಕು ತಿಂಗಳು ಕಳೆದರೂ ಏಳನೇ ವೇತನ ಆಯೋಗ ರಚಿಸಿರುವುದಿಲ್ಲ.  ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಬೇಕೆಂದು ಹಾಗೂ  ಅದು ಅಂತಿಮ ವರದಿ ಸಲ್ಲಿಸುವವರೆಗೆ 25% ಮಧ್ಯಂತರ ಪರಿಹಾರ ಘೋಷಣೆ ಮಾಡುವಂತೆ ಒಕ್ಕೂಟವು ಒತ್ತಾಯಿಸಿದೆ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್. ಅಭಿಜಿತ್ ಅವರು, ಪುಣ್ಯ ಕೋಟಿ ಯೋಜನೆಯ ಅಡಿಯಲ್ಲಿ ಕೇವಲ ಹಸುಗಳನ್ನು ಮಾತ್ರ ಪೋಷಿಸ ಹೊರಟರೆ ಇದು ಯಾವ ನ್ಯಾಯ? ಇತರೆ ಪಶುಗಳಿಗೂ ಆಹಾರ ನೀರು ವಸತಿ ಬೇಕಲ್ಲವೆ? ಪಶು ಸಂಗೋಪನೆಗೆ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆ ಖಾಲಿ ಬಿದ್ದಿವೆ. ವೈದ್ಯರುಗಳಿಲ್ಲದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಹಸುಗಳು ಕಾಲುಬಾಯಿ ರೋಗ ಬಂದು ಸಾಯುತ್ತಿವೆ. ಇರುವ ನೌಕರರ ಮೇಲೆ ಒತ್ತಡ ಹೆಚ್ಚಾಗಿದೆ. ಖಾಲಿ ಹುದ್ದೆ ಭರ್ತಿ ಮಾಡುವ ಬದಲು ಇರುವ ನೌಕರರ ಸಂಬಳದಲ್ಲಿ ಹಸುಗಳ ಪೋಷಣೆಗೆ ವೇತನ ಕೇಳುವುದು ಯಾವ ನ್ಯಾಯ? ಒಟ್ಟಾರೆ ಪಶು ಸಂಗೋಪನೆಗೆ ಒತ್ತು ಕೊಡದೇ ಕೇವಲ ಹಸುಗಳಿಗೆ ಮಾತ್ರ ಏಕೆ ಈ ಒತ್ತು? ಇದು ಸರಕಾರದ ತಾರತಮ್ಯ ನೀತಿಯಲ್ಲವೆ?   ಕೆಲವರಿಗೆ  ಹಸು ದೈವವಾದರೆ, ಕೆಲವರಿಗೆ ಕೋಣ ದೈವವಾಗಿದೆ. ಇನ್ನೂ ಕೆಲವರಿಗೆ ಹಂದಿ ದೈವವಾಗಿದೆ. ಇದೊಂದು ವೈವಿಧ್ಯಮಯ ರಾಜ್ಯ. ಹೀಗಿರುವಾಗ ಹಸುಗಳನ್ನು ಮಾತ್ರವೇ ಅದೂ ನೌಕರರ ವೇತನದ ಹಣದಲ್ಲಿ ವೈಭವೀಕರಿಸುವುದು ಎಷ್ಟರಮಟ್ಟಿಗೆ ಸರಿ? ಎಂಬ ಪ್ರಶ್ನೆ ಮೂಡಿಬರುತ್ತಿದೆ ಎಂದಿದ್ದಾರೆ.

ಶಿಕ್ಷಣ, ಆರೋಗ್ಯ, ಸಾರಿಗೆ, ದೈನಂದಿನ ಸರಕು, ಪೆಟ್ರೋಲ್, ಇತ್ಯಾದಿ ವಸ್ತುಗಳ ಬೆಲೆಯೇರಿಕೆಯಿಂದ ಮಧ್ಯಮವರ್ಗದ ನೌಕರರ ಜೀವನ ಹೈರಾಣಾಗಿದೆ. ರಾಜ್ಯದ ನೌಕರರಿಗೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಶೇ. 40-50 ರಷ್ಟು ಕಡಿಮೆ ವೇತನ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಕಾರ ನೌಕರರಿಗೆ ಬೆಲೆಯೇರಿಕೆಗೆ ಅನುಗುಣವಾಗಿ ವೇತನ ಸೌಲಭ‍್ಯಗಳನ್ನು ಸಕಾಲಕ್ಕೆ ಕೊಟ್ಟರೆ  ಅವರು ನೆಮ್ಮದಿಯಿಂದ ಬದುಕಿ, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ.

ಈ ಹಿನ್ನೆಲೆಯಲ್ಲಿ, ಪುಣ್ಯ ಕೋಟಿ ದತ್ತು ಯೋಜನೆಗೆ ನೌಕರರ ವೇತನದಲ್ಲಿ ಕಟಾವಣೆ ಮಾಡಲು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ವಿರೋಧಿಸುತ್ತದೆ. ಸದರಿ ಯೋಜನೆಗೆ ಇಚ್ಛೆ ಪಡುವ ನೌಕರರು ತಮ್ಮ ಸಂಬಳದಿಂದ ವೇತನ ಕಡಿತ ಮಾಡಲು ಬಟವಾಡೆ ಅಧಿಕಾರಿಗಳಿಗೆ ಒಪ್ಪಿಗೆ ಪತ್ರ ನೀಡಿ ಕಟಾವಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೇ ಹೊರತು, ಒಪ್ಪಿಗೆ ಇಲ್ಲದ ನೌಕರರ ಸಂಬಳದಲ್ಲಿ ಯಾವುದೇ ಕಾರಣಕ್ಕೂ ಕಟಾವಣೆ ಮಾಡಬಾರದು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಒತ್ತಾಯಿಸಿದೆ. ಸಂವಿಧಾನದತ್ತ ಆಯ್ಕೆಯ ಹಕ್ಕಿನ ಉಲ್ಲಂಘನೆ ಮಾಡಬಾರದೆಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಕೋರಲಾಗಿದೆ.

Donate Janashakthi Media

Leave a Reply

Your email address will not be published. Required fields are marked *