PSI ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡವಿದೆ : ನ್ಯಾಯಾಂಗ ತನಿಖೆಗೆ ದಿನೇಶ್​ ಗುಂಡೂರಾವ್ ಆಗ್ರಹ

  • ಪಿಎಸ್‌ಐ ಪರೀಕ್ಷೆ ಅಕ್ರಮ ಆರೋಪ
  • ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ?
  • ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಪಿಎಸ್​ಐ ನೇಮಕಾತಿ ಹಗರಣದ  ಹಿಂದೆ ದೊಡ್ಡ ಅಧಿಕಾರಿಗಳು ರಾಜಕಾರಣಿಗಳು  ಭಾಗಿಯಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರ್ತಾನೆ ಇದೆ. ಅಕ್ರಮ ನೇಮಕಾತಿ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳು ಹಲವರನ್ನು ಬಂಧಿಸಿದ್ದಾರೆ.  ಹಗರಣದ ಹಿಂದೆ ಮಾಜಿ ಸಿಎಂ ಮಗನ ಕೈವಾಡವಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ನಾಯಕರು ಆರೋಪ ಮಾಡುತ್ತಲೇ ಇದ್ದಾರೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದ್ದು, ಈಗ ಅದು ಕಾಂಗ್ರೆಸ್ ಗೆ ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ  ಅಸ್ತ್ರವನ್ನಾಗಿಟ್ಟುಕೊಂಡು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಹರೆಕೆಯ ಕುರಿ. ಈ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್, ಯತ್ನಾಳ್ ಆರೋಪ ಗಮನಿಸಿದರೆ ಪಿಎಸ್‍ಐ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಹರಕೆಯ ಕುರಿಯಂತೆ ಭಾಸವಾಗುತ್ತಿದೆ. ಈ ಹಗರಣದ ನಿಜವಾದ ಕಿಂಗ್‍ಪಿನ್ ಮಾಜಿ ಮುಖ್ಯಮಂತ್ರಿಯ ಮಗ. ಹಾಗಾದರೆ ಅದು ಯಾರು ಎಂಬುದೇ ಯಕ್ಷಪ್ರಶ್ನೆ? ಈ ಸತ್ಯ ಜನರಿಗೆ ಗೊತ್ತಾಗಬೇಕು. ಆ ಸತ್ಯ ತಿಳಿಯಬೇಕಾದರೆ ಒಂದೋ ನ್ಯಾಯಾಂಗ ತನಿಖೆಯಾಗಬೇಕು, ಇಲ್ಲವೆ ಸಿಬಿಐ (CBI) ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ನೇರ ಕೈವಾಡವಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಈ ಹಗರಣದ ತನಿಖೆಯನ್ನು ಈಗಾಗಲೇ ಸಿಐಡಿ ನಡೆಸುತ್ತಿದೆ. ಯತ್ನಾಳ್‍ರ ಈ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಈ ಆರೋಪ ಮಾಡಿದ್ದಾರೆ. ಆದರೂ ಸಿಐಡಿ ಅಧಿಕಾರಿಗಳು ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ.? ಎಂದು ಪ್ರಶ್ನಿಸಿದ್ದಾರೆ.

ಕಳೆದ ಅಧಿವೇಶನದಲ್ಲಿ ಪಿಎಸ್‍ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಾವು ಒತ್ತಾಯಿಸಿದ್ದೆವು. ಆದರೆ ಯತ್ನಾಳ್ ಈ ಹಗರಣದ ಕಿಂಗ್‍ಪಿನ್ ಎಕ್ಸ್ ಸಿಎಂ ಪುತ್ರ ಎಂದಿದ್ದಾರೆ. ಜೊತೆಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಮ್ಮ ಒತ್ತಾಯಕ್ಕಂತೂ ಈ ಸರ್ಕಾರ ಒಪ್ಪಲಿಲ್ಲ. ಕೊನೆಯ ಪಕ್ಷ ಯತ್ನಾಳ್ ಒತ್ತಾಯಕ್ಕಾದರೂ ಬೆಲೆ ಕೊಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಪಿಎಸ್‍ಐ ಹಗರಣ ಈ ಸರ್ಕಾರದ ಅತಿ ದೊಡ್ಡ ಕಳಂಕ. ಸಿಐಡಿ ಮೂಲಕ ಕಾಟಾಚಾರದ ತನಿಖೆ ಮಾಡಿಸಿ ತನ್ನ ಮೇಲಿರುವ ಕಳಂಕ ತೊಳೆದುಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ. ಆದರೆ ಈ ಸರ್ಕಾರದ ಭಾಗವಾಗಿರುವವರೇ ಈ ಹಗರಣದಲ್ಲಿ ಪ್ರಭಾವಿಗಳ ಭಾಗಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರ ಪ್ರಾಮಾಣಿಕವಾಗಿದ್ದರೆ ಈಗಲಾದರೂ ಪಾರದರ್ಶಕ ತನಿಖೆ ನಡೆಸಲಿ ಎಂದು ಟ್ವೀಟ್ ಮೂಲಕ ಗುಂಡೂರಾವ್​ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *