ರಾಷ್ಟ್ರಪತಿ ಚುನಾವಣೆ ಕುರಿತ ಪ್ರತಿಪಕ್ಷಗಳ ಸಭೆಯಲ್ಲಿ ಸಿಪಿಐ(ಎಂ) ಭಾಗವಹಿಸುತ್ತದೆ – ಮಮತಾ ಬ್ಯಾನರ್ಜಿಗೆ ಯೆಚುರಿ ಪತ್ರ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು  ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಜೂನ್‍ 15 ರಂದು ಏರ್ಪಡಿಸಿರುವ ಪ್ರತಿಪಕ್ಷಗಳ ಮುಖಂಡರ ಸಭೆಯಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಭಾಗವಹಿಸುತ್ತದೆ,  ರಾಜ್ಯಸಭೆಯಲ್ಲಿ ಪಕ್ಷದ ಗುಂಪಿನ ನಾಯಕರಾದ ಎಳಮಾರಮ್ ಕರೀಂ  ಪಕ್ಷವನ್ನು ಪ್ರತಿನಿಧಿಸುತ್ತಾರೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಮುಖ್ಯಮಂತ್ರಿಗಳಿಗೆ ಬರೆದಿರುವ  ಪತ್ರದಲ್ಲಿ ತಿಳಿಸಿದ್ದಾರೆ.

ಜೂನ್ 15, 2022 ರಂದು ಮಧ್ಯಾಹ್ನ 3.00 ಗಂಟೆಗೆ ವಿರೋಧ ಪಕ್ಷಗಳ ಸಭೆಯ ಕುರಿತು ತಿಳಿಸುವ  ಪತ್ರ ಮೂರು ದಿನಗಳ ಮೊದಲಷ್ಟೇ ಕೈಸೇರಿದೆ. “ವಿರೋಧ ಪಕ್ಷಗಳ ಇಂತಹ ಸಭೆಗಳು ಯಾವಾಗಲೂ, ಸೇರಲು ಬಯಸುವವರ ಗರಿಷ್ಠ ಭಾಗವಹಿಸುವಿಕೆ ಇರುವಂತೆ ಮಾಡಲು ಒಂದು ಪೂರ್ವಭಾವಿ ಪರಸ್ಪರ ಸಮಾಲೋಚನೆಯ ವಿಧಾನವನ್ನು ಅನುಸರಿಸುತ್ತವೆ. ಆದರೆ, ಈ ಸಂದರ್ಭದಲ್ಲಿ, ದಿನಾಂಕ, ಸಮಯ, ಸ್ಥಳ ಮತ್ತು ಕಾರ್ಯಸೂಚಿಯನ್ನು ತಿಳಿಸುವ ಒಂದು ಏಕಪಕ್ಷೀಯ ಪತ್ರವನ್ನು ನಾವು ಪಡೆದಿದ್ದೇವೆ” ಎನ್ನುತ್ತ,  “ಪ್ರತಿಪಕ್ಷದ ಧ್ವನಿಗಳ ಒಂದು ಫಲಪ್ರದ ಸಂಗಮವು ಈ ಸಮಯದ ಅಗತ್ಯವಾಗಿದೆ” ಎಂಬುದು ನಿಜವಾದರೂ,. ಪರಸ್ಪರ ಸಮಾಲೋಚನೆ ನಡೆಸಲು ಮತ್ತು ಇಂತಹ ಸಭೆಗೆ ಪಕ್ಷದ ಮುಖಂಡರು ಹಾಜರಾಗಲು ಸಾಧ್ಯವಾಗುವಂತೆ ತಾವು ಅದಕ್ಕೆ ಮೊದಲು ಒಪ್ಪಿಕೊಂಡ  ಕಾರ್ಯಕ್ರಮಗಳನ್ನು ಮರುಹೊಂದಿಸಲು ಸಾಕಷ್ಟು ಸಮಯ ಕೊಟ್ಟಿದ್ದರೆ ಇದನ್ನು ಇನ್ನೂ ಉತ್ತಮವಾಗಿ ಸಾಧಿಸಬಹುದಿತ್ತು ಎಂಬ ಅಭಿಪ್ರಾಯವನ್ನು  ಸೀತಾರಾಂ ಯೆಚುರಿ ತಮ್ಮ ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ.

ಭಾರತೀಯ ಸಂವಿಧಾನ ಮತ್ತು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪವನ್ನು ರಕ್ಷಿಸಲು ಎಲ್ಲಾ ಜಾತ್ಯತೀತ ಶಕ್ತಿಗಳ ಅತ್ಯಂತ ಹೆಚ್ಚಿನ ಪ್ರಮಾಣದ ಅಣಿನೆರಿಕೆಯನ್ನು ಬಲಪಡಿಸಬೇಕು ಎಂದು ಸಿಪಿಐ(ಎಂ) ಸತತವಾಗಿ ಪ್ರತಿಪಾದಿಸಿಕೊಂಡು ಬಂದಿದೆ. ಇದಕ್ಕೆ ಅನುಗುಣವಾಗಿ, “ಮುಂಬರುವ ಭಾರತದ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಮತ್ತು ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ ಸಂರಕ್ಷಕರಾಗಿದ್ದಾರೆ ಎಂಬ ಅಂಶವನ್ನು ಪರಿಗಣಿಸಿ, ಈ ಸಭೆಯಲ್ಲಿ ಸಿಪಿಐ(ಎಂ) ಅನ್ನು ರಾಜ್ಯಸಭೆಯಲ್ಲಿ ನಮ್ಮ ಗುಂಪಿನ ನಾಯಕರಾದ ಶ್ರೀ ಎಳಮಾರಮ್ ಕರೀಂ ಪ್ರನಿಧಿಸುತ್ತಾರೆ” ಎಂದು ಯೆಚುರಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *