ಮುಸ್ಲಿಂ ಯುವಕನನ್ನು ಮನಬಂದಂತೆ ಥಳಿಸಿ, ಎಂಜಲು ನೆಕ್ಕುವಂತೆ ಬಲವಂತ ಮಾಡಿದ ಬಿಜೆಪಿ ಕಾರ್ಯಕರ್ತರು

ಧನ್‌ಬಾದ್‌ : ಬಿಜೆಪಿ ಕಾರ್ಯಕರ್ತರು ಸೇರಿ ಯುವಕನಿಗೆ ಮನಬಂದಂತೆ ಥಳಿಸಿ, ಉಗುಳನ್ನು ನೆಕ್ಕುವಂತೆ ಪೀಡಿಸಿದ ಘಟನೆ ಜಾರ್ಖಂಡ್​​ದ ಧನ್​ಬಾದ್​​ ಜಿಲ್ಲೆಯಲ್ಲಿ ನಡೆದಿದೆ.

ಪಂಜಾಬ್​​ನಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪವಾಗಿದ್ದನ್ನು ವಿರೋಧಿಸಿ ಧನ್​ಬಾದ್​ ಜಿಲ್ಲೆಯ ಗಾಂಧಿ ಚೌಕದ ಬಳಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿ ಹಾದುಹೋದವನೊಬ್ಬ ಪ್ರಧಾನಿ ಮೋದಿ ಮತ್ತು ಬಿಜೆಪಿ ಜಾರ್ಖಂಡ್ ಮುಖ್ಯಸ್ಥ ದೀಪಕ್​ ಪ್ರಕಾಶ್​ ವಿರುದ್ಧ ಅಸಂಸದೀಯ, ಅವಹೇಳನಕಾರಿ ಮಾತುಗಳನ್ನಾಡಿದ್ದಾನೆ. ಇದೇ ಕಾರಣಕ್ಕೆ ಸಿಟ್ಟಾದ ಬಿಜೆಪಿ ಕಾರ್ಯಕರ್ತರು ಆತನನ್ನು ಥಳಿಸಿದ್ದಾರೆ. ಅಷ್ಟೇ ಅಲ್ಲ ಜೈ ಶ್ರೀರಾಮ್​ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಜೆಪಿ ಸಂಸದ ಪಿ.ಎನ್​.ಸಿಂಗ್​ ಮತ್ತು ಬಿಜೆಪಿ ಎಂಎಲ್​ಎ ರಾಜ್ ಸಿನ್ಹಾ ಸಮ್ಮುಖದಲ್ಲಿಯೇ ಆ ಯುವಕನಿಗೆ ಥಳಿಸಲಾಗಿದೆ. ಥಳಿಸಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಬಿಜೆಪಿ ಕಾರ್ಯಕರ್ತರು ಥಳಿಸುತ್ತಿದ್ದಾಗ ಅಲ್ಲಿಯೇ ಇದ್ದ ಟ್ರಾಫಿಕ್​ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿದ್ದರು ಎಂದು ಹೇಳಲಾಗಿದ್ದು, ಆತನಿಗೆ ಹೊಡೆದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದನ್ನು ನೋಡಿದ ಜಾರ್ಖಂಡ ಮುಖ್ಯಮಂತ್ರಿ ಹೇಮಂತ್​ ಸೊರೆನ್​ ಕೂಡ ಟ್ವೀಟ್ ಮಾಡಿದ್ದಾರೆ. ವಿಡಿಯೋವನ್ನು ಶೇರ್ ಮಾಡಿಕೊಂಡು, ಇಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಹಾಗೇ, ಧನ್​ಬಾದ್ ಜಿಲ್ಲಾಧಿಕಾರಿ, ಧನ್​ಬಾದ್ ಪೊಲೀಸ್ ಮತ್ತು ಜಾರ್ಖಂಡ ಪೊಲೀಸ್ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಾರೆ. ಜನರು ಶಾಂತಿಯುತವಾಗಿ ಬದುಕುವ ಈ ಜಾರ್ಖಂಡ್ ರಾಜ್ಯದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಅದರಲ್ಲೂ ಕೋಮು ಸೌಹಾರ್ದತೆ ಕದಡುವ ಯಾರೇ ಆದರೂ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬಿಜೆಪಿ ಶಾಸಕನ ಕೆನ್ನೆಗೆ ಬಾರಿಸಿದ ರೈತ : ಕಾರಣವೇನು ಗೊತ್ತಾ?!

ವೈರಲ್ ಆದ ವಿಡಿಯೋ ಆಧಾರದ ಮೇಲೆ, ಥಳಿತಕ್ಕೊಳಗಾದ ವ್ಯಕ್ತಿಯ ಸೋದರ ರೇಹನ್​ ದೂರು ನೀಡಿದ್ದಾರೆ. ಪೊಲೀಸರು ಈಗಾಗಲೇ ಇಬ್ಬರು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ನಾಲ್ವರನ್ನು ಬಂಧಿಸಿದ್ದಾರೆ. ತಪ್ಪಿತಸ್ಥರಾದ ಯಾರನ್ನೂ ಬಿಡುವುದಿಲ್ಲ ಎಂದು ಎಸಿಪಿ ಮನೋಜ್​ ಸ್ವರ್ಗೀಯರಿ ತಿಳಿಸಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕ ಸಿಪಿ ಸಿಂಗ್​ ಕೂಡ ಪ್ರತಿಕ್ರಿಯೆ ನೀಡಿದ್ದು, ನಾವೂ ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *