ಸ್ಟ್ಯಾಂಡ್‌ ಅಪ್‌ ಕಾಮಿಡಿ ಕಾರ್ಯಕ್ರಮಕ್ಕೆ ಬೆದರಿಕೆ : ಕುನಾಲ್‌ ಕಮ್ರಾ ಕಾರ್ಯಕ್ರಮ ರದ್ದು

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಬೇಕಿದ್ದ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳನ್ನು ಸಂಘಟಕರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಹಾಸ್ಯನಟ ಕುನಾಲ್ ಕಮ್ರಾ ಬುಧವಾರ ಹೇಳಿದ್ದಾರೆ.

ಗುಜರಾತ್ ಮೂಲದ ಮುನಾವರ್ ಫರುಕಿ ನಂತರ ಕಳೆದ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ತನ್ನ ಪ್ರದರ್ಶನವನ್ನು ರದ್ದುಪಡಿಸಿದ ಎರಡನೇ ಹಾಸ್ಯನಟ ಕಮ್ರಾ. ಮೂಲಗಳ ಪ್ರಕಾರ, ಬೆಂಗಳೂರಿನ ಜೆಪಿ ನಗರ ಪೊಲೀಸ್ ಠಾಣೆಯು ಕಮ್ರಾ ಅವರ ಪ್ರದರ್ಶನ ನಡೆಯಲಿರುವ ಆರ್ಟ್ ಖೋಜ್ ಮಾಲೀಕರಿಗೆ ಸಮನ್ಸ್ ನೀಡಿತ್ತು. ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.

“ಎರಡು ಕಾರಣಗಳಿಗಾಗಿ” ರದ್ದುಗೊಳಿಸಲಾಗಿದೆ ಎಂದು ಕಮ್ರಾ ಟ್ವೀಟ್‌ ಮಾಡಿದ್ದಾರೆ. ಮೊದಲನೆಯದಾಗಿ, ಹೆಚ್ಚು ಜನರು ಆಸೀನರಾಗಬಹುದಾದ ಸ್ಥಳದಲ್ಲಿ 45 ಜನರು ಆಸೀನರಾಗಲು ನಮಗೆ ವಿಶೇಷ ಅನುಮತಿಗಳು ದೊರಕಿಲ್ಲ. ಎರಡನೆಯದಾಗಿ, ನಾನು ಅಲ್ಲಿ ಕಾರ್ಯಕ್ರಮ ನೀಡಿದರೆ ಸ್ಥಳವನ್ನೇ ಮುಚ್ಚಲಾಗುವುದು ಎಂದು ಬೆದರಿಕೆಯೊಡ್ಡಲಾಗಿದೆ. ಇದು ಕೂಡ ಕೋವಿಡ್ ಮಾರ್ಗಸೂಚಿಗಳು ಮತ್ತು ಹೊಸ ನಿಯಮಗಳ ಭಾಗವಾಗಿರಬೇಕು ಎಂದು ನಾನಂದುಕೊಂಡಿದ್ದೇನೆ. ನನ್ನನ್ನು ಕೂಡ ವೈರಾಣುವಿನ ಒಂದು ರೂಪಾಂತರಿ ಎಂದು ತಿಳಿಯಲಾಗಿದೆ ಎಂದೆನಿಸುತ್ತದೆ,” ಎಂದು ಕಾಮ್ರಾ ಬರೆದಿದ್ದಾರೆ.

ಇದನ್ನೂ ಓದಿ : ಮುನಾವರ್ ಫರೂಕಿ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ

“ಫಾರೂಕಿಗೆ ಕಾಮಿಡಿ ತೊರೆಯುವಂತಾದ ಸನ್ನಿವೇಶದಲ್ಲಿ ಕಾಮ್ರಾ ಒಬ್ಬ ಹೇಗೆ ಪ್ರದರ್ಶನ ನೀಡಬಹುದು ಎಂದು ಚಿಂತಿಸುತ್ತಿರುವವರಿಗೆ ಒಂದು ಸಮಾಧಾನದ ವಿಷಯವೆಂದರೆ ಆಡಳಿತ ವರ್ಗ ಈ ರೀತಿ ದಮನಕಾರಿ ನೀತಿಯಲ್ಲೂ ಸಮಾನತೆ ಪ್ರದರ್ಶಿಸಿದೆ. ಈ ರೀತಿ ಸಮಾನ ದಮನಿಸುವಿಕೆ ಹಾದಿಯಲ್ಲಿ ನಾವು ಮುಂದುವರಿದರೆ ಮುಂದೆ ಸಮಾನ ಸ್ವಾತಂತ್ರ್ಯದ ಹಂತಕ್ಕೆ ‘ಕ್ಲೈಮೇಟ್ ಚೇಂಜ್’ ನಂತರದ ಯುಗದಲ್ಲಿ ನಾವು ಪ್ರವೇಶಿಸಬಹುದು,” ಎಂದು ಅವರು ಬರೆದಿದ್ದಾರೆ.

ಒಂದು ಶೋ ರದ್ದುಗೊಳಿಸಲು ಏನು ಮಾಡಬೇಕೆಂಬುದನ್ನು ವಿಡಂಬನಾತ್ಮಕವಾಗಿ ಬಣ್ಣಿಸಿರುವ ಕಾಮ್ರ “ಹಿಂಸೆಯುಂಟಾಗಬಹುದೆಂದು ಪೊಲೀಸರಿಗೆ ತಿಳಿಸಿ” ಹಾಗೂ “ನಿಮ್ಮ ವಿಜಯ ಮತ್ತು ಏಕತೆಯನ್ನು ತೋರಿಸಲು ಮೀಮ್ಸ್ ಜತೆಗೆ ಸಿದ್ಧರಾಗಿ,” ಎಂದು ಬರೆದಿದ್ದಾರೆ.

“ಯಾವುದೇ ಕಲಾವಿದನ ಕಲೆ ನಿಮಗೆ ಇಷ್ಟವಾಗದೇ ಇದ್ದರೆ ಇದೇ ಸೂತ್ರವನ್ನು ಅನುಸರಿಸಬಹುದು, ಜತೆಗೆ ನಿಮ್ಮನ್ನು ವ್ಯಸ್ತರಾಗಿರಿಸಲು ಹಾಗೂ ಜೀವನವನ್ನು ಉತ್ಸಾಹಭರಿತವಾಗಿಸಲು ಇದನ್ನು ಬಳಸಬಹುದು,” ಎಂದೂ ಅವರು ಬರೆದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *