ಕೃಷಿಕರ ಆತಂಕಗಳನ್ನು ನಿವಾರಿಸಿ

ನೂತನ ಕೃಷಿ ಕಾಯಿದೆಗಳ ರದ್ದತಿಗೆ ಆಗ್ರಹಿಸಿ ದಿಲ್ಲಿಗೆ ಬಂದು ಸೇರಿರುವ ದೇಶದ ನಾನಾ ಕಡೆಗಳ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದೆ. ಇದುವರೆಗೆ ನಡೆದ ಮಾತುಕತೆಯಲ್ಲಿ ಸರಕಾರ ಮುಂದಿಟ್ಟಿರುವ ಪ್ರಸ್ತಾವವನ್ನು ನಿರಾಕರಿಸಿದ ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ.

ನೂತನ ಕೃಷಿ ಕಾಯಿದೆಗಳು ರೈತ ವಿರೋಧಿ ಅಲ್ಲ; ಅವುಗಳ ಪರಿಶೀಲನೆಗೆ ಸಮಿತಿ ರಚಿಸುತ್ತೇವೆ ಎನ್ನುವ ಸರಕಾರದ ಸಮಜಾಯಿಷಿ ರೈತರಿಗೆ ಸಮಾಧಾನ ತಂದಿಲ್ಲ. ‘ದಿಲ್ಲಿಚಲೋ’ ಜಾಥಾದಲ್ಲಿ ಬಂದಿರುವ ಸಾವಿರಾರು ರೈತರು ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

ಸರಕಾರ ಈ ರೈತ ಹೋರಾಟವನ್ನು ಹಗುರವಾಗಿ ಪರಿಗಣಿಸುವಂತೆಯೇ ಇಲ್ಲ. ಯಾಕೆಂದರೆ ಇದು ಯಾವುದೋ ಒಂದು ಪಕ್ಷದ ವತಿಯಿಂದ ಪ್ರಾಯೋಜಿತವಾಗಿ ನಡೆಯುತ್ತಿರುವ ಹೋರಾಟವಲ್ಲ. ರೈತ ಸಂಘಟನೆಗಳೇ ಸೇರಿಕೊಂಡು ನಡೆಸುತ್ತಿರುವ ಚಳವಳಿಯಿದು. ಜನಪರ ರಾಜಕಾರಣದ ಗೈರುಹಾಜರಿಯ ಕಾಲದಲ್ಲಿ ಸೃಷ್ಟಿಯಾಗಿರುವ ಈ ಚಳವಳಿ, ದೊಡ್ಡದೊಂದು ಕಾಳ್ಗಿಚ್ಚಾಗಿ ವ್ಯಾಪಿಸುವ ಎಲ್ಲಲಕ್ಷಣಗಳನ್ನು ತೋರಿಸುತ್ತಿದೆ. ರೈತರನ್ನು ಕೆಣಕಿದವರು ಯಾರೂ ಅಧಿಕಾರದಲ್ಲಿಉಳಿದಿಲ್ಲ. ಅನ್ನದಾತ ಸಿಟ್ಟಿಗೆದ್ದರೆ ಶ್ರೀಮಂತ ಉಣ್ಣುವ ತಟ್ಟೆಯಲ್ಲೂ ಕಲ್ಲು ಕಾಣಿಸಿಕೊಳ್ಳುತ್ತದೆ.

ಕೃಷಿ ಕ್ಷೇತ್ರ ನಿಜಕ್ಕೂ ಬಸವಳಿದಿದೆ. ಸರಕಾರದ ಬೆಂಬಲ ತನ್ನ ಜೊತೆಗಿರಲಿ ಎಂದು ಅದು ಬಯಸುತ್ತದೆ. ಆದರೆ ನೂತನ ಕೃಷಿ ಕಾಯಿದೆಗಳ ತಮ್ಮ ಶವಪೆಟ್ಟಿಗೆಗೆ ಹೊಡೆಯುತ್ತಿರುವ ಕೊನೆಯ ಮೊಳೆಗಳಂತೆ ರೈತರಿಗೆ ಗೋಚರಿಸಿರುವುದರಿಂದ ರೈತರು ವ್ಯಾಪಕವಾಗಿ ಸಿಡಿದೆದ್ದಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಂದಲೂ ರೈತರು ಆಗಮಿಸಿದ್ದಾರೆ. ಹೊಸ ಕಾಯಿದೆಗಳು ಬೇಲಿಯೇ ಎದ್ದು ಹೊಲ ಮೇದಂತಿವೆ; ಕೃಷಿ ಕ್ಷೇತ್ರವನ್ನು ಖಾಸಗಿಯವರಿಗೆ ಕೈಗೆ ತಟ್ಟೆಯಲ್ಲಿಟ್ಟು ಒಪ್ಪಿಸಿದಂತಾಗಲಿದೆ; ಎಪಿಎಂಸಿ ವ್ಯವಸ್ಥೆ ಹಾಗೂ ಬೆಂಬಲ ಬೆಲೆ ಕ್ರಮಗಳನ್ನು ಇವು ನಾಶ ಮಾಡಲಿವೆ ಎಂಬ ಸಹಜ ಆತಂಕ ಕೃಷಿಕರಲ್ಲಿದೆ. ಇವೆಲ್ಲವನ್ನೂ ಸರಕಾರ ಮುಕ್ತ ಮನಸ್ಸಿನಿಂದ ಒಪ್ಪಿ, ರೈತರ ಜೊತೆಗೆ ಸಂಧಾನ ನಡೆಸಿ, ಅವರನ್ನು ಒಲಿಸುವ, ಕೃಷಿ ಕ್ಷೇತ್ರಕ್ಕೆ ಬಾಧಕವಾಗದ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾದ ಕಾಲ ನಿಕಟವಾಗಿದೆ.

ಆದರೆ ಚಳವಳಿಯನ್ನು ಹಗುರವಾಗಿ, ಲಘುವಾಗಿ ಕಾಣುವುದು ನಡೆದಿದೆ. ಆಳುವ ಪಕ್ಷದ ಪರವಾದ ಅನೇಕರು, ಚಳವಳಿಯನ್ನು ಲೇವಡಿ ಮಾಡುವ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು, ಚಳವಳಿ ನಿರತರ ವ್ಯಕ್ತಿತ್ವದ ತೇಜೋವಧೆ ಮಾಡುವುದು, ರೈತರನ್ನು ಕ್ರಿಮಿನಲ್‌ಗಳಂತೆ ಕಾಣುವುದು, ಪ್ರತಿಭಟಿಸಿದವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸುವುದು ನಡೆಸಿದ್ದಾರೆ. ಇದು ಸರಿಯಲ್ಲ. ರೈತರು ನ್ಯಾಯ ಕೇಳಿ ರಾಜಧಾನಿಗೆ ಆಗಮಿಸಿದ್ದಾರೆಯೇ ಹೊರತು ದಾಳಿ ಮಾಡಲು ಅಲ್ಲ. ಆಳುವವರ ಬಳಿಯೇ ಅವರು ತಮ್ಮ ಅಳಲನ್ನು ಹೇಳಿಕೊಳ್ಳಬೇಕಲ್ಲದೆ ಇನ್ನೊಬ್ಬರ ಬಳಿಯಲ್ಲ. ಕಾಯಿದೆಗಳನ್ನು ಬದಲಾಯಿಸಲು ಸಾಧ್ಯವಿದೆ.

ಬಹುರಾಷ್ಟ್ರೀಯ ಕಂಪನಿಗಳಿಂದ ಶೋಷಣೆಗೆ ಒಳಗಾಗಿರುವ ರೈತ
ಹೀಗಾಗಿ ರಾಜ್ಯಪಟ್ಟಿಯಲ್ಲಿರುವ ಕೃಷಿಯ ವಿಚಾರವನ್ನು ಆಯಾ ರಾಜ್ಯಗಳಿಗೇ ಬಿಟ್ಟು ಮಾರ್ಗದರ್ಶನ ನೀಡುವುದೂ ಸಾಧ್ಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಂದ ಈಗಾಗಲೇ ಕೃಷಿ ಒಳಸುರಿಗಳ ವಿಚಾರದಲ್ಲಿ ಸಾಕಷ್ಟು ಶೋಷಣೆಗೆ ಒಳಗಾಗಿರುವ ರೈತ, ಮುಂದೆ ಉತ್ಪನ್ನಗಳ ಬೆಲೆಯನ್ನೂ ಖಾಸಗಿಯವರೇ ನಿರ್ಧರಿಸುವಂತಾದರೆ ಎಂಬ ಭೀತಿಯನ್ನು ಹೊಂದಿದ್ದಾನೆ. ಕೃಷಿ ಕ್ಷೇತ್ರ ರೋಗಿಷ್ಟವಾಗಿದೆ. ಅದನ್ನು ಪುನಶ್ಚೇತನಗೊಳಿಸಿ ರೈತರಲ್ಲಿಉಲ್ಲಾಸ ತುಂಬುವ ಯಾವುದೇ ಉಪಕ್ರಮವನ್ನು ಕೇಂದ್ರವಾಗಲೀ- ರಾಜ್ಯವಾಗಲೀ ಪ್ರಕಟಿಸುತ್ತಿಲ್ಲ. ರೈತವಿಚಾರವನ್ನು ಲಾಭ- ನಷ್ಟದ ದೃಷ್ಟಿಯಿಂದ ನೋಡದೆ ಮಾನವೀಯ ನೆಲೆಯಿಂದಲೂ ರಚನಾತ್ಮಕವಾದ ಕಾರ್ಯಕ್ರಮಗಳ ಮೂಲಕವೂ ನೋಡಬೇಕು. ಅಧಿಕಾರಸ್ಥರು ಕಾಯಿದೆಗಳಿಂದ ಕೃಷಿವಲಯದಲ್ಲಿಆಗುವ ದೂರಗಾಮಿ ಪರಿಣಾಮಗಳನ್ನು ಗಮನಿಸಿ, ರೈತರ ಆತಂಕಗಳಿಗೆ ಕಿವಿಗೊಟ್ಟು ಈ ದುಗುಡದಿಂದ ದೇಶವನ್ನು ಬಿಡಿಸಬೇಕಿದೆ.

Donate Janashakthi Media

Leave a Reply

Your email address will not be published. Required fields are marked *