ಚೆನ್ನೈ: ಸ್ಥಾನ ಹಂಚಿಕೆ ಬಗ್ಗೆ ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ಆರಂಭಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, ಆಡಳಿತಾರೂಢ ಡಿಎಂಕೆ ಮೈತ್ರಿ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸಮಿತಿ ರಚಿಸಲಾಗುವುದು ಎಂದು ತಿಳಿಸಿದೆ.
ವಿಧಾನಸಭಾ ಅಧಿವೇಶನ ಮುಗಿದ ನಂತರ ಫೆಬ್ರುವರಿ 22ರಿಂದ ಮೈತ್ರಿ ಪಕ್ಷಗಳ ಜೊತೆ ಚರ್ಚೆ ಆರಂಭವಾಗಲಿದೆ. ಇದಕ್ಕಾಗಿ ಸಮಿತಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಡಿಎಂಕೆ ತಿಳಿಸಿದೆ. ಡಿಎಂಕೆ ಪಕ್ಷದ ವರಿಷ್ಠ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶೀಘ್ರದಲ್ಲೇ ಈ ಸಮಿತಿಯನ್ನು ರಚಿಸಲಿದ್ದಾರೆ ಎಂದು ಡಿಎಂಕೆ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಹಾವೇರಿ| ಫೆ.14ರಂದು ಸಮಾವೇಶದಲ್ಲಿ 1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ: ಕೃಷ್ಣ ಬೈರೇಗೌಡ
ಡಿಸೆಂಬರ್ 2025ರ ಆರಂಭದಲ್ಲಿ ನಾವು ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ಆರಂಭಿಸಿದ್ದರೂ ಡಿಎಂಕೆ ತನ್ನ ಸಮಿತಿಯನ್ನು ಇನ್ನೂ ರಚಿಸಿಲ್ಲ ಎಂದು ದೂರಿದ್ದರು. ಡಿಎಂಕೆ ಸ್ಥಾನ ಹಂಚಿಕೆ ಸಂಬಂಧ ಸಮಿತಿ ರಚಿಸಲು ವಿಳಂಬ ಮಾಡುತ್ತಿರುವುದರ ಬಗ್ಗೆ ತಮಿಳುನಾಡು ಮತ್ತು ಪುದುಚೇರಿ ಎಐಸಿಸಿ ಮುಖಂಡ ಗಿರೀಶ್ ಚೋದಂಕರ್ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದರು.
ಡಿಎಂಕೆ ತಕ್ಷಣ ಮಾತುಕತೆ ಆರಂಭಿಸಿ, ಎಷ್ಟು ಸ್ಥಾನಗಳನ್ನು ನಮಗೆ ಕೊಡಬೇಕು ಮತ್ತು ಯಾವ ಯಾವ ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಚೋದಂಕರ್ ಹೇಳಿದ್ದಾರೆ
ಕೊನೆಯ ಕ್ಷಣದಲ್ಲಿ ಸೀಟುಗಳನ್ನು ಅಂತಿಮಗೊಳಿಸುವುದು ಹಾಗೂ ಕ್ಷೇತ್ರಗಳನ್ನು ಗುರುತಿಸುವುದು ಚುನಾವಣಾ ಸಿದ್ಧತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೆಲ್ವಪೆರುಂತಗೈ ಹೇಳಿದ್ದಾರೆ.
ಇದನ್ನೂ ನೋಡಿ : ಯುಡಿಆರ್ನಲ್ಲಿ ಹೂತ ಸತ್ಯಗಳು, ಎಫ್ಐಆರ್ನಲ್ಲಿ ಹೊರಬರಲಿವೆಯೇ? Janashakthi Media
