ಬೆಂಗಳೂರು: ಆಗಸ್ಟ್ 15ರಂದು ಭಾರತವು ಬ್ರಿಟಿಷರ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಂಡ ಶುಭದಿನ. ದೇಶದ ನಾಳೆಗಳನ್ನು ರೂಪಿಸುವ ಸಲುವಾಗಿ ತಮ್ಮ ಇಂದಿನ ಬದುಕನ್ನೇ ತ್ಯಾಗ ಮಾಡಿದ ಆ ಎಲ್ಲ ಮಹನೀಯರನ್ನು ನಾವು ಇಂದು ಮನದುಂಬಿ ಸ್ಮರಿಸೋಣ ಎಂದು ರಾಜ್ಯದ ಜನರತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ಆಗಸ್ಟ್ 15ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಆಯೋಜಿಸಿರುವ ಅದ್ಧೂರಿ 79ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದಕ್ಕು ಮುನ್ನ ನಾಡಿನ ಜನರಿಗೆ ಶುಭಕೋರಿದರು.
ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಅಜಾದ್ ಮುಂತಾದ ಕೆಚ್ಚೆದೆಯ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ನೇತೃತ್ವದಲ್ಲಿ ದೇಶಾದ್ಯಂತ ಲಕ್ಷಾಂತರ ಹೋರಾಟಗಾರರು ತಮ್ಮ ತ್ಯಾಗ, ಬಲಿದಾನದ ಮೂಲಕ 1947ರ ಆಗಸ್ಟ್ 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು.
ಇದನ್ನೂ ಓದಿ: ಜಸ್ಟೀಸ್ ನಾಗಮೋಹನ್ ದಾಸ್ ವರದಿಯಲ್ಲಿ ತಾಂತ್ರಿಕವಾಗಿ ಸಮಸ್ಯೆ ಇದ್ದರೂ ತಾತ್ವಿಕವಾಗಿ ಸರಿ ಇದೆ: ಕೋಟಿಗಾನಹಳ್ಳಿ ರಾಮಯ್ಯ
ಭಾರತದ ಸ್ವಾತಂತ್ರ್ಯವು ಅಖಂಡವಾಗಿಯೂ, ಸಮಗ್ರವಾಗಿಯೂ ಸದಾಕಾಲ ನಳನಳಿಸಬೇಕೆಂದರೆ ನಮ್ಮ ಸಂವಿಧಾನದ ಮೂಲ ತತ್ವಗಳಾದ ಸಾರ್ವಭೌಮತೆ, ಪ್ರಜಾಸತ್ತಾತ್ಮತೆ, ಸಮಾಜವಾದ, ಜಾತ್ಯತೀತತೆ, ಸ್ವತಂತ್ರ ನ್ಯಾಯಾಂಗ, ರಾಜ್ಯ ನಿರ್ದೇಶಕ ತತ್ವಗಳು, ಒಕ್ಕೂಟ ತತ್ವಗಳು ಇದಾವುದೂ ಒಂದಿನಿತೂ ಮುಕ್ಕಾಗದಂತೆ ಎಚ್ಚರವಹಿಸಬೇಕು.
ಭಾರತದ ಅಖಂಡತೆಯ ರಕ್ಷಣೆಯೆನ್ನುವುದು ಕೇವಲ ದೇಶದ ಗಡಿಗಳ ರಕ್ಷಣೆಗೆ ಮಾತ್ರವೇ ಸೀಮಿತವಲ್ಲ. ಬದಲಿಗೆ ದೇಶದೊಳಗಿರುವ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡುವುದಕ್ಕೂ ಅನ್ವಯಿಸುತ್ತದೆ ಎಂದು ಅವರು ತಿಳಿಸಿದರು.
ಸ್ವತಂತ್ರ ನ್ಯಾಯಾಂಗ, ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳು, ನಿರ್ಭೀತ ತನಿಖಾ ಸಂಸ್ಥೆಗಳು ಇವೆಲ್ಲವೂ ಸ್ವತಂತ್ರ ಭಾರತದ ಹೆಗ್ಗುರುತುಗಳಾಗಿವೆ. ಇವುಗಳ ಪಾವಿತ್ರ್ಯಕ್ಕೆ ಧಕ್ಕೆ ಒದಗಿದರೆ ದೇಶದ ಸ್ವಾತಂತ್ರ್ಯಕ್ಕೇ ಧಕ್ಕೆ ಒದಗಿದಂತೆ. ಹಾಗಾಗಿ, ಯಾವುದೇ ಬೆಲೆ ತೆತ್ತಾದರೂ ಸರಿಯೇ ಇವುಗಳನ್ನು ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.
ಸ್ವಾತಂತ್ರ್ಯದ ಬೆಳಕು ನೀಡಿದ ಸಂಗೊಳ್ಳಿ ರಾಯಣ್ಣ: ಸಿಎಂ
ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಇಂದು ಹೆಚ್ಚು ವಿಸ್ತಾರವಾಗಿ ವ್ಯಾಖ್ಯಾನಿಸಿಕೊಂಡು ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಬೇಕಿದೆ. ದೇಶವನ್ನು ಬಂಧಮುಕ್ತಗೊಳಿಸುವ ಗುರಿಯ ಬೆನ್ನತ್ತಿ ಹೊರಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ನಮ್ಮೆಲ್ಲರ ಬಾಳಿಗೆ ಸ್ವಾತಂತ್ರ್ಯದ ಬೆಳಕು ನೀಡಿ ಮರೆಯಾದರೂ, ತಮ್ಮ ತ್ಯಾಗ, ಬಲಿದಾನದ ಮೂಲಕ ಇಂದಿಗೂ ನಮ್ಮ ನಡುವೆ ಜೀವಂತವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಂಗೊಳ್ಳಿ ರಾಯಣ್ಣನ ಅದಮ್ಯ ದೇಶಪ್ರೇಮ, ಸ್ವಾಮಿನಿಷ್ಠೆ ಮತ್ತು ಸಮರ್ಪಣಾಭಾವ ನಮ್ಮೆಲ್ಲರ ಆದರ್ಶವಾಗಲಿ.ದೇಶವಾಸಿಗಳ ಎದೆಯಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಅಪ್ರತಿಮ ದೇಶಪ್ರೇಮಿ ರಾಯಣ್ಣನ ಜನ್ಮದಿನದಂದು ನನ್ನ ಗೌರವ ನಮನಗಳು ಎಂದು ಅವರು ಪೋಸ್ಟ್ ಮಾಡಿದ್ದಾರೆ. ರಾಯಣ್ಣನ ತ್ಯಾಗ, ಬಲಿದಾನ ಸ್ಮರಿಸಿದ್ದಾರೆ.
ಇದನ್ನೂ ನೋಡಿ: ʼಒಳಮೀಸಲಾತಿಯ ಕಿಚ್ಚು ನಿಮ್ಮ ಪಕ್ಷವನ್ನು ಸುಟ್ಟು ಹಾಕುತ್ತದೆʼ, ದಲಿತ ನಾಯಕರಿಂದ ಸರಕಾರಕ್ಕೆ ಎಚ್ಚರಿಕೆJanashakthi
