ಅನೇಕ ಲಿಂಗಾಯತ ಮುಖಂಡರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ: ಡಿ.ಕೆ. ಶಿವಕುಮಾರ್

ಕಲಬುರ್ಗಿ: ಬೇರೆ ಬೇರೆ ಪಕ್ಷಗಳ ಬಹಳಷ್ಟು ಮಂದಿ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ʻʻಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಶಾಸಕರು ಇದ್ದು, ನಾಯಕತ್ವ ಗುಣ ಇರುವವರೂ ಇದ್ದಾರೆ. ಈ ಸಮುದಾಯದ ಅನೇಕ ನಾಯಕರು ಕಾಂಗ್ರೆಸ್‌ ಪಕ್ಷ ಸೇರಲು ಮುಂದೆ ಬಂದಿದ್ದಾರೆʼʼ ಎಂದು ಹೇಳಿದರು.

ಇದನ್ನು ಓದಿ: ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್‌ ಗೆ ಸೂಚನೆ ನೀಡಿದ ರಾಹುಲ್‌ ಗಾಂಧಿ

ನಮ್ಮ ಪಕ್ಷದಲ್ಲಿಯೂ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಅವರಂತಹ ಅನೇಕ ನಾಯಕರು ಇದ್ದಾರೆ. ಕಾಂಗ್ರೆಸ್‌ ಪಕ್ಷ ಸೇರ್ಪಡೆ ಬಗ್ಗೆ ಮುಂದೆ ಕಾರ್ಯಕ್ರಮದಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು. ಈಗಲೇ ಆ ಬಗ್ಗೆ ಹೆಚ್ಚೇನು ಹೇಳುವುದಿಲ್ಲ. ಅವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

ಸಾಂಪ್ರದಾಯಿಕ ವೃತ್ತಿ ಅವಲಂಬಿತರೊಂದಿಗೆ ಸಂವಾದ

ರಾಜ್ಯದ ಹಲವು ಭಾಗದಲ್ಲಿ ಮಳೆ ಆಗುತ್ತಿದ್ದು, ರೈತರಲ್ಲಿ ಸಂತಸವಿದೆ. ಬಿಜಾಪುರ, ಬಾಗಲಕೋಟೆಯಲ್ಲಿ ಬಂಜಾರ ಸಮಾಜದ ತಾಂಡಾಗಳಿಗೆ ಪ್ರವಾಸ ಕೈಗೊಂಡಿರುವೆ. ಇದರ ಜತೆಗೆ ನೇಕಾರರು ಹಾಗೂ ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆ ಹಾಗೂ ಗೊಲ್ಲರು, ಕಾಡು ಗೊಲ್ಲರು ಸೇರಿದಂತೆ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದ ಸಮುದಾಯಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇನೆ.

ಕೋವಿಡ್ ಸಮಯದಲ್ಲಿ ಅವರಿಗೆ ಆಗಿರುವ ತೊಂದರೆಗಳ ಬಗ್ಗೆ, ಅದಕ್ಕಾಗಿ ನಾವೇನು ಮಾಡಬಹುದು? ಯಾವ ರೀತಿ ಕಾರ್ಯಕ್ರಮ ರೂಪಿಸಬಹುದು? ಅವರ ಬೇಡಿಕೆ ಏನು? ಅವರ ರಕ್ಷಣೆ ಹೇಗೆ ಮಾಡಬೇಕು ಎಂಬುದರ ಸಮಗ್ರ ವಿವರಗಳನ್ನು ತಿಳಿದುಕೊಳ್ಳಲಿದ್ದೇನೆ. ಹೀಗಾಗಿ ಅವರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಕಿವಿಯಾರೆ ಕೇಳಲು ಅವರ ಜತೆ ಖುದ್ದಾಗಿ ಸಂವಾದ, ಚರ್ಚೆ ಮಾಡಲು ಬಂದಿದ್ದೇನೆ ಎಂದು ಡಿ.ಕೆ.ಶಿವಕುಮಾರ್‌ ಆವರು ಹೇಳಿದರು.

ಇದನ್ನು ಓದಿ: ಯಡಿಯೂರಪ್ಪ ದೆಹಲಿ ಭೇಟಿ : ಹುಳಿಯೋ!! ಸಿಹಿಯೋ!!!

ಈಗಾಗಲೇ ಕರಾವಳಿ ಭಾಗದ ಮೀನುಗಾರರನ್ನು ಭೇಟಿ ಮಾಡಿದ್ದು, ಅವರ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳಲಾಗಿದೆ. ಒಬ್ಬ ಮೀನುಗಾರ 10 ಜನರಿಗೆ ಉದ್ಯೋಗ ಹಾಗೂ ಅನ್ನ ನೀಡಲು ಜೀವ ಪಣಕ್ಕಿಟ್ಟು ಶ್ರಮಿಸುತ್ತಿದ್ದಾನೆ.

ಮುಂಬರುವ ದಿನಗಳಲ್ಲಿ ಸಾಂಪ್ರದಾಯಿಕ ವೃತ್ತಿ ಅವಲಂಬಿಸಿರುವ ವಿವಿಧ ಸಮುದಾಯಗಳನ್ನು ಭೇಟಿ ಮಾಡಲಿದ್ದೇನೆ. ಇವರು ತಮ್ಮ ವೃತ್ತಿ ಉಳಿಸಿಕೊಂಡು ನಮ್ಮ ಸಮಾಜಕ್ಕೆ ಶಕ್ತಿಯಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ರೂಪಿಸಲು ಅವರ ಅಭಿಪ್ರಾಯ ಸಂಗ್ರಹಿಸಬೇಕಿದೆ.

ಕೋವಿಡ್ ನಿಂದಾಗಿ ರಾಜಕೀಯ ಸಭೆ-ಸಮಾರಂಭಗಳಿಗೆ, ಚುನಾವಣೆಗಳಿಗೆ ನಿರ್ಬಂಧಗಳಿವೆ. ಕೋವಿಡ್ ನಿಂದ ಅನೇಕ ಮಂದಿ ಸತ್ತಿದ್ದಾರೆ. ಅನೇಕರಿಗೆ ಪರಿಹಾರ ಕೊಡಿ ಎಂದು ಸರಕಾರವನ್ನು ಆಗ್ರಹಿಸಿದ್ದರೂ ಅದು ಯಾರಿಗೂ ತಲುಪಿಲ್ಲ. ಇಂತಹ ವಿಚಾರದಲ್ಲಿ ಜನರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲು ಪಕ್ಷದ ಎಲ್ಲಾ ಕಾರ್ಯಕರ್ತರು ಮುಂದಾಗಲು ತಿಳಿಸಲಾಗಿದೆ. ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದ್ದೇವೆ ಎಂದು ಸರಕಾರ ಎಲ್ಲ ಕಡೆ ಪ್ರಚಾರ ಪಡೆಯುತ್ತಿದೆ. ಆದರೆ ಎಲ್ಲೂ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿಗೆ ವಿಶೇಷ ಕಾರ್ಯಕ್ರಮ ಬೇಕು:

ಬೆಂಗಳೂರು ರಾಜ್ಯದ ಹೃದಯ ಭಾಗ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಿತ ಹಾಗೂ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಅಲ್ಲಿನ ನಾಯಕರ ಜತೆ ಚರ್ಚಿಸಿದ್ದೇವೆ. ಬೆಂಗಳೂರಿಗಾಗಿ ಪ್ರತ್ಯೇಕ ಹಾಗೂ ಆಕರ್ಷಕ ಕಾರ್ಯಕ್ರಮ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್‌ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *