ಹುಬ್ಬಳ್ಳಿ| 42,345 ಮನೆಗಳನ್ನು ಬಡವರಿಗೆ ಹಸ್ತಾಂತರ: ಯಾವ ವರ್ಗದವರಿಗೆ ಎಷ್ಟು?

ಹುಬ್ಬಳ್ಳಿ: ಜನವರಿ 24ರಂದು ರಾಜ್ಯದಲ್ಲಿ ನಿರ್ಮಿಸಿದ 42,345 ಮನೆಗಳನ್ನು ಬಡವರಿಗೆ ಹಸ್ತಾಂತರ ಮಾಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮನೆಗಳ ಹಸ್ತಾಂತರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಹಾಗಾದ್ರೆ ಯಾವ ವರ್ಗದವರಿಗೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಒಟ್ಟಿಗೆ ಇಷ್ಟು ಮನೆಗಳ ಹಸ್ತಾಂತರ ದೇಶದಲ್ಲೇ ಮೊದಲಾಗಿದೆ. ಹುಬ್ಬಳ್ಳಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಅದ್ದೂರಿ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ಶಾಸಕರು, ಜನಪ್ರತಿನಿಧಿಗಳು ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

42,345 ಮನೆಗಳ ಹಸ್ತಾಂತರ: 2016 -17 ರಲ್ಲಿ ಮಂಜೂರಾದ 1,80,253 ಮನೆಗಳ ಪೈಕಿ ಮೊದಲ ಹಂತದಲ್ಲಿ ಕಳೆದ ವರ್ಷ 36,789 ಮನೆಗಳನ್ನು ಹಸ್ತಾಂತರ ಮಾಡಲಾಗಿತ್ತು. ಇದೀಗ ಎರಡನೇ ಹಂತದಲ್ಲಿ 42,345 ಮನೆಗಳ ಹಸ್ತಾಂತರ ಮಾಡಲಾಗುವುದು. ಇನ್ನೆರಡು ತಿಂಗಳಲ್ಲಿ ಮತ್ತೆ 30,000 ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಅದಾನಿ ಕಲ್ಲಿದ್ದಲು ಯೋಜನೆಗಾಗಿ ಬುಡಕಟ್ಟು ಜನಾಂಗದವರ ಭೂಮಿ ಒತ್ತುವರಿ

ಯಾರಿಗೆ ಎಷ್ಟು ಮನೆ ವಿತರಣೆ?: 20,312 ಮನೆಗಳನ್ನು ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು. 22,003 ಮನೆಗಳನ್ನು ಇತರೆ ವರ್ಗದವರಿಗೆ ಹಂಚಿಕೆ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಹುಬ್ಬಳ್ಳಿಯಲ್ಲಿನ 1,008 ಹಾಗೂ ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಹಕ್ಕುಪತ್ರಗಳನ್ನು ಇಲ್ಲೇ ವಿತರಣೆ ಮಾಡಗುತ್ತಿದೆ. ಇದಕ್ಕಾಗಿ 5 ಕೌಂಟರ್‌ ತೆರೆಯಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ 18 ಹೆಕ್ಟೇರ್ ಪ್ರದೇಶದಲ್ಲಿ ಜರ್ಮನ್‌ ಮಾದರಿಯಲ್ಲಿ ಬೃಹತ್‌ ಪೆಂಡಾಲ್‌ ಅಳವಡಿಕೆ ಮಾಡಲಾಗಿದೆ. ಬೃಹತ್‌ ವೇದಿಕೆ, ಎಲ್‌ಇಡಿ ಅಳವಡಿಕೆ, ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಇನ್ನೂ ಕಾಂಗ್ರೆಸ್‌ ಸರ್ಕಾರ, ಮುಖಂಡರ ಬ್ಯಾನರ್‌ ಬಂಟಿಂಗ್ಸ್‌, ಪಕ್ಷದ ಬಾವುಟಗಳು ಎಲ್ಲಡೆ ರಾರಾಜಿಸುತ್ತಿವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಭಾವಚಿತ್ರವುಳ್ಳ ಆಕರ್ಷಕ ದೊಡ್ಡ ದೊಡ್ಡ ಕಟೌಟ್‌ಗಳನ್ನು ಸಹ ಅಳವಡಿಕೆ ಮಾಡಲಾಗಿದೆ.

ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಗ್ಯಾರಂಟಿಯಿಂದಾಗಿ ಹಣಕಾಸಿನ ಸಮಸ್ಯೆ ಆಗಿದ್ದರೆ, ಇಷ್ಟೊಂದು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನಗಳನ್ನು ಜನರು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮನೆ ಹಸ್ತಾಂತರ ಕಾರ್ಯಕ್ರಮ ಇಟ್ಟುಕೊಂಡಿದ್ದು, ಮನೆ ವಿತರಣೆಯಿಂದ ಬಡ ಕುಟುಂಬಗಳಿಗೆ ತುಂಬಾ ಅನುಕೂಲ ಆದಂತಾಗಲಿದೆ.

ಮನೆಗಳ ಹಸ್ತಾಂತರದಿಂದ ಆಗುವ ಲಾಭಗಳು

* ಸ್ವಂತ ಮನೆ ಕನಸು ನನಸಾಗುವುದು: ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಶಾಶ್ವತ ವಾಸಸ್ಥಾನ ದೊರೆಯುತ್ತದೆ.
* ಜೀವನಮಟ್ಟದಲ್ಲಿ ಸುಧಾರಣೆ: ಸುರಕ್ಷಿತ ಮನೆ, ಶುದ್ಧ ನೀರು, ವಿದ್ಯುತ್ ಹಾಗೂ ಮೂಲಭೂತ ಸೌಲಭ್ಯಗಳಿಂದ ಬದುಕಿನ ಗುಣಮಟ್ಟ ಹೆಚ್ಚುತ್ತದೆ.
* ಕೊಳಗೇರಿ ಜೀವನದಿಂದ ಮುಕ್ತಿ: ಆರೋಗ್ಯ ಸಮಸ್ಯೆಗಳು ಹಾಗೂ ಅನಾರೋಗ್ಯಕರ ಪರಿಸ್ಥಿತಿಯಿಂದ ಜನರು ಹೊರಬರುತ್ತಾರೆ.
* ಸಾಮಾಜಿಕ ಭದ್ರತೆ: ಸ್ವಂತ ಮನೆ ಇರುವುದರಿಂದ ಸಮಾಜದಲ್ಲಿ ಗೌರವ, ಆತ್ಮವಿಶ್ವಾಸ ಮತ್ತು ಸ್ಥಿರತೆ ಹೆಚ್ಚಾಗುತ್ತದೆ.
* ಆರ್ಥಿಕ ಸ್ಥಿರತೆ: ಬಾಡಿಗೆ ವೆಚ್ಚ ಉಳಿದು, ಕುಟುಂಬದ ಆದಾಯವನ್ನು ಇತರೆ ಅಗತ್ಯಗಳಿಗೆ ಬಳಸಿಕೊಳ್ಳಲು ಸಾಧ್ಯ ಆಗುತ್ತದೆ.
* ಮಹಿಳಾ ಸಬಲೀಕರಣ: ಮನೆ ದಾಖಲೆಗಳಲ್ಲಿ ಮಹಿಳೆಯರ ಹೆಸರಿದ್ದಲ್ಲಿ ಅವರಿಗೆ ಕಾನೂನು ಮತ್ತು ಸಾಮಾಜಿಕ ಶಕ್ತಿ ಹೆಚ್ಚಾಗುತ್ತದೆ.
* ನಗರ ಹಾಗೂ ಗ್ರಾಮೀಣ ಅಭಿವೃದ್ಧಿ
* ಸರ್ಕಾರದ ಕಲ್ಯಾಣ ಯೋಜನೆಗಳು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪುತ್ತವೆ.

ಇದನ್ನೂ ನೋಡಿ: ಕುವೆಂಪು ಸಾಹಿತ್ಯ| ಭಾವನೆಗೂ ಮೀರಿದ ವೈಚಾರಿಕ ಬಂಡಾಯ – ಡಾ.ಬಂಜಗೆರೆ ಜಯಪ್ರಕಾಶ Janashakthi Media

Donate Janashakthi Media

Leave a Reply

Your email address will not be published. Required fields are marked *