ವಯನಾಡ್‌ ದುರಂತದ ಅಗೋಚರ ಮುಖಗಳು, ಮುಖಂಡರು

ನಾಗೇಶ ಹೆಗಡೆ

“ಇದು ನಿಸರ್ಗದ ಪ್ರಕೋಪ ತಾನೆ? ಇಂಥ ಭಾರೀ ಮಳೆ ಬಿದ್ದರೆ ಗುಡ್ಡಗಳು ಕುಸಿಯುವುದು ಸಹಜ ಅಲ್ಲವೆ?”- ಹೀಗೆಂದು ವಿಜ್ಞಾನಿ ಡಾ. ಮಾಧವ ಗಾಡ್ಗೀಳರನ್ನು `ಇಂಡಿಯಾ ಟುಡೇʼ ವಾಹಿನಿಯ ರಾಜದೀಪ್‌ ಸರ್ದೇಸಾಯಿ ಕೇಳುತ್ತಾರೆ.

“ಭಾರೀ ಮಳೆ ಮತ್ತೆ ಮತ್ತೆ ಬರಲಿಕ್ಕೂ ಮನುಷ್ಯನೇ ಕಾರಣ” ಎನ್ನುತ್ತ ಗಾಡ್ಗೀಳರು ಅದಕ್ಕೂ ಒಂದು ವೈಜ್ಞಾನಿಕ ಕಾರಣವನ್ನು ಕೊಡುತ್ತಾರೆ:

“ವಾಯುಮಂಡಲದಲ್ಲಿ ದೂಳಿನ ಅಥವಾ ಹೊಗೆಯ ಸೂಕ್ಷ್ಮ ಕಣಗಳ (ʻಏರೊಸೋಲ್‌ʼ) ದಟ್ಟಣೆ ಜಾಸ್ತಿ ಇದ್ದರೆ ಅವು ದಟ್ಟ ಮಳೆಗೆ ಕಾರಣವಾಗುತ್ತವೆ. ನಾಲ್ಕು ಗಂಟೆಗಳಲ್ಲಿ ನಿಧಾನಕ್ಕೆ ತುಂತುರಾಗಿ ಬೀಳಬೇಕಿದ್ದ ಮಳೆ ದಿಢೀರೆಂದು ಅರ್ಧಗಂಟೆ, ಒಂದು ಗಂಟೆಯಲ್ಲಿ ಸುರಿಯುತ್ತದೆ. ಭಾರತವನ್ನು ʻಏರೊಸೋಲ್‌ ಕ್ಯಾಪಿಟಲ್‌ʼ ಎಂದು ಕರೆಯಲಾಗುತ್ತದೆ. ಇಲ್ಲಿನ ವಾತಾವರಣದಲ್ಲಿ ಎಲ್ಲ ಬಗೆಯ ಮಾಲಿನ್ಯ ದಟ್ಟಣಿಸಿದೆ. ಅದರಲ್ಲೂ ಗುಡ್ಡ ಪ್ರದೇಶಗಳಲ್ಲಿ ಕಲ್ಲುಗಣಿಯಿಂದ ಹೊಮ್ಮುವ ದೂಳಿನ ಸೂಕ್ಷ್ಮ ಕಣಗಳು ಹೆಚ್ಚಿನ ಪ್ರಮಾಣದ ಹಠಾತ್‌ ಮಳೆಗೆ ಕಾರಣವಾಗುತ್ತವೆ.

“ಇಲ್ಲಿನ ಸೂಕ್ಷ್ಮ ಪರಿಸರದಲ್ಲಿ ಕಲ್ಲುಗಣಿ ಆರಂಭಿಸಕೂಡದು ಎಂದು ನಮ್ಮ ವರದಿಯಲ್ಲಿ ಹೇಳಿದ್ದೇವೆ. ಆದರೆ ಭಾರೀ ಲಾಭ ಗಳಿಸುತ್ತಿರುವ ಬಹುತೇಕ ಎಲ್ಲ ಅನಧಿಕೃತ ಕ್ವಾರಿಗಳೂ ರಾಜಕೀಯ ನಾಯಕರ ಮಾಲಿಕತ್ವದ್ದೇ ಆಗಿವೆ. ಇದರಲ್ಲಿ ಪಕ್ಷಭೇದವಿಲ್ಲ!”

“ಆದರೆ ಗಾಡ್ಗೀಳರೆ, ಪಶ್ಚಿಮ ಘಟ್ಟಗಳಲ್ಲಿ ನೀವು ಗುರುತಿಸಿದ ಸೂಕ್ಷ್ಮ ಪ್ರದೇಶಗಳು ತುಂಬ ಜಾಸ್ತಿ ಇವೆಯಲ್ಲ? ಇಲ್ಲಿ ಮಾನವನ ಹಸ್ತಕ್ಷೇಪ ಇರಕೂಡದು ಎಂದರೆ ಅಲ್ಲಿ ವಾಸಿಸುವವರ ಬದುಕಿನ ಗತಿ ಏನು?” ಇದು ಸರ್ದೇಸಾಯಿಯ ಪ್ರಶ್ನೆ.

ಇದನ್ನೂ ಓದಿrahul gandhi ತಂದೆ ಕಳೆದುಕೊಂಡಾಗ ಆದಷ್ಟು ನೋವಾಗಿದೆ: ರಾಹುಲ್ ಗಾಂಧಿ ಭಾವುಕ

“ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಬದುಕುವವರ ಬಗ್ಗೆ ನಮಗೆ ಆಕ್ಷೇಪಣೆ ಇಲ್ಲ. ಆದರೆ ಅಲ್ಲಿ ಟೀ ಎಸ್ಟೇಟ್‌ಗಳ ಮಧ್ಯೆ ಭಾರೀ ಐಷಾರಾಮಿ ರೆಸಾರ್ಟ್‌ಗಳು, ಅವರ ವೈಭೋಗಕ್ಕೆಂದು ಕೃತಕ ಸರೋವರಗಳೇ ಮುಂತಾದ ಸೌಲಭ್ಯಗಳು ಬಂದಿವೆ; ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಘಾಸಿಗೊಳಿಸಲಾಗುತ್ತಿದೆ. ಅದಕ್ಕೆ ಬಲಿಯಾಗುವವರು ಮಾತ್ರ ಕಣಿವೆಯ ಕೆಳಭಾಗದಲ್ಲಿ ವಾಸಿಸುವ ಕೂಲಿಯಾಳುಗಳು ಮತ್ತು ಶ್ರಮಜೀವಿಗಳು. ಹಿಂದೆ ಪುದುಮಲೈ ದುರಂತದಲ್ಲೂ ಈಗಿನ ದುರಂತದಲ್ಲೂ ಇದು ಸ್ಪಷ್ಟ ಕಾಣುತ್ತಿದೆ. ಸರಕಾರಕ್ಕೆ ಇಂಥವರ ಜೀವದ ಬಗ್ಗೆ ಕಳಕಳಿ ಇಲ್ಲ. ಧನಿಕರ ಭೋಗ ಲಾಲಸೆಗಳಿಗೆ ನಮ್ಮ ವರದಿಯಿಂದ ಅಡ್ಡಿ ಬಂದೀತೆಂಬುದಷ್ಟೇ ಸರಕಾರಕ್ಕೆ ಎದ್ದು ಕಾಣುತ್ತಿದೆ.”

ಅವೈಜ್ಞಾನಿಕ, ಅನಧಿಕೃತ ಗಣಿಗಳಿಂದಾಗುತ್ತಿರುವ ಪರಿಸರ ದುರಂತದ ವಾಸ್ತವಿಕ ಚಿತ್ರಣ ಹೀಗಿದ್ದರೆ ಅತ್ತ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್‌ ಶಾ ಇನ್ನೊಂದು ಬಗೆಯ ಅವೈಜ್ಞಾನಿಕ ಹೇಳಿಕೆಯನ್ನು ನೀಡುತ್ತಾರೆ.

ಗುಡ್ಡಗಳು ಕುಸಿದಾವೆಂದು ಜುಲೈ 23ರಂದೇ ಕೇಂದ್ರ ಸರಕಾರ ಮುನ್ಸೂಚನೆ ನೀಡಿದ್ದೂ ಅಲ್ಲದೆ, ಪರಿಹಾರ ಕಾರ್ಯಕ್ಕೆಂದು ರಾಷ್ಷ್ರೀಯ ದುರಂತ ನಿರ್ವಹಣಾ ಪಡೆಯ 6 ತುಕಡಿಗಳನ್ನೂ ಕಳಿಸಿತ್ತು. “ಒಡಿಶಾದಲ್ಲಿ ಚಂಡಮಾರುತದ ಮುನ್ಸೂಚನೆ ಕೊಡಲಾಗಿತ್ತು. ಅದರ ನಿರ್ವಹಣೆ ಎಷ್ಟು ಅಚ್ಚುಕಟ್ಟಾಗಿತ್ತು ಎಂದರೆ ಕೇವಲ ಒಬ್ಬಾತ ಮಾತ್ರ ತನ್ನದೇ ತಪ್ಪಿನಿಂದ ಗತಿಸಿದ. ಗುಜರಾತಿನಲ್ಲಿ ಸುಂಟರಗಾಳಿಯಿಂದಾಗಿ ಒಂದು ಪಶು ಕೂಡ ಸಾಯಲಿಲ್ಲ” ಎಂದು ಹೇಳುತ್ತ ಅಮಿತ್‌ ಶಾ, ಕೇರಳ ಸರಕಾರ ದುರಂತದ ಮುನ್ನೆಚ್ಚರಿಕೆಯನ್ನು ಏಕೆ ಪಾಲಿಸಲಿಲ್ಲ? ಎಂದು ಕೇಳಿದ್ದಾರೆ.

ಇದನ್ನೂ ಓದಿ : ಶಿಮ್ಲಾ| ಮಂಡಿ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಮೇಘಸ್ಫೋಟ; ಇಬ್ಬರು ಸಾವು

ಚಂಡಮಾರುತದ ಮುನ್ನೆಚ್ಚರಿಕೆ ಬಂದಾಗ ಇಂಥದ್ದೇ ಪ್ರದೇಶಗಳಲ್ಲಿ ಬಿರುಗಾಳಿ ಬೀಸಿ ಹೋಗುತ್ತದೆ ಎಂಬ ಮಾಹಿತಿ ಇರುತ್ತದೆ. ಕರಾವಳಿಯ ಸಮತಟ್ಟಾದ ಭೂಪ್ರದೇಶಗಳಿಂದ ಜನರನ್ನು ಗುಳೆ ಎಬ್ಬಿಸುವುದೂ ತುಸು ಮಟ್ಟಿಗೆ ಸುಲಭ- ಏಕೆಂದರೆ ಅಲ್ಲಲ್ಲಲ್ಲಿ ಇದಕ್ಕೆಂದೇ ಆಶ್ರಯತಾಣಗಳನ್ನು ಹಿಂದೆಯೇ ನಿರ್ಮಿಸಲಾಗಿದೆ. ಆದರೆ ಭೂಕುಸಿತದ ಸಂಗತಿ ಹಾಗಲ್ಲ. ವಯನಾಡಿನಂಥ ದಟ್ಟ ಕಾಡಿನ ಗುಡ್ಡಗಳಲ್ಲಿ ಎಲ್ಲಿ ಭೂಮಿ ಕುಸಿಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಹತ್ತಾರು ಸಾವಿರ ಜನರನ್ನು ಈ ಮಳೆಯಲ್ಲಿ ಎಲ್ಲಿಗೆ ಸಾಗಿಸಿ, ಎಲ್ಲಿ ಆಶ್ರಯ ಕೊಡುವುದು?

ಹವಾ ಮುನ್ಸೂಚನೆ ಸಾಕಷ್ಟು ನಿಖರವಾಗುತ್ತಿದೆ. ಎಲ್ಲಿ ಬಿಸಿಯಲೆಗಳು ಬೀಸಿ ಬರುತ್ತವೆ, ಎಲ್ಲಿ ಹಿಮಪಾತ ಆಗಲಿದೆ, ಎಲ್ಲಿ ಜಡಿಮಳೆ ಸುರಿಯಲಿದೆ ಎಂಬುದರ ಮುನ್ಸೂಚನೆ ಸಿಗುತ್ತದೆ. ಎಲ್ಲಿ ಸಿಡಿಲು ಬಡಿಯುವ ಸಂಭವ ಇದೆ ಎಂಬುದನ್ನೂ ಹೇಳಬಹುದು. ಆದರೆ ಎಲ್ಲಿ ಭೂಕಂಪನ, ಎಲ್ಲಿ ಭೂಕುಸಿತ, ಎಲ್ಲ ಹಿಮಕುಸಿತ ಆದೀತೆಂದು ನಿಖರವಾಗಿ ಹೇಳುವಷ್ಟು ವಿಜ್ಞಾನ ಮುಂದುವರೆದಿಲ್ಲ.

ಹಿಮಾಲಯದಂಥ ತೀರಾ ಎಳೆಯ ಪರ್ವತಗಳು ಮತ್ತು ಪಶ್ಚಿಮ ಘಟ್ಟದಂಥ ತೀರಾ ವೃದ್ಧ ಪ್ರದೇಶಗಳು ಯಾರ ಗ್ಯಪ್ತಿಗೂ ಸುಲಭಕ್ಕೆ ನಿಲುಕುವುದಿಲ್ಲ. ಎಳೆಯ ಮಕ್ಕಳ ಹಾಗೆ, ಅಥವಾ ಹಣ್ಣುಹಣ್ಣು ವೃದ್ಧರ ಹಾಗೆ. ಎಲ್ಲಿ ಬಿದ್ದು ಗಾಯ ಮಾಡಿಕೊಳ್ಳುತ್ತಾರೊ ಹೇಳಲು ಸಾಧ್ಯವಿಲ್ಲ.

ಆದರೂ “ಮುನ್ನೆಚ್ಚರಿಕೆ ನೀಡಿದ್ದೆವು, ನೀವು ಪಾಲಿಸಲಿಲ್ಲ” ಎಂದು ಸಂಸತ್ತಿನಲ್ಲಿ ಕೇರಳದ ವಿರುದ್ಧ ದೋಷಾರೋಪಣೆ ನಡೆದಿದೆ. ಅಲ್ಲಾರೀ ಧುರೀಣರೇ, “ಇಡೀ ಪಶ್ಚಿಮ ಘಟ್ಟಗಳನ್ನು ಹುಷಾರಾಗಿ ನಿಭಾಯಿಸಿ” ಎಂದು ಗಾಡ್ಗೀಳ ಸಮಿತಿಯ ತಜ್ಞರು ಕೊಟ್ಟ ಮುನ್ನೆಚ್ಚರಿಕೆಯನ್ನು ನೀವು, ಅಂದರೆ ಅಧಿಕಾರಕ್ಕೆ ಬಂದ ಎಲ್ಲ ರಾಜಕಾರಣಿಗಳು ಕಡೆಗಣಿಸಿದ್ದು ನಿಜ ತಾನೆ?

 

 

Donate Janashakthi Media

Leave a Reply

Your email address will not be published. Required fields are marked *