ಬೆಂಗಳೂರು : ಕುತ್ತಿಗೆ ಬಿಗಿದು ಯುವತಿಯ ಕೊಲೆ

ಬೆಂಗಳೂರು: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ದುಷ್ಕರ್ಮಿ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಮಹದೇವಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಲ್ಬರ್ಗಾ ಮೂಲದ ಮಹಾನಂದಿ (21) ಕೊಲೆಯಾದ ಯುವತಿ. ಈಕೆ ಮಹೇಶ್ವರಿ ನಗರದಲ್ಲಿ ಅಕ್ಕನ ಜೊತೆ ವಾಸವಾಗಿದ್ದರು.

ಅಕ್ಕ-ತಂಗಿ ಇಬ್ಬರೂ ಸೆಲ್ ಪೆಟ್ರೋಲ್ ಬಂಕ್ನಲ್ಲಿ ವಾಹನಗಳಿಗೆ ಪೆಟ್ರೋಲ್ ಹಾಕುವ ಕೆಲಸ ಮಾಡುತ್ತಿದ್ದರು. ನಿನ್ನೆ ಅಕ್ಕ-ತಂಗಿ ಇಬ್ಬರಿಗೂ ವಾರದ ರಜೆ ಇತ್ತು. ಹಾಗಾಗಿ ಮನೆಯಲ್ಲಿಯೇ ಇದ್ದರು. ರಾತ್ರಿ 8.30ರಲ್ಲಿ ಮನೆಯಿಂದ ಹೊರಗೆ ಹೋದ ತಂಗಿ ಎಷ್ಟೊತ್ತಾದರೂ ಮನೆಗೆ ವಾಪಸ್ಸು ಆಗಿಲ್ಲ. ಇದರಿಂದ ಗಾಬರಿಯಾದ ಅಕ್ಕ, ನೆರೆಮನೆಯವರನ್ನು ವಿಚಾರಿಸಿ ಹುಡುಕಾಡಿದರೂ ಆಕೆಯ ಸುಳಿವು ಸಿಕ್ಕಿಲ್ಲ. ನಂತರ ಮಹದೇವಪುರ ಪೋಲಿಸ್ ಠಾಣೆಗೆ ಹೋಗಿ ತಂಗಿ ಕಾಣೆಯಾಗಿದ್ದಾಳೆಂದು ದೂರು ನೀಡಿದ್ದಾರೆ.ಈ ನಡುವೆ ಇಂದು ಮುಂಜಾನೆ 5.30ರ ಸುಮಾರಿನಲ್ಲಿ ಮನೆ ಹತ್ತಿರದ ಶೆಡ್ ಸಮೀಪ ಮಹಾನಂದಿ ಶವ ಪತ್ತೆಯಾಗಿದೆ.

ಅಕ್ಕಪಕ್ಕದ ನಿವಾಸಿಗಳು ಯುವತಿಯ ಶವ ಗಮನಿಸಿ ಪೋಲಿಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳು ಯುವತಿಯ ಕೊರಳಲ್ಲಿದ್ದ ಕಪ್ಪು ದಾರದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ಕಂಡು ಬಂದಿದೆ.

ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಈ ಯುವತಿ ಮೇಲೆ ಅತ್ಯಾಚಾರ ಮಾಡಲಾಗಿದೆಯೇ ಎಂಬುದು ಗೊತ್ತಾಗಲಿದೆ. ಮಹದೇವಪುರ ಠಾಣೆ ಪೋಲಿಸರು ಕೊಲೆ ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *