ಕಪ್ಪತ್ತಗುಡ್ಡ ರಕ್ಷಣೆಗೆ ಸರಕಾರ ಬದ್ಧ ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಸಚಿವ ಸಿ.ಸಿ.ಪಾಟೀಲ

ಗದಗ; ಜ.25 : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಖ್ಯಾತಿ ಪಡೆದ ಕಪ್ಪತಗುಡ್ಡ ತನ್ನ ಒಡಿಲನಲ್ಲಿ ಅನೇಕ ಔಷಧೀಯ ಸಸ್ಯ ಸಂಪತ್ತನ್ನು ಹೊಂದಿದ್ದು ರಕ್ಷಣೆಗೆ ಸರಕಾರ ಬದ್ಧವಾಗಿದ್ದು ಇದರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.

ನಗರದ ಅಂಬೇಡ್ಕರ ಭವನದಲ್ಲಿ ಜರುಗಿದ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾದ ಕಪ್ಪತ ಉತ್ಸವ-2021  ಉದ್ಘಾಟಿಸಿ ಸಚಿವರು ಮಾತನಾಡಿದರು. ಪರಿಸರ ಸಂಕ್ಷಣೆ ಕುರಿತು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಅರಣ್ಯ ಸಂಪತ್ತು ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಅದರೊಂದಿಗೆ ಮಕ್ಕಳಿಗೆ ಶಾಲೆ ಹಾಗೂ ಮನೆಯ ಆವರಣದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಹವ್ಯಾಸವನ್ನು ಈಗಿನಿಂದಲೇ ರೂಡಿಸಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯವಾಗಬೇಕಾಗಿದೆ. ಜಿಲ್ಲೆಯ ಸಸ್ಯಕಾಶಿ ಕಪ್ಪತಗುಡ್ಡವನ್ನು ಅಭಿವೃದ್ಧಿ ಪಡಿಸಿ ಜಿಲ್ಲೆಯನ್ನು ಹಸಿರು ಕ್ರಾಂತಿ ಜಿಲ್ಲ್ಲೆಯಾಗಿಸಲು ಪ್ರತಿಯೊಬ್ಬರು ಪಣತೊಡಲು ಮುಂದಾಗಬೇಕು ಎಂದರು. ಕಪ್ಪತಗುಡ್ಡದ ಔಷಧೀಯ ಸಸ್ಯಗಳ ಪ್ರಬೇಧ ಹಾಗೂ ಅವುಗಳ ಉಪಯೋಗದ ಕುರಿತು ಅರಣ್ಯ ಅಧಿಕಾರಿಗಳು ಹೊರತಂದಿರುವ ಕಪ್ಪತಗುಡ್ಡ ಪುಸ್ತಕವನ್ನು ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ತಜುರ್ಮೆಗೊಳಿಸುವದರಿಂದ ಸಾರ್ವಜನಿಕರಲ್ಲಿ ಕಪ್ಪತಗುಡ್ಡದ ಮಹತ್ವ ತಿಳಿದುಕೊಳ್ಳಬಹುದಾಗಿದೆ. ಈ ಪ್ರಕ್ರಿಯೆಗೆ ಅಗತ್ಯದ ಅನುದಾನವನ್ನು ಒದಗಿಸಲಾಗುವದು ಎಂದು ಸಚಿವರು ತಿಳಿಸಿದರು.

ಪ್ರಥಮ ಬಾರಿಗೆ ಯಡಿಯೂರಪ್ಪ ಸರಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ಆ ಸಂದರ್ಭದಲ್ಲಿ  ಬಾಲ ಸಂಜೀವಿನಿ, ಭಾಗ್ಯ ಲಕ್ಷ್ಮೀ ಯೋಜನೆಗಳನ್ನು ಜಾರಿಗೊಳಿಸಲಾಯಿತು ಅತ್ಯಂತ ಜನಪರ ಈ ಯೋಜನೆಗಳನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು. ಈ ಬಾರಿ ಸರಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜವಾಬ್ದಾರಿ ವಹಿಸಲಾಗಿತ್ತು. ಅವ್ಯವಸ್ಥೆ ಹಾಗೂ ಅಕ್ರಮ ಗಣಿಗಾರಿಕೆ ಚಟುವಟಿಕೆ ತಡೆಯಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಗಣಿ ಮತ್ತು ಅರಣ್ಯ ಇಲಾಖೆ ಎರಡು ಸಹ ಎಣ್ಣೆ ಹಾಗೂ ಸಿಗೇಕಾಯಿ ಸಂಬಂಧ ಹೊಂದಿದ್ದು ರಾಜ್ಯದ ಅಭಿವೃದ್ಧಿಗೆ ಗಣಿಗಾರಿಕೆ ಅಗತ್ಯ ಅದರಂತೆ ನಾಳಿನ ಉತ್ತಮ ಪರಿಸರಕ್ಕೆ ಅರಣ್ಯ ಬೇಕು ಈ ಎರಡು ಇಲಾಖೆಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ನನಗಿದೆ.

ಖಾತೆ ಬದಲಾವಣೆ ಮುಖ್ಯಮಂತ್ರಿಗಳ ಪರಮಾಧಿಕಾರ ಈಗ ನೀಡಿರುವ ಕೈಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವದು. ಅಲ್ಲದೇ  ಯಾವಾಗಲು ಮುಖ್ಯಮಂತ್ರಿಯವರ ಬಳಿ ಇರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜವಾಬ್ದಾರಿಯನ್ನು ನನ್ನ ಮೇಲೆ ವಿಶಾಸ್ವವಿಟ್ಟು ಖಾತೆ ಜವಾಬ್ದಾರಿಯನ್ನು ವಹಿಸಿದ್ದು ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಆಭಾರಿಯಾಗಿದ್ದೇನೆಂದು ಸಚಿವ ಸಿ.ಸಿ. ಪಾಟೀಲ ನುಡಿದರು.

ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ ಭಾರತ ದೇಶವು ಜೀವ ವೈವಿದ್ಯತೆಯಲ್ಲಿ ಅತ್ಯಂತ ಶ್ರೀಮಂತ ರಾಷ್ಟ್ರವಾಗಿದೆ. ಜಗತ್ತಿನಲ್ಲಿ ಜೀವವೈವಿದ್ಯತೆಗೆ ಗುರುತಿಸಲಾದ ೧೮ ರಾಷ್ಟ್ರಗಳಲ್ಲಿ ಭಾರತವು ಒಂದಾಗಿರುವದು ಹೆಮ್ಮೆಯ ವಿಷಯವಾಗಿದೆ. ಇಂದಿನ ಸ್ಪರ್ಧಾತ್ಮಕ ಹಾಗೂ ಔದ್ಯೋಗಿಕರಣ ಕ್ರಾಂತಿಯಲ್ಲಿ ಅರಣ್ಯ ಸಂಪತ್ತು ವಿನಾಶದ ಅಂಚಿಗೆ ಸಾಗುತ್ತಿದೆ. ಸಂಶೋಧನೆ ಪ್ರಕಾರ ಪ್ರಸ್ತುತ ಒಂದು ವರ್ಷದಲ್ಲಿ ಸಾವಿರ ಸಸ್ಯ ಪ್ರಭೇಧಗಳು ನಾಶವಾಗುತ್ತಲಿವೆ ಅಂದರೆ ಪ್ರತಿ ದಿನಕ್ಕೆ ಇಪ್ಪತ್ತೇಳು ಸಸ್ಯ ಪ್ರಭೇಧಗಳು ನಾಶವಾಗುತ್ತಿರುವದು ಆತಂಕಕಾರಿ ಸಂಗತಿಯಾಗಿದೆ. ಕಪ್ಪತಗುಡ್ಡ ಪ್ರದೇಶದಲ್ಲಿ ೩೭೧ ಕ್ಕೂ ಅಧಿಕ ವಿವಿಧ ಜಾತಿಯ ಔಷಧೀಯ ಸಸ್ಯಗಳು ಇರುವ ಕುರಿತು ಕಪ್ಪತಗುಡ್ಡ ಪುಸ್ತಕದಲ್ಲಿ ಉಲ್ಲೇಖಿಸಲಾಗಿದ್ದು ಹೆಮ್ಮೆಯ ವಿಷಯವಾಗಿದೆ. ಪುಸ್ತಕ ಹೊರ ತಂದಿರುವ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾತನಾಡಿ ಪ್ರಕೃತಿಯಿಂದ ನಾವುಗಳು ಬಹಳಷ್ಟು ವಿಷಯಗಳನ್ನು ಕಲಿಯಬೇಕಾಗಿದೆ. ಪರಿಸರ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವದರೊಂದಿಗೆ ಬೆಳೆಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ಇಂದು ನಾವೆಲ್ಲರೂ ಸಸ್ಯ ಸಂಕುಲವನ್ನು ಉಳಿಸಿದರೆ ಮುಂದಿನ ಜೀವ ಸಂಕುಲ ನೆಮ್ಮದಿ ಜೀವನ ಸಾಗಿಸಲು ಸಾಧ್ಯವಾಗಲಿದೆ ಎಂದು ನುಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸೂರ್ಯಸೇನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಪ್ಪತ ಉತ್ಸವದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಕುರಿತು ಉತ್ತಮ ಚರ್ಚೆಗಳಾಗಿ ಮುಂದಿನ ಪೀಳಿಗೆಗೆ ವನ್ಯ ಜೀವಿ ಹಾಗೂ ಅರಣ್ಯ ಸಂರಕ್ಷಣೆ ಕುರಿತು ಅರಿವು ಮೂಡುವಂತಾಗಲಿ ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಧಾರವಾಡ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರ ಸಾಗರ, ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಶ್ರೀಮತಿ ಸೋನಲ್ ವೃಷ್ಣಿ, ಪರಿಸರ ಸಂರಕ್ಷಣಾಧಿಕಾರಿ ಡಾ. ಸಮದ್ ಕೊಟ್ಟೂರ, ಶಿವಾನಂದ ಕಳವೆ, ಅಜಿತಕುಮಾರ ಸಿರಸಾಟೆ, ವನ್ಯ ಜೀವಿ ಪರಿಪಾಲಕರಾದ ಡಾ. ಅರುಣ ಎಸ್.ಕೆ., ಸಿ.ಎಸ್.ಅರಷನಾಳ ಹಾಗೂ ಶ್ರೀಮತಿ ಸುಗಂದಿ ಮತ್ತು ಶ್ರೀ. ರಾಣಾ ಇವರುಗಳು ಕಪ್ಪತಗುಡ್ಡ-ಗದುಗಿನ ಔಷಧಿ ಸಸ್ಯಗಳ ನಿಕ್ಷೇಪ, ಸಾಂಕ್ರಾಮಿಕ ರೋಗಗಳ ಯುಗದಲ್ಲಿ ಪರಿಸರ ಸಂರಕ್ಷಣೆ, ಬಯಲುಸೀಮೆಯಲ್ಲಿ ನೆಲ ಜಲ ಸಂರಕ್ಷಣೆ, ಕರ್ನಾಟಕದ ಪೂರ್ವ ಬಯಲುಗಳಲ್ಲಿ ವನ್ಯ ಪ್ರಾಣಿಗಳ ಸಂರಕ್ಷಣೆ, ಜನಜೀವನದಲ್ಲಿ ಜೌಗು ಪರದೇಶಗಳ ಪಾತ್ರ, ಕೌಶಲ್ಯಾಭಿವೃದ್ಧಿಯಲ್ಲಿ ಗ್ರಾಮ ಅರಣ್ಯ ಸಮಿತಿಗಳು, ಸುಸ್ಥಿರ ಅಭಿವೃದ್ಧಿಯಲ್ಲಿ ಪರಿಸರ ಸೂಕ್ಷ್ಮವಲಯದ ಪಾತ್ರಗಳು ಉಪನ್ಯಾಸ ಮಂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷ ಈರಪ್ಪ ನಾಡಗೌಡರ, ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್.,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್, ಸೇರಿದಂತೆ ಪರಿಸರ ಪ್ರೇಮಿಗಳು, ಅರಣ್ಯ ತರಬೇತಿ ಕೇಂದ್ರದ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಕಪ್ಪತಗುಡ್ಡ ಪುಸ್ತಕ ಬಿಡುಗಡೆ : ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅರಣ್ಯ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ಶ್ರೀಮತಿ ಸೋನಲ್ ವೃಷ್ಣಿ ಇವರುಗಳು ಕಪ್ಪತಗುಡ್ಡದ ಔಷದಿಯ ಸಸ್ಯಗಳ ಕುರಿತು ಹೊರತಂದಿರುವ ಪುಸ್ತಕವನ್ನು ಸಚಿವ ಸಿ.ಸಿ.ಪಾಟೀಲ ಬಿಡುಗಡೆ ಮಾಡಿದರು.

ಕಿರು ಮೃಗಾಲಯಕ್ಕೆ ಬಸ ಸೇವೆ: ಸಾರಿಗೆ ಸಂಸ್ಥೆಯಿಂದ ಬೆಟಗೇರಿಯಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ಹೊಸದಾಗಿ ಆರಂಭಿಸಲಾದ ಬಸ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಚಾಲನೆ ನೀಡಿದರು.

ಅಂಚೆ ಚೀಟಿ ಹಾಗೂ ಛಾಯಾಚಿತ್ರ ಪ್ರದರ್ಶನ: ಕಪ್ಪತ ಉತ್ಸವದ ಅಂಗವಾಗಿ ಎರ್ಪಡಿಸಲಾದ ಕಪ್ಪತಗುಡ್ಡದ ಮಹತ್ವ ಸಾರುವ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಚಿವ ಸಿ.ಸಿ.ಪಾಟೀಲ ವೀಕ್ಷಿಸಿದರು.

ವರದಿ: ದಾವಲಸಾಬ ತಾಳಿಕೋಟಿ- ಜನಶಕ್ತಿ ನ್ಯೂಸ್ ಗದಗ

Donate Janashakthi Media

Leave a Reply

Your email address will not be published. Required fields are marked *