ಮಂಗಳೂರು: ಕರಾವಳಿ ಭಾಗದ ಜನತೆಯ ಶಾಂತಿ, ಸೌಹಾರ್ದ ಹಾಗೂ ಸಾಮರಸ್ಯದ ಬದುಕಿಗೆ ಕೋಮುವಾದವು ಗಂಡಾಂತರ ತಂದೊಡ್ಡಿದೆ. ಉದ್ಯೋಗವಿಲ್ಲದೆ ಹತಾಶರಾಗಿರುವ ಯುವಜನರನ್ನು ಈ ಮತೀಯವಾದಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಷಮ ಪರಿಸ್ಥಿತಿಯಲ್ಲಿ ಯುವಜನತೆ ಕೋಮುವಾದಕ್ಕೆ ಬಲಿಯಾಗದೇ ಘನತೆಯ ಬದುಕಿಗೆ ಅತ್ಯಗತ್ಯವಾಗಿರುವ ಉದ್ಯೋಗ, ಶಿಕ್ಷಣ, ಆರೋಗ್ಯಕ್ಕಾಗಿ ಐಕ್ಯತೆಯಿಂದ ಪ್ರಬಲವಾಗಿ ಧ್ವನಿ ಎತ್ತಬೇಕು ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ್ ಕರೆ ನೀಡಿದರು. ಕರಾವಳಿ
ನಗರದ ಕಲಾಂಗಣದಲ್ಲಿ ಇಂದಿನಿಂದ (ಜೂನ್ 15) ಎರಡು ದಿನಗಳ ಕಾಲ ಉದ್ಯೋಗ ಸೃಷ್ಟಿಸಿ.. ನಿರುದ್ಯೋಗದಿಂದ ರಕ್ಷಿಸಿ… ಉದ್ಯೋಗದಲ್ಲಿ ಸ್ಥಳೀಯರಿಗೆ ಆದ್ಯತೆ ಒದಗಿಸಿ…. ಘೋಷಣೆಯಡಿ ನಡೆಯಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನರ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ
ಕರಾವಳಿ ಪ್ರದೇಶದ ಜನತೆಯ ಸಾಮರಸ್ಯದ ನೆಮ್ಮದಿಯ ಬದುಕಿಗೆ ಕೊಳ್ಳಿ ಇಡುತ್ತಿರುವ ಕೋಮುವಾದವನ್ನು ಮಟ್ಟ ಹಾಕುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ತಮ್ಮ ರಾಜಕೀಯ ಲಾಭಕ್ಕಾಗಿ ಜನ ಸಮಾನ್ಯರನ್ನು ಬಲಿಕೊಡುವ ಹೀನ ರಾಜಕಾರಣವನ್ನು ಜನತೆ ಐಕ್ಯತೆಯಿಂದ ಸೋಲಿಸಬೇಕು ಎಂದರು.
ಇದನ್ನೂ ಓದಿ: ಕೋಮು ಉದ್ವಿಗ್ನತೆ: ಕಂಡಲ್ಲಿ ಗುಂಡು ಹಾರಿಸುವಂತೆ ಅಸ್ಸಾಂ ಸಿಎಂ ಆದೇಶ
“ಸರಕಾರಗಳು ಅಂಗನವಾಡಿಗಳು, ಸರ್ಕಾರಿ ಶಾಲೆ, ಹೈಸ್ಕೂಲು, ಪಿಯುಸಿ ಮಾತ್ರವಲ್ಲದೆ ಯುನಿವರ್ಸಿಟಿಗಳನ್ನು ಕೂಡ ಮುಚ್ಚುತ್ತಿವೆ. ಅದೇ ಸಂದರ್ಭದಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗೀ ಹಾಗೂ ವಿದೇಶಿ ವಿಶ್ವಿದ್ಯಾಲಯಗಳಿಗೆ ಮಣೆ ಹಾಕುತ್ತಿರುವ ಪರಿಣಾಮವಾಗಿ ವಿದ್ಯಾರ್ಥಿ- ಯುವಜನರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.”
ಕೇಂದ್ರ ರಾಜ್ಯ ಸರಕಾರಗಳು ಜನ ಸಾಮನ್ಯರ ವಿರೋಧಿ ಶ್ರೀಮಂತ ಕಾರ್ಪೋರೇಟ್ ಕುಳಗಳ ಪರ ನೀತಿಗಳನ್ನು ಜಾರಿ ಮಾಡುತ್ತಿರುವುದರಿಂದಾಗಿ ದೇಶ ಸ್ವತಂತ್ರಗೊಂಡು ಎಪ್ಪತ್ತೆಂಟು ವರ್ಷ ಗತಿಸಿದರೂ ಜನ ಸಾಮನ್ಯರು ಉದ್ಯೋಗ, ಹಸಿವು, ಆರೋಗ್ಯ, ವಸತಿಗಾಗಿ ಪರದಾಡುವಂತಾಗಿದೆ.
ವರ್ಷಕ್ಕೆರಡು ಕೋಟಿ ಉದ್ಯೋಗ ಒದಗಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ಸರಕಾರ ಉದ್ಯೋಗ ಸೃಷ್ಠಿ ಮಾಡದೇ ದೇಶದ ಯುವಜನತೆಗೆ ದ್ರೋಹ ಬಗೆದಿದೆ. ಸೈನ್ಯ ಸೇರಿದಂತೆ ಕೇಂದ್ರ ಸರಕಾರ ಮಟ್ಟದ ವಿವಿಧ ಇಲಾಖೆಗಳಲ್ಲಿ ಹತ್ತು ಲಕ್ಷದಷ್ಟು ಹುದ್ದೆಗಳು ಖಾಲಿಯಿವೆ. ಇವುಗಳನ್ನು ಖಾಯಂ ಭರ್ತಿಗೊಳಿಸುವ ಬದಲಾಗಿ ಯಾವುದೇ ಭದ್ರತೆ, ಪಿಂಚಣಿ ಇತ್ಯಾದಿ ಕಾನೂನುಬದ್ಧ ರಕ್ಷಣೆ ಸಿಗದಂತೆ ಹೊರಗುತ್ತಿಗೆಯಡಿ ದುಡಿಸಿಕೊಂಡು ಜನರನ್ನು ವಂಚಿಸುತ್ತಿರುವುದು ಒಂದೆಡೆಯಾದರೆ ಅಪಾಯಕಾರಿ ಬೆಳೆಯುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಯಾವುದೇ ಕ್ರಮ ಕೈಗೊಳ್ಳದೇ ಮೋದಿ ಸರಕಾರ ವಿದ್ರೋಹ ಎಸಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೇಸ್ ಸರಕಾರ ಎರಡೂವರೆ ಲಕ್ಷಕ್ಕೂ ಅಧಿಕವಿರುವ ಖಾಲಿ ಹುದ್ದೆಗಳನ್ನು ಭರ್ತಿಗೊಳಿಸಲು ಮುಂದಾಗತ್ತಿಲ್ಲ. ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಯಲ್ಲಿ ರಾಜ್ಯದ ಯುವಜನರಿಗೆ ಮೋಸವಾಗುತ್ತಿದೆ. ಕೇವಲ ಪದವಿ, ಡಿಪ್ಲೋಮಾದಲ್ಲಿ ಅದೂ ಹಿಂದಿನ ವರ್ಷ ಪಾಸಾದವರನ್ನು ಮಾತ್ರ ನಿರುದ್ಯೋಗಿಗಳೆಂದು ಪರಿಗಣಿಸಿ ಅವರಿಗೆ ಕ್ರಮವಾಗಿ ಮೂರು ಸಾವಿರ, ಹದಿನೈದು ನೂರು ರೂಪಾಯಿಗಳನ್ನು ಮಾತ್ರ ಕೊಡಲು ಹೊರಟಿರುವುದು ಸರಿಯಲ್ಲ. ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸದ ಹೊಣೆಗೇಡಿತನಕ್ಕೆ ಪ್ರತಿಫಲವಾಗಿ ಸರಕಾರ ಮಾಸಿಕ ಕನಿಷ್ಠ 12,000 ರೂಪಾಯಿ ನಿರುದ್ಯೋಗ ಭತ್ಯೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
“ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಕೊಡಬೇಕು ಎಂಬ ಮಹಿಷಿ ವರದಿಯಂತೆ ರಾಜ್ಯ ಸರಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಸಿಂಹಪಾಲು ಘೋಷಣೆ ಮಾಡಿತು.
ಘೋಷಣೆಯಾದ ಮರುದಿನವೇ ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಒದಗಿಸುವ ಆದೇಶ ಹಿಂಪಡೆದುಕೊಂಡಿದೆ” ಎಂದು ದೂರಿದರು. ಮುಂಬರುವ ದಿನಗಳಲ್ಲಿ ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ದೊಡ್ಡಮಟ್ದ ಆಂದೋಲನ ನಡೆಸುತ್ತಿದ್ದು ಯುವಜನರೆಲ್ಲ ಅಣಿನೆರಬೇಕು ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ವಹಿಸಿದರು. ವೇದಿಕೆಯಲ್ಲಿ ಡಿವೈಎಫ್ಐ ಮುಖಂಡರಾದ ನಿತಿನ್ ಕುತ್ತಾರ್, ಮಾಧುರಿ ಬೋಳಾರ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ದ ಯುವಜನರು ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಅಭಿಮಾನಿಗಳ ಉನ್ಮಾದ, ಸರ್ಕಾರದ ಅತ್ಯುತ್ಸಾಹ ಮತ್ತು ಮಾರುಕಟ್ಟೆಯ ದಾಹ Janashakthi Media