ಪ್ರೇಮ ವಿವಾಹಕ್ಕೆ ವಿರೋಧ : ವಿಷ ಕುಡಿಸಿ ಯುವಕನ ಕೊಲೆ

ಕಲಬುರಗಿ: ಯುವತಿಯೊಂದಿಗಿನ ಪ್ರೇಮ ವಿಚಾರಕ್ಕೆ ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಆಕೆಯ ಮನೆಯವರಿಂದಲೇ ಕೊಲೆಗೀಡಾದ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ ಗಾಣಗಾಪುರದಲ್ಲಿ ನಡೆದಿದೆ. ಚಂದ್ರಕಾಂತ್​​ ಪೂಜಾರಿ (24) ಎಂಬಾತ ದುರಂತ ಅಂತ್ಯ ಕಂಡ ಯುವಕನಾಗಿದ್ದಾನೆ.

ಗಾಣಗಾಪುರದಲ್ಲಿ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್‌ನಿಗೆ ಕ್ರಿಮಿನಾಶಕ ಕುಡಿಸಿ, ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಅಫಜಲಪುರ ತಾಲೂಕಿನ ಇಂಗಳಗಿ ಗ್ರಾಮದ ಹೊರವಲಯದಲ್ಲಿರುವ ಕೃಷಿ ಜಮೀನಿನಲ್ಲಿ ಮುಂಜಾನೆ ಚಂದ್ರಕಾಂತ್ ಶವ ಪತ್ತೆಯಾಗಿದೆ.

ಘಟನೆಯ ಹಿನ್ನಲೆ : ಗಾಣಗಾಪುರದಲ್ಲಿ ಡಿಗ್ರಿ ಓದುತ್ತಿದ್ದ, ಜಿಲ್ಲೆಯ ಜೇವರ್ಗಿ ತಾಲೂಕಿನ ಹುಲ್ಲೂರು ಗ್ರಾಮದ ಓರ್ವ ಯುವತಿಯ ಪರಿಚಯ ಚಂದ್ರಕಾಂತ್‌ಗೆ ಆಗಿತ್ತು. ಆರು ತಿಂಗಳಿಂದ ಚಂದ್ರಕಾಂತ್ ಮತ್ತು ಯುವತಿ ಪ್ರೀತಿಸುತ್ತಿದ್ದರಂತೆ. ಈ ಪ್ರೀತಿಯ ವಿಚಾರ ಯುವತಿ ಮನೆಯವರಿಗೆ ಗೊತ್ತಾಗಿತ್ತು. ಅವರು ಮದುವೆಗೆ ನಿರಾಕರಣೆ ಮಾಡಿದ್ದರಿಂದ ಇಬ್ಬರು ಮನೆಯನ್ನು ತೊರದೆ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ಅದರಂತೆಯೇ ಪ್ರೇಮಿಗಳು ಮನೆಯನ್ನು ತೊರೆದಿದ್ದರು. ಆದರೆ ಯುವತಿಯ ಪೋಷಕರನ್ನು ಅವರನ್ನು ಪತ್ತೆ ಹಚ್ಚಿ ಊರಿಗೆ ವಾಪಸ್ಸ ಕರೆದುಕೊಂಡು ಬಂದಿತ್ತು.   ಚಂದ್ರಕಾಂತ್​ಗೆ ತಮ್ಮ‌ ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ದಿಕ್ಕು ತೋಚದಂತಾದ ಯುವಕ ಬೆಂಗಳೂರಿಗೆ ಹೋಗಿದ್ದ. ಆದರೆ ಚಂದ್ರಕಾಂತನನ್ನು ಬಿಟ್ಟಿರಲಾಗದೆ ಅವನೇ ಬೇಕೆಂದು ಯುವತಿ ಮನೆಯಲ್ಲಿ ಹಠ ಹಿಡಿದಿದ್ದಾಳೆ ಎನ್ನಲಾಗಿದೆ.

ಯುವಕ ನಿನ್ನನ್ನು ಮರೆತು ಊರು ಬಿಟ್ಟು ಹೋಗಿದ್ದಾನೆಂದರೂ ಯುವತಿ ಕೇಳದಿದ್ದಾಗ ಆಕೆಯ ಸಹೋದರರು ಬೆಂಗಳೂರಿನಿಂದ ಚಂದ್ರಕಾಂತ್​ನನ್ನು ಕರೆಸಿದ್ದರು. ಯುವತಿಗೂ ತನಗೂ ಸಂಬಂಧವಿಲ್ಲ ಅಂತ ಆಕೆಯ ಮುಂದೆ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಜೂನ್ 3ರಂದು ಬೆಂಗಳೂರಿನಿಂದ ಬಂದ ಚಂದ್ರಕಾಂತ್ ಯುವತಿಯ ಎದುರು ಸುಳ್ಳು ಹೇಳಲು ನಿರಾಕರಿಸಿದ್ದಾನೆ.

ಇದರಿಂದ ಕೆರಳಿದ ಯುವತಿಯ ಸಹೋದರ ಹಾಗೂ ಇತರ ಇಬ್ಬರು ಚಂದ್ರಕಾಂತ್​ನನ್ನು ಇಂಗಳಗಿ ಗ್ರಾಮದ ಸೀಮಾಂತರದ ಹೊಲವೊಂದಕ್ಕೆ ಕರೆದೊಯ್ದಿದ್ದಾರೆ. ಬಳಿಕ ಒತ್ತಾಯದಿಂದ ವಿಷ ಕುಡಿಸಿ, ಟವೆಲ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಈ ಬಗ್ಗೆ ಅಫಜಲಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಯುವತಿಯ ಸಹೋದರ ಹಾಗೂ ಸಂಬಂಧಿಗಳಾದ ಈರಪ್ಪ, ಹುಲಿಗೆಪ್ಪಾ ಹಾಗೂ ರಾಕೇಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *