ಬಾಗಲಕೋಟೆ: ‘ಯುವ ಸಾಹಿತಿಗಳು ವಿವಾದಾತ್ಮಕ ಸಾಹಿತಿಗಳ ಸಹವಾಸದಿಂದ ದೂರವಿದ್ದು, ಸಂಸ್ಕಾರವಂತ ಸಾಹಿತಿಗಳ ಸಹವಾಸ ಬೆಳೆಸಿಕೊಳ್ಳಬೇಕು’ ಎಂದು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಸೆಪ್ಟೆಂಬರ್ 13ರಂದು ಹೇಳಿದರು. ಸಂಸ್ಕಾರ
ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ‘ತನ್ನ ತಾನರಿದು ತಾನಾದಡೆ ವಚಕಾರ್ತಿಯರ ಲೋಕದೃಷ್ಟಿ ಸಾಹಿತ್ಯ ಸಹವಾಸ’ ಸಾಹಿತ್ಯಿಕ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಕೆಲ ಸಾಹಿತಿಗಳು ಪ್ರತಿ ವಿಷಯದಲ್ಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸಮಾಜ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಮೂಲಕ ತಮ್ಮ ಜನಪ್ರಿಯತೆಯ ವಿಕೃತಿ ಮೆರೆಯುತ್ತಿದ್ದಾರೆ. ಇದು ಭವಿಷ್ಯದ ಯುವ ಸಾಹಿತಿಗಳು ಹಾಗೂ ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ. ಹೀಗಾಗಿ ಯುವ ಸಾಹಿತಿಗಳು ಇಂತಹ ಸಾಹಿತಿಗಳ ಸಹವಾಸಕ್ಕೆ ಹೋಗಬಾರದು’ ಎಂದರು.
ಇದನ್ನೂ ಓದಿ: ಮಲಗಿದ್ದ 8 ವಿದ್ಯಾರ್ಥಿಗಳ ಕಣ್ಣಿಗೆ ಫೆವಿಕ್ವಿಕ್ ಹಾಕಿದ ಸಹಪಾಠಿಗಳು
‘ವಚನಸಾಹಿತ್ಯ, ದಾಸಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಕನ್ನಡ ಭಾಷೆ ಶ್ರೀಮಂತಗೊಳಿಸಿ ಪ್ರಪಂಚಕ್ಕೆ ಪರಿಚಯಿಸುವ ಕಾರ್ಯ ಮಾಡಿವೆ. ಪ್ರಪಂಚದ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ಅಗ್ರಸ್ಥಾನವಿದ್ದು ಅಂತಹ ಕನ್ನಡ ವಚನಕಾರ್ತಿಯರ ಲೋಕದೃಷ್ಟಿ ಹಿನ್ನೆಲೆ ಇಟ್ಟುಕೊಂಡು ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಮಾತನಾಡಿ, ‘ವಚನಕಾರ್ತಿಯರು ನುಡಿದಂತೆ ನಡೆದು, ಕಾಯಕವೇ ಕೈಲಾಸ ಮತ್ತು ಸಮಾನತೆಯ ಚಿಂತನೆಗಳನ್ನು ಶಿವಶರಣರ ಸಮಾನವಾಗಿ ತರ್ಕಿಸುವಷ್ಟು ಎತ್ತರಕ್ಕೆ ಬೆಳೆದಿದ್ದರು’ ಎಂದರು.
ಬೆಂಗಳೂರಿನ ಅಜೀಂ ಪ್ರೇಮ್ಜಿ ಫೌಂಡೇಷನ್ ಮುಖ್ಯ ಸಂವಹನಾಧಿಕಾರಿ ಸುಧೀಶ ವೆಂಕಟೇಶ ಪ್ರಾಸ್ತಾವಿಕ ಮಾತನಾಡಿ, ಫೌಂಡೇಷನ್ದಿಂದ ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಬಸವೇಶ್ವರ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಮಹೇಶಕುಮಾರ ಸಿ.ಎಸ್., ಸಹ ನಿರ್ದೇಶಕ ಎಸ್.ವಿ.ಮಂಜುನಾಥ ಇದ್ದರು.
ಚಿತ್ರ ಕಲಾವಿದ ಚ.ಭೀ.ಸೋಮಶೆಟ್ಟಿ ಅವರ ರಚಿಸಿರುವ ರೇಖಾ ಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯಿತು.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಕಣ್ಣಿಗೆ ಕಂಡದ್ದನ್ನು ಹೇಳದಾದರು!! ಕೇರಳ, ತಮಿಳುನಾಡು ಎಂದೆಲ್ಲ ಲಿಂಕ್ ಕೊಟ್ಟರು!!!
