ಸೇಡಂ: ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮಳಖೇಡ ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ ಆಗಸ್ಟ್ 18 ಸೋಮವಾರ ತಡರಾತ್ರಿ ನಡೆದಿದೆ. ಮಳಖೇಡ ಗ್ರಾಮದ ಅಂಬರೀಷ ಬೊಮ್ನಳ್ಳಿ (32) ಮೃತರು ಎಂದು ಗುರುತಿಸಲಾಗಿದೆ.
ಕಂಪನಿಯಲ್ಲಿ ಅವನು ಕಲ್ಲುಗಣಿಯಲ್ಲಿನ ಟಿಪ್ಪರ್ ಚಾಲಕನಾಗಿದ್ದ. ಮಳೆಯಿಂದಾಗಿ ಟಿಪ್ಪರ್ ಕೆಸರಿನಲ್ಲಿ ಸಿಕ್ಕಿಬಿದ್ದಿತ್ತು. ಟಿಪ್ಪರ್ ತೆಗೆಯಲು ಹೋದಾಗ ಲೋಡರ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಕಾರ್ಮಿಕ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಆಗಸ್ಟ್ 19 ಬೆಳಿಗ್ಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ರಾಜಶ್ರೀ ಸಿಮೆಂಟ್ ಕಂಪೆನಿ ಎದುರು ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಕಾಯಂ ನೌಕರಿ ನೀಡುವಂತೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರು | ಶಕ್ತಿ’ ಯೋಜನೆ Golden Book of World Records” ಗೆ ಸೇರ್ಪಡೆ
ಕಂಪನಿ ಅಧಿಕಾರಿಗಳು ಮೃತ ಕುಟುಂಬಕ್ಕೆ ₹ 33 ಲಕ್ಷ ಪರಿಹಾರ ಮತ್ತು ಕಾಯಂ ನೌಕರಿ ಕೊಡುವುದಾಗಿ ಭರವಸೆ ನೀಡಿದ್ದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಕಂಪನಿ ಅಧ್ಯಕ್ಷ ಉದಯ ಪವಾರ್, ಉಪಾಧ್ಯಕ್ಷ ಅಶೋಕ ನೆನಿನ್, ಮೃತನ ತಂದೆ ಮಲ್ಲಿಕಾರ್ಜುನ ಬೊಮ್ನಳ್ಳಿ, ಮುಖಂಡರಾದ ಮರೆಪ್ಪ ತಾತಾ, ರಾಜಶೇಖರ ಪುರಾಣಿಕ, ಲಚ್ಚಪ್ಪ ಜಮಾದಾರ, ದಿನೇಶ ಸಣ್ಣೂರ, ಶ್ರೀನಾಥ ಪಿಲ್ಲಿ, ಜಮೀಲ್ ಆಲಂಪುರಿ, ರುದ್ರು ಪಿಲ್ಲಿ, ಶರಣು ಸಜ್ಜನ, ದೇವಾನಂದ ಪಿಲ್ಲಿ, ನಾಗೇಂದ್ರ ಲಿಂಗಂಪಲ್ಲಿ, ಭೀಮಾಶಂಕರ ಕೋಳಕೂರ, ಲಿಂಗರಾಜ ತಳಕಿನ, ಮಲ್ಲಿಕಾರ್ಜುನ ಸೇರಿ ಅನೇಕರಿದ್ದರು.
ಡಿವೈಎಸ್ಪಿ ಎಸ್.ಎಸ್. ಹಿರೇಮಠ, ಸಿಪಿಐಗಳಾದ ಮಹಾದೇವಪ್ಪ ದಿಡ್ಡಿಮನಿ, ಜಗದೇವಪ್ಪ ಪಾಳಾ, ದೌಲತ್ ಕುರಿ, ಪಿಎಸ್ಐ ಸಂಗಮೇಶ ಅಂಗಡಿ, ಗೌತಮ್ ಗುತ್ತೇದಾರ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಇದನ್ನೂ ನೋಡಿ: ಚುನಾವಣಾ ಆಯೋಗ ಮತ್ತು ವಿಶ್ವಾಸಾರ್ಹತೆ ದೂರ ಬಲು ದೂರ… Janashakthi Media
