ಜಿ.ಎಸ್. ಮಣಿ
ಭಾರತೀಯರು ಅಂತಾರಾಷ್ಟ್ರೀಯ ಸಾಧನೆ ಮಾಡಿ ಮನ್ನಣೆ ಪಡೆದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರನ್ನು ಅಭಿನಂದಿಸಿ ಭಾರತದ ಸಾಧನೆ ಎಂಬ ಹೆಮ್ಮೆ ಹೊತ್ತು ಮಾತನಾಡುವುದು ಪರಿಪಾಠ. ಆದರೆ ಬಾನು ಮುಷ್ತಾಕ್ ಅವರ ಬೂಕರ್ ಪ್ರಶಸ್ತಿ ಬಗ್ಗೆ ಪ್ರಧಾನಿ ಮೌನ ಯಾಕೆ? ಇದು ಮೊದಲ ಬಾರಿಯೇ? ಪ್ರಧಾನಿ ಮೌನವೂ ಅರ್ಥಗರ್ಭಿತವೇ?
ಭಾರತೀಯರು ಅಂತಾರಾಷ್ಟ್ರೀಯ ಸಾಧನೆ ಮಾಡಿ ಮನ್ನಣೆ ಪಡೆದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರನ್ನು ಅಭಿನಂದಿಸಿ ಭಾರತದ ಸಾಧನೆ ಎಂಬ ಹೆಮ್ಮೆ ಹೊತ್ತು ಮಾತನಾಡುವುದು ಪರಿಪಾಠ. ಆ ಮೂಲಕ ಅಪಾರ ಪ್ರಚಾರವನ್ನು ತನಗೆ ಮತ್ತು ತನ್ನ ಪಕ್ಷ ಮತ್ತು ತನ್ನ ಸಂಘಟನೆಗಳಿಗೆ ತಂದುಕೊಳ್ಳುವ ಚಾತುರ್ಯವೂ ಅವರಿಗಿದೆ. ಆದ್ದರಿಂದ ಅಂತಹ ಯಾವುದೇ ಅವಕಾಶವನ್ನು ಅವರು ತಪ್ಪಿಸಿಕೊಳ್ಳುವುದಿಲ್ಲ. ಅವರ ಬಾಲ ಬಡುಕ ಮಾಧ್ಯಮವೂ ಈ ಆಯ್ಕೆಯ ತಾಳಕ್ಕೆ ಕುಣಿಯುತ್ತದೆ.
ಆದರೆ ಬಾನು ಮುಷ್ತಾಕ್ ಅವರ ಬೂಕರ್ ಪ್ರಶಸ್ತಿ ಬಂದಾಗ ಅವರನ್ನು ಪ್ರಧಾನಿ ಅಭಿನಂದಿಸಲಿಲ್ಲ. ಆದರೆ ಪ್ರಧಾನಿಯ ಇಂತಹ ಮೌನ ಇದೇ ಮೊದಲಲ್ಲ. ಈ ಮೌನ ಆಕಸ್ಮಿಕವೇ? ಪ್ರಧಾನಿ ಮೋದಿಯ ಇಂತಹ ಗಮನಾರ್ಹ ಮೌನದ ಘಟನೆಗಳನ್ನು ನೋಡಿದರೆ , ಇದು ಆಕಸ್ಮಿಕವಲ್ಲ. ಇದರಲ್ಲಿ ಒಂದು ಸ್ಪಷ್ಟ ವಿನ್ಯಾಸ ಎದ್ದು ಕಾಣುತ್ತದೆ. ಇದು ಅವರ ನೀತಿ ಎಂಬುದು ಸ್ಪಷ್ಟ.
ರವಿಶ್ ಕುಮಾರ್ ಅವರಿಗೆ 2019 ರಲ್ಲಿ ರಾಮೊನ್ ಮೇಗಸೇಸೆ ಪ್ರಶಸ್ತಿ ಬಂತು
ರಾಮೊನ್ ಮೇಗಸೇಸೆ ಪ್ರಶಸ್ತಿ ಏಶಿಯ ಖಂಡದ ನೊಬೆಲ್ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ. ಅದು ಖ್ಯಾತ ಪತ್ರಕರ್ತ ರವಿಶ್ ಕುಮಾರ್ ಗೆ 2019 ರಲ್ಲಿ ಬಂತು. ಎಲ್ಲರೂ ಅಭಿನಂಧನೆಯ ಮಳೆಗರೆದರು. ಪ್ರಧಾನಿ ಅವರ ಪಕ್ಷ ಮತ್ತು ಕೇಸರಿ ಪಡೆ ಮೌನ ತಳೆಯಿತು. ರವಿಶ್ ಕುಮಾರ್ ತೀಕ್ಷ್ಣ ಟೀಕಾಕರರು. ಪ್ರಧಾನಿ ಮತ್ತು ಅವರ ಕೇಸರಿ ಪಡೆಗೆ ವಿನಾಯತಿ ತೋರುವವರಲ್ಲ. ಆದ್ದರಿಂದಲೇ ಈ ಮೌನ. ಗುಣಕ್ಕೆ ಮತ್ಸರ ಸಲ್ಲ ಎಂಬುದು ಭಾರತೀಯರ ಸಂಸ್ಕೃತಿ. ಪ್ರಧಾನಿ ಮತ್ತು ಕೇಸರಿ ಪಡೆಗೆ ಟೀಕೆಗಳನ್ನು ಅರಗಿಸಿಕೊಳ್ಳುವ ತಾಕತ್ತಿಲ್ಲ. ಅದಕ್ಕೇ ಮೌನ. ವಾಟಸಾಪ್ ವಿಶ್ವವಿದ್ಯಾಲಯದಲ್ಲಿ ರವಿಶ್ ಕುಮಾರ್ ಅವರ ಟೀಕೆ ಯಥೇಚ್ಛ
ಬಂದಿದೆ.
ಬೆಜವಾಡ ವಿಲ್ಸನ್ ಮತ್ತು ಟಿ ಎಂ ಕೃಷ್ಣ ಇಬ್ಬರಿಗೂ ರಾಮೊನ್ ಮೇಗಸೇಸೆ ಪ್ರಶಸ್ತಿ ಬಂತು 2016 ರಲ್ಲಿ
ಈ ಪ್ರಶಸ್ತಿಗಳು ಬಂದಾಗಲೂ ನರೇಂದ್ರ ಮೋದಿಯವರೆ ಪ್ರಧಾನ ಮಂತ್ರಿ. ಇಬ್ಬರಿಗೂ ಪ್ರಧಾನಿಗಳ ಅಭಿನಂದನೆ ಬರಲಿಲ್ಲ. ವಿರೋಧ ಪಕ್ಷಗಳ ಸಹಿತ ಗುಣಕ್ಕೆ ಮತ್ಸರವಿಲ್ಲದ ಎಲ್ಲರೂ ಅಭಿನಂದಿಸಿದರು. ಕೇಸರಿ ಪಡೆ ಮೌನ ತಳೆಯಿತು. ವಿಲ್ಸನ್ ಸಫಾಯಿ ಕರ್ಮಚಾರಿಗಳ ಆಂದೋಲನ ಪ್ರಾರಂಬಿಸಿದವರು. ಪ್ರಧಾನಿಗಳು “ಸ್ವಚ್ಛ ಭಾರತ” ಹೆಸರಿನಲ್ಲಿ ಸ್ವಚ್ಛತಾ ಆಂದೋಲನ ಸ್ಥಾಪಿಸಿದವರು. ಎರಡೂ ಕಡೆ ಗುರಿಗಳಲ್ಲಿ ಸಾಮ್ಯವಿತ್ತು. ಸಫಾಯಿ ಕರ್ಮಚಾರಿಗಳ ಒಳ್ಳೆಯ ಬದುಕಿನ ಹಕ್ಕಿನ ಪ್ರತಿಪಾದನೆ ಪ್ರಧಾನಿಗಳಿಗೆ ಹಿಡಿಸಿರಲಿಲ್ಲವೇ?
ಇದನ್ನೂ ಓದಿ : ಕನ್ನಡದ ಸಾಹಿತಿ ಬಾನು ಮುಷ್ತಾಕ್ ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ
ಗೀತಾಂಜಲಿ ಶ್ರೀ : ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ 2022
ಗೀತಾಂಜಲಿ ಶ್ರೀಅವರಿಗೆ 2022 ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂತು. ಈ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಭಾರತಿಯೇ
ಈಕೆ. ಹೆಮ್ಮೆ ಪಡುವ ವಿಷಯ. ದಕ್ಷಿಣ ಏಶಿಯದಭಾಷೆಯ ಒಂದರಲ್ಲಿ ಇಂತಹ ಪ್ರಶಸ್ತಿ ಪಡೆದ ಮೊದಲ ಮಹಿಳೆ ಅವರು. ಈಕೆ ಹಿಂದಿಯಲ್ಲಿ ಬರೆದ ಕಾದಂಬರಿ “ಮರಳಿನ ಸಮಾಧಿ” ಪ್ರಶಸ್ತಿ ಪಡೆದ ಕೃತಿ . ಹಿಂದಿ ಭಾಷೆಯನ್ನು ಹಿರಿದಾಗಿಸಿ, ಅದಕ್ಕೆ ಅಂತರರಾಷ್ಟ್ರೀಯ ಸ್ಥಾನ ಮಾನ ಪಡೆಯುವ ಆಕಾಂಕ್ಷೆ ತೋರುವ ಪ್ರಧಾನಿ ಮತ್ತು ಅವರ ಕೇಸರಿ ಪಡೆ ದಿವ್ಯ ಮೌನ ಧಾರಣೆ ಮಾಡಿತು. ಈ ಲೇಖಕಿಯ ಈ ಕಾದಂಬರಿ ಬಹುತ್ವವನ್ನು ಎತ್ತಿ ಹಿಡಿಯುತ್ತದೆ. ಅಷ್ಟೇ ಅಲ್ಲ. ಪಾಕಿಸ್ತಾನದ ಒಬ್ಬ ಮುಸ್ಲಿಮ್ ಮತ್ತು ಭಾರತದ ಒಬ್ಬ ಹಿಂದು ಮಹಿಳೆಯ ನಡುವೆ ಇರುವ ಬಲವಾದ ಸಂಬಂಧವನ್ನು ಅದು ಒಳಗೊಂಡಿದೆ. ಕೇಸರಿ ಪಡೆಗೆ ಅದು ಹೇಗೆ ಪಥ್ಯವಾದೀತು ?
ಬಾನು ಮುಷ್ಟಾಕ್ : 2025 ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ
ಈಗ ಕನ್ನಡದ ಬಾನು ಮುಷ್ಟಾಕ್ ಅವರ “ಹೃದಯ ದೀಪ” ಎಂಬ ಕೃತಿಯ ಆಂಗ್ಲ ಅನುವಾದಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಾಗಲೂ ಇದೇ ದಿವ್ಯ ಮೌನ ಪ್ರಧಾನಿ ಮತ್ತು ಅವರ ಕೇಸರಿ ಪಡೆಯ ಪ್ರತಿಕ್ರಿಯೆ. ಬಾನು ಅವರು ಪ್ರಗತಿಪರ ಚಿಂತನೆಯ ಭಾಗ. ಲಿಂಗ ಸಮಾನತೆ, ಕನ್ನಡ, ಉರ್ದು, ದಖನಿ ಮತ್ತು ಹಿಂದಿ ಭಾಷೆಗಳನ್ನು ಎತ್ತಿ ಹಿಡಿಯುವ ಲೇಖಕಿ. ಜನ ಚಳುವಳಿಗಳ ಜೊತೆಗೆ ಗುರುತಿಸಿಕೊಂಡವರು. ಪಿತೃ ಪ್ರಧಾನ್ಯತೆಯನ್ನು ಮತ್ತು ಅದು ಪ್ರತಿಪಾದಿಸುವ ಅಸಮಾನತೆಯನ್ನು ಪ್ರಶ್ನಿಸುವವರು. ಇಂತವರಿಗೆ ಪ್ರಶಸ್ತಿ ಬಂದರೆ ಅರಗಿಸಿಕೊಳ್ಳಲು ಬಹುಶಃ ಅವರಿಗೆ ಸಾಧ್ಯವಾಗಿರಲಾರದು.
ಇದನ್ನೂ ನೋಡಿ : ‘ಬೂಕರ್’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media