ವಿಮಲಾ .ಕೆ.ಎಸ್
ಎದೆ ಝಲ್ಲೆನ್ನುವ ಸಂಗತಿಗಳು ಮತ್ತೆ ಮತ್ತೆ ಜರುಗುತ್ತಿವೆ. ಕರಾವಳಿಯನ್ನು ತಮ್ಮ ಕೋಮುವಾದೀ ಪ್ರಯೋಗಶಾಲೆಯನ್ನಾಗಿಸಿಕೊಂಡವರೀಗ ಅದನ್ನು ತಮ್ಮ ರಂಗಸ್ಥಳ ಮಾಡಿಕೊಂಡಿದ್ದಾರೆ. ರಾಜ್ಯದ ಅತ್ಯಂತ ಬುದ್ದಿವಂತರ, ʼವಿದ್ಯಾವಂತರʼ ಜಿಲ್ಲೆ ಎನಿಸಿಕೊಂಡು ಮುಂದುವರೆದ ಜಿಲ್ಲೆ ಈಗ ಕೋಮುವಾದ, ಮತಾಂಧತೆಯಲ್ಲಿ ಎಲ್ಲರನ್ನೂ ಹಿಂದಿಕ್ಕಿ ನಾಗಾಲೋಟದಲ್ಲಿ ಓಡುತ್ತಿದೆ. ಕೋಮುವಾದ
ವ್ಯಾಪಾರ ವಹಿವಾಟುಗಳು ಮತ್ತು ನೈಜ ಜೀವನ ಕ್ರಮದ ಭಾಗವಾಗಿ ಹಿಂದೊಮ್ಮೆ ಎಲ್ಲರೂ ಸಹಜೀವನ ನಡೆಸುತ್ತಿದ್ದ ಜಿಲ್ಲೆ ಈಗ ಬಡವರು, ದುಡಿದು ತಿನ್ನುವವರ ಪಾಲಿಗೆ ದುಃಸ್ವಪ್ನವಾಗುವತ್ತ ಹೊರಟಿದೆ. ಕೋಮುವಾದ
೮೦ರ ದಶಕದಲ್ಲಿ ಮಂಗಳೂರು ನಗರದಲ್ಲಿ ಇದ್ದ ನನಗೆ ಯಾವತ್ತೂ ಆ ನೆಲ ಒಂದು ಅಸುರಕ್ಷತೆಯ ತಾಣ ಎಂದು ಅನಿಸಿರಲೇ ಇಲ್ಲ.ಬೆಂಗಳೂರಿನಿಂದ ರಾತ್ರಿ ಹೊರಟು ಮಂಗಳೂರು ತಲುಪಿ ಬೆಳಕು ಹರಿಯುವ ಮುಂಚೆಯೇ ಯಾವ ಅಂಜಕೆ ಅಳುಕುಗಳಿಲ್ಲದೇ ಕಂಕನಾಡಿ ಬಸ್ ಸ್ಟ್ಯಾಂಡ್ ನಿಂದ ನಿರಾತಂಕವಾಗಿ ನಡೆದು ಹಾಸ್ಟಲ್ ಗೆ ಹೋಗುತ್ತಿದ್ದ ಆ ಮಂಗಳೂರು ಹೀಗಿರಲಿಲ್ಲ ಎಂದ್ರೆ ಹುಬ್ಬೇರತ್ತಾ? ಕೋಮುವಾದ
ಇದನ್ನೂ ಓದಿ: ಆದಷ್ಟು ಶೀಘ್ರದಲ್ಲಿ ಎಇ ಮತ್ತು ಜೆಇ ಮರು ಪರೀಕ್ಷೆ ನಡೆಸಿ: ಹೈಕೋರ್ಟ್
90ರ ದಶಕದಲ್ಲಿ ಹೆಚ್ಚು ಮುನ್ನೆಲೆಗೆ ಬಂದ ಹಲವು ಘಟನೆಗಳು ನಿಧಾನವಾಗಿ ಕೋಮುವಿಭಜನೆಯನ್ನು ಗಾಢವಾಗಿಸತೊಡಗಿದ್ದು ಮರೆಯಲಾಗದು. ಚರ್ಚ್ ಮೇಲಿನ ಧಾಳಿ, ಅಂತರ್ಧರ್ಮೀಯ ಯುವಕ ಯುವತಿಯರ ಸ್ನೇಹವನ್ನೂ ಸಹಿಸದೇ ಶುರುವಿಟ್ಟುಕೊಂಡ ಧಾಳಿಗಳು, ಪಿಲಿಕುಳದಲ್ಲಿ ಜೋಡಿಗಳನ್ನು ಯುವಕರ ಗುಂಪೊಂದು ಹಿಂಸೆ ಮಾಡಿತು, ಬಸ್ಸಿನಲ್ಲಿ ಅಕ್ಕಪಕ್ಕ ಕುಳಿತಿದ್ದರೆಂದೋ, ಅಥವಾ ಸೀಟು ಸಿಗದೇ ನಿಂತ ಗೆಳೆಯನ ಪುಸ್ತಕಗಳನ್ನು ಹಿಡಿದುಕೊಂಡಳೆಂದೋ ಬಸ್ಸುಗಳನ್ನು ಅಡ್ಡಗಟ್ಟಿ ದೌರ್ಜನ್ಯ ನಡೆಸಿದ ಘಟನೆಗಳು ವರದಿಯಾಗತೊಡಗಿದಾಗ ಬೆಚ್ಚಿ ಬೀಳುತ್ತಿದ್ದೆವು. ಆ ನಂತರ ಪಬ್ ದಾಳಿ, ಹೋಂಸ್ಟೇ ಧಾಳಿಯಾಗಿ ಮತಾಂಧತೆ, ಕೋಮುವಾದ ತನ್ನ ಬೇರು ಬಿಳಿಲುಗಳಾಗುವ ಮಟ್ಟಕ್ಕೆ ಬೆಳೆದುಬಿಟ್ಟಿತು. ಇವೆಲ್ಲವನ್ನೂ ನೈತಿಕ ಪೋಲೀಸ್ ಗಿರಿ ಎಂದು ಕರೆಯತೊಡಗಲಾಯಿತು.
ಈಗ ಅಂದು ನೆಟ್ಟ ವಿಷದ ಬೀಜ ಬಲಿಯತೊಡಗಿದೆ. ಜಿಲ್ಲೆಯ ಶ್ರಮಜೀವಿಗಳ ಬದುಕು ದುರ್ಭರವಾಗುತ್ತ ಹೋದಂತೆಲ್ಲ, ತಮ್ಮ ರಾಜಕೀಯದ ಬಲವರ್ಧನೆಗಾಗಿ ಭಾರತೀಯ ಜನತಾ ಪಕ್ಷ ಕೋಮುವಾದವನ್ನೇ ಆಯುಧವಾಗಿ ಬಳಸಲು ಹೊಂಚು ಹಾಕಿದ್ದು ಹಿಂದುಳಿದ ವರ್ಗಗಳ, ಬಡ ಕುಟುಂಬಗಳ ಹದಿ ಹರೆಉಯದ ಯುವಕರನ್ನು. ಇಂದೀಗ ಅವರೆಲ್ಲ ಸಿಕ್ಕ ಸಿಕ್ಕಲ್ಲಿ ಕತ್ತಿ ಝಳಪಿಸುತ್ತ ಒಂದು ಕಾಲದಲ್ಲಿ ಅನ್ಯೋನ್ಯವಾಗಿ ಬದುಕುತ್ತಿದ್ದ ಸಾಮರಸ್ಯದ ಬೇರುಗಳನ್ನು ಕಡಿದು ನಾಶ ಮಾಡುವ ಕೋಮುವಿಷ ಹರಡುವ ಕಾಲಾಳುಗಳಾಗಿ ಮಾರ್ಪಟ್ಟಿದ್ದಾರೆ. ಕೋಮುವಾದ
ಫಕ್ಕನೆ ನೆನಪಾಗುತ್ತದೆ. ೨೦೦೦ದ ದಶಕದಲ್ಲಿ ಮಹಿಳಾ ಸಂಘಟನೆಯ ಕಾರ್ಯ ನಿಮಿತ್ತ ಮಂಗಳೂರಿಗೆ ಹೋದಾಗ ಅಲ್ಲಿನ ಗೆಳತಿಯರು ಕಣ್ಣೀರು ತುಂಬಿ ಹೇಳುತ್ತಿದ್ದ ಮಾತು. ನನ್ನ ಮಗ ಪುಂಡರ ಗುಂಪಿನ ಭಾಗವಾಗುತ್ತಿದ್ದಾನೆ. ಮನೆಯ ಮೇಲೆ ಭಗವದ್ವಜ ಹಾರಿಸಲು ಹಣ ಕೇಳ್ತಾನೆ. ಕೊಡುವುದಿಲ್ಲ ಎಂದರೆ ಹೋಡೀಲಿಕ್ಕೆ ಬರ್ತಾನೆ..ಎಂತ ಮಾಡೂದು..ಹಾಗೆಯೇ ಅಂದು ಸಾಕಷ್ಟು ಜನಪ್ರತಿನಿಧಿಗಳನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದ ಧುರೀಣರು ಹಿಂದೂ ಸಮಾಜೋತ್ಸವ, ವಿರಾಟ್ ಹಿಂದೂ ಸಮಾಜೋತ್ಸವಗಳ ಭಾಗವಾಗಿ, ಹಣವೂ ಕೊಟ್ಟು, ಹೆಸರೂ ಕೊಟ್ಟು ತಾವೇ ಕೈಯ್ಯಾರೆ ಸಂಘಿಗಳ ಕೈಗೆ ಜಿಲ್ಲೆಯನ್ನು ದಾನವಾಗಿ ಕೊಟ್ಟಿದ್ದು ಕಡಿಮೆ ಅಪರಾಧವಲ್ಲ. ಮತಗಳಿಕೆಯ ರಾಜಕಾರಣವಾಗಿ ಹಿಂದೂ ಸಮಾಜೋತ್ಸವಕ್ಕೆ ಬೆಂಬಲಿಸಿದರೆ ಹಿಂದೂಗಳ ಮತಗಳು ತಮಗೆ ಸಿಗುತ್ತವೆ ಎಂದು ಭ್ರಮೆಗೊಂಡವರು. ಸಂಘಿಗಳು ಹೇಳುವ ಹಿಂದುತ್ವ ಮತ್ತು ಹಿಂದೂ ಧರ್ಮಗಳ ಮಧ್ಯೆ ವ್ಯತ್ಯಾಸಗಳನ್ನು ಗುರುತಿಸದಿರುವಷ್ಟು ಮತಿಹೀನತೆಯ ಪ್ರದರ್ಶನವಿಂದು ಇಡೀ ಜಿಲ್ಲೆಯನ್ನು ಕೋಮುವಾದಿಗಳ ಮತ್ತು ಕ್ರಿಯೆಗೆ ಪ್ರತಿಕ್ರಿಯೆಯಾಗಿ ಹಿಂಸೆಗೆ ಪ್ರತಿಹಿಂಸೆಗೆ ಇಳಿಯುವ ಮತೀಯವಾದಿಗಳ ಕುಸ್ತಿಯ ತಾಣವನ್ನಾಗಿ ಮಾಡಿದೆ. ಇದರ ಫಲವಾಗಿ ದಕ್ಷಿಣಕನ್ನಡದಲ್ಲಿ ಮನುಷ್ಯರ ಹೆಣಗಳು ಬೀದಿಗಳಲ್ಲಿ ಬೀಳುತ್ತಿವೆ.
ಈ ಮೊದಲು ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಇರುವವರು, ರೌಡಿ ಶೀಟರ್ ಎಂದು ಹೇಳಲ್ಪಡುವ, ಫಾಸಿಲ್ ಮತ್ತು ದಲಿತ ಯುವಕ ಕೀರ್ತಿಯವರನ್ನು ಕೊಲೆ ಮಾಡಿದ ಆರೋಪಿ ಸುಹಾಸ್ ಶೆಟ್ಟಿಯ ಕೊಲೆ ನಡೆಯುತ್ತದೆ. ಕೊಲೆಯಂತಹ ಹೇಯಕೃತ್ಯ ಯಾರು ಮಾಡಿದರೂ ನೆಲದ ಕಾನೂನಿನ ಅನ್ವಯ ಶಿಕ್ಷೆಯಾಗಬೇಕು. ಆದರೆ ದಕ್ಷಿಣ ಕನ್ನಡದ ಭಾರತೀಯ ಜನತಾ ಪಕ್ಷ ಮತ್ತು ಅದರ ಅಂಗಸಂಸ್ಥೆಗಳು ಅದನ್ನೂ ರಾಜಕೀಯಕ್ಕೆ ಬಳಸಿಕೊಂಡರು. ಅಹಿತಕರ ಘಟನಗಳು ನಡೆದರೆ ಸ್ಥಳೀಯ ಜನಪ್ರತಿನಿಧಿಗಳು ಧಾವಿಸಿ ಬಂದು ಅದನ್ನು ತಡೆಯಬೇಕು. ಜನರಲ್ಲಿ ನ್ಯಾಯದ ಪರವಾಗಿ ವಿಶ್ವಾಸ ಮೂಡಿಸಬೇಕು. ಸರಕಾರ, ಅಧಿಕಾರದ ಮೇಲೆ ಪ್ರಭಾವ ಬೀರಿ ನ್ಯಾಯಕ್ಕಾಗಿ ಒತ್ತಾಯಿಸಬೇಕು. ಆದರೆ ಇಲ್ಲಿ ನಡೆಯುವುದೇ ಬೇರೆ. ಕೊಲೆಯಾದವನನ್ನು ಹಿಂದೂ ಎಂದು ಹೈಪ್ ಕೊಟ್ಟು ಸಾವಿರಾರು ಜನರನ್ನು ಸೇರಿಸಿ ತಾವೇ ಅದರ ಮುಂದಾಳತ್ವ ವಹಿಸಿ ಪ್ರಚೋದನಕಾರಿ ಭಾಷಣ ಮಾಡಿ ಜನರನ್ನು ಭಾವೋದ್ರೇಕಗೊಳಿಸುವ ಕ್ಷುಲ್ಲಕ ರಾಜಕಾರಣವನ್ನು ಮಾಡಿದ್ದು. ಇದಕ್ಕೆ ಸ್ಥಳೀಯ ಪೋಲಿಸರ ಬೆಂಗಾವಲು ಬೇರೆ!.
ಇದರ ಮುಂದುವರೆದ ಭಾಗವಾಗಿ ಬಡ ಕುಟುಂಬದ ಮಾನಸಿಕ ಕ್ಷೋಭೆಯಲ್ಲಿದ್ದ ಕೂಲಿಕಾರ,ವಲಸಿಗ ಅಶ್ರಫ್ ನನ್ನು ಸುಮಾರು ೩೦ ಜನರ ಗುಂಪೊಂದು ಹೊಡೆದು ಕೊಲ್ಲುತ್ತದೆ. ಯಥಾಪ್ರಕಾರ ಪೋಲಿಸರ ನಿರ್ಲಕ್ಷ್ಯ. ನಂತರವೂ ಮುಸ್ಲಿಂ ಸಮುದಾಯದ ನಾಲ್ಕೈದು ಜನರಿಗೆ ಚೂರಿ ಇರಿತವಾಗಿದೆ. ಈಗ ಇನ್ನೊಂದು ಕೊಲೆ. ಈತನೂ ಕೂಲಿಕಾರ್ಮಿಕ. ಬೆಳಿಗ್ಗೆ ಎದ್ದು ಮನೆಯಿಂದ ಕೂಲಿ ಕೆಲಸಕ್ಕೆ ಬಂದ ಇಬ್ಬರನ್ನು ಹಾಡು ಹಗಲೇ ಕೊಚ್ಚಿ ಕೊಲೆ ಮಾಡುವಷ್ಟು ದಾರ್ಷ್ಟ್ಯ ಬಂತೆಲ್ಲಿಂದ? ಎರಡೇ ದಿನ ಮೊದಲು ಬಜ್ಪೆಯಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಜಾಗರಣ ವೇದಿಕೆಯ ಲೀಡರ್ ʼಪ್ರತೀಕಾರ ನಡೆಸಿಯೇ ಸಿದ್ಧʼ ಎಂದು ಕೊಡುವ ಕರೆಗೆ ಅಂಗೀಕಾರವೆಂಬಂತೆ ಚಪ್ಪಾಳೆ ಹೊಡೆದವರು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಬಿ.ಜೆ.ಪಿ.ಶಾಸಕರು.
ಹೀಗೆ ದ್ವೇಷದ ಕಿಚ್ಚು ಹೊತ್ತಿಸಿ ಯಾರಿಂದಲೋ ಯಾರನ್ನೋ ಹತ್ಯೆ ಮಾಡಿಸಿ ಅವರನ್ನು ಜೈಲಿಗೆ ಕಳಿಸಿ ಇವರು ಸುಖವಾಗಿ ಆಧಿಕಾರವನ್ನು ಅನುಭವಿಸಿಕೊಂಡಿರುವ ದುಃಸ್ಥಿತಿಗೆ ದಕ್ಷಿಣ ಕನ್ನಡ ಬಂದು ನಿಂತಿದೆ. ಸುಹಾಸ್ ಶೆಟ್ಟಿಯ ಕೊಲೆಯಾದಾಗ ಮಂಗಳೂರು ಬಂದ್ ಕರೆ ನೀಡಲಾಗುತ್ತದೆ. ದ್ವೇಷ ಭಾಷಣ ನಡೆಯುತ್ತದೆ. ಬೃಹತ್ ಮೆರವಣಿಗೆ ನಡೆಯುತ್ತದೆ. ಪೋಲಿಸ್ ಬಂದೋಬಸ್ತ್ ನಲ್ಲಿ. ಆದರೆ ಈಗ ಕೂಲಿ ಕೆಲಸಕ್ಕೆ ಹೋದ, ಇಬ್ಬರು ಪುಟ್ಟ ಮಕ್ಕಳ ತಂದೆ ದುಡಿಮೆಯಿಂದಲೇ ಕುಟುಂಬವನ್ನು ಸಾಕುತ್ತಿದ್ದ ಯುವಕನ ಕೊಲೆಯಾದ ತಕ್ಷಣ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನೂತನ ವಿಧಾನವಿದು. ಬಂದ್ ಗೆ ಕರೆ ಕೊಡುವ ಭಜರಂಗಿಗಳು, ಸಂಘಿಗಳನ್ನು ನಾಮಕಾವಸ್ಥೆ ಸ್ಟೇಷನ್ ಗೆ ಕರೆತಂದು ಜಾಮಿನು ಕೊಟ್ಟು ಮನೆಗೆ ಕಳಿಸಲಾಗುತ್ತಿದೆ. ರಾಜ್ಯದಲ್ಲಿ ಇರುವುದು ಹೆಸರಿಗೆ ಕಾಂಗ್ರೆಸ್ ಸರಕಾರ. ಆದರೆ ಅಧಿಕಾರ ನಡೆಸುತ್ತಿರುವುದು ಸಂಘಪರಿವಾರ ಎಂದನಿಸಿದರೆ ಅದು ಯಾರ ತಪ್ಪು.
ಇಷ್ಟಕ್ಕೂ ಇಂತಹ ಸ್ಥಿತಿಗೆ ಕಾರಣವೇನೆಂದರೆ…ಒಂದು ಕಡೆ ಹಿಂದೂ ಮುಸ್ಲಿಂ ಮಧ್ಯೆ ದ್ವೇಷ ಹುಟ್ಟಿಸುವ ಮಾತುಗಳನ್ನೇ ಆಡುತ್ತಲೇ ಅಧಿಕಾರದ ಗದ್ದುಗೆಗೆ ಏರಿದ ಬಿ.ಜೆ,ಪಿ ಗೆ ಅದಲ್ಲದೇ ಬೇರೆ ಮಾರ್ಗವೇ ಇಲ್ಲ.೯೦ರ ದಶಕದಲ್ಲಿ ಪ್ರಾರಂಭ ಮಾಡಿದ ಇಟ್ಟಿಗೆ ಪೂಜೆ, ಕರಸೇವೆ ರಥಯಾತ್ರೆ ರಾಮಮಂದಿರ ವಿಷಯಗಳ ಮೂಲಕ ಜನರ ಮನಸ್ಸಿನೊಳಗೆ ಇಳಿದಾದ ಮೇಲೆ ಅದೇ ಭಾವಪ್ರಚೋದಕ ಹಾದಿಯಲ್ಲಿಯೇ ಮುಂದುವರೆಯುವ ರಾಷ್ಟ್ರೀಯ ಅಜೆಂಡಾ ಅವರದು.
ಇನ್ನು ಕಾಂಗ್ರೆಸ್ ಪಕ್ಷದ ಹಲವು ನಾಯಕರು ಮತ್ತು ಮುಸ್ಲಿಂ ಸಮುದಾಯದ ದೊಡ್ಡ ವ್ಯಾಪಾರಿಗಳು ಹಾಗೂ ಭಾ.ಜ.ಪ.ದ ವ್ಯವಹಾರಸ್ಥರ ವರ್ಗ ಬಂಧುತ್ವಕ್ಕೆ ಇಂತಹ ಯಾವುದೆ ಕಾರಣಗಳು ಧಕ್ಕೆ ತಂದೊಡ್ಡುತ್ತಿಲ್ಲ. ಬೀದಿಯಲ್ಲಿ ಕಾಳಗ ಮಾಡಿ ಮುಸಲ್ಮಾನ್ ಯುವಕರನ್ನು ಕೊಲ್ಲುವ ಪ್ರೇರೇಪಣೆ ನೀಡುವವರೇ, ಮುಸ್ಲಿಂ ವ್ಯವಹಾರಸ್ಥ ಬಂಡವಾಳಗಾರರ ಜೊತೆಗಿನ ಸಖ್ಯವನ್ನು ಅಬಾದಿತವಾಗಿ ಉಳಿಸಿಕೊಳ್ಳುತ್ತಾರೆ. ಹಣ ಮತ್ತು ಸಂಪತ್ತಿಗೆ ಜಾತಿ ಧರ್ಮ, ಅಸಹನೆ ದ್ವೇಷಗಳ ಪರಿವೆ ಇಲ್ಲ. ಹಾಗಾಗಿಯೇ ಎರಡೂ ಸಮುದಾಯಗಳ ಉಳ್ಳವರು ಸುಖವಾಗಿ ಬದುಕುವ ದಾರಿಯನ್ನು ಬಡವರ ಮಕ್ಕಳನ್ನು ಬಾವಿಗೆ ತಳ್ಳಿ ಭದ್ರ ಮಾಡಿಕೊಳ್ಲುತ್ತಿದ್ದಾರೆ. ಕಾಳಗಕ್ಕೆ ಇಳಿಯುವವರು ಮುಗ್ಧರು. ಅವರ ಬಲಿದಾನದಲ್ಲಿ ಬಾವೈಕ್ಯತೆಯನ್ನು ಹಾಳುಗೆಡವಿ ಶ್ರೀಮಂತ ಹಿಂದೂ ಮುಸ್ಲಿಂರು ಧನೈಕ್ಯತೆಯಲ್ಲಿ ಐಷಾರಾಮವಾಗಿ ಇರುತ್ತಾರೆ.
ಮುಸಲ್ಮಾನ್ ಸಮುದಾಯದವರು ನಡೆಸುವ ವಾಣಿಜ್ಯ ಸಂಕೀರ್ಣಗಳಿಗೆ ಸೆಕ್ಯುರಿಟಿ ಸಿಬ್ಬಂದಿಗಳನ್ನು ಒದಗಿಸುವ ಕಂಟ್ರಾಕ್ಟ್ ಪಡೆದಿರುವವರು ಕಟ್ಟಾ ಹಿಂದುತ್ವವಾದಿ, ಪ್ರತಿದಿನ ವಿಷಕಕ್ಕುವ ಮತ್ತು ಕಾನೂನು ಪಾಲಕರ ಶ್ರೀರಕ್ಷೆಯಲ್ಲಿ ಬದುಕುವ ಜನವೇ ಎನ್ನುತ್ತಾರೆ ದಕ್ಷಿಣ ಕನ್ನಡದ ರಾಜಕಾರಣದ ಇಂಚಿಂಚೂ ಬಲ್ಲವರು. ಆಳುವ ಪಕ್ಷದ ಜನಪ್ರತಿನಿಧಿಗಳೂ ಕೂಡಾ ತಮ್ಮ ಕುಟುಂಬದ ವ್ಯಾಪಾರ ವ್ಯವಹಾರಗಳ ಬಗೆಗಲ್ಲದೇ ತಮ್ಮದೇ ಸಮುದಾಯದ ಯುವಕರ ಜೀವಬಲಿ, ಅವರ ಕುಟುಂಬ ಅನಾಥವಾಗುವ ಕುರಿತು ಒಂದಿನಿತೂ ಕಾಳಜಿ ಇಲ್ಲ ಎಂದು ಜನ ಮಾತನಾಡಿಕೊಳ್ಳತ್ತಿರುವುದು ಹೊಸತೇನಲ್ಲ. ಇಡೀ ಜಿಲ್ಲೆಗೆ ಒಬ್ಬರೇ ಬಿ.ಜೆ.ಪಿ.ಯೇತರ ಶಾಸಕರು ಅದೂ ಮುಸ್ಲಿಂ ಶಾಸಕರು. ಆದರೆ ಅವರ ಲಕ್ಷ್ಯ ಈ ಕೋಮುದ್ವೇಷಿಗಳನ್ನು ನಿಯಂತ್ರಣಕ್ಕೆ ತರುವತ್ತ ಇದ್ದಂತೆ ಕಾಣುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಬಹಿರಂಗ ಗುಟ್ಟಿದು, ಅವರಿಗೆ ಸಮುದಾಯದವರಿಗಿಂತ ಹೆಚ್ಚು ಆಪ್ತರು ಸಮುದಾಯದ ಶತ್ರುಗಳೇ ಎಂದು. ಇತ್ತೀಚಿನ ಘಟನೆಗಳು, ಅದನ್ನು ಬಹಳ ಗಂಭೀರವಾಗಿ ಅವರು ಪರಿಗಣಿಸದಿರುವ ರೀತಿ ನೋಡಿದರೆ ಇದೇ ಸತ್ಯವಾ ಎಂದು ಅನುಮಾನ ಮೂಡಿದರೆ ಅಲ್ಲವೆಂದು ಸಾಬೀತು ಮಾಡುವುದು ಅವರ ಜವಾಬ್ದಾರಿ.
ಇನ್ನು ಅಶ್ರಫ್, ವಲಸಿದ ಕಾರ್ಮಿಕ, ಗುಂಪುಹತ್ಯೆಯಾದ ಕೆಲವೇ ದಿನಗಳಲ್ಲಿ ಮಂಗಳೂರಿಗೇ ಹೋಗಿ ಸುದ್ದಿಗೋಷ್ಟಿ ನಡೆಸಿ ಜಿಲ್ಲೆಗೆ ಒಂದು ಕೋಮುವಾದ ನಿಗ್ರಹ ದಳ ರಚಿಸುವ ಮಾತನಾಡಿ ಬಂದ ಗೃಹ ಸಚಿವರು ಮುಂದೇನು ಮಾಡಿದರೆಂದು ಯಾರಿಗೂ ತಿಳಿದಿಲ್ಲ. ಅವು ಪರಿಸ್ಥಿತಿಯ ಉಪಶಮನದ ಆಟಗಳಾ ಎಂಬ ಪ್ರಶ್ನೆಗೂ ರಾಜ್ಯದ ಕಾಂಗ್ರೆಸ್ ಸರಕಾರ ಉತ್ತರಿಸಬೇಕು.
ದಕ್ಷಿಣ ಕನ್ನಡದ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಸಚಿವ ದಿನೇಶ್ ಗುಂಡೂರಾವ್ ರವರು ಈ ವಿಷಯವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕೆಂಬುದು ಸಹಜ ನಿರೀಕ್ಷೆ. ಅದು ಅವರಿಗೆ ಅವರ ಪಕ್ಷ ನೀಡಿದ ಹೊಣೆಗಾರಿಕೆ, ಮತ್ತು ಒಂದು ಧಾರ್ಮಿಕ ಅಲ್ಪ ಸಂಖ್ಯಾತ ಸಮುದಾಯ ಇಂತಹ ಸಂದರ್ಭಗಳಲ್ಲಿ ಎದುರಿಸುವ ತಲ್ಲಣಗಳು ಅವರಿಗೆ ಅರ್ಥವೂ ಆಗಬೇಕು. ಆದರೆ ಅವರೂ ಇವುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದಂತೆ ತೋರುತ್ತಿಲ್ಲ. ಇವಕ್ಕೆಲ್ಲ ಇರಬಹುದಾದ ಅಷ್ಟೊಂದು ಗುರುತರ ಕಾರಣ ಏನಿರಬಹುದು? ಊಹೆ ಮಾಡಿದರೆ ಅರಿಯುವುದು ಕಷ್ಟವೇನಲ್ಲ.
ದಕ್ಷಿಣ ಕನ್ನಡದ ಅಲ್ಪ ಸಂಖ್ಯಾತ ಸಮುದಾಯದ ಕಾಂಗ್ರೆಸ್ ಲೀಡರ್ಸ್ ಈಗ ಪ್ರಕಟಿತವಾಗಿಯೇ ಇನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದು ಕಾಂಗ್ರೆಸ್ ಗೆ ಮಾತ್ರವಲ್ಲ ಪ್ರಜ್ಞಾವಂತರಿಗೆಲ್ಲ ಎಚ್ಚರಿಕೆಯ ಸಂದೇಶ. ಬಹು ಸಂಖ್ಯಾತ ಕೋಮುವಾದ ಬಲಪಡೆದಂತೆಲ್ಲ ಅಲ್ಪ ಸಂಖ್ಯಾತ ಮೂಲಭೂತ ಮತೀಯವಾದ ತನ್ನ ಇರುವನ್ನು ಭದ್ರಪಡಿಸಿಕೊಳ್ಳುತ್ತದೆ. ಅದರ ಅಪಾಯವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಕೆಲವು ದಶಕಗಳಿಂದ ಹರಿಬಿಟ್ಟ ಕೋಮುವಿಷ, ಧರ್ಮದ ಹೆಸರಿನ ಅಮಲು, ಹುಸಿ ರಾಷ್ಟ್ರಭಕ್ತಿಯ ಘಮಲು ಎಲ್ಲ ವಿಭಾಗಗಳನ್ನೂ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಇತ್ತೀಚೆಗೆ ಆಸ್ಪತ್ರೆಯೊಂದರಲ್ಲಿ ರೋಗಿಯ ಭೇಟಿಗೆ ಸಂಬಂದಿಸಿದಂತೆ ನಡೆದ ವಾಗ್ವಾದ ಕೊನೆಯಲ್ಲಿ ಧರ್ಮರಾಜಕಾರಣಕ್ಕೆ ತಿರುಗಿ, ಅದೀಗ ಘಟನೆಯನ್ನು ಖಂಡಿಸಿ ಮಾತನಾಡಿದರು ಮತ್ತು ಅದನ್ನು ಪ್ರಸಾರ ಮಾಡಿದರು ಎಂಬ ಏಕೈಕ ಕಾರಣಕ್ಕೆ ನ್ಯಾಯಾಲಯದ ಮೂಲಕ ದೂರು ದಾಖಲಿಸಿರುವುದು. ಶಿಕ್ಷಣದ ಅವಕಾಶ ಸಿಕ್ಕ ಜನರು ಅದರಿಂದ ಜ್ಞಾನ ಪಡೆಯದಿದ್ದರೆ ಕೇವಲ ಪದವಿಗಳು ಹಣ ಹೆಸರು ಕೊಡಿಸಬಹುದೇ ಹೊರತೂ ವಿವೇಕವನ್ನಲ್ಲ ಎಂಬುದಕ್ಕೆ ಇದೂ ಒಂದು ಉದಾಹರಣೆ. ಹೀಗೆ ಸಿಕ್ಕ ಸಿಕ್ಕ ಸಂಗತಿಗಳನ್ನು ಕೋಮುದ್ವೇಷಕ್ಕೆ ತಿರುಗಿಸುವ ಜನ ಅರ್ಥ ಮಾಡಿಕೊಳ್ಳಬೇಕು, ತಾವು ಸೃಷ್ಟಿಸಿ ಬಿಟ್ಟು ಹೋಗುವ ಜಗತ್ತು ಮುಂದೆ ಹೇಗಾಗಬಹುದು ಎಂದು. ನೆರೆಯ ಅಫ್ಘಾನಿಸ್ಥಾನದ ಉದಾಹರಣೆ ಇದೆಯಲ್ಲವೇ?
ದಕ್ಷಿಣ ಕನ್ನಡದ ಎಡ ಪ್ರಗತಿಪರ ಸಂಘಟನೆಗಳು ತಮ್ಮ ಪ್ರತಿರೋಧ ಒಡ್ಡುತ್ತಲೇ ಇದ್ದಾರೆ. ಅಷ್ಟಿಷ್ಟು ಜನ ಬೆಂಬಲವೂ ಇದೆ. ಆದರೆ ಕೋಮುದ್ವೇಷ ಹರಡದಂತೆ, ವಿಧ್ವಂಸಕ ಮನೋವೃತ್ತಿಗಳನ್ನು ಮಟ್ಟ ಹಾಕಬೇಕಾದ ಪೋಲಿಸರು ಪ್ರಗತಿಪರರ ಮೇಲೆ ಕಣ್ಣಿಟ್ಟು ಕಾಯುತ್ತಾರೆ. ಅವಕಾಶ ಸಿಕ್ಕಲ್ಲಿ ಅವರ ಮೇಲೇ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ. ಇದು ರಾಜ್ಯದ ಗೃಹಮಂತ್ರಿಗಳ ಗಮನದಲ್ಲಿ ಇರಬೇಕಲ್ಲವೇ?
ಇನ್ನು ನಾಗರಿಕರೆಂದು ಕರೆದುಕೊಳ್ಳುವ ಸಮಾಜ, ಇಡೀ ರಾಜ್ಯದ ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿ ಇರುವ ದೊಡ್ಡ ಸಂಖ್ಯೆಯ ಜನ ರಾಜ್ಯದಾದ್ಯಂತ ಇದನ್ನು ಪ್ರತಿಭಟಿಸದಿದ್ದಲ್ಲಿ ಕೇವಲ ವೀರಾವೇಶದ ಭಾಷಣಗಳಿಂದಲೇ ಎಲ್ಲವನ್ನೂ ನಿಯಂತ್ರಿಸಿಬಿಡುವ ಭ್ರಮೆಯಲ್ಲಿ ಇರುವ ರಾಜ್ಯದ ಮುಖ್ಯಂತ್ರಿಗಳು ಮತ್ತವರ ಸಚಿವ ಗಣ ಹೀಗೇ ಕಾಲದೂಡುವುದರಲ್ಲಿ ಸಂಶಯವಿಲ್ಲ. ನಾವೀಗ ಗಮನಿಸಬೇಕಾದುದು, ಬಿ.ಜೆ.ಪಿಯಿಂದ ಈಗ ಉಚ್ಛಾಟಿತ ನಾಯಕ ಯತ್ನಾಳ್,ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿದ್ದಾಗಲಿ, ಎನ್.ರವಿ ಕುಮಾರ್ ಬಿ.ಜೆ,ಪಿ.ಯ ಶಾಸಕರು, ವಿಧಾನಪರಿಷತ್ತಿನ ಮುಖ್ಯ ಸಚೇತಕರು, ದಮನಿತ ಸಮುದಾಯದಿಂದ ಬಂದವರಾಗಿಯೂ ಕಲ್ಬುರ್ಗಿಯ ಜಿಲ್ಲಾಧಿಕಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕೇ ಅವರು ಪಾಕಿಸ್ಥಾನದಿಂದ ಬಂದವರಾ ಎಂಬ ಪ್ರಶ್ನೆ ಕೇಳಿದ್ದು, ಮಧ್ಯಪ್ರದೇಶದ ಸಚಿವರೊಬ್ಬರು ಕರ್ನಲ್ ಸೋಫಿಯಾರನ್ನು ಪಾಕಿಸ್ಥಾನದವರ ಸೋದರಿ ಎಂದಿದ್ದು, ಭಾ.ಜ.ಪ.ದ ಹರ್ಯಾಣಾದ ರಾಜ್ಯಸಭಾ ಸದಸ್ಯ, ಸಂಸದ ರಾಮಚಂದರ್ ಜಂಗ್ರಾ ಪೆಹಲಗಾಮ್ ದುರಂತದ ಸಂದರ್ಭದಲ್ಲಿ ಅಲ್ಲಿದ್ದ ಮಹಿಳೆಯರು ವೀರಾಂಗನೆಯರ ತರಹ ಹೋರಾಡಲಿಲ್ಲ ಎಂದು ಮಾಡಿದ ಅಸಂಬದ್ದ ಹೇಳಿಕೆಗಳು ಇವೆಲ್ಲ ಬಾಯ್ತಪ್ಪಿನಿಂದ ಬಂದ ಮಾತುಗಳಲ್ಲ. ನೈತಿಕತೆಯನ್ನು ಕಳೆದುಕೊಂಡ ನಾಲಿಗೆ ಮತ್ತು ನಂಜು ತುಂಬಿದ ಮೆದುಳಿನಿಂದ ಬರುವ ದುರುದ್ದೇಶಪೂರ್ವಕ ಘೋಷಣೆಗಳು ಅವು. ಇದರ ಹಿಂದೆ ಒಂದು ನಿರ್ದಿಷ್ಟ ಸೂತ್ರವಿದೆ. ಪ್ರಚೋದಿತ ಮೆದುಳು ವಿವೇಕವನ್ನು ಕಳೆದುಕೊಳ್ಳುತ್ತದೆ. ಅಲ್ಲಿಗೆ ಅವರ ರಾಜಕೀಯ ಉದ್ದೇಶ ಈಡೇರುತ್ತದೆ. ಮತ್ತು ಬಡ,ಅಸಹಾಯಕ ಸಮುದಾಯಗಳ ನಿರುದ್ಯೋಗಿ,ಯುವಕರು ಕೈಯ್ಯಲ್ಲಿ ತಲವಾರ್ ಹಿಡಿದು ಜನ್ಮ ಪಾವನವಾಯಿತೆಂದು ಬೀಗುತ್ತಾರೆ.
ಕರ್ನಾಟಕವನ್ನು ಗುಜರಾತ್ ಉತ್ತರಪ್ರದೇಶಗಳಂತೆ ಕೋಮುವಾದಿಗಳ ಆಟಾಟೋಪಕ್ಕೆ ಒಪ್ಪಿಸಿ ಕು.ವೆಂಪು.ರವರ ಸಾಲುಗಳನ್ನು ಗುಣುಗುಣಿಸುತ್ತ ಕಾಲ ತಳ್ಳುವುದೇ ಅಥವಾ ನಾವೂ ಏನಾದರೂ ಮಾಡಬಹುದೆ? ಇದು ಎಲ್ಲರಿಗೂ ಕಾಡಿದರೆ ಈಗಲೂ ಕಾಲಮಿಂಚಿಲ್ಲ.
ಇದನ್ನೂ ನೋಡಿ: ‘ಬೂಕರ್’ ಅನುಭವವನ್ನು ಬಿಚ್ಚಿಟ್ಟ ಬಾನು ಮುಷ್ತಾಕ್ Janashakthi Media