ನವದೆಹಲಿ: ಭಯೋತ್ಪಾದನೆ ಮತ್ತು ಯುದ್ಧಕೋರತನದ ವಿರುದ್ಧ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಬಳಸಿಕೊಂಡು ಕೋಮುವಾದಿ ದ್ವೇಷವನ್ನು ಹರಡುವ ಪ್ರಯತ್ನಗಳ ವಿರುದ್ಧ ಜೂನ್ನಲ್ಲಿ ಒಂದು ವಾರದ ಪ್ರಚಾರಾಂದೋಲನ ನಡೆಸಲು ಸಿಪಿಐ(ಎಂ) ಕೇಂದ್ರ ಸಮಿತಿ ಕರೆ ನೀಡಿದೆ. ಈ ವಿಷಯವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿಯವರು ತಿಳಿಸಿದ್ದಾರೆ. ಯುದ್ಧ
ಅವರು ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆಯ ನಂತರ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತಾಡುತ್ತ ಇದನ್ನು ತಿಳಿಸಿದರು. ಇತ್ತೀಚೆಗೆ ಮಧುರೈನಲ್ಲಿ ನಡೆದ ಸಿಪಿಐ(ಎಂ)ನ 24ನೇ ಮಹಾಧಿವೇಶನದಲ್ಲಿ ಆಯ್ಕೆಯಾದ ಹೊಸ ಕೇಂದ್ರ ಸಮಿತಿಯ ಮೊದಲ ಸಭೆ ಜೂನ್ 3ರಿಂದ 5 ರವರೆಗೆ ನವದೆಹಲಿಯಲ್ಲಿ ನಡೆಯಿತು. ಈ ಸಭೆಯು ಚರ್ಚಿಸಿದ ವಿಷಯಗಳು ಮತ್ತು ಕೈಗೊಂಡ ನಿರ್ಣಯಗಳ ಬಗ್ಗೆ ಅವರು ಮಾತನಾಡುತ್ತಿದ್ದರು. ಯುದ್ಧ
ಸಿಪಿಐ(ಎಂ) ಕೇಂದ್ರ ಸಮಿತಿಯು ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಪ್ರಸ್ತುತ ಸರ್ಕಾರದ ಸರ್ವಾಧಿಕಾರಶಾಹಿಯನ್ನು ಬಯಲಿಗೆಳೆಯಲು ಕಾರ್ಯಕ್ರಮಗಳನ್ನು ಆಯೋಜಿಸಲು ಕೂಡ ನಿರ್ಧರಿಸಿರುವುದಾಗಿ ಬೇಬಿ ತಿಳಿಸಿದರು. ಯುದ್ಧ
ಇದನ್ನೂ ಓದಿ: ಪತ್ರಗಳ ಮೂಲಕ ಪ್ರೇಮಲೋಕ ಸೃಷ್ಟಿಸಿದ “ಲವ್ ಲೆಟರ್ಸ್ ! ನಿನ್ನ ಪ್ರೀತಿಯ ನಾನು”
ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಸಿಪಿಐ(ಎಂ)ನ ಹೋರಾಟವನ್ನು ನೆನಪಿಸಿಕೊಳ್ಳಲು ಮಾತ್ರವಲ್ಲ, ಆರ್ಎಸ್ಎಸ್ನ ವಂಚಕ ಪಾತ್ರವನ್ನು ಬಯಲಿಗೆಳೆಯಲು ಈ ಸಂದರ್ಭವನ್ನು ಬಳಸಿಕೊಳ್ಳಲಾಗುವುದು ಎಂದ ಅವರು ತುತು ಪರಿಸ್ಥಿತಿಯ ಸಮಯದಲ್ಲಿ ಆಗಿನ ಆರೆಸ್ಸೆಸ್ ಸರಸಂಘಚಾಲಕರು ತುತುಪರಿಸ್ಥಿತಿಯ ಆಡಳಿತದ ಇಪ್ಪತ್ತಂಶದ ಕಾರ್ಯಕ್ರಮದ ಜೊತೆಗೇ ಸಂಜಯಗಾಂಧಿಯವರ ಐದಂಶಗಳ ಕಾರ್ಯಕ್ರಮವನ್ನೂ ಬೆಂಬಲಿಸುವುದಾಗಿ ಘೋಷಿಸಿದ್ದನ್ನು ನೆನಪಿಸಿದರು. ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯತ್ತವೂ ಗಮನ ಸೆಳೆಯಲಾಗುವುದು. ಆಗ ತುರ್ತು ಪರಿಸ್ಥಿತಿಯನ್ನು ಘೋಷಿಸಿದವರೂ ಈಗ ಅಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಮಾತಾಡುತ್ತಿರುವುದು ಬದಲಾದ ಪರಿಸ್ಥಿತಿಯನ್ನು ಸೂಚಿಸುತ್ತದೆ ಎಂದೂ ಬೇಬಿಯವರು ಹೇಳಿದರು. ಯುದ್ಧ
ಪ್ರಧಾನ ಕಾರ್ಯದರ್ಶಿ ಎಂಎ ಬೇಬಿ ನೇತೃತ್ವದ ಪಕ್ಷದ ಒಂದು ನಿಯೋಗವು 2025 ಜೂನ್ 10-11 ರಂದು ಕಾಶ್ಮೀರಕ್ಕೆ ಭೇಟಿ ನೀಡಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು. ಅಮ್ರಾ ರಾಮ್, ಪೊಲಿಟ್ ಬ್ಯೂರೋ ಸದಸ್ಯರು, ಸಂಸದ (ಲೋಕಸಭೆ); ಕೆ ರಾಧಾಕೃಷ್ಣನ್, ಕೇಂದ್ರ ಸಮಿತಿ ಸದಸ್ಯ, ಸಂಸದ (ಲೋಕಸಭೆ); ಕೇಂದ್ರ ಸಮಿತಿಯ ಆಹ್ವಾನಿತರಾದ ಜಾನ್ ಬ್ರಿಟ್ಟಾಸ್, ಸಂಸದ (ರಾಜ್ಯಸಭೆ); ಬಿಕಾಶ್ ರಂಜನ್ ಭಟ್ಟಾಚಾರ್ಯ, ಸಂಸದ (ರಾಜ್ಯಸಭೆ); ಸು ವೆಂಕಟೇಶನ್, ಸಂಸದ (ಲೋಕಸಭೆ) ಮತ್ತು ಎ ಎ ರಹೀಮ್, ಸಂಸದ (ರಾಜ್ಯಸಭೆ) ಈ ನಿಯೋಗದಲ್ಲಿನ ಇತರ ಸದಸ್ಯರು. ಯುದ್ಧ
ಪ್ಯಾಲೆಸ್ಟೈನ್, ಗಾಜಾದಲ್ಲಿ ಇಸ್ರೇಲ್ ನಡೆಸಿರುವ ನರಮೇಧದ ವಿರುದ್ಧ ಇಡೀ ಪಕ್ಷವು ದೇಶಾದ್ಯಂತ ತಕ್ಷಣವೇ ಪ್ರತಿಭಟನೆಗಳನ್ನು ಸಂಘಟಿಸುತ್ತದೆ ಎಂದೂ ಅವರು ಹೇಳಿದರು. ಗಾಜಾದ ಸಂಪೂರ್ಣ ನಾಶ ಮತ್ತು ಅದನ್ನು ಕೈವಶ ಮಾಡಿಕೊಳ್ಳುವ ಗುರಿಯಿಂದ ಇಸ್ರೇಲ್ ನರಮೇಧ ಮುಂದುವರೆದಿದೆ ಎಂದು ಈ ಸಂದರ್ಭದಲ್ಲಿ ಪ್ರಕಟಿಸಿರುವ ಕೇಂದ್ರ ಸಮಿತಿ ಹೇಳಿಕೆ ಖಂಡಿಸಿದೆ. ಬಿಜೆಪಿ ಸರ್ಕಾರವು ತಕ್ಷಣವೇ ಶಸ್ತ್ರಾಸ್ತ್ರಗಳ ರಫ್ತು ನಿಲ್ಲಿಸಬೇಕು ಮತ್ತು ಇಸ್ರೇಲ್ನೊಂದಿಗೆ ಮಿಲಿಟರಿ ಮತ್ತು ಭದ್ರತಾ ಸಂಬಂಧಗಳನ್ನು ಕಡಿದುಕೊಳ್ಳಬೇಕು. ಸರ್ಕಾರವು ಪ್ಯಾಲೆಸ್ಟೈನ್ ಗುರಿಸಾಧನೆಯ ಪರವಾಗಿ ದೃಢವಾಗಿ ನಿಲ್ಲಬೇಕು, ನಮ್ಮ ಸೌಹಾರ್ದವನ್ನು ಪುನರುಚ್ಚರಿಸಬೇಕು ಮತ್ತು ಎರಡು-ಪ್ರಭುತ್ವ ಪರಿಹಾರದ ನಮ್ಮ ದೀರ್ಘಕಾಲದ ವಿದೇಶಾಂಗ ನೀತಿ ನಿಲುವುಗಳಿಗೆ ಬದ್ಧವಾಗಿರಬೇಕು ಎಂದು ಕೇಂದ್ರಸಮಿತಿ ಆಗ್ರಹಿಸಿದೆ. ಯುದ್ಧ
ಪಹಲ್ಗಾಮ್ ಭಯೋತ್ಪಾದಕ ದಾಳಿಗಳು ಮತ್ತು ನಂತರ-ಪ್ರಧಾನಿ ಹುದ್ದೆಗೆ ಶೋಭೆ ತರದ ವರ್ತನೆ
ಪ್ರಧಾನ ಮಂತ್ರಿಗಳು ಸದ್ಯದಲ್ಲೇ ಚುನಾವಣೆ ನಡೆಯಲಿರುವ ಬಿಹಾರ ಮತ್ತು ಪಶ್ಚಿಮಬಂಗಾಲ ಮತ್ತು ಇತರ ಹಲವು ರಾಜ್ಯಗಳಲ್ಲಿ ‘ಆಪರೇಷನ್ ಸಿಂಧೂರ’ದ ರಾಜಕೀಯ ಪ್ರಯೋಜನ ಪಡೆಯುವ ಪ್ರಯತ್ನ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಒಬ್ಬಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಬೇಬಿಯವರು ಇತ್ತೀಚೆಗೆ ಪಕ್ಷದ ಸಿಪಿಐ(ಎಂ) ನಿಯೋಗವೊಂದು ಚುನಾವಣಾ ಆಯೋಗದೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಹೀಗಾಗಬಹುದು ಎಂಬ ಸಂದೇಹವನ್ನು ವ್ಯಕ್ತಪಡಿಸಿತ್ತು ಎಂದು ನೆನಪಿಸಿದರು. ಯುದ್ಧ
ಈ ಮೊದಲು ಬಾಲಾಕೋಟ್, ಪುಲ್ವಾಮಾ ಮತ್ತಿತರ ಭಯೋತ್ಪಾದಕ ದಾಳಿಗಳ ಸಂದರ್ಭದಲ್ಲಿ ಅವುಗಳ ಚುನಾವಣಾ ದುರುಪಯೋಗ ನಡೆಸಿದ್ದನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತ ಈ ಬಾರಿಯೂ ಹೀಗಾಗಬಹುದು, ಈ ಬಗ್ಗೆ ಆಯೋಗ ಎಚ್ಚರ ವಹಿಸಬೇಕು ಎಂದು ಸಿಪಿಐ(ಎಂ) ನಿಯೋಗ ಹೇಳಿತ್ತು. ಯುದ್ಧ
ಅದೀಗ ನಿಜವಾಗಿದೆ. ವಿವಿಧ ರಾಜಕೀಯ ಪಕ್ಷಗಳೊಂದಿಗೆ ಪಹಲ್ಗಾಮ್ ಕುರಿತಂತೆ ಎದ್ದಿರುವ ಪ್ರಶ್ನೆಗಳನ್ನು ಚರ್ಚಿಸಲು ಒಂದೆರಡ ಗಂಟೆಗಳ ಸಮಯವೂ ಇಲ್ಲದ ಪ್ರಧಾನ ಮಂತ್ರಿಗಳಿಗೆ ದೂರ-ದೂರದ ರಾಜ್ಯಗಳಲ್ಲಿ ಸಂಚರಿಸಿ ರ್ಯಾಲಿಗಳನ್ನು ನಡೆಸಲು ಬಹಳಷ್ಟು ಸಮಯವಿದೆ. ಆವರು ಆ ಸಭೆಗಳಲ್ಲಿ ಹೇಳಿರುವ ಮಾತುಗಳು ಒಬ್ಬ ಪ್ರಧಾನ ಮಂತ್ರಿಯ ಘನತೆಗೆ ತಕ್ಕುದಲ್ಲ ಎಂದು ಬೇಬಿ ಹೇಳಿದರು. ಯುದ್ಧ
ಈ ಬಗ್ಗೆ ಕೇಂದ್ರ ಸಮಿತಿಯ ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ:
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಕುರಿತಂತೆ ದುಃಖದಲ್ಲಿ ಮತ್ತು ಅದನ್ನು ಖಂಡಿಸುವಲ್ಲಿ ಒಗ್ಗಟ್ಟಿನಿಂದ ನಿಂತರು ಎಂದು ಕೇಂದ್ರ ಸಮಿತಿ ಗಮನಿಸಿದೆ. ಇದರಲ್ಲಿ, ಜಮ್ಮು ಮತ್ತು ಕಾಶ್ಮೀರದ ಜನರ ಸ್ಪಂದನೆ ಅನುಕರಣೀಯವಾಗಿದೆ, ಏಕೆಂದರೆ ಅವರು ಹಿಂಸಾಚಾರದ ವಿರುದ್ಧ ಸ್ವಯಂಸ್ಫೂರ್ತಿಯಿಂದ ಪ್ರತಿಭಟಿಸಿದರು. ಆದಾಗ್ಯೂ, ಜನರ ಈ ಒಗ್ಗಟ್ಟಿನ ಇಚ್ಛೆಗೆ ವಿರುದ್ಧವಾಗಿ, ಹಿಂದುತ್ವ ಶಕ್ತಿಗಳು ಮುಸ್ಲಿಮರು ಮತ್ತು ಕಾಶ್ಮೀರಿಗಳ ವಿರುದ್ಧ ದ್ವೇಷ ಅಭಿಯಾನವನ್ನು ನಡೆಸಲು ಈ ಘೋರ ಭಯೋತ್ಪಾದಕ ದಾಳಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದವು. ಯುದ್ಧ
ಆಪರೇಷನ್ ಸಿಂಧೂರ್ ನಂತರ, ಪ್ರಧಾನ ಮಂತ್ರಿಗಳು ಮತ್ತು ಬಿಜೆಪಿ ಈ ಮಿಲಿಟರಿ ಕಾರ್ಯಾಚರಣೆಯನ್ನು ಪಕ್ಷಪಾತೀ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಪ್ರಯತ್ನಿಸಿವೆ. ಚುನಾವಣಾ ಉದ್ದೇಶಗಳಿಗಾಗಿ ಈ ಕಾರ್ಯಾಚರಣೆಯನ್ನು ಬಳಸಿಕೊಳ್ಳುತ್ತಿರುವುದು ಪ್ರಧಾನಮಂತ್ರಿ ಮೋದಿಯವರ ಭಾಷಣಗಳು ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎದ್ದು
ಕಾಣುತ್ತಿತ್ತು. ಯುದ್ಧ
ಹಲವು ಗಂಭೀರ ಪ್ರಶ್ನೆಗಳಿವೆ, ಇವಕ್ಕೆ ಸರ್ಕಾರದಿಂದ ತಕ್ಷಣದ ಉತ್ತರದ ಅಗತ್ಯವಿದೆ. 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ಮತ್ತು ರದ್ದತಿಯ ನಂತರ ಅಲ್ಲಿ ಪರಿಸ್ಥಿತಿ ಹೇಗೆ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂಬುದರ ಬಗ್ಗೆ ಸರ್ಕಾರ ಹೆಮ್ಮೆಯಿಂದ ಹೇಳಿಕೊಳ್ಳುತ್ತಿತ್ತು. ಇಂತಹ ದೋಷಪೂರಿತ ನಿಲುವು ಗಂಭೀರ ಭದ್ರತಾ ವೈಫಲ್ಯಗಳಿಗೆ ಕಾರಣವಾಗಿದೆ. ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಗುರುತಿಸಲಾಗಿದೆ, ಅವರನ್ನು ಇನ್ನೂ ಹಿಡಿಯಲಾಗಿಲ್ಲ. ಈ ವೈಫಲ್ಯಗಳಿಗೆ ಹೊಣೆಗಾರಿಕೆ ಮತ್ತು ಜವಾಬುದಾರಿಕೆಯನ್ನು ನಿಧ್ರಿಸಬೇಕಾಗಿದೆ. ಭಯೋತ್ಪಾದನೆಯನ್ನು ಎದುರಿಸುವಲ್ಲಿ ಮೊದಲ ಪಾಠವೆಂದರೆ ಜನರ ಒಗ್ಗಟ್ಟನ್ನು ಕಟ್ಟುವುದು, ಅಗತ್ಯ ಭದ್ರತಾ ಕ್ರಮಗಳನ್ನು ಬಲಪಡಿಸುವುದು, ಎಲ್ಲಾ ಲೋಪದೋಷಗಳನ್ನು ಮುಚ್ಚುವುದು ಮತ್ತು ಜನರ ಜೀವಗಳನ್ನು ರಕ್ಷಿಸುವುದು. ಯುದ್ಧ
ಮೇ 10 ರಂದು ಕದನ ವಿರಾಮ ಪ್ರಕಟಣೆ ನಡೆದ ರೀತಿಯ ಬಗ್ಗೆಯೂ ಪ್ರಶ್ನೆಗಳಿವೆ. ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಅಮೆರಿಕ ಮಧ್ಯಪ್ರವೇಶಿಸಿದೆ ಎಂದು ಅಧ್ಯಕ್ಷ ಟ್ರಂಪ್ ಪದೇ ಪದೇ ಪ್ರತಿಪಾದಿಸಿದ್ದಾರೆ. ಈ ಹೇಳಿಕೆಗೆ ಯಾವುದೇ ಪರಿಣಾಮಕಾರಿ ಖಂಡನೆ ಬಂದಿಲ್ಲ. ಸಿಪಿಐ(ಎಂ) ಕೇಂದ್ರ ಸಮಿತಿಯು ಈ ವಿಷಯದಲ್ಲಿ ಯಾವುದೇ ಅಮೆರಿಕದ ಹಸ್ತಕ್ಷೇಪವನ್ನು ಬಲವಾಗಿ ವಿರೋಧಿಸುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಗಳ ಪರಿಹಾರದಲ್ಲಿ ಇಂತಹ ಬಾಹ್ಯ ಹಸ್ತಕ್ಷೇಪವು ನಮ್ಮ ದೇಶದಲ್ಲಿನ ರಾಜಕೀಯ ಒಮ್ಮತಕ್ಕೆ ವಿರುದ್ಧವಾಗಿದೆ. ಯುದ್ಧ
ಭಯೋತ್ಪಾದಕ ದಾಳಿಗಳು ಮತ್ತು ಅವುಗಳ ಪರಿಣಾಮಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಸರ್ಕಾರ ನಿರಾಕರಿಸಿದ್ದನ್ನು ಕೇಂದ್ರ ಸಮಿತಿ ಖಂಡಿಸಿತು. ಸಂಸತ್ತನ್ನು ಕರೆಯುವ ಬದಲು, ಪ್ರಧಾನ ಮಂತ್ರಿಗಳು ಉನ್ಮಾದವನ್ನು ಬಡಿದೆಬ್ಬಿಸಲು ಮತ್ತು ರಾಜಕೀಯ ಲಾಭ ಪಡೆಯಲು ದೇಶಾದ್ಯಂತ ಪ್ರವಾಸ ಮಾಡಿದ್ದಾರೆ. ಸರ್ಕಾರವು ಕಾರ್ಯಾಚರಣೆ ಯಶಸ್ವಿಯಾಗಿದೆ ಮತ್ತು ಅದು ತನ್ನ ಉದ್ದೇಶಗಳನ್ನು ಸಾಧಿಸಿದೆ ಎಂದು ಘೋಷಿಸಿತ್ತು. ಆದರೆ ಪ್ರಧಾನ ಮಂತ್ರಿಗಳು ತಮ್ಮ ಎಲ್ಲಾ ಭಾಷಣಗಳಲ್ಲಿ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆಯೇ ಹೊರತು ಕೊನೆಗೊಳಿಸಲಾಗಿಲ್ಲ ಎಂದು ಹೇಳುತ್ತಾರೆ. ಈ ಮೂಲಕ, ಅವರು ಈ ಕಾರ್ಯಾಚರಣೆಯನ್ನು ತಮ್ಮ ಪಕ್ಷದ ರಾಜಕೀಯ ಯೋಜನೆಗೆ ಬಳಸಲು ಉದ್ದೇಶಿಸಿದ್ದಾರೆ. ಯುದ್ಧ
ಭಯೋತ್ಪಾದನೆಯನ್ನು ನಿಗ್ರಹಿಸಲು ಮಿಲಿಟರಿ ವಿಧಾನಗಳು ಏಕೈಕ ಪರಿಹಾರವಲ್ಲ ಎಂದು ಸಿಪಿಐ(ಎಂ) ನಿರಂತರವಾಗಿ ಪ್ರತಿಪಾದಿಸಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡಲು ರಾಜತಾಂತ್ರಿಕ, ರಾಜಕೀಯ ಮತ್ತು ಇತರ ಕ್ರಮಗಳನ್ನು ಅನುಸರಿಸಬೇಕಾಗಿದೆ. ಪ್ರಧಾನಮಂತ್ರಿಗಳು ಘೋಷಿಸಿರುವ ಹೊಸ ತತ್ವವು ಈ ಎಲ್ಲಾ ಆಯ್ಕೆಗಳನ್ನು ಮುಚ್ಚಿ ಬಿಡುತ್ತದೆ.
ಈ ವಿಧಾನವು ಉನ್ಮಾದವನ್ನು ಮಾತ್ರ ಉತ್ತೇಜಿಸುತ್ತದೆ, ಗಡಿಯ ಎರಡೂ ಬದಿಗಳಲ್ಲಿ ಉಗ್ರಗಾಮಿ ಶಕ್ತಿಗಳನ್ನು ಬಲಪಡಿಸುತ್ತದೆ ಮತ್ತು ಕೋಮು ವಿಭಜನೆಯನ್ನು ಮತ್ತಷ್ಟು ವಿಸ್ತರಿಸುತ್ತದೆ. ಯುದ್ಧ
ದ್ವೇಷ ಅಭಿಯಾನ ಮತ್ತು ಸರಕಾರದ ಮೌನ
ಬಿಜೆಪಿ/ಆರ್ಎಸ್ಎಸ್ ಅಲ್ಪಸಂಖ್ಯಾತರ ವಿರುದ್ಧ ದ್ವೇಷವನ್ನು ಹರಡುತ್ತಾ ತಮ್ಮ ಕೋಮು ಅಭಿಯಾನವನ್ನು ತೀವ್ರಗೊಳಿಸಿವೆ. ಸಂತ್ರಸ್ತರ ಕುಟುಂಬಗಳು, ಸೇನೆಯ ವಕ್ತಾರರು ಮತ್ತು ವಿದೇಶಾಂಗ ಕಾರ್ಯದರ್ಶಿಗಳ ಮೇಲೆ ಟ್ರೋಲ್ಗಳನ್ನು ಹರಿಯಬಿಡಲಾಯಿತು. ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು, ಸರ್ಕಾರವು ಮೌನವಾಗಿರಲು ನಿರ್ಧರಿಸಿತು, ದ್ವೇಷ ಅಭಿಯಾನಕ್ಕೆ ತನ್ನ ಮೌನ ಬೆಂಬಲವನ್ನು ತೋರಿಸಿತು. ಮುಖ್ಯವಾಹಿನಿಯ ಕಾರ್ಪೊರೇಟ್ ಮಾಧ್ಯಮಗಳ ಒಂದು ದೊಡ್ಡ ವಿಭಾಗವು ನಮ್ಮ ದೇಶದ ಪ್ರತಿಷ್ಠೆಯನ್ನು ಹಾಳುಮಾಡುವ ಉನ್ಮಾದವನ್ನು, ಕೋಮು ವಿಷವನ್ನು ಹರಡಿತು. ಯುದ್ಧ
ಮತ್ತೊಂದೆಡೆ, ಸರ್ಕಾರವು ಎಲ್ಲಾ ವಿಮರ್ಶಾತ್ಮಕ ಧ್ವನಿಗಳನ್ನು ಅಡಗಿಸಲು ತನ್ನ ಪೊಲೀಸ್ ಮತ್ತು ತನಿಖಾ ಸಂಸ್ಥೆಗಳನ್ನು ಹರಿಯಬಿಟ್ಟಿದೆ. ಇಂತಹ ದಾಳಿಗಳು ಸರ್ಕಾರದ ನವ-ಫ್ಯಾಸಿಸ್ಟ್ ತೆರನ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿಕೆ ಖೇದ ವ್ಯಕ್ತಪಡಿಸಿದೆ ವಲಸೆ ಮುಸ್ಲಿಮರನ್ನು, ವಿಶೇಷವಾಗಿ ಬಂಗಾಳಿ ಮಾತನಾಡುವ ವ್ಯಕ್ತಿಗಳನ್ನು ಬಾಂಗ್ಲಾದೇಶೀಯರೆಂದು ಗುರಿಯಾಗಿಸಿಕೊಂಡು ಬಲವಂತವಾಗಿ ಗಡೀಪಾರು ಮಾಡಲಾಗುತ್ತಿದೆ. ಬಿಜೆಪಿ ಸಚಿವರು ಮತ್ತು ನಾಯಕರು ಅತ್ಯಂತ ಅವಮಾನಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮುಂದುವರೆದು ಅದು ಹೇಳಿದೆ. ಯುದ್ಧ
ಜನ-ವಿರೋಧಿ ಆರ್ಥಿಕ ನೀತಿಗಳ ಉಗ್ರ ಮುಂದುವರಿಕೆ
ಇಡೀ ದೇಶವು ಭಯೋತ್ಪಾದಕ ದಾಳಿಗಳು ಮತ್ತು ಕೋಮುವಾದಿ ದ್ವೇಷದಿಂದ ಕಳವಳಪಡುತ್ತಿರುವಾಗಲೇ, ಬಿಜೆಪಿ ಸರ್ಕಾರವು ತನ್ನ ಬಂಟರಿಗೆ ಪ್ರಯೋಜನವಾಗುವಂತೆ ತನ್ನ ನವ ಉದಾರವಾದಿ ನೀತಿಗಳನ್ನು ಆಕ್ರಾಮಕವಾಗಿ ಅನುಸರಿಸುತ್ತಿದೆ. ಜನರನ್ನು ವಿಭಜಿಸುವ ಆರ್ಎಸ್ಎಸ್/ಬಿಜೆಪಿ ಕೋಮುವಾದಿ ನೀತಿಗಳು ಅವರ ಗಮನವನ್ನು ಬೇರೆಡೆಗೆ ಸೆಳೆಯಲು, ಜನರ ಏಕತೆಯನ್ನು ಮುರಿಯಲು ಮತ್ತು ಅವರ ಜೀವನೋಪಾಯಗಳ ಮೇಲೆ ದಾಳಿಯನ್ನು ಮುಂದುವರಿಸುವ ಆಶಯವನ್ನೇ ಹೊಂದಿವೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ. ಯುದ್ಧ
ಭಾರತೀಯ ಅರ್ಥವ್ಯವಸ್ಥೆಯ ನಿಜವಾದ ಮುಖ: ಸರ್ಕಾರವು ನಮ್ಮ ಆರ್ಥಿಕ ಪರಿಸ್ಥಿತಿಯ ವಾಸ್ತವತೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಭಾರತದ ಅರ್ಥವ್ಯವಸ್ಥೆಯು ಜಪಾನನ್ನು ಹಿಂದಿಕ್ಕಿ ನಾಲ್ಕನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಲಿದೆ ಎಂದು ಡಂಗುರ ಬಾರಿಸುತ್ತಿದೆ, ಆದರೆ ನಮ್ಮೆರಡು ದೇಶಗಳ ತಲಾ ಆದಾಯಗಳ ನಡುವಿನ ಅಗಾಧ ತಲಾ ಆದಾಯ ವ್ಯತ್ಯಾಸದಂತಹ ಸಂಗತಿಗಳನ್ನು ಮರೆಮಾಡುತ್ತದೆ. ಹೆಚ್ಚುತ್ತಿರುವ ಅಸಮಾನತೆಗಳು, ದುಡಿಯುವ ಜನರ ಜೀವನೋಪಾಯದ ಬಿಕ್ಕಟ್ಟು ನಮ್ಮ ಅರ್ಥವ್ಯವಸ್ಥೆಯ ನಿಜವಾದ ಲಕ್ಷಣಗಳಾಗಿವೆ, ಇದನ್ನು ಬಯಲುಗೊಳಿಸಬೇಕಾಗಿದೆ ಎಂದು ಕೇಂದ್ರ ಸಮಿತಿ ಹೇಳಿದೆ. ಯುದ್ಧ
ಪ್ರಮುಖ ವಲಯಗಳ ಖಾಸಗೀಕರಣ:
ಪರಮಾಣು ವಿದ್ಯುತ್ ಉತ್ಪಾದನೆಯನ್ನು ಖಾಸಗೀಕರಿಸಲು ಮತ್ತು ವಿದೇಶಿ ನಿರ್ವಾಹಕರಿಗೆ ಅವಕಾಶ ಒದಗಿಸಲು ಸರ್ಕಾರ ಒಪ್ಪಿಕೊಂಡಿದೆ. ಯುಎಸ್ ಪರಮಾಣು ರಿಯಾಕ್ಟರ್ ತಯಾರಕರ ಪ್ರವೇಶಕ್ಕೆ ಅನುಕೂಲ ಕಲ್ಪಿಸಲು, ಭಾರತೀಯ ಜನರ ಸುರಕ್ಷತೆಯನ್ನು ಬಲಿಗೊಟ್ಟು ಪರಮಾಣು ಹೊಣೆಗಾರಿಕೆ ಷರತ್ತನ್ನು ತಿದ್ದುಪಡಿ ಮಾಡಲು ಸರ್ಕಾರ ಒಪ್ಪಿಕೊಂಡಿದೆ. ಮೊದಲ ಬಾರಿಗೆ, ಯುದ್ಧ ವಿಮಾನಗಳ ಉತ್ಪಾದನೆಯನ್ನು ಖಾಸಗಿ ಕಾರ್ಪೊರೇಟ್ಗಳಿಗೆ ಹಸ್ತಾಂತರಿಸಲಾಗುತ್ತಿದೆ. ರಕ್ಷಣೆ, ಗಣಿಗಾರಿಕೆ ಮತ್ತು ಪರಮಾಣು ಶಕ್ತಿಯಂತಹ ಪ್ರಮುಖ ಕ್ಷೇತ್ರಗಳ ಖಾಸಗೀಕರಣವು ನಮ್ಮ ಸಾರ್ವಭೌಮತ್ವ ಮತ್ತು ಭದ್ರತೆಗೆ ಅವಹೇಳನಕಾರಿಯಾಗಿದೆ ಎನ್ನುತ್ತ ಸಿಪಿಐ(ಎಂ) ಭಾರತ ಸರಕಾರ ಸಾಮ್ರಾಜ್ಯಶಾಹಿ ಒತ್ತಡಗಳಿಗೆ ಮಣಿಯುವ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ ಎಂದು ಖೇದ ವ್ಯಕ್ತಪಡಿಸಿದೆ. ಯುದ್ಧ
ಭಾರತ ಸರ್ಕಾರವು ವರ್ಷಾಂತ್ಯದ ಮೊದಲು ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ)ಕ್ಕೆ ಸಹಿ ಹಾಕುವ ಗುರಿಯನ್ನು ಹೊಂದಿದೆ. ಜುಲೈ ಮೊದಲು, ಅದು ಮಧ್ಯಂತರ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ಉದ್ದೇಶಿಸಿದೆ. ವರದಿಗಳ ಪ್ರಕಾರ, ಅಮೆರಿಕದ ಬೇಡಿಕೆಗಳನ್ನು ಪೂರೈಸಲು ಸರ್ಕಾರವು ಈಗಾಗಲೇ ವಿವಿಧ ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲು ಒಪ್ಪಿಕೊಂಡಿದೆ. ಪ್ರಸ್ತಾವಿತ ಬಿಟಿಎ ಭಾರತೀಯ ರೈತರ ಜೀವನೋಪಾಯಕ್ಕೆ ಅಪಾಯವನ್ನುಂಟುಮಾಡುತ್ತದೆ ಮತ್ತು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇಗಳು) ಮತ್ತು ಔಷಧೀಯ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಯುದ್ಧ
ರಾಷ್ಟ್ರೀಯ ಭದ್ರತೆಗೆ ಸಂಭಾವ್ಯ ಪರಿಣಾಮಗಳ ಬಗ್ಗೆ ಕಳವಳಗಳಿದ್ದರೂ, ಸರ್ಕಾರವು ಭಾರತದಲ್ಲಿ ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆಗಳನ್ನು ಅನುಮೋದಿಸುವ ಅಂಚಿನಲ್ಲಿದೆ. ಸರ್ಕಾರವು ಈಗಾಗಲೇ ಯುಕೆಯೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್ಟಿಎ) ತೀರ್ಮಾನಿಸಿದೆ ಮತ್ತು ಇದೇ ರೀತಿಯ ಅನೇಕ ಒಪ್ಪಂದಗಳಿಗೆ ಸಿದ್ಧತೆ ನಡೆದಿದೆ. ಈ ಎಲ್ಲಾ ಒಪ್ಪಂದಗಳು ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಸಮಾಲೋಚನೆಗಳು ಅಥವಾ ಕಾಳಜಿಗಳಿಲ್ಲದೆ ಅಪಾರದರ್ಶಕವಾಗಿವೆ.
ಭಾರತೀಯ ಕಾರ್ಮಿಕ ವರ್ಗ ಮತ್ತು ಜನರ ಹಿತಾಸಕ್ತಿಗಳನ್ನು ಬಲಿಗೊಡುವ ಇಂತಹ ಒಪ್ಪಂದಗಳನ್ನು ವಿರೋಧಿಸುವುದಾಗಿ ಕೇಂದ್ರ ಸಮಿತಿ ಹೇಳಿದೆ.
ಸಾಮಾನ್ಯ ಜನಗಣತಿ ಮತ್ತು ಜಾತಿಗಣತಿ-ಸರ್ವಪಕ್ಷ ಸಭೆ ಕರೆಯಬೇಕು
ಉದ್ದೇಶಪೂರ್ವಕ ಮತ್ತು ಅತಿಯಾದ ವಿಳಂಬದ ನಂತರ, ಕೇಂದ್ರ ಸರ್ಕಾರವು ಕೊನೆಗೂ 2027 ರಲ್ಲಿ ಸಾಮಾನ್ಯ ಜನಗಣತಿಯನ್ನು ಮತ್ತು ಅದರೊಂದಿಗೆ ಜಾತಿ ಗಣತಿಯನ್ನು ನಡೆಸುವುದಾಗಿ ಘೋಷಿಸಲೇ ಬೇಕಾಗಿ ಬಂದಿದೆ ಎಂದು ಟಿಪ್ಪಣಿ ಮಾಡಿರುವ ಸಿಪಿಐ(ಎಂ) ಕೇಂದ್ರ ಸಮಿತಿ, ಸರ್ಕಾರವು ಅನುಸರಿಸಲು ಉದ್ದೇಶಿಸಿರುವ ವಿಧಾನಗಳನ್ನು ಕುರಿತಂತೆ ಅದರ ಉದ್ದೇಶಗಳ ಬಗ್ಗೆ ವಿವಿಧ ಸಂದೇಹಗಳು ವ್ಯಕ್ತವಾಗುತ್ತಿವೆ, ಸರ್ಕಾರವು ತಕ್ಷಣವೇ ಸರ್ವಪಕ್ಷ ಸಭೆಯನ್ನು ಕರೆದು ಈ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂದು ಆಗ್ರಹಿಸಿದೆ.
ಜುಲೈ 9 ರ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ:
ಕೇಂದ್ರ ಕಾರ್ಮಿಕ ಸಂಘಗಳು ಕರೆ ನೀಡಿದ ಜುಲೈ 9 ರ ಸಾರ್ವತ್ರಿಕ ಮುಷ್ಕರಕ್ಕೆ ಕೇಂದ್ರ ಸಮಿತಿಯು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿರುವ ಕೇಂದ್ರ ಸಮಿತಿ ಅದೇ ದಿನ, ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಬೇಡಿಕೆಗಳ ಮೇಲೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಎಂದೂ ಗಮನಿಸಿದೆ. ಮುಷ್ಕರವನ್ನು ಯಶಸ್ವಿಗೊಳಿಸಲು ಮುಷ್ಕರಕ್ಕೆ ಬೆಂಬಲವಾಗಿ ಸಕ್ರಿಯವಾಗಿ ಪ್ರಚಾರ ಮಾಡುವಂತೆ ಪಕ್ಷದ ಎಲ್ಲಾ ಸದಸ್ಯರು ಮತ್ತು ಘಟಕಗಳಿಗೆ ಕೇಂದ್ರ ಸಮಿತಿ ಕರೆ ನೀಡಿದೆ.
ಕೇಂದ್ರ ಸಮಿತಿಯ ಸಭೆಯ ಆರಂಭದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹತರಾದ ಜನರಿಗೆ, ಈಶಾನ್ಯದಲ್ಲಿ ಅಕಾಲಿಕ ಪ್ರವಾಹ ಮತ್ತು ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಕೇಂದ್ರ ಸಮಿತಿ ಸಂತಾಪ ಸೂಚಿಸಿತು.
ಇದನ್ನೂ ನೋಡಿ: ಹೊಟ್ಟೆಗೆ ಹಿಟ್ಟಿಲ್ಲದ ಭಾರತವೂ, ಆರ್ಥಿಕವಾಗಿ 4ನೆ ಸ್ಥಾನ ಎನ್ನುವ ಜುಟ್ಟಿಗೆ ಮಲ್ಲಿಗೆ ಹೂವೂ.. Janashakthi Media