ಆಂಧ್ರಪ್ರದೇಶ ರಾಜಧಾನಿಯಾಗಿ ವಿಶಾಖಪಟ್ಟಣ: ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ

ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣ ನೂತನ ರಾಜಧಾನಿಯಾಗಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ ಮಾಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ ನೂತನ ರಾಜಧಾನಿಯಾಗಿ ವಿಶಾಖಪಟ್ಟಣಂ ಕಾರ್ಯನಿರ್ವಹಿಸಲಿದೆ. ಎಲ್ಲಾ ಕಾರ್ಯಕಲಾಪಗಳು ಅಲ್ಲಿಗೆ ವರ್ಗಾವಣೆ ಆಗಲಿದೆ ಎಂದು ತಿಳಿಸಿರುವ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಕುರಿತಾದ ಪ್ರಕರಣ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಜಗನ್ ಮೋಹನ್‌ ರೆಡ್ಡಿ, ಹೊಸ ರಾಜಧಾನಿ ವಿಚಾರವನ್ನು ಪ್ರಸ್ತಾಪಿಸಿ, ಮುಂದಿನ ದಿನಗಳಲ್ಲಿ ನಮ್ಮ ರಾಜಧಾನಿಯಾಗಲಿರುವ ವಿಶಾಖಪಟ್ಟಣಕ್ಕೆ ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ. ಕೆಲವೇ ದಿನಗಳಲ್ಲಿ ನಾನು ಕೂಡ ವಿಶಾಖಪಟ್ಟಣಕ್ಕೆ ಸ್ಥಳಾಂತರವಾಗುತ್ತೇನೆ. ಮುಂದಿನ ಮಾರ್ಚ್ 3, 4ರಂದು ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಆಯೋಜಿಸಲಾಗುವುದು’ ಎಂದು ವಿವರಿಸಿದರು.

ಇದನ್ನು ಓದಿ: ಮೂರು ರಾಜಧಾನಿಗಳ ವಿಧೇಯಕ ಹಿಂದಕ್ಕೆ ಪಡೆದ ಆಂಧ್ರಪ್ರದೇಶ ರಾಜ್ಯ ಸರ್ಕಾರ

ಆಂಧ್ರಪ್ರದೇಶದಲ್ಲಿ ವ್ಯಾಪಾರ ಮಾಡುವುದು ಎಷ್ಟು ಸುಲಭವೆಂದು ನೀವೇ ನೋಡಲಿದ್ದೀರಿ. ನಾನು ನಿಮ್ಮನ್ನು ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಆಹ್ವಾನಿಸುತ್ತೇನೆ ಎಂದರು.

ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಪ್ರದೇಶ ಪ್ರತ್ಯೇಕ ರಾಜ್ಯವಾಗಿ ಬೇರ್ಪಟ್ಟು, ತನ್ನ ರಾಜಧಾನಿಯನ್ನಾಗಿ ಹೈದರಾಬಾದ್‌ ಅನ್ನು ಉಳಿಸಿಕೊಂಡಿದೆ. 9 ವರ್ಷಗಳ ಬಳಿಕ ಆಂಧ್ರಪ್ರದೇಶ ಹೊಸ ರಾಜಧಾನಿಯನ್ನು ಇಂದು ಘೋಷಿಸಿಕೊಂಡಿದೆ.

ಇಂದಿನ ಶೃಂಗಸಭೆಯಲ್ಲಿ ಕೊರಿಯಾದ ಕಿಯಾ ಮೋಟಾರ್ಸ್‌ನ ಎಂಡಿ ಹಾಗೂ ಸಿಇಒ ಟೇ ಜಿನ್ ಪಾರ್ಕ್, ಜಪಾನ್‌ನ ಟೋರೇ ಇಂಡಸ್ಟ್ರೀಸ್‌ನ ಎಂಡಿ ಹಾಗೂ ಸಿಇಒ ಯಮಗುಚಿ, ಅಮೆರಿಕ ಮೂಲದ ಕಂಪನಿ ಕ್ಯಾಡ್ಬರಿಯ ವಿಭಾಗೀಯ ಅಧ್ಯಕ್ಷ ದೀಪಕ್ ಧರ್ನರಾಜನ್ ಅಯ್ಯರ್, ಇಟಲಿಯ ಎವರ್ಟನ್ ಟೀ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ರೋಶನ್‌ ಗುಣವರ್ಧನ, ತೈವಾನ್‌ನ ಅಪಾಚೆ ಮತ್ತು ಹಿಲ್‌ ಟಾಪ್‌ ಗ್ರೂಪ್‌ನ ನಿರ್ದೇಶಕ ಸರ್ಗಿಯೋ ಲೀ, ಫ್ರಾನ್ಸ್‌ ನ ಸೇಂಟ್-ಗೋಬೈನ್ ಇಂಡಸ್ಟ್ರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಿಎಂಡಿ ಫಣಿ ಕುನಾರ್‌ ಈ ವೇಳೆ ಹಾಜರಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *