ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೇಶದ 10 ರಾಜ್ಯಗಳಿಗೆ ಕೇಂದ್ರದ ತಂಡ ಭೇಟಿ  

ನವದೆಹಲಿ: ಕೋವಿಡ್‌-19 ಮಾರ್ಗಸೂಚಿ ಉಲ್ಲಂಘನೆಯಿಂದಾಗಿ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ 10 ರಾಜ್ಯಗಳಿಗೆ ತಲಾ ಒಂದೊಂದು ತಂಡವನ್ನು ಕಳುಹಿಸಲಾಗಿದೆ ಎಂದು ಕೇಂದ್ರ ಸರಕಾರ ಪ್ರಕಟಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಅವರು ‘ದೇಶದ ಕೆಲವು ಪ್ರಮುಖ ರಾಜ್ಯಗಳಲ್ಲಿ ಕೋವಿಡ್  ಸೋಂಕು ಮತ್ತೆ ಹೆಚ್ಚಾಗುತ್ತಿದೆ. ಜನತೆ ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಗಳ ನಿಯಮಗಳನ್ನು ತಪ್ಪದೆ ಪಾಲಿಸಬೇಕು’ ಎಂದು ಕರೆ ನೀಡಿದ್ದಾರೆ.

ಇದನ್ನು ಓದಿ: ಮೂರನೇ ಅಲೆ ಸನ್ನಿಹಿತ : ಜಾಗೃತೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ – ಐಎಂಎ ಎಚ್ಚರಿಕೆ

ಜುಲೈನಿಂದ ಇಂದಿನವರೆಗೆ ವರದಿಯಾದ ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 73.4ರಷ್ಟು ಪ್ರಕರಣಗಳು ಕೇರಳ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾದಲ್ಲಿ ಪತ್ತೆಯಾಗಿವೆ. ಈಗಾಗಲೇ ಮಹಾರಾಷ್ಟ್ರ, ಛತ್ತೀಸ್‌ಗಡ, ಅಸ್ಸಾಂ, ಮೇಘಾಲಯ, ಒಡಿಶಾ, ಮಿಜೋರಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಕ್ಕೆ ತಲಾ ಒಂದೊಂದು ತಂಡವನ್ನು ಕಳುಹಿಸಲಾಗಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದರು.

ಕಳೆದ ಒಂದು ವಾರದಲ್ಲಿ ದೇಶದ 55 ಜಿಲ್ಲೆಗಳಲ್ಲಿ ಕೋವಿಡ್‌ ದೃಢಿಕೃತ ಪ್ರಕರಣಗಳು ಶೇಕಡಾ 10ಕ್ಕಿಂತ ಹೆಚ್ಚು ವರದಿಯಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗದಿವುದು ಹಾಗೂ ಕೊರೊನಾ ಮೂರನೇ ಅಲೆ ಕುರಿತ ನಮ್ಮ ಎಚ್ಚರಿಕೆಯನ್ನು ಜನರು ಹವಾಮಾನ ವರದಿಯಂತೆ ಪರಿಗಣಿಸುತ್ತಿದ್ದಾರೆ. ಮೂರನೇ ಅಲೆ ಗಂಭೀರತೆಯನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ ಹಾಗೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿಲ್ಲ ಎಂಬ ಬಗ್ಗೆ ಕೇಂದ್ರ ಸರಕಾರವು ಕಳವಳ ವ್ಯಕ್ತಪಡಿಸಿದೆ.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್ ಅವರು ‘ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ ಮೂರನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಭಾರತದಲ್ಲಿ ಸೋಂಕು ತಡೆಯಲು ಸಾರ್ವಜನಿಕರು ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದ್ದಾರೆ.

ಮಂಗಳವಾರ ಸಂಜೆಯ ಸಮಯದ ಹೊತ್ತಿಗೆ ದೇಶದಾದ್ಯಂತ 31,443 ಕೋವಿಡ್‌ ಪ್ರಕರಣಗಳು -19 ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,09,07,282 ಆಗಿದೆ. ಇಂದಿನ ಕೋವಿಡ್‌ ಮರಣ ಪ್ರಮಾಣದ ಸಂಖ್ಯೆ 2,020 ಆಗಿದ್ದು, ಒಟ್ಟು 4,10,784 ಜನರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಸದ್ಯ ದೇಶದಲ್ಲಿ 4,32,778 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *