ವಿದ್ಯುತ್ ದರ ಏರಿಕೆ ಖಂಡಿಸಿ ಏಪ್ರಿಲ್ 11ರಂದು ಮೆಸ್ಕಾಂ ಕೇಂದ್ರ ಕಚೇರಿ ಮುತ್ತಿಗೆ

ಮಂಗಳೂರು: ವಿದ್ಯುತ್ ದರ ವಿಪರೀತ ಏರಿಕೆ ಮಾಡಿದ ರಾಜ್ಯ ಸರಕಾರದ ವಿರುದ್ದ ಹಾಗೂ ಏರಿಸಿರುವ ದರವನ್ನು ಕೂಡಲೇ ವಾಪಸಾತಿಗೆ ಒತ್ತಾಯಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್ಐ), ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್ಎಫ್ಐ), ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ವತಿಯಿಂದ ಏಪ್ರಿಲ್‌ 11ರಂದು ಮೆಸ್ಕಾಂ ಕಛೇರಿ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಿದೆ.

ಡಿವೈಎಫ್‌ಐ, ಎಸ್‌ಎಫ್‌ಐ, ಎಐಡಿಡಬ್ಲ್ಯೂಎ ಮೂರು ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಗೃಹ ಬಳಕೆಯ ವಿದ್ಯುತ್ ದರದಲ್ಲಿ ಪ್ರತಿ ಯೂನಿಟಿಗೆ 20ರಿಂದ 30ಪೈಸೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರಗಳ ಮೇಲೆ ಪ್ರತಿ ಯುನಿಟಿಗೆ 15ರಿಂದ 25ಪೈಸೆ ಯಷ್ಟು ಏರಿಕೆ ಮಾಡಿ ಏಪ್ರಿಲ್ ಒಂದರಿಂದ ಜಾರಿಗೊಳಿಸಲು ಮುಂದಾಗಿದೆ. ಇದು ಜನವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿವೆ.

ಇದನ್ನು ಓದಿ: ಪ್ರತಿ ಯೂನಿಟ್‌ ವಿದ್ಯುತ್‌ ದರ 35 ಪೈಸೆ ಹೆಚ್ಚಳ: ಏ.1ರಿಂದಲೇ ಪೂರ್ವಾನ್ವಯ ಜಾರಿ

ರಾಜ್ಯದ ಜನರು ಪೆಟ್ರೋಲ್ , ಡೀಸಲ್, ಅಡುಗೆ ಅನಿಲ ಸೇರಿದಂತೆ ಪ್ರತಿಯೊಂದು ದಿನಬಳಕೆಯ ವಸ್ತುಗಳ ವಿಪರೀತ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿದ್ದು, ಇದೀಗ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರಕಾರವು ಜನರ ಗಾಯದ ಮೇಲೆ ಬರೆ ಎಳೆದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಸಂಘಟನೆಗಳು ಆರೋಪಿಸಿದೆ.

ಕೋವಿಡ್‌ ಸಾಂಕ್ರಾಮಿಕತೆಯಿಂದಾಗಿ ಈಗಾಗಲೆ ಕಳೆದೆರಡು ವರುಷಗಳಿಂದ ಜನತೆ ಎದುರಾದ ಸಂಕಷ್ಟಗಳು ಹಾಗೂ ಸರ್ಕಾರಗಳು ವಿಧಿಸಿದ ಲಾಕ್‌ಡೌನ್‌ ಪರಿಣಾಮವಾಗಿ ಜನ ತಮ್ಮ ಆದಾಯದ ಮೂಲಗಳೆಲ್ಲವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಇಲ್ಲದೆ ಮತ್ತು ಇರುವ ಉದ್ಯೋಗಕ್ಕೆ ಸರಿಯಾದ ವೇತನವನ್ನು ಪಡೆಯಲಾಗದೆ ಸಂಕಷ್ಟದಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್ ನಿಂದ ಹಿಡಿದು ಅಡುಗೆ ಅನಿಲ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ಜನಸಾಮಾನ್ಯರು ಇದೀಗ ವಿದ್ಯುತ್ ದರ ಏರಿಕೆಯಿಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ ಎಂದು ಸಂಘಟನೆಗಳು ತಿಳಿಸಿವೆ.

ಈ ರೀತಿಯ ವಿಪರೀತ ಬೆಲೆ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ  ವಿದ್ಯುತ್ ದರ ಏರಿಕೆಯ ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಹಾಗು ಏರಿಕೆ ಮಾಡಿದ ದರವನ್ನು ಕೂಡಲೇ ವಾಪಸ್ಸು ಪಡೆಯಲು ಒತ್ತಾಯಿಸಿ ಏಪ್ರಿಲ್‌ 11ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಮಂಗಳೂರು ನಗರದ ಬಿಜೈ ಬಳಿ ಇರುವ ಮೆಸ್ಕಾಂ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಂಘಟನೆಗಳು ಪ್ರಕಟಣೆ ನೀಡಿವೆ.

ವರದಿ: ಸಂತೋಷ್‌ ಬಜಾಲ್‌

Donate Janashakthi Media

Leave a Reply

Your email address will not be published. Required fields are marked *