ಚಿತ್ರದುರ್ಗ: ‘ರಾಜ್ಯದ ಯಾವ ಭಾಗದಲ್ಲೂ ಬೇಡ ಜಂಗಮರು ಇಲ್ಲ. ಕೆಲವೆಡೆ ಮಾತ್ರ ಬುಡ್ಗ ಜಂಗಮರಿದ್ದಾರೆ. ಆದರೆ, ನಮ್ಮೆಲ್ಲರ ಪಾಲಿಗೆ ಗುರು ಸ್ಥಾನದಲ್ಲಿರುವ ವೀರಶೈವ ಜಂಗಮರು, ಜಾತಿ ಸಮೀಕ್ಷೆಯಲ್ಲಿ ಬೇಡ ಜಂಗಮರೆಂದು ಸುಳ್ಳು ಮಾಹಿತಿ ದಾಖಲಿಸುತ್ತಿದ್ದಾರೆ’ ಎಂದು ಎಂದು ಮೇ 18 ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ದೂರಿದರು. ಸುಳ್ಳು
‘ಆಂಧ್ರಪ್ರದೇಶದಿಂದ ರಾಜ್ಯಕ್ಕೆ ವಲಸೆ ಬಂದಿದ್ದ ಬೇಡ ಜಂಗಮರ ಭಾಷೆ ತೆಲುಗು. ಸತ್ತ ಹಂದಿ-ದನದ ಮಾಂಸ ಅವರ ಆಹಾರ. ಅವರು ಹೊಟ್ಟೆ ತುಂಬ ಮದ್ಯ ಸೇವಿಸುವ ಜನ. ಮಾದಿಗರ ಬಳಿ ಬೇಡಿಕೊಂಡು ಬದುಕು ನಡೆಸುತ್ತಿದ್ದ ವರ್ಗ. ಈ ಜಾತಿ ಜನರು ರಾಜ್ಯದಲ್ಲಿ ಈಗ ಇಲ್ಲ’ ಎಂದು ಹೇಳಿದರು.
ಇದನ್ನೂ ಓದಿ: ಸಚಿವ ಸ್ಥಾನ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ: ಕೆ. ಎಂ. ಶಿವಲಿಂಗೇಗೌಡ
‘ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ನಡೆದಿರುವ ಸಮೀಕ್ಷೆಯಲ್ಲಿ ಬಹಳಷ್ಟು ಮಂದಿ ತಾವು ಬೇಡ ಜಂಗಮರು ಎಂದು ಬರೆಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ನ್ಯಾ.ನಾಗಮೋಹನ್ ದಾಸ್ ಆಯೋಗ ಕ್ರಮ ಕೈಗೊಳ್ಳಬೇಕು. ಜೊತೆಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸಿರುವ ತಹಶೀಲ್ದಾರ್ಗಳನ್ನು ಜೈಲಿಗೆ ಹಾಕಬೇಕು’ ಎಂದು ಆಗ್ರಹಿಸಿದರು.
‘ಪರಿಶಿಷ್ಟ ಜಾತಿ ಪಟ್ಟಿಯಿಂದ ಬೇಡ ಜಂಗಮ ಪದವನ್ನೇ ಕೈಬಿಡಲು ಮುಖ್ಯಮಂತ್ರಿ ಮುಂದಾಗಬೇಕು. ಈ ಕಾರ್ಯಕ್ಕೆ ಎಲ್ಲ ಪಕ್ಷಗಳು ಕೈಜೋಡಿಸಬೇಕು’ ಎಂದು ಕೋರಿದರು.
‘ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೀಗೆ ಯಾವುದೇ ಜಾತಿ ಮೂಲಕ ಗುರುತಿಸಿಕೊಂಡಿದ್ದರೂ ಸಮೀಕ್ಷೆಯಲ್ಲಿ ಕಡ್ಡಾಯವಾಗಿ 061-ಮಾದಿಗ ಎಂದೇ ನೋಂದಾಯಿಸಬೇಕು. ಒಂದೊಮ್ಮೆ ಮೂಲ ಜಾತಿ ಬರೆಸದಿದ್ದರೆ ಅಂತಹ ಕುಟುಂಬ ಎಲ್ಲ ಸೌಲಭ್ಯಗಳಿಂದಲೂ ವಂಚಿತವಾಗಲಿದೆ. ರಾಜ್ಯ ಸರ್ಕಾರವು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಪದಗಳನ್ನು ಪ್ರಸಕ್ತ ವರ್ಷವೇ ಜಾತಿ ಪಟ್ಟಿಯಿಂದ ಕೈಬಿಡಲಿದೆ. ಆದ್ದರಿಂದ ಮಾದಿಗ-ಛಲವಾದಿ ಸೇರಿ ಎಲ್ಲ ವರ್ಗದ ಜನರು ಕಡ್ಡಾಯವಾಗಿ ಮೂಲ ಜಾತಿ ಬರೆಸಬೇಕು’ ಎಂದು ತಿಳಿಸಿದರು.
ಇದನ್ನೂ ನೋಡಿ: ಪಹಲ್ಗಾಮ ಹತ್ಯೆ ಮತ್ತು ಸೇನಾ ಸಂಘರ್ಷ, ಯುದ್ಧೋನ್ಮಾದ ಮತ್ತು ಉನ್ಮಾದ ರಾಷ್ಟ್ರೀಯತೆ…Janashakthi Media