ಕುಂಭಮೇಳದಲ್ಲಿ ಕೋವಿಡ್ ಪರೀಕ್ಷೆಯಲ್ಲಿಯೂ ಹಗರಣ

ಹರಿದ್ವಾರ: ಏಪ್ರಿಲ್‌ ತಿಂಗಳಿನಲ್ಲಿ ಹಮ್ಮಿಕೊಂಡಿದ್ದ ಮಹಾಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಸೇರಿದ್ದ ಹರಿದ್ವಾರದಲ್ಲಿ ಕೋವಿಡ್-19 ಪರೀಕ್ಷೆಯಲ್ಲಿಯೂ ಹಗರಣ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.

ಕೋವಿಡ್ ಸೋಂಕು ಪತ್ತೆಗಾಗಿ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದಿವೆ. ಆದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಈಗ ಬೆಳಕಿಗೆ ಬಂದಿದೆ. ಇದೊಂದು ದೊಡ್ಡ ಹಗರಣವೆಂಬುದು ತಿಳಿದುಬಂದಿದೆ.

ಏಪ್ರಿಲ್ 1 ರಿಂದ 30 ವರೆಗೆ 2021ನೇ ಸಾಲಿನ ಮಹಾಕುಂಭಮೇಳ ಅವಧಿ ಸಂದರ್ಭದಲ್ಲಿ ಸೋಂಕು ಪತ್ತೆ ಪರೀಕ್ಷೆ ಹಾಗೂ ದೃಢೀಕೃತ ಅಂಶಗಳನ್ನು ವರದಿಯನ್ನು ವಿಶ್ಲೇಷಣೆ ನಡೆಸಲಾಗಿದ್ದು, ರಾಜ್ಯದ ಇತರ ಭಾಗಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಹರಿದ್ವಾರದಲ್ಲಿ ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಇತರ ಭಾಗಗಳಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಹರಿದ್ವಾರದಲ್ಲಿ ಸೋಂಕು ಪತ್ತೆಯಾಗಿದೆ.

ಏಪ್ರಿಲ್‌ ತಿಂಗಳ ಅವಧಿಯಲ್ಲಿ ಹರಿದ್ವಾರದಲ್ಲಿ 6,00,291 ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 17,375 ಪ್ರಕರಣಗಳಲ್ಲಿ ಮಾತ್ರವೇ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ ರಾಜ್ಯದ 12 ಇತರ ಜಿಲ್ಲೆಗಳಲ್ಲಿ 4,42,432 ಪರೀಕ್ಷೆಗಳನ್ನು ನಡೆಸಲಾಗಿದ್ದು, 62,735 ಪ್ರಕರಣಗಳಲ್ಲಿ ಸೋಂಕು ದೃಢಪಟ್ಟಿದೆ. ಏಪ್ರಿಲ್ ನಲ್ಲಿ ಹರಿದ್ವಾರದಲ್ಲಿ ಶೇ.60 ರಷ್ಟು ಕೋವಿಡ್-19  ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ. ಆದರೆ ರಾಜ್ಯದ ಬೇರೆ ಭಾಗಗಳಿಗೆ ಹೋಲಿಕೆ ಮಾಡಿದಲ್ಲಿ, ಕೆಲವೇ ಪ್ರಕರಣಗಳು ಮಾತ್ರ ದೃಢಪಟ್ಟಿವೆ.

ಏಪ್ರಿಲ್ ತಿಂಗಳಲ್ಲಿ ಉತ್ತರಾಖಂಡ್ ನ ಸರಾಸರಿ ದೃಢಪಟ್ಟ ಸೋಂಕುಗಳ ಪ್ರಮಾಣ ಶೇಕಡಾ 14.18 ರಷ್ಟಿತ್ತು. ಹರಿದ್ವಾರದ್ದು ಈ ಪೈಕಿ ಶೇಕಡಾ 2.89 ರಷ್ಟು ಮಾತ್ರವೇ ಇದೆ. ಅಂದರೆ ಕುಂಭಮೇಳ ನಡೆದಾಗ ಲಕ್ಷಾಂತರ ಮಂದಿ ಭಾಗವಹಿಸಿದ್ದಾಗಲೂ ಸಹ ರಾಜ್ಯದ ಇತರ ಭಾಗಗಳಿಗಿಂತಲೂ ಶೇಕಡಾ 80 ರಷ್ಟು ಕಡಿಮೆ ಇತ್ತು. ಈ ವಿಶ್ಲೇಷಣೆಯ ಪ್ರಕಾರ ಒಂದೋ ರಾಜ್ಯದಲ್ಲಿ ನಕಲಿ ಪರೀಕ್ಷೆಗಳು ನಡೆದಿವೆ ಅಥವಾ ಉದ್ದೇಶಪೂರ್ವಕವಾಗಿ ಸಂಖ್ಯೆಗಳನ್ನು ಮರೆಮಾಚಲಾಗಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಆದರೆ ಅಧಿಕಾರಿಗಳಿಗೆ ಮಾತ್ರ ತಪ್ಪು ನಡೆಯುತ್ತಿದ್ದರ ಬಗ್ಗೆ ಅನುಮಾನ ಬಂದಿರಲಿಲ್ಲ. ಹರಿದ್ವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ ರವಿಶಂಕರ್ ಕಡಿಮೆ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿರುವುದಕ್ಕೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಗಳನ್ನು ಕಾರಣವಾಗಿ ನೀಡಿದ್ದಾರೆ. “ಪ್ರತಿ ದಿನವೂ ಸಾವಿರಾರು ಮಂದಿ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದರು, ಇಂತಹ ಪರಿಸ್ಥಿತಿಯಲ್ಲಿ ಆರ್‌ಟಿ-ಪಿಸಿಆರ್ ಟೆಸ್ಟ್‌ಗಳನ್ನು ಪ್ರತಿಯೊಬ್ಬರಿಗೂ ಮಾಡಿಸುವುದು ಸಾಧ್ಯವಾಗುತ್ತಿರಲಿಲ್ಲ” ಎಂದು ಹೇಳಿದ್ದಾರೆ.

ಸಿ ರವಿಶಂಕರ್  ಅವರು ಕುಂಭಮೇಳದಲ್ಲಿ ಪರೀಕ್ಷೆಗಳನ್ನು ನಡೆಸಿದ ಪ್ರಯೋಗಾಲಯಗಳನ್ನು ಮೇಳವನ್ನು ಹಮ್ಮಿಕೊಂಡಿದ್ದ ಆಡಳಿತದಿಂದ ನೇಮಕಗೊಳಿಸಲಾಗಿತ್ತು ಎಂದು ಹೇಳಿದರು.

ಫರೀದ್ಕೋಟ್ ನ ನಿವಾಸಿಯೊಬ್ಬರು ತಾವು ಪರೀಕ್ಷೆ ಮಾಡಿಸದೇ ಇದ್ದರೂ ಸಹ ಕೋವಿಡ್-19 ಸೋಂಕು ಪತ್ತೆ ವರದಿಯನ್ನು ತೆಗೆದುಕೊಳ್ಳುವಂತೆ ತಮಗೆ ಮೆಸೇಜ್ ಬಂದಿದ್ದರಿಂದ ಹರಿದ್ವಾರದಲ್ಲಿ ಕೊರೊನಾ ಸೋಂಕು ಪತ್ತೆ ಪ್ರಕ್ರಿಯೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ.

ಫರೀದ್ ಕೋಟ್ ನ ನಿವಾಸಿ ನೀಡಿದ ದೂರನ್ನು ಆಧರಿಸಿ ತನಿಖೆಯನ್ನು ಕೈಗೊಂಡಾಗ ಮ್ಯಾಕ್ಸ್ ಕಾರ್ಪೊರೇಟ್ ಸರ್ವೀಸಸ್ ನಿಂದ ನಡೆಸಿದ 1,00,000 ನಕಲಿ ಪರೀಕ್ಷೆಗಳು ಬೆಳಕಿಗೆ ಬಂದಿವೆ. ಈ ಸಂಬಂಧ ಉತ್ತರಾಖಂಡ್ ಪೊಲೀಸರು ಎಸ್‌ಐಟಿಯನ್ನು ರಚಿಸಿದ್ದು, ಈ ಖಾಸಗಿ ಏಜೆನ್ಸಿಗೆ ಕುಂಭಮೇಳದಲ್ಲಿ ಟೆಸ್ಟಿಂಗ್ ನಡೆಸುವುದಕ್ಕೆ ಗುತ್ತಿಗೆ ಹೇಗೆ ದೊರೆಯಿತು ಎಂಬ ಬಗ್ಗೆಯೂ ತನಿಖೆಯನ್ನು ಕೈಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *