ಉತ್ತರ ಪ್ರದೇಶ | ಮುಸ್ಲಿಂ ವ್ಯಕ್ತಿಯನ್ನು ಸಿಲುಕಿಸಲು ಗೋಹತ್ಯೆ ಮಾಡಿ ಬಂಧನಕ್ಕೊಳಗಾದ ಬಜರಂಗದಳದ ದುಷ್ಕರ್ಮಿ

ಲಖ್ನೋ: ಮುಸ್ಲಿಂ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಗೋಹತ್ಯೆ ಮಾಡಿದ ಆರೋಪದ ಮೇಲೆ ಮತ್ತು ಪೊಲೀಸರ ವಿರುದ್ಧ ಸಂಚು ರೂಪಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಬಜರಂಗದಳದ ಜಿಲ್ಲಾಧ್ಯಕ್ಷ ಸೇರಿದಂತೆ ನಾಲ್ವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು ಮೊರಾದಾಬಾದ್ ಜಿಲ್ಲೆಯ ಚೇತ್ರಂಪುರ ಗ್ರಾಮದ ಶಹಾಬುದ್ದೀನ್, ಬಜರಂಗದಳದ ಮುಖಂಡ ಮೋನು ಬಿಷ್ಣೋಯ್ ಅಲಿಯಾಸ್ ಸುಮಿತ್ ಮತ್ತು ಆತನ ಹಿಂಬಾಲಕರಾದ ರಮಣ್ ಚೌಧರಿ ಮತ್ತು ರಾಜೀವ್ ಚೌಧರಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಮೆಹಮೂದ್ ಎಂಬವರ ವಿರುದ್ಧ ಸೇಡು ತೀರಿಸಿಕೊಳ್ಳಲು ಶಹಾಬುದ್ದೀನ್ ಎಂಬಾತ ಬಜರಂಗ ದಳದ ಕಾರ್ಯಕರ್ತರ ಸಹಾಯವನ್ನು ಪಡೆದು ಗೋಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ. ಹರಿದ್ವಾರದಂತಹ ಧಾರ್ಮಿಕ ಸ್ಥಳಗಳಿಗೆ ಹೋಗಲು ಭಕ್ತರು ಯಾತ್ರೆಗೆ ಹೆಚ್ಚಾಗಿ ಬಳಸುವ ರಸ್ತೆಯಾದ ಕನ್ವರ್ ಪಥ್‌ನಿಂದ ಜನವರಿ 16 ರಂದು ಹಸುವಿನ ತಲೆಯನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ‘ದೇಶದ ಜನರನ್ನು ವಂಚಿಸುವ ಪ್ರಯತ್ನ’ – ಬಜೆಟ್ ಬಗ್ಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ

“ಜನವರಿ 16ರಂದು ಹಸುವಿನ ತಲೆಯನ್ನು ಪತ್ತೆ ಹಚ್ಚಿದ ನಂತರ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರ ನಂತರ ಜನವರಿ 28 ರ ರಾತ್ರಿ ಗೋಹತ್ಯೆಯ ಮತ್ತೊಂದು ಘಟನೆ ಕೆಲವು ಕಿಲೋಮೀಟರ್ ದೂರದಲ್ಲಿರುವ ಚೆಟ್ರಾಮ್‌ಪುರ ಗ್ರಾಮದಲ್ಲಿ (ಮೊದಲ ಘಟನೆಯ ಅದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ) ನಡೆಯಿತು. ಎರಡೂ ಘಟನೆಗಳು ಅನುಮಾನಾಸ್ಪದ ಮತ್ತು ಪರಸ್ಪರ ಸಂಬಂಧವನ್ನು ಇದ್ದಂತೆ ತೋರುತ್ತಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ, ಇದು ಕೇವಲ ಗೋಹತ್ಯೆಯ ಪ್ರಕರಣವಲ್ಲ, ಖಂಡಿತವಾಗಿಯೂ ಅದರಲ್ಲಿ ಕೆಲವು ಹಿಡನ್ ಅಜೆಂಡಾ ಇದೆ ಎಂಬ ಅನುಮಾನದಲ್ಲಿ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದಾರೆ ಎಂದು ಮೊರಾದಾಬಾದ್‌ನ ಹಿರಿಯ ಪೊಲೀಸ್ (ಎಸ್‌ಎಸ್‌ಪಿ) ಅಧೀಕ್ಷಕ ಹೇಮರಾಜ್ ಮೀನಾ ಹೇಳಿದ್ದಾರೆ. ಎರಡನೇ ಘಟನೆಯಲ್ಲಿ ಅಧಿಕಾರಿಗಳು ಸ್ಥಳಕ್ಕಾಗಮಿಸಿದಾಗ ಒಬ್ಬ ವ್ಯಕ್ತಿಯ ಪ್ಯಾಂಟ್ ಮತ್ತು ಅದರಲ್ಲಿ ಮೆಹಮೂದ್ ಎಂಬವರ ಫೋಟೋ ಇರುವ ವ್ಯಾಲೆಟ್ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣೆ ಗೆಲ್ಲಲು ಬಿಜೆಪಿ ಎಲ್ಲರನ್ನೂ ಜೈಲಿಗೆ ಹಾಕುತ್ತಿದೆ; ಎನ್‌ಆರ್‌ಸಿಗೆ ಅವಕಾಶ ನೀಡಲ್ಲ – ಮಮತಾ ಬ್ಯಾನರ್ಜಿ

“ಈ ಬಗ್ಗೆ ಮೆಹಮೂದ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಗ್ರಾಮದ ಕೆಲವು ಜನರಿಗೆ ತನ್ನ ಮೇಲೆ ದ್ವೇಷವಿರುವುದಾಗಿಯು ಈ ಕಾರಣದಿಂದಾಗಿ ತನ್ನನ್ನು ಬಂಧಿಸಲು ಈ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಅವರು ಶಹಾಬುದ್ದೀನ್ ಮತ್ತು ಜಮ್ಶೆದ್ ಹೆಸರುಗಳನ್ನು ಹೇಳಿದ್ದಾರೆ. ಇವರಿಬ್ಬರು ತಮ್ಮ ಎದುರಾಳಿಯನ್ನು ಜೈಲಿಗೆ ಕಳುಹಿಸಲು ಮೋನು ಬಿಷ್ಣೋಯ್, ರಾಜೀವ್ ಚೌಧರಿ ಮತ್ತು ರಮಣ್ ಚೌಧರಿ ಅವರ ಸಹಾಯವನ್ನು ಪಡೆದಿದ್ದಾರೆ” ಎಂದು ಮೀನಾ ಹೇಳಿದ್ದಾರೆ.

“ಈ ಆರೋಪಿಗಳು ತಮ್ಮ ಕಾನೂನುಬಾಹಿರ ಕೆಲಸವನ್ನು ಮಾಡಲು ಬಿಡುವಂತೆ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಕೆಲವೇ ದಿನಗಳ ಹಿಂದೆ ಮೋನು ಬಿಷ್ಣೋಯ್‌ನನ್ನು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಪ್ರಕರಣದ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಬಿಷ್ಣೋಯ್ ಛಜಲೇಟ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ಆರಂಭಿಸಲು ಪ್ರಯತ್ನಿಸಿದ್ದ. ಆದರೆ ಅಧಿಕಾರಿಗಳು ಅವನ ಮಾತನ್ನು ಕೇಳದಿದ್ದಾಗ, ಈ ಘಟನೆಯ ಮೂಲಕ ಅವರ ವಿರುದ್ಧ ಸಂಚು ರೂಪಿಸಿದ್ದಾನೆ” ಎಂದು ಎಸ್‌ಎಸ್‌ಪಿ ಹೇಳಿದರು.

“ಮೊದಲು ಅವರು ಜನವರಿ 14 ರಂದು ಶಹಾಬುದ್ದೀನ್ ಸಹಚರ ನಯೀಮ್‌ಗೆ 2,000 ರೂ ನೀಡಿ ಘಟನೆಯನ್ನು ಯೋಜಿಸಿದ್ದರು. ಎಲ್ಲಿಂದಾದರೂ ಹಸುವಿನ ತಲೆಯನ್ನು ತಂದು ಛಜಲೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಡುವಂತೆ ಹೇಳಿದ್ದರು. ಹೀಗಾದರೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಪೊಲೀಸರು ತಮ್ಮ ಒತ್ತಡಕ್ಕೆ ಸಿಲುಕಿಸಲು ಸಂಚು ರೂಪಿಸಿದ್ದರು” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಧ್ಯಂತರ ಬಜೆಟ್ | ಸುಳ್ಳಿನ ಕಂತೆ ಮತ್ತು ಖಾಸಗೀಕರಣದ ಹತಾಶ ಪ್ರಯತ್ನ – ಸಿಐಟಿಯು ಆರೋಪ

“ಜೊತೆಗೆ ಶಹಾಬುದ್ದೀನ್ ಮತ್ತು ಜಮ್ಶೆಡ್ ಅವರೊಂದಿಗೆ ದ್ವೇಷ ಹೊಂದಿರುವವರ ಹೆಸರನ್ನು ಸಿಲುಕಿಸಲು, ಸ್ಥಳದಲ್ಲಿ ಆ ವ್ಯಕ್ತಿಯ ಫೋಟೋವನ್ನು ಇರಿಸಿ ಸಾಕ್ಷ್ಯವನ್ನು ರಚಿಸಿದ್ದರು. ಇವರು ಮನೆಯೊಂದರಿಂದ ಹಸುವನ್ನು ಕದ್ದು, ಅದನ್ನು ಕೊಂದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದು ಎಸ್‌ಎಸ್‌ಪಿ ಮೀನಾ ತಿಳಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲೆಕ್ಟ್ರಾನಿಕ್ ಕಣ್ಗಾವಲು, ಮೊಬೈಲ್ ಲೊಕೇಶನ್ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಪಿತೂರಿಯನ್ನು ಬಹಿರಂಗಪಡಿಸಿದ್ದಾರೆ. ಇವರು ಕ್ರಿಮಿನಲ್ ಪ್ರವೃತ್ತಿಯನ್ನು ಹೊಂದಿರುವ ಜನರು ಮತ್ತು ನಿಯಮಿತವಾಗಿ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಮೀನಾ ಹೇಳಿದ್ದಾರೆ.

ವಿಡಿಯೊ ನೋಡಿ: ಏನಿದು ಮಧ್ಯಂತರ ಬಜೆಟ್‌ ? ಚುನಾವಣಾ ರಾಮನ ಮುಂದೆ ಸಪ್ಪೆಯಾದ ಬಜೆಟ್‌ Janashakthi Media

Donate Janashakthi Media

Leave a Reply

Your email address will not be published. Required fields are marked *