ನಾಮಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ; ಬೃಹತ್‌ ರ್‍ಯಾಲಿ

ಬೆಂಗಳೂರು: ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವ ವಿಚಾರಕ್ಕೆ ಸಂಬಂಧಿಸಿದಂತೆ ಬುಧವಾರ ನಗರದ ಏರ್‌ಪೋರ್ಟ್ ರಸ್ತೆಯ ಸಾದಹಳ್ಳಿ ಗೇಟ್‌ನಿಂದ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಸಾದಹಳ್ಳಿ ಗೇಟ್ ಬಳಿಯಿಂದ ಜಾಗೃತಿ ಮೆರವಣಿಗೆ‌ ಆರಂಭಿಸಿದ ಸಂದರ್ಭದಲ್ಲಿ ಕಾರ್ಯಕರ್ತರು ಏರ್‌ಪೋರ್ಟ್ ರಸ್ತೆಯಲ್ಲಿ ಇಂಗ್ಲಿಷ್ ಪದಗಳಿರುವ ನಾಮಫಲಕಗಳನ್ನು ಕಿತ್ತು ಹಾಕಲು ಆರಂಭಿಸಿದರು‌. ಸಾದಹಳ್ಳಿಯ ಹೋಟೆಲ್ ಒಂದರ ಬಳಿ ಲೈಟಿಂಗ್ ಬೋರ್ಡ್ ಒಡೆದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಚಿಕ್ಕಜಾಲ ವ್ಯಾಪ್ತಿಯಲ್ಲಿರುವ ಅಂಗಡಿ- ಮಳಿಗೆಗಳ ಮೇಲಿದ್ದ ಇಂಗ್ಲಿಷ್ ಫಲಕಗಳನ್ನು ಕಿತ್ತು ಹಾಕಿದರು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು‌. ವಿಮಾನ ನಿಲ್ದಾಣದ ರಸ್ತೆಯ ಬದಿಯ ದೊಡ್ಡ ದೊಡ್ಡ ಹೋಲ್ಡರ್ ಗಳ ಮೇಲೆ ಹತ್ತಿದ ಕಾರ್ಯಕರ್ತರು ಇಂಗ್ಲಿಷ್​ನಲ್ಲಿ ಹಾಕಲಾಗಿರುವ ಫಲಕಗಳನ್ನು ಕಿತ್ತು ಹಾಕಿದರು‌. ಇದೇ ಸಮಯದಲ್ಲೇ ರಾಜಾಜಿನಗರ, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಅತ್ತಿಗುಪ್ಪೆ, ಕೆ.ಆರ್.ಪುರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರು ರ್‍ಯಾಲಿ ಆರಂಭಿಸಿದರು. ಅಂಗಡಿ, ಮಳಿಗೆಗಳ ಮೇಲಿದ್ದ ಇಂಗ್ಲಿಷ್ ನಾಮಫಲಕಗಳನ್ನು ಕಿತ್ತು ಎಸೆದು ರ್‍ಯಾಲಿ ನಡೆಸಿದರು‌.

ಇದನ್ನು ಓದಿ : ಕಲ್ಲಡ್ಕ ಪ್ರಭಾಕರ ಭಟ್‌ನನ್ನು ಕೂಡಲೇ ಬಂಧಿಸಿ | ಸಿಪಿಐ(ಎಂ) ನಾಯಕಿ ಕೆ. ನೀಲಾ

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ರ್‍ಯಾಲಿ ನಡೆಸುತ್ತಿದ್ದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು‌. ಕೆಲವು ಕಾರ್ಯಕರ್ತರು ಬೈಕ್ ಬಿಟ್ಟು ಓಡಿದರು. ಇನ್ನೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಪಡಿಸಿಕೊಂಡರು. ಈ ವೇಳೆ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ನಗರದಲ್ಲಿ ಏಕಕಾಲಕ್ಕೆ ರ್‍ಯಾಲಿ ಆರಂಭವಾದ ಹಿನ್ನೆಲೆಯಲ್ಲಿ, ವಿವಿಧ ಭಾಗಗಳಲ್ಲಿ ಟ್ರಾಫಿಕ್ ಜಾಮ್‌ ಉಂಟಾಯಿತು.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ‘ಅಂಗಡಿ- ಮಳಿಗೆಗಳ ನಾಮಫಲಕಗಳಲ್ಲಿ ಶೇ 60 ರಷ್ಟು ಕನ್ನಡವಿರಬೇಕು ಎಂದು ಒಂದು ವಾರದಿಂದ ಜಾಗೃತಿ ಮೂಡಿಸುತ್ತಿದ್ದೇವೆ. ಇವತ್ತು ಜಾಗೃತಿ ಮೆರವಣಿಗೆ ನಡೆಸುತ್ತೇವೆಂದು ಸರ್ಕಾರಕ್ಕೂ ಹೇಳಿದ್ದೆವು. ಶಾಂತಿಯುತ ಮೆರವಣಿಗೆ ನಡೆಸುತ್ತಿರುವ ನಮ್ಮನ್ನು ಪೊಲೀಸರು ತಡೆಯುತ್ತಿದ್ದಾರೆ. ನಮ್ಮ ಹೋರಾಟವನ್ನು ಹತ್ತಿಕ್ಕುತ್ತಿದ್ದಾರೆ. ಯಾವ ಕಾರಣಕ್ಕೂ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು‌ ಹೇಳಿದರು. ‘ನಾವೆಲ್ಲ ಶಾಂತಿಯುತವಾಗಿ ಜಾಗೃತ ಮೆರವಣಿಗೆ ನಡೆಸುತ್ತಿದ್ದೆವು. ಪೊಲೀಸರು ಕಾರ್ಯಕರ್ತರನ್ನು ತಡೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಮೆರವಣಿಗೆ ನಿಲ್ಲಿಸುವುದಿಲ್ಲ’ ಎಂದರು.

Donate Janashakthi Media

Leave a Reply

Your email address will not be published. Required fields are marked *