ಕೊಲ್ಕತ್ತಾ | ಹೃದಯಾಘಾತದಿಂದ ಮಾಜಿ ಕೇಂದ್ರ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

ಕೊಲ್ಕತ್ತಾ : ಮಾಜಿ ಕೇಂದ್ರ ರೈಲ್ವೆ ಸಚಿವ, ಬಂಗಾಳದ ರಾಜಕೀಯ ಚಾಣಕ್ಯ ಮುಕುಲ್ ರಾಯ್ ಅವರು ಭಾನುವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ನಿನ್ನೆ ಸರಿಯಾಗಿ ಸ್ಪಂದಿಸದೇ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಮುಕುಲ್ ರಾಯ್ ಅವರು ಅನಾರೋಗ್ಯದ ಹಿನ್ನಲೆ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನವನ್ನು ಅವರ ಕುಟುಂಬ ಘೋಷಿಸಿದ್ದು, ಮುಕುಲ್ ರಾಯ್ ಅವರ ನಿಧನ ರಾಜಕೀಯ ವಲಯದಲ್ಲಿ ಭಾರೀ ದುಃಖಕ್ಕೆ ಕಾರಣವಾಗಿದೆ.

ಮುಕುಲ್ ಅವರ ರಾಜಕೀಯ ಜೀವನವೇ ವರ್ಣಮಯವಾಗಿತ್ತು. ಎಡಪಂಥೀಯ ಶಿಬಿರದಲ್ಲಿ ಪ್ರಾರಂಭವಾದ ಅವರ ರಾಜಕೀಯ ಪ್ರಯಾಣ ಹೆಚ್ಚು ಕಾಲ ಉಳಿಯಲಿಲ್ಲ. ಉತ್ತರ 24 ಪರಗಣಗಳ ಕಾಂಗ್ರೆಸ್ ನಾಯಕರಾಗಿದ್ದ ಮೃಣಾಲ್ ಸಿಂಘರಾಯ್, ಮುಕುಲ್​ ರಾಯ್​ ಅವರನ್ನು ಕೈ ಪಕ್ಷಕ್ಕೆ ಕರೆತಂದರು. ಮುಕುಲ್ ಛತ್ರ ಪರಿಷತ್ (ವಿದ್ಯಾರ್ಥಿ ಸಂಘಟನೆ) ಸೇರುವ ಮೂಲಕ ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಅಂದಿನಿಂದ, ಅವರು ಮಮತಾ ಬ್ಯಾನರ್ಜಿಗೆ ಹತ್ತಿರವಾಗಿದ್ದರು.

ಇದನ್ನೂ ಓದಿ : ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿ ಸೇರ್ಪಡೆ

ಮುಕುಲ್ ಅವರನ್ನು ಒಳಗೊಂಡಂತೆ ಅತಿನ್ ಘೋಷ್ ಮತ್ತು ತಮೋನಾಶ್ ಘೋಷ್‌ ಅವರಂತಹ 9 ನಾಯಕರು ಹೊಸ ಪಕ್ಷವನ್ನು ರಚಿಸಲು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದರು. ತೊಂಬತ್ತರ ದಶಕದ ಉತ್ತರಾರ್ಧದಲ್ಲಿ ಮಮತಾ ಅವರು ಹೊಸ ಪಕ್ಷವನ್ನು ರಚಿಸಲು ನಿರ್ಧರಿಸಿದರು. ಆಗಿನ ವಿರೋಧ ಪಕ್ಷದ ನಾಯಕಿಯಾಗಿದ್ದ ಮಮತಾ ಬ್ಯಾನರ್ಜಿ, ಮುಕುಲ್ ಮತ್ತು ಇತರ ಕೆಲವರೊಂದಿಗೆ ಹೊಸ ಪಕ್ಷವನ್ನು ಸ್ಥಾಪಿಸಿದರು. ಆ ಸಮಯದಲ್ಲಿ ಮಮತಾ ಅಧಿಕೃತವಾಗಿ ತೃಣಮೂಲ ಪಕ್ಷದ ಸದಸ್ಯರಾಗಿರಲಿಲ್ಲ. ನಂತರ, ಅವರು ಆ ಪಕ್ಷದ ಸದಸ್ಯರಾದರು.

2011ರಲ್ಲಿ ತೃಣಮೂಲ ಕಾಂಗ್ರೆಸ್​ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಳಿಕ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದಿನಿಂದ 2017 ರವರೆಗೆ ಮುಕುಲ್ ತೃಣಮೂಲ ಪಕ್ಷದ ಸಮರ್ಥನಕಾರರಾದರು. 2009ರಲ್ಲಿ ಅವರು ಯುಪಿಎ -2ರ ಸರ್ಕಾರದಲ್ಲಿ ಹಡಗು ಸಾಗಣೆ ಸಚಿವಾಲಯದ ರಾಜ್ಯ ಸಚಿವರಾಗಿ ಕರ್ತವ್ಯ ನಿರ್ವಹಿಸಿದರು. ಈ ವೇಳೆ ದಿನೇಶ್ ತ್ರಿವೇದಿ ಮಮತಾ ಬ್ಯಾನರ್ಜಿ ಅವರಿಂದ ರೈಲ್ವೆ ಸಚಿವಾಲಯವನ್ನು ವಹಿಸಿಕೊಂಡಿದ್ದರು. ಆದರೆ ತ್ರಿವೇದಿ ಅವರಿಂದ ತೆರವಾದ ಸ್ಥಾನವನ್ನು ಬಳಿಕ ಮುಕುಲ್​ ರಾಯ್​ ವಹಿಸಿಕೊಂಡಿದ್ದರು.

2017ರಲ್ಲಿ ದುರ್ಗಾ ಪೂಜೆಯ ಪಂಚಮಿಯಂದು ನಿಜಾಮ್ ಅರಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಮೂಲಕ, ತೃಣಮೂಲ ಕಾಂಗ್ರೆಸ್​ ಪಕ್ಷಕ್ಕೆ ವಿದಾಯ ಹೇಳಿದ್ದರು. ಪೂಜೆ ಮುಗಿದ ನಂತರ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ಇದಾದ ಕೆಲ ತಿಂಗಳುಗಳ ಬಳಿಕ ಅವರು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಸಮ್ಮುಖದಲ್ಲಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದರು.

ಜೂನ್ 2021ರವರೆಗೆ ಮುಕುಲ್​ ರಾಯ್​ ಬಿಜೆಪಿಯಲ್ಲಿದ್ದರು. ಕೃಷ್ಣನಗರ ಉತ್ತರ ಕ್ಷೇತ್ರದಿಂದ ತೃಣಮೂಲ ನಟಿ ಅಭ್ಯರ್ಥಿ ಕೌಶಾನಿ ಮುಖರ್ಜಿ ಅವರನ್ನು ಸೋಲಿಸುವ ಮೂಲಕ ಮುಕುಲ್ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ನಂತರ, ರಾಯ್ ಬಿಜೆಪಿಯನ್ನು ತೊರೆದಿದ್ದರು. ಆ ಬಳಿಕ ಅವರು ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿರಲಿಲ್ಲ.

ಇದನ್ನೂ ನೋಡಿ : ಡಾ. ರಾಮ ಮನೋಹರ ಲೋಹಿಯಾ ವಿಚಾರಧಾರೆ |ಪ್ರೊ. ಗಂಗಾಧರ ಬಿ.ಎಂ Janashakthi Media

Donate Janashakthi Media

Leave a Reply

Your email address will not be published. Required fields are marked *