ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್​ ಆಗುತ್ತಿದೆ #BiharRejectsModi ಹ್ಯಾಷ್‌ಟ್ಯಾಗ್

  • ನಿತೀಶ್‍ ಕುಮಾರ್‍ ವಿರುದ್ಧ ಆಡಳಿತ ವಿರೋಧಿ ಅಲೆಯಲ್ಲಿ ಮೋದಿಗೂ ಪಾಲು

ಬಿಹಾರಕೊರೊನಾ ಬಿಕ್ಕಟ್ಟಿನ ನಡುವೆಯೂ ಇಡೀ ದೇಶ ಬಿಹಾರ ವಿಧಾನಸಭಾ ಚುನಾವಣೆಯನ್ನು ಕಾತರದಿಂದ ಕಾಯುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ತವಕದಲ್ಲಿದ್ದರೆ ಮತ್ತೊಂದೆಡೆ ಯುವ ನಾಯಕ ತೇಜಸ್ವಿ ಯಾದವ್ ಎನ್ಡಿಎ ಮೈತ್ರಿಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ನಡುವೆ ಎರಡನೇ ಹಂತದ  ಚುಣಾವಣೆಯೂ ಮುಕ್ತಾಯವಾಗಿದ್ದುಮೂರನೇ ಹಂತದ ಚುನಾವಣೆಗೆ ಸಿದ್ಧತೆ ನಡೆಯುತ್ತಿದೆ. ಆದರೆ, ಇದರ ನಡುವೆಯೇ ಟ್ವಿಟರ್ನಲ್ಲಿ ಇದೀಗ #BiharRejectsModi ಹ್ಯಾಷ್ಟ್ಯಾಗ್ ದೇಶಾದ್ಯಂತ ಟ್ರೆಂಡಿಂಗ್ ಆಗುತ್ತಿದೆ.

#BiharRejectsModi ಹ್ಯಾಶ್‌ಟ್ಯಾಗ್‌ ಬಳಸಿ ಸಾವಿರಾರು ಜನ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರ ಮತ್ತು ನರೇಂದ್ರ ಮೋದಿಯ ವಿರುದ್ಧದ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಆಡಳಿತ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಆಡಳಿತದ ವಿರುದ್ಧ ಅಲ್ಲಿನ ಜನ ತಿರುಗಿಬಿದ್ದಿದ್ದಾರೆ.

ಗೀತ್‌ ವಿ ಎಂಬುವವರು ಟ್ವೀಟ್ ಮಾಡಿ, “ಬಿಹಾರವು ಮೋದಿಯನ್ನು ತಿರಸ್ಕರಿಸುತ್ತದೆ. ಲಾಕ್‌ಡೌನ್‌ ಸಮಯದಲ್ಲಿ ಮೋದಿಯವರು ಬಿಹಾರಿಗಳನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿಯನ್ನು ಮರೆಯಲು ಸಾಧ್ಯವಿಲ್ಲ. #BiharrejectsModi” ಎಂದು ಬರೆದುಕೊಂಡು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಪ್ರತಿನಿಧಿಸುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ವಸ್ಲಾಲಾ ಕುಮಾರಿ ಎಂಬುವವರು ಟ್ವೀಟ್ ಮಾಡಿ, “ರೈತರ ಆತ್ಮಹತ್ಯೆ, ನಿರುದ್ಯೋಗ, ಜಂಗಲ್ ರಾಜ್, ಸಾರ್ವಜನಿಕರ ಲೂಟಿ, ಕೋಮುದ್ವೇಷ, ಜುಮ್ಲಾ, ಭಾಷಾ ರಾಜಕೀಯ, ಹುಸಿ ರಾಷ್ಟ್ರೀಯತೆ, ಲಸಿಕೆ ರಾಜಕೀಯಗಳಿಗೆ ಸ್ಥಳವಿಲ್ಲ. ಬಿಹಾರ ಸಮೃದ್ಧಿಯಾಗಲಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ಮೈತ್ರಿಗೆ ಮತದಾನ ನೀಡಿ” ಎಂದು ಬರೆದಿದ್ದು, ವ್ಯಂಗ್ಯಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯ ರಾಜಕೀಯ ತಂತ್ರಗಳನ್ನು ಚಿತ್ರಿಸಲಾಗಿದೆ.
ಎಂ.ಡಿ. ಒಬೇದುಲ್ಲಾ ಎಂಬುವವರು ವೀಡಿಯೋವೊಂದನ್ನು ಟ್ವೀಟ್ ಮಾಡಿ, “ಕೊರೊನಾ ರೋಗಿಗಳ ನಿರ್ವಹಣೆಯಲ್ಲಿ ಸರ್ಕಾರ ವ್ಯವಹರಿಸುವಿಕೆಯ ರೀತಿ ಇದಾಗಿದೆ. ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರದ ವಿಫಲತೆಯಿಂದ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. #BiharrejectsModi” ಎಂದು ಬರೆದುಕೊಂಡಿದ್ದಾರೆ.

ಕಳೆದ 15 ವರ್ಷಗಳಿಂದಲೂ ಬಿಹಾರ ರಾಜ್ಯವು ನಿತೀಶ್ ಕುಮಾರ್ ಆಡಳಿತದಲ್ಲಿಯೇ ಇದೆ. ಆದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂಬುದಾಗಿ ವಿರೋಧ ಪಕ್ಷಗಳೂ ಸೇರಿದಂತೆ ಹಲವರು ಆರೋಪಿಸಿದ್ದಾರೆ. ಅದೂ ಅಲ್ಲದೇ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು, ಇದರ ವಿರುದ್ಧವೂ ಈಗ ಜನ ತಿರುಗಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಬಿಹಾರ ರಾಜಕೀಯ ವಲಯದಲ್ಲಿ ತೇಜಸ್ವಿ ಯಾದವ್, ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ಕುಮಾರ್‌ ನಡುವೆ ಮಹಾ ಪೈಪೋಟಿ ನಡೆಯುತ್ತಿದೆ. ಎನ್‌ಡಿಎ ಮೈತ್ರಿಯಲ್ಲಿ ಬಿಜೆಪಿ, ‌ಜೆಡಿಯು ಮತ್ತು ಎಲ್‌ಜೆಪಿ ಪಕ್ಷಗಳಿದ್ದವು. ಆದರೆ ನಿತೀಶ್ ಕುಮಾರ್‌ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಚಿರಾಗ್‌ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷವು ಎನ್‌ಡಿಎ ಮೈತ್ರಿಕೂಟದಿಂದ ಹೊರಗುಳಿದಿದೆ. ಇದು ಬಿಜೆಪಿ ಮತ್ತು ನಿತೀಶ್ ಕುಮಾರ್‌ಗೆ ಹಿನ್ನಡೆಯನ್ನುಂಟುಮಾಡಿದೆ. ಇನ್ನು ತೇಜಸ್ವಿಯವರ ಆರ್‌ಜೆಡಿ ಮತ್ತು ಎಲ್ಲಾ ಎಡ ಪಕ್ಷಗಳೂ ಸೇರಿ ಮಹಾಘಟಬಂಧನ್ ರಚಿಸಿಕೊಂಡಿವೆ. ರಾಜ್ಯದಲ್ಲಿ ಇದಕ್ಕೆ ಉತ್ತಮ ಬೆಂಬಲವಿದೆ ಎನ್ನಲಾಗಿದೆ.

ಇದರ ನಡುವೆ ಎನ್‌ಡಿಎ ಮೈತ್ರಿಕೂಟದ ಪ್ರನಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆಯ ವಿಷಯವನ್ನು ಪ್ರಸ್ತಾಪಿಸಿ ನಗೆಪಾಟಲಿಗೀಡಾಗಿದ್ದರು. ಜೊತೆಗೆ ಕೇಂದ್ರದಲ್ಲಿ ಬಿಜೆಪಿಯ ವೈಫಲ್ಯತೆ, ಆರ್ಥಿಕ ಕುಸಿತ, ಕೊರೊನಾ ನಿರ್ವಹಣೆ, ಸಿಎಎ, ಎನ್‌ಆರ್‌ಸಿ ಮುಂತಾದ ಎಲ್ಲಾ ಅಂಶಗಳೂ ಬಿಜೆಪಿಯ ವಿರುದ್ಧವಾಗಿದೆ. ಜೊತೆಗೆ ತೇಜಸ್ವಿ ಯಾದವ್ ತಮ್ಮ ರ್ಯಾಲಿಗಳಲ್ಲಿ ನಿತೀಶ್ ಮತ್ತು ಮೋದಿಯ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸುತ್ತಿದ್ದು ಉತ್ತಮ ಬೆಂಬಲ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಬಿಹಾರದ ಜನತೆ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ನವೆಂಬರ್ 10 ರವರೆಗೆ ಕಾದುನೋಡಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *