ಬೆಂಗಳೂರು: ಸಾರಿಗೆ ಸಂಸ್ಥೆಯ ಆಸ್ತಿ ಡಿಜಟಲೀಕರಣ ಮಾಡಲಾಗುತ್ತದೆ. ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮೇಲ್ಪಂಕ್ತಿ ಏರಿಸಲಾಗುತ್ತದೆ. 255 ಆಸ್ತಿಗಳ 683.20 ಎಕರೆ ಭೂಮಿ ಸರ್ವೆ ಮಾಡಲಾಗಿದೆ ಎಂಬುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಡಿಜಟಲೀಕರಣ ಮೂಲಕ ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳ ರಕ್ಷಣೆಗೆ ಮುಂದಾಗಿದೆ. ಸಾರಿಗೆ ಸಂಸ್ಥೆಯ ಆಸ್ತಿಗಳ ಒತ್ತುವರಿ ತಡೆಯುವುದು, ಒತ್ತುವರಿ ಆಗಿರುವುದನ್ನು ಗುರುತಿಸುವುದು, ಆಸ್ತಿಗಳ ವಾಸ್ತವತೆ ತಿಳಿದುಕೊಳ್ಳುವುದು, ಕೆಲವಡೆ ಸಮರ್ಪಕ ದಾಖಲೆ ನಿರ್ವಹಣೆ ಕೊರತೆ, ಅಧಿಕಾರಿಗಳ ವರ್ಗಾವಣೆಯಿಂದಾಗಿ ಆಸ್ತಿಗಳ ಮಾಹಿತಿ ಇಲ್ಲದಿರುವುದು. ಇತರೆ ಕಾರಣಗಳಿಂದಾಗಿ ಆಸ್ತಿಗಳು ಖಾಸಗಿಯವರ ಪಾಲಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಯಡಿಯೂರಪ್ಪ ವಿಚಾರಣೆಗೆ ಅರ್ಹವೆಂದ ಹೈಕೋರ್ಟ್
ಕಂದಾಯ ಇಲಾಖೆಯ ಲ್ಯಾಂಡ್ ಬೀಟ್ ಆಯಪ್ ಬಳಸಿ ಆಸ್ತಿಗಳ ನಕಾಶೆ, ದಾಖಲೆ ಜತೆ ಸರ್ವೆ ಮಾಡಲಾಗುತ್ತಿದೆ. ಸಂಸ್ಥೆಯ ಆರು ಜಿಲ್ಲೆಗಳಲ್ಲಿ 255 ಆಸ್ತಿಗಳ ಒಟ್ಟು 683.20 ಎಕರೆ ಭೂಮಿ ಹೊಂದಿದ್ದು ಮೌಲ್ಯ ರೂ. 2500 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಕೆಲವೆಡೆ ಒತ್ತುವರಿಯಾಗಿದೆ, ಇನ್ನು ಹಲವೆಡೆ ಒತ್ತುವರಿ ಹಂತದಲ್ಲಿವೆ. ಇದಕ್ಕೆ ಕಡಿವಾಣ ಹಾಕಲು ನಿವೃತ್ತ ತಹಸೀಲ್ದಾರರ ನೆರವು ಪಡೆದು, ಸಂಸ್ಥೆಯ ಕಾಮಗಾರಿ ಇಲಾಖೆಯ ಎಂಜಿನಿಯರ್ ಗಳಿಗೆ ತರಬೇತಿ ನೀಡಿ ಸರ್ವೆ ಮಾಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ 143 ಆಸ್ತಿಗಳಲ್ಲಿ 109 (ಶೇ.76.22) ಆಸ್ತಿಗಳ ಸರ್ವೆ ಮುಗಿದಿದೆ. ಎರಡನೇ ಸರ್ವೆ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ವಾಕರಾಸಂಸ್ಥೆಯಂತೆ ಆಸ್ತಿಗಳ ಸರ್ವೆ ಮತ್ತು ದಾಖಲೆಗಳ ಪರಿಶೀಲನೆ ಕೈಗೆತ್ತಿಕೊಳ್ಳಲು ಎಲ್ಲಾ ಸಾರಿಗೆ ನಿಗಮಗಳಿಗೆ ಸೂಚನೆ ನೀಡಲಾಗಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿಗಳ ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಆಸ್ತಿ ಅತಿಕ್ರಮಣವಾಗುತ್ತದೆ. ಸಂಸ್ಥೆಯ ಒಡೆತನದ ಆಸ್ತಿಯ ಸಂರಕ್ಷಣೆ ನಮ್ಮ ಜವಾಬ್ದಾರಿ ಆಗಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಧರ್ಮಸ್ಥಳ ನಿಗೂಢಗಳು | ಎಸ್ಐಟಿ ತನಿಖೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಜರುಗಿಸಬೇಕು – ಹಿರಿಯ ವಕೀಲ ಬಿ.ಟಿ. ವೆಂಕಟೇಶ್
