ಬೆಂಗಳೂರು: ಸುರಂಗ ರಸ್ತೆ, ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ಮತ್ತು ಕೆರೆಗಳ ಬಫರ್ ವಲಯ ತಿದ್ದುಪಡಿ ಮಸೂದೆ ವಿರೋಧಿಸಿ ಆಗಸ್ಟ್ 16ರಂದು ನಗರದ ಟೌನ್ಹಾಲ್ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನಮ್ಮ ನಗರ, ನಮ್ಮ ಹಕ್ಕು, ನಮ್ಮ ಆಯ್ಕೆ’ ಎಂಬ ಘೋಷ ವಾಕ್ಯದೊಂದಿಗೆ ಸಂಘಟನೆಯ ನೂರಾರು ಸದಸ್ಯರು ಪ್ರತಿಭಟನೆ ನಡೆಸಿದರು.
‘ನಗರಕ್ಕೆ ಸುರಂಗ ರಸ್ತೆ ಬೇಡ, ಸಾರ್ವಜನಿಕ ಸಾರಿಗೆ ಬೇಕು, ಬಫರ್ ವಲಯ ತಿದ್ದುಪಡಿ ಬೇಡ, 74ನೇ ತಿದ್ದುಪಡಿ ಅನುಷ್ಠಾನ ಬೇಕು ಹಾಗೂ ಕೆರೆ, ಕಾಲುವೆಗಳು ಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಇದನ್ನೂ ಓದಿ: ನೆಲಮಂಗಲ|ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಮೂವರ ಸಾವು
‘ಸುರಂಗ ರಸ್ತೆಯ ಪ್ರಯಾಣ ಶುಲ್ಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಿಂತ ದುಬಾರಿಯಾಗುತ್ತದೆ. ಹಾಗಾಗಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೂಲಸೌಕರ್ಯ ಯೋಜನೆಗಳನ್ನು ಮೊದಲು ಪೂರ್ಣಗೊಳಿಸಬೇಕು. ಸುರಂಗ ರಸ್ತೆಯಿಂದ ಲಾಲ್ಬಾಗ್ ಒಳಗೊಂಡಂತೆ ಹಲವಾರು ಸ್ಥಳಗಳಿಗೆ ಧಕ್ಕೆ ಉಂಟಾಗುತ್ತದೆ. ಮರಗಳನ್ನು ಕಡಿಯುವುದರಿಂದ ಶುದ್ಧ ಗಾಳಿ ಮತ್ತು ನೀರು ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮರಗಳನ್ನು ಉಳಿಸುವುದು, ಸೈಕಲ್ ಪಥಗಳ ಪ್ರಚಾರ ಮತ್ತು ಸೈಕ್ಲಿಂಗ್ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ, ಕಚೇರಿ ಮತ್ತು ಕಂಪನಿಗಳಿಗೆ ಬಸ್ ಮತ್ತು ಕ್ಯಾಬ್ ಸೌಲಭ್ಯ ಒದಗಿಸಬೇಕು. ಅಪಾರ್ಟ್ಮೆಂಟ್ಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿ ಫ್ಲ್ಯಾಟ್ಗೆ ಒಂದು ಮರ ಹಾಗೂ ವಿಲ್ಲಾಗೆ ಐದು ಮರಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ನಟ ಪ್ರಕಾಶ್ ಬೆಳವಾಡಿ, ಸಾರ್ವಜನಿಕ ಸಾರಿಗೆಯ ಪ್ರಚಾರಕ ರಾಜ್ಕುಮಾರ್ ದುಗರ್, ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂದೀಪ್ ಅನಿರುದ್ಧನ್, ಸಿವಿಕ್ ಬೆಂಗಳೂರಿನ ಕಾತ್ಯಾಯಿನಿ ಚಾಮರಾಜ್, ಪ್ರಿಯಾ ಚೆಟ್ಟಿ ರಾಜಗೋಪಾಲ್ ಪಾಲ್ಗೊಂಡಿದ್ದರು.
ಇದನ್ನೂ ನೋಡಿ: ಸಮುದಾಯ 50 | ಆಗಸ್ಟ್ 24 ರಿಂದ 27 ; ಕಲಾ ಶಿಬಿರ – ನಾಟಕೋತ್ಸವ Janashakthi Media
