ತಮಿಳುನಾಡು | ಪ್ರತಿಭಟನೆ ಕಾರಣಕ್ಕೆ ರೈತರ ಮೇಲೆ ದಾಖಲಾಗಿದ್ದ ಗೂಂಡಾ ಕಾಯ್ದೆ ಹಿಂಪಡೆದ ಸಿಎಂ

ಚೆನ್ನೈ: ತಮಿಳುನಾಡು ರಾಜ್ಯ ಕೈಗಾರಿಕೆಗಳ ಉತ್ತೇಜನಾ ನಿಗಮದ (ಸಿಪ್‌ಕಾಟ್) ವಿಸ್ತರಣೆಗಾಗಿ ಮಾಡುತ್ತಿರುವ ಭೂಸ್ವಾಧೀನದ ವಿರುದ್ಧ ಶಾಂತಿಯುತ ಧರಣಿ ಪ್ರತಿಭಟನೆ ನಡೆಸಿದ ಆರು ರೈತರ ಮೇಲೆ ದಾಖಲಾಗಿದ್ದ ಗೂಂಡಾ ಕಾಯ್ದೆ ಪ್ರಕರಣವನ್ನು ಹಿಂಪಡೆಯಲು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿರ್ದೇಶನ ನೀಡಿದ್ದಾರೆ. ಸಿಪ್‌ಕಾಟ್ ವಿರುದ್ಧ ರೈತರು ತಿರುವಣ್ಣಾಮಲೈ ಜಿಲ್ಲೆಯ ಚೆಯ್ಯರ್‌ನ ಮೆಲ್ಮಾ ಗ್ರಾಮದಲ್ಲಿ ಹೋರಾಟ ನಡೆಸಿದ್ದರು.

ರೈತರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಬಂಧಿಸಿದ ರಾಜ್ಯ ಸರ್ಕಾರದ ನಡೆಯನ್ನು ರಾಜ್ಯದ ಹಲವು ಜನಪರ ಸಂಘಟನೆಗಳು ಮತ್ತು ಹೋರಾಟಗಾರರು ಖಂಡಿಸಿದ್ದರು. ಇದರ ನಂತರ ಮುಖ್ಯಮಂತ್ರಿ ಈ ಆದೇಶವನ್ನು ಹೊರಡಿಸಿದ್ದಾರೆ. ತಮಿಳುನಾಡು

ಇದನ್ನೂ ಓದಿ: ಕಲಬುರಗಿ| ಬಿಸಿಯೂಟ ಸಾಂಬಾರಿಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

ಈ ವರ್ಷ ಜುಲೈ ತಿಂಗಳಿನಿಂದ “ಮೆಲ್ಮಾ ಸಿಪ್ಕಾಟ್ ವಿರೋಧಿ ರೈತರ ಸಂಘ”ದ ಸಂಯೋಜಕ ಪಚ್ಚಯ್ಯಪ್ಪನ್‌ ಅವರು ಮೆಲ್ಮಾ ಗ್ರಾಮದಲ್ಲಿ ರೈತರೊಂದಿಗೆ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. 20 ರೈತರಲ್ಲಿ ಏಳು ಮಂದಿಯನ್ನು ನವೆಂಬರ್ 4 ರಂದು ತಿರುವಣ್ಣಾಮಲೈ ಪೊಲೀಸರು ಬಂಧಿಸಿ, ಅವರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ತಮಿಳುನಾಡು

“ಆರು ರೈತರಾದ ಪಚ್ಚಯ್ಯಪ್ಪನ್, ದೇವನ್, ಚೋಜನ್, ತಿರುಮಲ್, ಮಾಸಿಲಾಮಣಿ ಮತ್ತು ಬಕ್ಕಿಯರಾಜ್ ಅವರ ಕುಟುಂಬದ ಸದಸ್ಯರ ಮನವಿಯ ನಂತರ ಗೂಂಡಾ ಕಾಯ್ದೆಯ ನಿಬಂಧನೆಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬಂಧಿತ ರೈತರ ಕುಟುಂಬಸ್ಥರು ಚೇಯಾರ್ ಶಾಸಕ ಓ. ಜೋತಿ ಅವರನ್ನು ಭೇಟಿ ಮಾಡಿ, ಹೊರಗಿನವರ ಪ್ರಚೋದನೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಮುಂದೆ ಇಂತಹ ಚಟುವಟಿಕೆಗಳಿಗೆ ಕೈಹಾಕುವುದಿಲ್ಲ ಎಂದು ಭರವಸೆ ನೀಡಿ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ” ಸಿ. ಎಂ. ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರೈತರ ಮನವಿಯ ನಂತರ ಲೋಕೋಪಯೋಗಿ ಸಚಿವ ಇ.ವಿ. ವೇಲು ಅವರ ಮೂಲಕ ಈ ವಿಚಾರವನ್ನು ತಮಿಳುನಾಡು ಮುಖ್ಯಮಂತ್ರಿಯ ಗಮನಕ್ಕೆ ತರಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. ತಿರುವಣ್ಣಾಮಲೈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಲ್ಲ ಎಂದು ಸ್ಟಾಲಿನ್ ಹೇಳಿದ್ದು, “ಈ ಪ್ರದೇಶದಲ್ಲಿ ನಿರುದ್ಯೋಗದ ದುಃಸ್ಥಿತಿಯನ್ನು ಪರಿಗಣಿಸಿ, ಸಿಪ್ಕಾಟ್ ಕೈಗಾರಿಕಾ ಪಾರ್ಕ್‌ಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ” ಎಂದು ಹೇಳಿದ್ದಾರೆ. ತಮಿಳುನಾಡು

ಇದನ್ನೂ ಓದಿ: ಕಾಂಗ್ರೆಸ್ ಭರವಸೆಯನ್ನು ನಕಲು ಮಾಡಲು ಬಿಜೆಪಿ ಮತ್ತು ಮೋದಿ ವಿಫಲ ಯತ್ನ: ಖರ್ಗೆ ಪ್ರತಿಪಾದನೆ

ಮೂರನೇ 3,174 ಎಕರೆ ಸಿಪ್ಕಾಟ್ ಯೋಜನೆಯನ್ನು ಮೆಲ್ಮಾ ಮತ್ತು ಏಳು ನೆರೆಯ ಗ್ರಾಮಗಳಲ್ಲಿ ಅನುಷ್ಠಾನಗೊಳಿಸಬೇಕಾಗಿದೆ. 1200 ಎಕರೆಗೆ ಅಧಿಸೂಚನೆ ಹೊರಡಿಸಿದ ನಂತರ 239 ಭೂಮಾಲೀಕರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರೆ 1642 ಭೂಮಾಲೀಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

ಈ ವರ್ಷ ಜುಲೈ 2 ರಿಂದ ನಡೆಯುತ್ತಿರುವ ಭೂಸ್ವಾಧೀನದ ವಿರುದ್ಧ 20 ಜನರು ನಿರಂತರ ಪ್ರತಿಭಟನೆ ನಡೆಸಿದ್ದರು ಎಂದು ಸಿಎಂ ಹೇಳಿಕೆ ತಿಳಿಸಿದೆ. ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ, ಪದೇ ಪದೇ ರಸ್ತೆ ತಡೆ ಮಾಡುವ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸಿದ, ಸರ್ಕಾರಕ್ಕೆ ತಮ್ಮ ನಿವೇಶನಗಳನ್ನು ಮಾರಾಟ ಮಾಡಲು ಸ್ವಯಂಪ್ರೇರಿತರಾದ ಭೂಮಾಲೀಕರನ್ನು ತಡೆದ ಮತ್ತು ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸಿದ್ದರಿಂದ ಅವರನ್ನು ಬಂಧಿಸಲಾಗಿತ್ತು.

ಪ್ರತಿಭಟನೆ ನಡೆಸಿದ ರೈತರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಿಲ್ಲಾ ಎಸ್ಪಿಯವರ ಶಿಫಾರಸಿನ ಮೇರೆಗೆ ಗೂಂಡಾ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು ಎಂದು ಸಿಎಂ ಅವರ ಪ್ರಕಟಣೆ ತಿಳಿಸಿದೆ.

ವಿಡಿಯೊ ನೋಡಿ: ದಲಿತರ ಶೃಂಗಸಭೆ : ಸನಾತನಿ ಸರ್ಕಾರದಿಂದ ದಲಿತರ ಮೇಲೆ ನಿರಂತರ ದರ್ಜನ್ಯ – ಜನಾಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *