ತುರ್ತಾಗಿ ಸರ್ಕಾರಿ ವ್ಯವಸ್ಥೆಗಳಲ್ಲಿ ಉಚಿತ ಔಷಧಿಗಳ ಲಭ್ಯತೆಯನ್ನು ಸುನಿಶ್ಚಿತಗೊಳಿಸಬೇಕು !!
ಬೆಂಗಳೂರು: ಇತ್ತೀಚಿನ ಒಂದು ಸರ್ಕಾರಿ ಆದೇಶದ ಮೂಲಕ ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಆವರಣಗಳಿಂದ 180 ಜನೌಷಧಿ ಕೇಂದ್ರಗಳನ್ನು (PMBJK) ರದ್ದುಪಡಿಸಿರುವ ಸರ್ಕಾರದ ನಿರ್ಧಾರವನ್ನು SAA-K ಸ್ವಾಗತಿಸುತ್ತದೆ ಆದರೆ ಸರ್ಕಾರವು ಸರ್ಕಾರಿ ಆರೋಗ್ಯ ವ್ಯವಸ್ಥೆಗಳಲ್ಲಿ (ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಇತ್ಯಾದಿ) ಅಗತ್ಯ ಔಷಧಿಗಳ ಉಚಿತ ಲಭ್ಯತೆಯನ್ನು ಸುನಿಶ್ಚಿತಗೊಳಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಪ್ರಸನ್ನ ಸಾಲಿಗ್ರಾಮ ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕ (SAA-K) 30ಕ್ಕೂ ಹೆಚ್ಚು ಸಂಘಟನೆಗಳನ್ನೊಳಗೊಂಡ ಕರ್ನಾಟಕ ರಾಜ್ಯದಲ್ಲಿ “ಸರ್ವರಿಗೂ ಆರೋಗ್ಯ” ಸಿಗಬೇಕೆಂದು ವಕಾಲತ್ತು ಮಾಡುತ್ತಿರುವ ಒಂದು ರಾಜ್ಯಮಟ್ಟದ ಆಂದೋಲನ ಎಂದು ಹೇಳಿದರು.
ಜನೌಷಧಿ ಕೇಂದ್ರಗಳನ್ನು ರದ್ದು ಪಡಿಸಿರುವ ಕ್ರಮ ಕೇವಲ ಒಂದು ಮೊದಲ ಹೆಜ್ಜೆ. ಯಾವುದೇ ರೋಗಿಯೂ ಸಹ ಖಾಸಗಿ ಔಷಧಿ ಅಂಗಡಿ ಇರಬಹುದು ಅಥವಾ ಜನೌಷಧಿ ಅಂಗಡಿ ಇರಬಹುದು ಔಷಧಿಗಳನ್ನು ಕೊಳ್ಳುವ ಪರಿಸ್ಥಿತಿ ಬರದ ಹಾಗೆ ನೋಡಿಕೊಳ್ಳಬೇಕು” ಎಂದು SAA-Kಯ ಬೆಂಗಳೂರು ನಗರ ಜಿಲ್ಲೆಯ ಸಂಯೋಜಕ ರಾಜೇಶ್ ಕುಮಾರ್ ಹೇಳಿದ್ದಾರೆ. ಈ ಸರ್ಕಾರದ ಕ್ರಮದ ವಿಷಯದಲ್ಲಿ ಕೆಲವೊಂದು ಮಾಧ್ಯಮಗಳು, ಸಂಸದ್ ಸದಸ್ಯರು, ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಮಾಹಿತಿಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ SAA-K ಕೆಲವೊಂದು ತಾಂತ್ರಿಕ ಸ್ಪಷ್ಟೀಕರಣ ನೀಡಲು ಬಯಸುತ್ತದೆ ಎಂದರು.
ಜನರು ಕಡಿಮೆ ಬೆಲೆಯಲ್ಲಿ ಜನರಿಕ್ ಔಷಧಿಗಳನ್ನು ಖರೀದಿಸಬೇಕೆಂದಲ್ಲಿ ಸರ್ಕಾರಿ ವ್ಯವಸ್ಥೆಗಳ ಆವರಣಗಳ ಒಳಗಡೆ ಅಲ್ಲದೆ ಹೊರಗಡೆ ಮಾರುಕಟ್ಟೆಯಲ್ಲಿ ಸುಮಾರು 1,400 PMBJK ಅಂಗಡಿಗಳು ಇನ್ನೂ ಕೆಲಸ ಮಾಡುತ್ತಿವೆ ಹಾಗಾಗಿ ಜನರಿಕ್ ಔಷಧಿಗಳು ಸಿಗುವುದೇ ಇಲ್ಲವೆನ್ನುವ ಹಾಗೆ ಕಲ್ಪನೆಯನ್ನು ಮೂಡಿಸುತ್ತಿರುವ ಸುದ್ದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಇದನ್ನು ಓದಿ :-ಹುಬ್ಬಳ್ಳಿ ಗಲಭೆ ಸೇರಿದಂತೆ 43 ಕ್ರಿಮಿನಲ್ ಪ್ರಕರಣಗಳ ಹಿಂಪಡೆಗೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ
ಸರ್ಕಾರಿ ಆವರಣಗಳಿಂದ 180 ಜನೌಷಧಿ ಕೇಂದ್ರಗಳನ್ನು (PMBJK) ರದ್ದುಪಡಿಸಿರುವ ಸರ್ಕಾರದ ನಿರ್ಧಾರವು ಪ್ರಸ್ತುತ ಇದ್ದ ಒಂದು ದೊಡ್ಡ ವಿರೋಧಾಭಾಸವನ್ನು ಹೋಗಲಾಡಿಸಿದೆ: ಸರ್ಕಾರಿ ನೀತಿಯ ಅನ್ವಯ ಸರ್ಕಾರಿ ವ್ಯವಸ್ಥೆಗಳಲ್ಲಿ ಔಷಧಿಗಳು ಜನರಿಗೆ ಉಚಿತವಾಗಿ ಸಿಗಬೇಕು ಆದರೆ ಜನರು PMBJK ತಮ್ಮ ಜೇಬಿನಿಂದ ಹಣ ತೆತ್ತು ‘ಖರೀದಿಸುವ’ ವಿಪರ್ಯಾಸದ ಪರಿಸ್ಥಿತಿ ಇತ್ತು. ಒಂದು ಸಾರ್ವಜನಿಕ/ಸರ್ಕಾರಿ ಆವರಣದಲ್ಲಿ ಲಾಭದ ವಹಿವಾಟು ನಡೆಯುವಂತಿತ್ತು. ಅದು ಈ ಆದೇಶದ ಮೂಲಕ ಇಲ್ಲದ ಹಾಗಾಗಿದೆ ಅಷ್ಡೇ. ಆಗಸ್ಟ್ 2023ರಲ್ಲಿ SAA-Kಯ ಸದಸ್ಯರು ಮಾನ್ಯ ಆರೋಗ್ಯ ಮಂತ್ರಿಗಳೊಂದಿಗೆ ನಡೆಸಿದ ಚರ್ಚೆಯಲ್ಲಿ ಈ ವಿರೋಧಾಭಾಸವನ್ನು ಅವರ ಗಮನಕ್ಕೆ ತಂದಿತ್ತು ಎಂದರು.
ಅದೇ ಸುತ್ತೋಲೆಯಲ್ಲಿ ಹೊರಡಿಸಿರುವ ಮತ್ತೊಂದು ಮಹತ್ತರ ವಿಷಯ ಹೆಚ್ಚಾಗಿ ಸುದ್ದಿ ಮಾಡಿಲ್ಲ. ಅದೇನೆಂದರೆ ಸರ್ಕಾರಿ ವೈದ್ಯರು ಕಡ್ಡಾಯವಾಗಿ ಜನರಿಕ್ ಹೆಸರಿನಲ್ಲೇ ಔಷಧಿ ಚೀಟಿಯನ್ನು (prescription) ಬರೆಯಬೇಕು ಹಾಗೂ ಅದನ್ನು ವ್ಯವಸ್ಥೆಯೊಳಗಡೆ ಇರುವ ಔಷಧಾಲಯದಿಂದ ಜನರಿಗೆ ಉಚಿತವಾಗಿ ಸಿಗಬೇಕು ಎಂದು.
ಕೆಲವೊಂದು ‘ಪಟ್ಟಭದ್ರ ಹಿತಾಸಕ್ತಿಗಳು’ ಈ ಕ್ರಮದಿಂದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ಔಷಧಿಗಳು ಸಿಗದ ಹಾಗೆ ಆಗಿದೆ ಎಂದು ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಆದರೆ, ವಾಸ್ತವಾಂಶ ಏನೆಂದರೆ, ಪ್ರಸ್ತುತ ಸರ್ಕಾರಿ ಆರೋಗ್ಯ ವ್ಯವಸ್ಥೆಗಳಲ್ಲಿ ಉಚಿತವಾಗಿ ಸಿಗಬೇಕಾದ ಔಷಧಿಗಳು ದೊರಕದೆ ಜನರು PMBJK ಅಂತಹ ಅಂಗಡಿಗಳಲ್ಲಿ ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಕೊಂಡುಕೊಳ್ಳುವ ಪರಿಸ್ಥಿತಿ ಇದ್ದು ಇದನ್ನು ತುರ್ತಾಗಿ ಸರಿಪಡಿಸಬೇಕಿದೆ ಎಂದರು.
“KSMSCL ಸಂಸ್ಥೆಯು, ತನ್ನ ಕಾರ್ಯಾಚರಣೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಗುಣವತ್ತತೆಯಲ್ಲಿ Tamil Nadu Medical Services Corporation (TNMSC)ಗೆ ಸಮನಾಗಬೇಕು. ಹಾಗಾದಲ್ಲಿ ಅದೇ ಬಜೆಟ್ ನಲ್ಲಿ KSMSCL ಇನ್ನೂ ಹೆಚ್ಚು ಔಷಧಿಗಳನ್ನು ಖರೀದಿಸಬಹುದು ಹಾಗೂ ಇದರ ಮುಖೇನ ಜನರ PMBJK ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಜನರು ಔಷಧಿಗಳಿಗಾಗಿ ತಮ್ಮ ಜೇಬಿನಿಂದ ವ್ಯಯ ಮಾಡುವುದನ್ನು ತಪ್ಪಿಸಬಹುದು, ಯಾವುದು SDGಯ ಒಂದು ಲಕ್ಷ್ಯ ಸಹ” ಎಂದು ಆರೋಗ್ಯ ಅಧ್ಯಯನಕಾರ ಮತ್ತು SAA-Kಯ ಆಶಾ ಕಿಲರು ಅಭಿವ್ಯಕ್ತಿ ಪಡಿಸಿದ್ದಾರೆ.
ಇತ್ತೀಚೆಗೆ NITI ಆಯೋಗವು ತನ್ನ ಒಂದು ಪತ್ರಿಕಾ ಪ್ರಕಟಣೆಯಲ್ಲಿ PMBJK ಮೂಲಕ 2023–24 ರಲ್ಲಿ ದೇಶಾದ್ಯಂತ 935.25 ಕೋಟಿ ರೂ. ಗಳ ಮಾರಾಟ ಮಾಡಿದೆ ಹಾಗೂ ಇದರಿಂದ ಜನಸಾಮಾನ್ಯರಿಗೆ 4,680 ಕೋಟಿ ರೂ. ಗಳ ಉಳಿತಾಯವಾಗಿದೆ ಎಂದು ಹೇಳಿಕೆ ನೀಡಿದೆ. ಆದರೆ ಮುಖ್ಯವಾಗಿ ಈ 935.25 ಕೋಟಿ ರೂ.ಗಳನ್ನು ಜನರು ತಮ್ಮ ಜೇಬಿನಿಂದ ಖರ್ಚು ಮಾಡಿರುವುದು ಎನ್ನುವುದನ್ನು ಗಮನಿಸಬೇಕಾದ ವಿಷಯ. ತಮಿಳು ನಾಡು, ಕೇರಳ ಮತ್ತು ರಾಜಾಸ್ಥಾನದ ಮಾದರಿಯಲ್ಲಿ ಸರ್ಕಾರಿ ಸಂಸ್ಥೆಯ ಮೂಲಕ ಔಷಧಿಗಳ ಖರೀದಿ ಮತ್ತು ವಿತರಣೆ (TNMSCಯ ಮಾದರಿಯಲ್ಲಿ) ಆಗಿದ್ದಲ್ಲಿ ಈ ವೆಚ್ಚ ಕೂಡ ಜನರಿಗೆ ಉಳಿತಾಯವಾಗಿರುತ್ತಿತ್ತು ಎಂದು ಈ ಪ್ರಕಟಣೆ ತಿಳಿಸುತ್ತಿಲ್ಲ ಎಂದು ಹೇಳಿದರು.
ಜನರಿಗೆ ನಿಜವಾದ ಉಳಿತಾಯ ಆಗುವುದು ಸರ್ಕಾರಿ ಸಂಸ್ಥೆಯಿಂದ ಸಗಟಿನಲ್ಲಿ ಔಷಧಿಗಳ ಖರೀದಿ ಮತ್ತು ವಿತರಣೆಯ ಮೂಲಕವೇ ವಿನಃ ಜನೌಷಧಿಯಂತಹ ಬಿಡಿ/ಚಿಲ್ಲರೆಯ ಮಳಿಗೆಗಳಲ್ಲಿ (ರೀಟೇಲ್) ಕೊಂಡುಕೊಳ್ಳುವುದರಲ್ಲಲ್ಲ. TNMSCಯು ತೋರಿಸುವ ಹಾಗೆ ಸಾಧಾರಣ ಎಲ್ಲಾ ಔಷಧಿಗಳನ್ನು PMBJKಗಿಂತ ಸರಾಸರಿ ಶೇ. 30% ಕಡಿಮೆ ದರದಲ್ಲಿ ಖರೀದಿಸುತ್ತದೆ. ಈ ಕ್ರಮ ಒಟ್ಟಾರೆ ದಕ್ಷವಾಗಿದ್ದು, ಉಳಿತಾಯ ತಂದು ಸಾಮಾಜಿಕ ಸ್ತರದಲ್ಲಿ ಕಲ್ಯಾಣಕಾರಿ (social welfare) ಆಗಿರುವಂಥಾದ್ದು” ಎಂದು ಆರೋಗ್ಯ ಅಧ್ಯಯನಕಾರ ಮತ್ತು SAA-Kಯ ಪ್ರಸನ್ನ ಸಾಲಿಗ್ರಾಮ ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ SAA-Kಯು ಸರ್ಕಾರವು ಉಚಿತ ಔಷಧಿಗಳ ವಿತರಣೆ ಸಂದರ್ಭದಲ್ಲಿ ಈ ಕೆಳಕಂಡ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹಕ್ಕೊತ್ತಾಯವನ್ನು ಮುಂದಿಡುತ್ತದೆ:
ಸರ್ಕಾರವು ತನ್ನ ಆರೋಗ್ಯ ವ್ಯವಸ್ಥೆಗಳಲ್ಲಿ ನಿರಂತರವಾಗಿ ಅತ್ಯುತ್ತಮ ಗುಣಮಟ್ಟದ ಔಷಧಿಗಳು ಉಚಿತವಾಗಿ ದೊರೆಯುವ ಹಾಗೆ ಸುನಿಶ್ಚಿತಗೊಳಿಸಬೇಕು, KSMSCLನ ಕಾರ್ಯವೈಖರಿಯಲ್ಲಿ ಪಾರದರ್ಶಕತೆ, ಸ್ವಾಯತ್ತತೆ ಮತ್ತು ಉತ್ತರದಾಯಿತ್ವವನ್ನು ಖಚಿತ ಪಡಿಸಬೇಕು ಎಂದು ತಿಳಿಸಿದರು.
ಇದನ್ನು ಓದಿ :-ಮದುವೆಯ ಸುಳ್ಳು ಭರವಸೆಯ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
ಖರೀದಿಸಿದ ಪ್ರತಿಯೊಂದು ಔಷಧಿಯನ್ನು ಕಠಿಣ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿ ಬ್ಯಾಚ್ ನ ಔಷಧಿಗಳು ಉಗ್ರಾಣ ತಲುಪಿದ ಕೂಡಲೆ ಹಾಗೂ ವ್ಯವಸ್ಥೆಗಳಿಗೆ ವಿತರಿಸುವ ಮುನ್ನ ಪರೀಕ್ಷೆಗೆ ಒಳಪಡಿಸಬೇಕು.
ಔಷಧಿಗಳ ಖರೀದಿಯ ಪ್ರಮಾಣ, ದಾಸ್ತಾನು ಇವುಗಳನ್ನು ನಿರ್ಧರಿಸಲು ಕರಾರಾಗಿ ನಿರ್ಣಯ ಮಾಡುವ (forecasting) ತಂತ್ರಜ್ಞಾನವನ್ನು ಬಳಸಬೇಕು ಎಂದರು. ಅಗತ್ಯ ಔಷಧಿಗಳ ಪಟ್ಟಿಯ ಬಗ್ಗೆ, ಜನರಿಕ್ ಔಷಧಿಗಳಲ್ಲೇ ಚೀಟಿ ಬರೆಯುವುದರ (prescription) ಬಗ್ಗೆ, ವಿವೇಚನಾಯುಕ್ತ/ತರ್ಕಬದ್ಧ ಔಷಧಿಗಳ ಉಪಯೋಗದ ಬಗ್ಗೆ (rational drug use) ಸರ್ಕಾರಿ ವೈದ್ಯರುಗಳಿಗೆ ಆಗಿಂದಾಗ್ಗೆ ತರಬೇತಿಯನ್ನು ಏರ್ಪಡಿಸಬೇಕು.
ಈ ಹಿಂದೆ ಆಗಸ್ಟ್ 2023ರಲ್ಲಿ ಮಾನ್ಯ ಆರೋಗ್ಯ ಮಾಂತ್ರಿಗಳೊಂದಿಗೆ ಚರ್ಚಿಸಿದ ಹಾಗೆ, ಜನರಿಗೆ ಉಚಿತ ಔಷಧಿಗಳ ಲಭ್ಯತೆ ಬಲಗೊಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ SAA-Kಯು ಯಾವುದೇ ರೀತಿಯ ತಾಂತ್ರಿಕ ಬೆಂಬಲ ಕೊಡಲು ತಯಾರಿದೆ. ಆದರೆ ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುವುದೇನೆಂದರೆ ಯಾವುದೇ ಕಾರಣಕ್ಕೂ ಜನರು ಔಷಧಿಗಳನ್ನು ಕೊಳ್ಳುವ ಹಾಗಾಗಬಾರದು, ಅದು ಖಾಸಗಿ ಮೆಡಿಕಲ್ ಅಂಗಡಿ ಇರಬಹುದು ಅಥವಾ ಜನೌಷಧಿ ಅಂಗಡಿ ಇರಬಹುದು. “ಅಂತಿಮ ಲಕ್ಷ್ಯ, – ಪ್ರತಿಯೊಂದು ಸರ್ಕಾರಿ ವ್ಯವಸ್ಥೆಯಲ್ಲಿ ಸರ್ವರಿಗೂ ಉತ್ತಮ ಗುಣಮಟ್ಟದ ಔಷಧಿಗಳು ಉಚಿತವಾಗಿ ಲಭ್ಯವಾಗಬೇಕು” ಎಂದು ದಕ್ಷ ಸಮೂಹ ಸಂಘಟನೆಯ ಸಮುದಾಯ ಕಾರ್ಯಕರ್ತೆ ಮತ್ತು SAA-Kಯ ಬೇಬಿರವರು ಆಗ್ರಹಿಸಿದ್ದಾರೆ.
ಈ ವೇಳೆ ರಿತೀಶ್, ರಾಜೇಶ್, ನೀಶಾ, ಭೂದೇವಿ, ಕೆ.ಆರ್. ಸೌಮ್ಯ ಹಾಜರಿದ್ದರು.